ವೃಷಭ ರಾಶಿಯಲ್ಲಿ ಸೂರ್ಯ ಸಂಕ್ರಮಣ; ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಶುಭಫಲಗಳು ಹೀಗಿವೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ವೃಷಭ ರಾಶಿಯಲ್ಲಿ ಸೂರ್ಯ ಸಂಕ್ರಮಣ; ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಶುಭಫಲಗಳು ಹೀಗಿವೆ

ವೃಷಭ ರಾಶಿಯಲ್ಲಿ ಸೂರ್ಯ ಸಂಕ್ರಮಣ; ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಶುಭಫಲಗಳು ಹೀಗಿವೆ

ಸೂರ್ಯ 9 ಗ್ರಹಗಳ ಅಧಿಪತಿ. ತಿಂಗಳಿಗೊಮ್ಮೆ ತನ್ನ ಸ್ಥಾನ ಬದಲಾಯಿಸುತ್ತಾನೆ. ಮೇ 14 ರಂದು ವೃಷಭ ರಾಶಿಯಲ್ಲಿ ಸೂರ್ಯನ ಸಂಚಾರವು 12 ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಸಿಂಹ, ಕನ್ಯಾ, ತುಲಾ ಹಾಗೂ ವೃಶ್ಚಿಕ ರಾಶಿಯವರ ಶುಭಫಲಗಳು ಇಲ್ಲಿವೆ.

ವೃಷಭ ರಾಶಿಯಲ್ಲಿ ಸೂರ್ಯನ ಸಂಕ್ರಮಣದಿಂದ ಸಿಂಹ, ಕನ್ಯಾ, ತುಲಾ ಹಾಗೂ ವೃಶ್ಚಿಕ ರಾಶಿಯವರಿಗೆ ಇರುವ ಶುಭಫಲಗಳ ವಿವರ ಇಲ್ಲಿ ನೀಡಲಾಗಿದೆ
ವೃಷಭ ರಾಶಿಯಲ್ಲಿ ಸೂರ್ಯನ ಸಂಕ್ರಮಣದಿಂದ ಸಿಂಹ, ಕನ್ಯಾ, ತುಲಾ ಹಾಗೂ ವೃಶ್ಚಿಕ ರಾಶಿಯವರಿಗೆ ಇರುವ ಶುಭಫಲಗಳ ವಿವರ ಇಲ್ಲಿ ನೀಡಲಾಗಿದೆ

ರವಿ ಅಥವಾ ಸೂರ್ಯ ಮೇ 14 ರ ಬುಧವಾರದಂದು ವೃಷಭರಾಶಿಯನ್ನು ಪ್ರವೇಶಿಸುತ್ತಾನೆ. ಜೂನ್ ತಿಂಗಳ 15 ರ ಭಾನುವಾರದವರೆಗು ಇದೇ ರಾಶಿಯಲ್ಲಿ ಸಂಚರಿಸುತ್ತಾನೆ. ವೃಷಭ ರಾಶಿಯು ಹಣಕಾಸಿನ ವ್ಯವಹಾರವನ್ನು ಸೂಚಿಸುತ್ತದೆ. ಕುಟುಂಬದ ಹಿರಿಯರನ್ನು ಸೂಚಿಸುತ್ತದೆ. ಅಲ್ಲದೆ ಪತ್ನಿಯಿಂದ ಪತಿಗೆ ದೊರೆಯಬಹುದಾದ ಸಹಾಯವನ್ನು ಸೂಚಿಸುತ್ತದೆ. ಜನ್ಮ ಕುಂಡಲಿಯಲ್ಲಿ ರವಿ ಮತ್ತು ಶುಕ್ರರು ಶುಭವಾಗಿದ್ದಲ್ಲಿ ಶುಭಫಲಗಳು ಹೆಚ್ಚಿನ ಮಟ್ಟದಲ್ಲಿ ದೊರೆಯುತ್ತದೆ. ಸಾಮಾಜಿಕ ರಂಗದಲ್ಲಿ ಹಣಕಾಸಿನ ವಿಚಾರದಲ್ಲಿ ಸಕಾರಾತ್ಮಕ ಬದಲಾವಣೆಗಳು ದೊರೆಯುತ್ತವೆ. ವೃಷಭ ರಾಶಿಯಲ್ಲಿ ಸೂರ್ಯನ ಸಂಕ್ರಮಣದಿಂದ ಸಿಂಹ, ಕನ್ಯಾ, ತುಲಾ ಹಾಗೂ ವೃಶ್ಚಿಕ ರಾಶಿಯವರಿಗೆ ಏನೆಲ್ಲಾ ಶುಭಫಲಗಳಿವೆ ಎಂಬುದನ್ನು ಇಲ್ಲಿ ತಿಳಿಯಿರಿ.

