ಮಿಥುನ ರಾಶಿಗೆ ಶುಕ್ರನ ಪ್ರವೇಶ, ಮಿಶ್ರ ಫಲಗಳನ್ನು ನೀಡಲಿದ್ದಾನೆ ಪ್ರೀತಿಯ ಗ್ರಹ; ಸಮಸ್ಯೆಗಳ ಪರಿಹಾರಕ್ಕಾಗಿ ಹೀಗೆ ಮಾಡಿ
ಮಿಥುನ ರಾಶಿಗೆ ಶುಕ್ರನ ಪ್ರವೇಶದಿಂದ ಆ ರಾಶಿಯವರ ಜೀವನದಲ್ಲಿ ಅನೇಕ ಬದಲಾವಣೆಗಳಾಗಲಿದೆ. ಪ್ರೀತಿ, ಸೌಂದರ್ಯ ಮತ್ತು ಶಾಂತಿಯ ಗ್ರಹವಾದ ಶುಕ್ರನು ಮಿಥುನ ರಾಶಿಯವರ ವೃತ್ತಿ, ಆರ್ಥಿಕ ಮತ್ತು ಪ್ರೀತಿಯ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತಾನೆ. ಆದರೆ ಈ ಸಮಯದಲ್ಲಿ ಕೆಲವು ಎಚ್ಚರಿಕೆಗಳನ್ನು ವಹಿಸುವುದು ಅಗತ್ಯವಾಗಿದೆ.

ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ನಿಗದಿತ ಸಮಯದಲ್ಲಿ ಚಲಿಸುತ್ತವೆ. ಹಾಗೆ ಚಲಿಸುವುದರಿಂದ ಆ ರಾಶಿಗಳಲ್ಲಿ ಅನೇಕ ಬದಲಾವಣೆಗಳು ಕಂಡುಬರುತ್ತವೆ. ಈಗ ಜೂನ್ 12 ರಂದು ಸಂಜೆ 6:37 ಕ್ಕೆ ಶುಕ್ರನು ಮಿಥುನ ರಾಶಿಗೆ ಪ್ರವೇಶಿಸಿದ್ದಾನೆ. ಶುಕ್ರ ಗ್ರಹವು ಪ್ರೀತಿ, ಸೌಂದರ್ಯ, ಶಾಂತಿಯನ್ನು ಪ್ರತಿನಿಧಿಸುವ ಗ್ರಹವಾಗಿದೆ. ಮಿಥುನ ರಾಶಿಗೆ ಶುಕ್ರನ ಪ್ರವೇಶದಿಂದ ಬಹಳಷ್ಟು ಹೊಸ ಬದಲಾವಣೆಗಳನ್ನು ಕಾಣಬಹುದಾಗಿದೆ. ಈ ಸಮಯದಲ್ಲಿ ಜಾತಕದಲ್ಲಿ ಶುಕ್ರನು ಉತ್ತಮವಾಗಿದ್ದರೆ ಒಳ್ಳೆಯ ವಿಷಯಗಳನ್ನು ಕಲಿಯಲು ಮತ್ತು ಒಳ್ಳೆಯ ಜನರನ್ನು ಸಂಪಾದಿಸಲು ಸಾಧ್ಯವಾಗುತ್ತದೆ.
ಈ ಸಮಯದಲ್ಲಿ ಮಿಥುನ ರಾಶಿಯವರು ಜನರೊಂದಿಗೆ ಬೆರೆಯಲು, ಮಾನಸಿಕವಾಗಿ ಹತ್ತಿರವಾಗಲು, ಹೆಚ್ಚು ಮಾತನಾಡಲು ಉತ್ಸುಕರಾಗಿರುತ್ತಾರೆ. ಹೊಸ ಸ್ನೇಹಿತರನ್ನು ಮಾಡಿಕೊಳ್ಳುವುದು ಸುಲಭವಾಗುತ್ತದೆ. ಹೊಸ ಹವ್ಯಾಸ ಮತ್ತು ಚಟುವಟಿಕೆಗಳಲ್ಲಿ ಸುಲಭವಾಗಿ ತೊಡಗಿಸಿಕೊಳ್ಳಬಹುದಾಗಿದೆ. ಹೊಸ ಉದ್ಯೋಗ ಹುಡುಕಲು ಅಥವಾ ಹೊಸ ವ್ಯಕ್ತಿಗಳ ಸಂಪರ್ಕವನ್ನು ಸಾಧಿಸಲು ಇದು ಉತ್ತಮ ಅವಕಾಶವಾಗಿದೆ. ಅದೇ ಶುಕ್ರನು ದುರ್ಬಲನಾಗಿದ್ದರೆ ಹಣಕಾಸು, ಸಂಬಂಧಗಳಲ್ಲಿ ಸಮಸ್ಯೆ ಉಂಟಾಗಬಹುದಾಗಿದೆ. ಮಿಥುನ ರಾಶಿಗೆ ಶುಕ್ರನ ಪ್ರವೇಶದಿಂದ ಏನೆಲ್ಲಾ ಬದಲಾವಣೆಗಳಾಗಲಿವೆ ನೋಡೋಣ.
