ಶ್ರೀ ವಿಶ್ವಾವಸು ಸಂವತ್ಸರದ ಚೈತ್ರ, ವೈಶಾಖ ಮಾಸದ ಹಬ್ಬಗಳ ಪಟ್ಟಿ; ರಾಮನವಮಿಯಿಂದ ಬುದ್ಧ ಪೂರ್ಣಿಮೆ ವರೆಗೆ ದಿನಾಂಕ ಸಹಿತ ವಿವರ ಇಲ್ಲಿದೆ
ವಿಶ್ವಾವಸು ನಾಮ ಸಂವತ್ಸರದಲ್ಲಿ ಯಾವೆಲ್ಲಾ ಹಬ್ಬಗಳು ಬರುತ್ತವೆ? ಹೊಸ ಸಂವತ್ಸರದ ಮೊದಲ ಮೂರು ಮಾಸಗಳಾದ ಚೈತ್ರ, ವೈಶಾಖ ಮತ್ತು ಜ್ಯೇಷ್ಠ ಮಾಸಗಳಲ್ಲಿ ಬರುವ ವಿವಿಧ ಹಬ್ಬಗಳ ದಿನಾಂಕಸಹಿತ ಸಂಪೂರ್ಣ ಮಾಹಿತಿ ಇಲ್ಲಿದೆ. (ಬರಹ: ಸತೀಶ್ ಎಚ್. ಜ್ಯೋತಿಷಿ)

ಹಿಂದೂಗಳು ಆಚರಿಸುವ ಪ್ರಮುಖ ಹಾಗೂ ಮಹತ್ವದ ಹಬ್ಬಗಳಲ್ಲಿ ಯುಗಾದಿಗೆ ಅಗ್ರಸ್ಥಾನ. ಯುಗಾದಿ ಎಂದರೆ ಯುಗದ ಆದಿ ಎಂದರೆ ಇದು ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ. ಬೇವು ಬೆಲ್ಲ ಹಂಚುವ ಮೂಲಕ ಬದುಕು ಕೂಡ ಸಿಹಿ–ಕಹಿಗಳ ಸಮ್ಮಿಶ್ರಣದಂತೆ ಸಾಗಲಿ ಎಂದು ಹಾರೈಸಲಾಗುತ್ತದೆ. ಯುಗಾದಿ ಹಬ್ಬಕ್ಕೆ ಹೊಸ ಬಟ್ಟೆ ತೊಟ್ಟು, ಮನೆಯನ್ನೆಲ್ಲಾ ಸಿಂಗರಿಸಿ ಬಹಳ ಜೋರಿನಿಂದ ಹಬ್ಬ ಆಚರಿಸಲಾಗುತ್ತದೆ.
ಯುಗಾದಿ ಹಬ್ಬ ಬಂದಾಗ ಈ ವರ್ಷ ಯಾವೆಲ್ಲಾ ಹಬ್ಬಗಳು ಬರುತ್ತವೆ ಎಂದು ಪಂಚಾಂಗ ನೋಡುವುದು ವಾಡಿಕೆ. ಹಾಗಾದರೆ ಈ ವಿಶ್ವಾವಸು ನಾಮ ಸಂವತ್ಸರದಲ್ಲಿ ಯಾವೆಲ್ಲಾ ಹಬ್ಬಗಳು ಬರುತ್ತವೆ, ಯಾವ ದಿನಾಂಕ, ಹಬ್ಬಗಳ ವಿಶೇಷ ಈ ಎಲ್ಲದರ ವಿವರಗಳು ಮುಂದಿವೆ ಓದಿ.
ಶ್ರೀ ರಾಮನವಮಿ (6-4-2025 ಭಾನುವಾರ)
ಜಾತಿ–ಬೇಧವಿಲ್ಲದೆ ಪ್ರತಿಯೊಬ್ಬರೂ ಪೂಜಿಸುವ ದೇವರೆಂದರೆ ಶ್ರೀರಾಮಚಂದ್ರ. ಶ್ರೀರಾಮರನ್ನು ಮರ್ಯಾದಾಪುರುಷೋತ್ತಮ ಎಂದೇ ಕರೆಯಲಾಗುತ್ತದೆ. ಶ್ರೀ ಸೂರ್ಯದೇವರ ಅನುಗ್ರಹವನ್ನು ಪಡೆದ ಶ್ರೀರಾಮನು ರಾವಣನ ಸಂಹಾರ ಮಾಡುತ್ತಾರೆ. ಈ ದಿನದಂದು ಶ್ರೀರಾಮಚಂದ್ರನ ಪೂಜೆ ಮಾಡಿದಲ್ಲಿ ಜೀವನದಲ್ಲಿ ಎಲ್ಲಾ ಕಷ್ಟನಷ್ಟಗಳು ದೂರವಾಗುತ್ತವೆ. ಈ ದಿನ ಕೆಲವರು ಉಪವಾಸ ವ್ರತವನ್ನು ಆಚರಿಸಿದರೆ, ಇನ್ನೂ ಕೆಲವರು ಹಬ್ಬದ ಅಡುಗೆಯೊಂದಿಗೆ ಹಬ್ಬವನ್ನಾಗಿ ಆಚರಿಸುತ್ತಾರೆ. ಇಂದಿನ ಆಚರಣೆ ಪಾನಕ ಹೆಸರುಬೇಳೆ ಮತ್ತು ರವೆಯಿಂದ ಮಾಡಿದ ಸಜ್ಜಿಗೆಯನ್ನು ಒಳಗೊಂಡಿರುತ್ತದೆ.