ಸಿಂಹ ರಾಶಿ

ನಿಮ್ಮಲ್ಲಿ ಧೈರ್ಯ ಸಾಹಸಕ್ಕೆ ಕೊರತೆ ಇರುವುದಿಲ್ಲ. ಆದ್ದರಿಂದ ಫಲಿತಾಂಶದ ಕಡೆ ಯೋಚನೆ ಮಾಡದೆ ಹಠದಿಂದ ಕೆಲಸ ಕಾರ್ಯಗಳನ್ನು ಆರಂಭಿಸುವಿರಿ. ಸದಾ ಲವಲವಿಕೆಯಿಂದ ಬಾಳುವಿರಿ. ನಿಮ್ಮಲ್ಲಿ ಯಾವುದೇ ರೀತಿಯ ಗುಟ್ಟಿನ ವಿಚಾರಗಳು ಉಳಿಯುವುದಿಲ್ಲ. ನಿಮ್ಮ ಕಷ್ಟದ ಸಂದರ್ಭದಲ್ಲಿಯೂ ನಂಬಿ ಬಂದವರಿಗೆ ಸಹಾಯ ಮಾಡುವಿರಿ. ಹಣಕಾಸಿಗೆ ತೊಂದರೆ ಇರುವುದಿಲ್ಲ. ದಾನ ಧರ್ಮದಲ್ಲಿ ನೆಮ್ಮದಿಯನ್ನು ಗಳಿಸುವಿರಿ. ನಿಮ್ಮ ಮನಸ್ಸನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಸಹನೆ ಇರುತ್ತದೆ. ಆದರೆ ನಿಷ್ಟೂರದ ಗುಣವೂ ಇರುತ್ತದೆ. ಇದರಿಂದ ಆತ್ಮೀಯರೂ ಸಹ ನಿಮ್ಮನ್ನು ತಪ್ಪಾಗಿ ಅರ್ಥಮಾಡಿಕೊಳ್ಳುತ್ತಾರೆ. ಎಲ್ಲಾ ರೀತಿಯ ಅನುಕೂಲತೆಗಳಿದ್ದರೂ ಮನದಲ್ಲಿ ಯಾವುದೋ ಒಂದು ಚಿಂತೆ ಮನೆಮಾಡಿರುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ಇರುವುದಿಲ್ಲ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ಇರಲಿ. ಮೂತ್ರದ ಸೋಂಕಿನಿಂದ ಬಳಲುವಿರಿ. ಸಮಾಜದಲ್ಲಿ ಉನ್ನತ ಸ್ಥಾನಮಾನ ಗಳಿಸುವಿರಿ.