ನಿಮ್ಮ ವರ್ತನೆ ಮೇಲಿರಲಿ ಗಮನ
ಶುಕ್ರ ಗ್ರಹವು ಮಿಥುನ ರಾಶಿಗೆ ಪ್ರವೇಶಿಸುವುದರಿಂದ ಕೆಲವೊಂದಿಷ್ಟು ಬದಲಾವಣೆಗಳಾಗುತ್ತವೆ. ಸಂಬಂಧಗಳಲ್ಲಿ ಎಷ್ಟೇ ವಿರಸ ಬಂದರೂ ಸಹ ಅದನ್ನು ಮುಂದುವರಿಸದೇ ಇರುವುದು ಉತ್ತಮ. ಅಂತಹ ಸಮಯದಲ್ಲಿ ಯಾರಾದರೂ ಒಬ್ಬರು ಶಾಂತವಾಗಿರಬೇಕು. ಜೀವನದಲ್ಲಿ ಸಂತೋಷ ಕಳೆದುಕೊಳ್ಳಬಾರದು . ಶುಕ್ರಗ್ರಹವು ಮಿಥುನ ರಾಶಿಯಲ್ಲಿದ್ದಾಗ ಇಬ್ಬರಲ್ಲಿ ಒಬ್ಬರು ಬಹುಬೇಗನೆ ವಿಚಲಿತರಾಗಬಹುದು. ಪುನಃ ಒಂದಾಗಲು ಅಥವಾ ಒಬ್ಬರ ಗಮನ ಮತ್ತೊಬ್ಬರು ಸೆಳೆಯಲು ಕಷ್ಟಪಡಬಹುದು. ಅದಕ್ಕಾಗಿ ಕೆಲವು ವೇಳಾಪಟ್ಟಿ ಮತ್ತು ಗುರಿಗಳನ್ನು ಹಾಕಿಕೊಳ್ಳುವುದು ಉತ್ತಮ. ಮಿಥುನ ರಾಶಿಯು ಹಾಸ್ಯ ಮತ್ತು ಬುದ್ಧಿವಂತಿಕೆಗೆ ಹೆಸರುವಾಸಿಯಾಗಿದೆ. ಈ ಸಮಯದಲ್ಲಿ ನೀವು ಬಳಸುವ ಭಾಷೆ ಬಗ್ಗೆ ಎಚ್ಚರವಹಿಸುವುದು ಸಹ ಮುಖ್ಯವಾಗಿದೆ. ಏಕೆಂದರೆ ಕೆಲವೊಮ್ಮೆ ಅದು ಕಠೋರವೆನಿಸಬಹುದು. ಹೀಗಾಗಿ ಬೇರೆಯವರ ಮನಸ್ಸು ನೋಯಿಸದಂತೆ ಆಲೋಚನೆ ಮಾಡಿ ಮಾತನಾಡುವುದು ಉತ್ತಮವಾಗಿದೆ.