ಚಿತ್ರಾ ಪೂರ್ಣಿಮಾ (12-4-2025, ಶನಿವಾರ )
ಈ ದಿನ ಹಬ್ಬವನ್ನಾಗಿ ಆಚರಿಸುತ್ತೇವೆ. ಈ ದಿನದಂದು ಅನಾರೋಗ್ಯದಲ್ಲಿ ತೊಂದರೆ ಇರುವವರು ಮತ್ತು ವಯೋವೃದ್ದರು ಪೂಜೆಯನ್ನು ಸಲ್ಲಿಸಿದ ನಂತರ ಹೊಸ ಪುಸ್ತಕ ಮತ್ತು ಲೇಖನಿಯನ್ನು ದಾನ ನೀಡುತ್ತಾರೆ. ಈ ದಿನ ದಾನ ನೀಡಿದವರ ಲೆಕ್ಕಾಚಾರವನ್ನು ಹೊಸದಾಗಿ ಚಿತ್ರಗುಪ್ತನು ಬರೆಯಲು ಆರಂಭಿಸುತ್ತಾನೆ ಎಂಬ ನಂಬಿಕೆ ನಮ್ಮಲ್ಲಿದೆ. ಈ ದಿನವನ್ನು ಅಕ್ಕನ ಹುಣ್ಣಿಮೆ ಮತ್ತು ದವನದ ಹುಣ್ಣಿಮೆ ಎಂದೂ ಕರೆಯುತ್ತಾರೆ. ಇದೇ ದಿನ ಬೆಂಗಳೂರಿನ ಕರಗವೂ ಇರಲಿದೆ.
ವೈಶಾಖ ಮಾಸ (28-4-2025 ರಿಂದ 27-5-2025)
ಅಕ್ಷಯ ತದಿಗೆ (30-4-2025, ಬುಧವಾರ)
ಈ ದಿನದಂದು ಕುಲದೇವರ ಪೂಜೆಯನ್ನು ಮಾಡಲಾಗುತ್ತದೆ. ಕೆಲವೆಡೆ ಶ್ರೀಗೌರಿ, ಶ್ರೀದುರ್ಗಾಮಾತೆ ಮತ್ತು ಶ್ರೀಮಹಾಲಕ್ಷ್ಮಿಯ ಪೂಜೆಯನ್ನು ಮಾಡುತ್ತಾರೆ. ಈ ದಿನ ಮಹಿಳೆಯರಿಗೆ ವಿಶೇಷವಾದ ದಿನವಾಗಿರುತ್ತದೆ. ಮನೆಗೆ ಆಗಮಿಸಿದ ಸ್ತ್ರೀಯರಿಗೆ ತಾಂಬೂಲವನ್ನು ನೀಡಿ ಆಶೀರ್ವಾದವನ್ನು ಪಡೆಯುತ್ತಾರೆ. ಈ ದಿನದಂದು ಮಡಿಲು ತುಂಬುವ ಪದಾರ್ಥಗಳನ್ನು ನೀಡಿ ಆಶೀರ್ವಾದವನ್ನು ಪಡೆಯಲಾಗುತ್ತದೆ. ಈ ದಿನದಂದು ಮಾಡುವ ಪೂಜೆ ಪುನಸ್ಕಾರ ಮತ್ತು ದಾನದಿಂದ ದುಪ್ಪಟ್ಟು ಫಲಗಳು ದೊರೆಯುತ್ತವೆ ಎಂದು ಧರ್ಮಗ್ರಂಥಗಳಲ್ಲಿ ತಿಳಿಸಲ್ಪಟ್ಟಿದೆ. ಈ ದಿನ ಪರಶುರಾಮ ಜಯಂತಿ ಮತ್ತು ಬಸವೇಶ್ವರರ ಜಯಂತಿಯನ್ನು ಸಹ ಆಚರಿಸುತ್ತೇವೆ.
ಶ್ರೀ ಶಂಕರಾಚಾರ್ಯ, ಶ್ರೀ ರಾಮಾನುಜಾಚಾರ್ಯರ ಜಯಂತಿ (2-5-2025, ಶುಕ್ರವಾರ)
ಹಿಂದೂಧರ್ಮವು ಅವಸಾನದ ಹಂತದಲ್ಲಿ ಇದ್ದಾಗ ಪರಮೇಶ್ವರನೇ ಶಂಕರಾಚಾರ್ಯರಾಗಿ ಅವತರಿಸಿದರೆಂದು ಹೇಳಲಾಗುತ್ತದೆ. ಶಂಕರಾಚಾರ್ಯರು ತನ್ನ ಅಲ್ಪಾಯಸ್ಸಿನಲ್ಲಿಯೇ ಮಹತ್ತರ ಸಾಧನೆಯನ್ನು ಮಾಡುತ್ತಾರೆ. ಶ್ರೀ ರಾಮಾನುಜಾಚಾರ್ಯರು ಹಿಂದೂಧರ್ಮದ ಗೌರವವನ್ನು ಹೆಚ್ಚಿಸುತ್ತಾರೆ. ಇವರಿಂದ ಹಿಂದೂಧರ್ಮದ ಘನತೆಯು ಇನ್ನಷ್ಟು ಹೆಚ್ಚುತ್ತದೆ.
ಬುದ್ಧ ಪೂರ್ಣಿಮೆ (12-5-2025, ಸೋಮವಾರ)
ಇಂದು ಬುದ್ದನ ಜನ್ಮದಿನವಾಗಿದೆ. ಇದೇ ದಿನ ಬುದ್ದನಿಗೆ ಮೋಕ್ಷಪ್ರಾಪ್ತಿಯಾಗುತ್ತದೆ. ಆದ್ದರಿಂದ ಈ ದಿನವನ್ನು ಬುದ್ದಪೂರ್ಣಿಮ ಎಂದು ಕರೆಯಲಾಗುತ್ತದೆ.