ಕನ್ಯಾ ರಾಶಿ

ಯಾವುದೇ ವಿಚಾರದಲ್ಲಿಯೂ ದೃಢವಾದ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ತಪ್ಪು ನಿಮ್ಮಲ್ಲಿದ್ದರೂ ಬೇರೆಯವರನ್ನು ಟೀಕಿಸುವಿರಿ. ಉದ್ಯೋಗದಲ್ಲಿ ನಿರೀಕ್ಷಿತ ಬಂಡವಾಳಗಳು ಕಂಡುಬರಲಿವೆ. ಕುಟುಂಬದಲ್ಲಿ ಉತ್ತಮ ಒಡನಾಟ ಇರುವುದಿಲ್ಲ. ಹಣಕಾಸಿನ ವಿಚಾರದಲ್ಲಿ ಭಿನ್ನಾಭಿಪ್ರಾಯವಿರುತ್ತದೆ. ಅವಿವಾಹಿತರಿಗೆ ಪರಿಚಯ ಇರುವವರ ಜೊತೆಯಲ್ಲಿ ವಿವಾಹವಾಗುತ್ತದೆ. ಸ್ವಂತ ವಾಹನ ಇರುತ್ತದೆ. ಅನಿರೀಕ್ಷಿತ ಖರ್ಚು ವೆಚ್ಚಗಳಿರುತ್ತವೆ. ಇದರಿಂದಾಗಿ ಹಣಕಾಸಿನ ಕೊರತೆ ಕಂಡು ಬರುತ್ತದೆ. ಬೇರೆಯವರ ಹೊಗಳಿಕೆ ಮಾತುಗಳಿಗೆ ಮಾರುಹೋಗುವಿರಿ. ಪ್ರವಾಸ ಮಾಡುವ ಆಸೆ ಇರುತ್ತದೆ. ಆದರೆ ಪ್ರವಾಸ ಮಾಡಲು ಸಾಧ್ಯವಾಗುವುದಿಲ್ಲ. ಸಮಾಜದ ಗಣ್ಯ ವ್ಯಕ್ತಿಗಳ ಸಹಾಯ ಸಹಕಾರ ನಿಮಗೆ ದೊರೆಯುತ್ತದೆ. ಜೀವನದಲ್ಲಿ ನಿರೀಕ್ಷಿತ ಬದಲಾವಣೆಗಳು ಕಂಡುಬರುತ್ತವೆ. ಆತ್ಮೀಯರಿಂದ ಹಣಕಾಸಿನ ಸಹಾಯ ದೊರೆಯುತ್ತದೆ. ವಾಸ ಸ್ಥಳವನ್ನು ಬದಲಿಸುವ ಅನಿವಾರ್ಯತೆ ಉಂಟಾಗುತ್ತದೆ. ಕೈ ಕಾಲುಗಳಲ್ಲಿ ಪೆಟ್ಟಾಗುವ ಸಾಧ್ಯತೆಗಳು ಇರುತ್ತವೆ. ಮನೆತನದ ಆಸ್ತಿಯ ವಿಚಾರದಲ್ಲಿ ವಿವಾದಗಳಿರುತ್ತವೆ. ಪ್ರಾಚೀನ ಕಲೆಗಳಲ್ಲಿ ವಿಶೇಷ ಆಸಕ್ತಿ ಇರುತ್ತದೆ.

ತುಲಾ ರಾಶಿ

ವಯಸ್ಸಿನ ಇತಿಮಿತಿ ಇಲ್ಲದೆ ಚುರುಕುತನದಿಂದ ಕೆಲಸ ನಿರ್ವಹಿಸುವಿರಿ. ಯಾವುದೇ ವಿಚಾರವಾದರೂ ಬುದ್ಧಿವಂತಿಕೆಯಿಂದ ಸೂಕ್ತ ತೀರ್ಮಾನಗಳನ್ನು ತೆಗೆದುಕೊಳ್ಳುವಿರಿ. ನಿಮ್ಮದಲ್ಲದ ವಿಚಾರಗಳ ಬಗ್ಗೆ ಮಾತನಾಡುವುದಿಲ್ಲ. ಕಷ್ಟ ನಷ್ಟಗಳಿಗೆ ಹೆದರುವುದಿಲ್ಲ. ಎದುರಾಗುವ ಅಡಚಣೆಗಳನ್ನು ಗೆದ್ದು ಜೀವನದಲ್ಲಿ ಉನ್ನತ ಮಟ್ಟ ತಲುಪುವಿರಿ. ಉದ್ಯೋಗದಲ್ಲಿ ಅನೇಕ ಪರಿವರ್ತನೆಗಳು ಕಂಡುಬರುತ್ತದೆ. ಉತ್ತಮ ಅವಕಾಶ ದೊರೆತು ಉದ್ಯೋಗ ಬದಲಿಸುವ ಸಾಧ್ಯತೆಗಳಿವೆ. ಭವಿಷ್ಯದ ಬಗ್ಗೆ ಚಿಂತನೆ ನಡೆಸುವಿರಿ. ಬೇರೆಯವರ ಸಹಾಯವಿಲ್ಲದೆ ಸ್ವಂತ ಪರಿಶ್ರಮದಿಂದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಅಲಂಕಾರ ಪ್ರಿಯರು.