ವೃತ್ತಿ ಜೀವನದ ಮೇಲೆ ಪರಿಣಾಮ
ಮಿಥುನ ರಾಶಿಯಲ್ಲಿ ಶುಕ್ರಗ್ರಹವಿದ್ದಾಗ ಉದ್ಯೋಗ ಹುಡುಕಲು, ಹೊಸ ಜನರನ್ನು ಭೇಟಿಯಾಗಲು ಉತ್ತಮ ಸಮಯವಾಗಿದೆ. ಈ ಸಮಯದಲ್ಲಿ ಹೆಚ್ಚು ಸಂವಹನಶೀಲರಾಗಿರುವುದರಿಂದ ಅದರ ಲಾಭ ಪಡೆದುಕೊಳ್ಳಬಹುದಾಗಿದೆ. ಇದು ಹೊಸ ಉದ್ಯೋಗ ಪಡೆದುಕೊಳ್ಳಲು ಉತ್ತಮ ಸಮಯವಾಗಿದೆ. ಅದಕ್ಕಾಗಿ ಉದ್ಯೋಗ ಮೇಳಗಳಿಗೆ ಭೇಟಿ ನೀಡಿ, ನಿಮ್ಮ ರೆಸ್ಯೂಮ್ ನೀಡುವುದರಿಂದ ಕನಸು ನನಸಾಗಬಹುದು. ನೀವು ಈಗಾಗಲೇ ಕೆಲಸ ಮಾಡುತ್ತಿದ್ದರೆ ವೃತ್ತಿಯಲ್ಲಿ ಪ್ರಗತಿಯನ್ನು ಕಾಣುವ ಸಾಧ್ಯತೆಯಿದೆ. ಪ್ರಾಜೆಕ್ಟ್ ಮ್ಯಾನೇಜರ್ನಂತಹ ಹೊಸ ಜವಾಬ್ದಾರಿಗಳನ್ನು ನಿರೀಕ್ಷಿಸಬಹುದು. ಯಾವುದಕ್ಕೂ ಹಿಂಜರಿಯದೆ ನಿಮ್ಮ ಯೋಗ್ಯತೆ ಪ್ರದರ್ಶಿಸಲು ಇರುವ ಈ ಅವಕಾಶ ಕಳೆದುಕೊಳ್ಳಬೇಡಿ. ಸಂವಹನ ಕೌಶಲ್ಯ ಮತ್ತು ವಿಭಿನ್ನ ಸನ್ನಿವೇಶಗಳನ್ನು ನಿರ್ವಹಿಸುವ ಸಾಮರ್ಥ್ಯವು ನಿಮ್ಮ ಯಶಸ್ಸನ್ನು ನಿರ್ಧರಿಸುತ್ತದೆ.
ಆರ್ಥಿಕ ಪರಿಣಾಮಗಳು
ಶುಕ್ರನ ಸಂಚಾರದಿಂದ ನೀವು ರಿಯಲ್ ಎಸ್ಟೇಟ್ ಕಡೆಗೆ ಆಕರ್ಷಿತರಾಗಬಹುದು. ಅದು ನಿಮಗೆ ಹೊಸ ಅನುಭವವನ್ನು ತಂದುಕೊಡುತ್ತದೆ. ಆಸ್ತಿ ಖರೀದಿಸುವ ಹಾಗೂ ಮಾರಾಟ ಮಾಡುವುದರಲ್ಲಿ ನಿಮ್ಮ ಬುದ್ದಿವಂತಿಕೆಯನ್ನು ತೋರಿಸಬಹುದು. ಕಾರು ಖರೀದಿಸಲು ಉತ್ತಮ ಸಮಯವಿದು. ವಿಮಾ ಪಾಲಿಸಿಗಳನ್ನು ಮಾಡಲು ಸಹ ಈ ಸಮಯ ಉತ್ತಮವಾಗಿದೆ. ಮಿಥುನ ರಾಶಿಯಲ್ಲಿ ಶುಕ್ರನು ಇರುವುದರಿಂದ ಸ್ಥಿರತೆ ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಮರೆಯದಿರಿ.
ಲವ್ ಲೈಫ್ಗೆ ಸಲಹೆ
ಮಿಥುನ ರಾಶಿಯಲ್ಲಿ ಶುಕ್ರನು ಇರುವುದರಿಂದ ನಿಮ್ಮ ಒಂಟಿತನ ದೂರವಾಗುತ್ತದೆ. ಈ ಸಮಯದಲ್ಲಿ ನಿಮ್ಮ ಬುದ್ಧಿ ಮತ್ತು ಹಾಸ್ಯ ಪ್ರವರ್ತಿಯಿಂದ ನೀವು ನಿಮಗೆ ಹೊಂದಿಕೆಯಾಗುವವರನ್ನು ಆಕರ್ಷಿಸಬಹುದು. ಆ ವ್ಯಕ್ತಿಯೊಂದಿಗೆ ಮಾತನಾಡಲು ಹಿಂಜರಿಯಬೇಡಿ. ಕಾಫಿ ಅಥವಾ ಊಟಕ್ಕೆ ಆಹ್ವಾನಿಸಿ. ಬುಧವಾರ ಮತ್ತು ಶುಕ್ರವಾರ ಪ್ರೀತಿಗೆ ಅನುಕೂಲಕರವಾಗಿದೆ. ಹಳದಿ ಮತ್ತು ಹಸಿರು ಬಣ್ಣಗಳು ನಿಮಗೆ ಅದೃಷ್ಟವನ್ನು ತಂದುಕೊಡುತ್ತದೆ. ಪುಸ್ತಕ, ಒಗಟುಗಳಂತಹ ಮೆದುಳಿಗೆ ಸವಾಲು ಹಾಕುವ ಉಡುಗೊರೆಗಳನ್ನು ಖರೀದಿಸುವುದು ಉತ್ತಮ.
ನೀವು ಈಗಾಗಲೇ ಒಂದು ಸಂಬಂಧದಲ್ಲಿದ್ದರೆ ನಿಮ್ಮ ಪ್ರೀತಿಯ ಜೀವನವು ಸಂತೋಷವನ್ನು ತರುತ್ತದೆ. ಒಟ್ಟಿಗೆ ಹೊಸ ಕೆಲಸಗಳನ್ನು ಮಾಡಲು ಪ್ರಾರಂಭಿಸಬಹುದು. ಅದು ನಿಮ್ಮ ಸಂಬಂಧದ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಿ. ಒಟ್ಟಿಗೆ ಗುಣಮಟ್ಟದ ಸಮಯ ಕಳೆಯಿರಿ. ಮಂಗಳವಾರ ಮತ್ತು ಶನಿವಾರ ನಿಮ್ಮ ಅದೃಷ್ಟದ ದಿನಗಳಾಗಿರುತ್ತದೆ. ಗುಲಾಬಿ ಮತ್ತು ನೇರಳೆ ಬಣ್ಣ ನಿಮ್ಮ ಅದೃಷ್ಟದ ಬಣ್ಣವಾಗಿದೆ. ನಿಮ್ಮ ಸಂಗಾತಿಗೆ ಉಡುಗೊರೆ ನೀಡಲು ಯೋಚಿಸಿದ್ದರೆ, ನಿಶ್ಚಿತಾರ್ಥದ ಉಂಗುರ ಅಥವಾ ರೊಮಾಂಟಿಕ್ ಕಾದಂಬರಿ ಮುಂತಾದ ನಿಮ್ಮ ಸಂಬಂಧವನ್ನು ಸಂಕೇತಿಸುವ ಉಡುಗೊರೆಗಳನ್ನು ನೀಡಿ.
ಪರಿಹಾರಗಳು
ಶುಕ್ರನ ಸ್ಥಾನ ಬದಲಾವಣೆಯ ಈ ಸಮಯದಲ್ಲಿ ಹಸಿರು ಮತ್ತು ಹಳದಿ ಅದೃಷ್ಟದ ಬಣ್ಣಗಳಾಗಿವೆ. ಅದಕ್ಕಾಗಿ ಹಳದಿ ಮತ್ತು ಹಸಿರು ಬಟ್ಟೆಗಳನ್ನು ಧರಿಸಿ. ನಿಮ್ಮ ಮನೆ ಅಥವಾ ಕೋಣೆಯ ಬಣ್ಣಗಳಿಗೂ ಇದನ್ನೇ ಬಳಸಿ. ಧನಾತ್ಮಕ ಶಕ್ತಿಯನ್ನು ಹೆಚ್ಚಿಸಲು ಕೆಲವು ವಾಸ್ತು ಪರಿಹಾರಗಳನ್ನು ಕಂಡುಕೊಳ್ಳಿ. ನಿಮ್ಮ ಮನೆಯ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಹಳದಿ ಅಥವಾ ಹಸಿರು ಕ್ರಿಸ್ಟಲ್ (ಸ್ಪಟಿಕ)ವನ್ನು ಹಾಕಿ. ಅದು ಸಂಪತ್ತು ಮತ್ತು ಸಮೃದ್ಧಿಯನ್ನು ಸೆಳೆಯಲು ಸಹಾಯ ಮಾಡುತ್ತದೆ. ‘ಓ ಶುಕ್ರಾಯ ನಮಃ’ ಈ ಶುಕ್ರ ಮಂತ್ರವನ್ನು ಪಠಿಸಿ. ಇದು ನಿಮ್ಮ ಜೀವನದಲ್ಲಿ ಪ್ರೀತಿ ಮತ್ತು ಸಾಮರಸ್ಯವನ್ನು ಆಕರ್ಷಿಸಲು ಪ್ರಯೋಜನಕಾರಿಯಾಗಿದೆ. ಸಂಪತ್ತು, ಸೌಂದರ್ಯ ಮತ್ತು ಸಮೃದ್ಧಿಯ ದೇವತೆಯಾಗಿರುವ ಲಕ್ಷ್ಮೀ ದೇವಿಯನ್ನು ಸಹ ಪ್ರಾರ್ಥಿಸಬಹುದು. ಟ್ರಸ್ಟ್ಗಳಿಗೆ ಹಣವನ್ನು ದಾನ ಮಾಡುವುದರಿಂದ ನಿಮ್ಮ ಜೀವನ ಉತ್ತಮವಾಗುವುದರ ಜೊತೆಗೆ ಅದೃಷ್ಟ ಒಲಿದು ಬರಲು ಸಹಾಯ ಮಾಡುತ್ತದೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