ಹೊಸ ರೀತಿಯ ಜೀವನವನ್ನು ಆಸೆಪಡುವಿರಿ. ಏಕಾಂತವಾಗಿ ಇರಲು ಇಚ್ಚಿಸುವಿರಿ. ಸದಾಕಾಲ ಯಾವುದಾದರೂ ಒಂದು ಕೆಲಸ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ತಮಗೆ ಸಂಬಂಧಿಸದ ವಿಚಾರಕ್ಕೆ ಸಮಯ ವ್ಯರ್ಥ ಮಾಡುವುದಿಲ್ಲ. ಸಂವಿಧಾನದ ಮೂಲಕ ಅನೇಕ ಸಮಸ್ಯೆಗಳನ್ನು ಪರಿಹರಿಸುವಿರಿ. ದೀರ್ಘಕಾಲದ ಪ್ರವಾಸಕ್ಕೆ ತೆರಳುವಿರಿ. ಮನೆತನದ ಹಳೆಯ ಮನೆಯನ್ನು ನವೀಕರಣಗೊಳಿಸುವಿರಿ. ಕಲಾವಿದರಿಗೆ ಅಪರೂಪದ ಅವಕಾಶಗಳು ದೊರೆಯಲಿದೆ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ನಿಧಾನ ಗತಿಯ ಪ್ರಗತಿ ಕಂಡು ಬರುತ್ತದೆ.

ವೃಶ್ಚಿಕ ರಾಶಿ

ಸ್ನೇಹಿತರು ಮತ್ತು ಬಂಧು-ಬಳಗದವರ ಜೊತೆಯಲ್ಲಿ ವಿಶೇಷವಾದ ಪ್ರೀತಿ ವಿಶ್ವಾಸ ತೋರುವುದಿಲ್ಲ. ಆಪತ್ತಿನಲ್ಲಿ ಇರುವವರಿಗೆ ಸಹಾಯ ಮಾಡುವಿರಿ. ಆತಂಕದ ಪರಿಸ್ಥಿತಿಯಲ್ಲಿ ಭಯಪಡದೆ ಕೆಲಸ ಸಾಧಿಸುವಿರಿ. ಕೌಟುಂಬಿಕ ಜೀವನದಲ್ಲಿ ಅನಾವಶ್ಯಕವಾದ ಮನಸ್ತಾಪವಿರುತ್ತದೆ. ಬಂಧು ಬಳಗದವರಿಗೆ ನಿಮ್ಮ ಮೇಲೆ ಅಸೂಯೆಯ ಗುಣವಿರುತ್ತದೆ. ಯುವಕ ಯುವತಿಯರಿಗೆ ವಿಶೇಷವಾದ ಅನುಕೂಲತೆಗಳು ದೊರಕಲಿವೆ. ಅತಿಯಾದ ಆಸೆಗಳಿಂದಾಗಿ ಮಾನಸಿಕ ಒತ್ತಡವಿರುತ್ತದೆ. ಸೋಲಿನ ವೇಳೆ ಬೇರೆಯವರನ್ನು ಅನುಮಾನದಿಂದ ಕಾಣುವಿರಿ.

ಉತ್ತಮ ಆದಾಯವಿದ್ದರೂ ಹಣ ಉಳಿಸಲು ಸಾಧ್ಯವಾಗುವುದಿಲ್ಲ. ವಿಶ್ರಾಂತಿ ಇಲ್ಲದ ದುಡಿಮೆ ನಿಮ್ಮದಾಗುತ್ತದೆ. ಉದ್ಯೋಗದಲ್ಲಿ ದೊಡ್ಡ ದೊಡ್ಡ ಜವಾಬ್ದಾರಿಗಳು ಅರಸಿ ಬರಲಿವೆ. ಸಹೋದ್ಯೋಗಿಗಳು ನಿಮ್ಮ ಪರವಾಗಿ ಕೆಲಸ ಮಾಡುತ್ತಾರೆ. ಆರೋಗ್ಯದ ಬಗ್ಗೆ ಕಾಳಜಿ ತೋರುವುದಿಲ್ಲ. ಉಷ್ಣದ ಪದಾರ್ಥಗಳಿಂದ ದೂರವಿರಿ. ನಯವಾದ ಮಾತುಕತೆಯಿಂದ ಎಲ್ಲರ ಮನ ಗೆಲ್ಲುವಿರಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಸೌಲಭ್ಯಗಳು ದೊರೆಯಲಿವೆ. ನವ ವಿವಾಹಿತರಿಗೆ ಸಂತಾನ ಲಾಭವಿದೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಕಾಳಜಿ ಇರಲಿದೆ.

ಬರಹ: ಹೆಚ್‌. ಸತೀಶ್‌, ಜ್ಯೋತಿಷಿ, ಬೆಂಗಳೂರು

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ಭವಿಷ್ಯ ಹೇಳಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.