Weekly Horoscope: ಆಪತ್ಕಾಲಕ್ಕೆಂದು ಹಣ ಉಳಿಸುವಿರಿ, ವೃತ್ತಿಜೀವನದಲ್ಲಿ ಉತ್ತಮ ಬದಲಾವಣೆ; ಮಾರ್ಚ್​ 10ರಿಂದ 16ರವರೆಗಿನ ವಾರಭವಿಷ್ಯ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Weekly Horoscope: ಆಪತ್ಕಾಲಕ್ಕೆಂದು ಹಣ ಉಳಿಸುವಿರಿ, ವೃತ್ತಿಜೀವನದಲ್ಲಿ ಉತ್ತಮ ಬದಲಾವಣೆ; ಮಾರ್ಚ್​ 10ರಿಂದ 16ರವರೆಗಿನ ವಾರಭವಿಷ್ಯ

Weekly Horoscope: ಆಪತ್ಕಾಲಕ್ಕೆಂದು ಹಣ ಉಳಿಸುವಿರಿ, ವೃತ್ತಿಜೀವನದಲ್ಲಿ ಉತ್ತಮ ಬದಲಾವಣೆ; ಮಾರ್ಚ್​ 10ರಿಂದ 16ರವರೆಗಿನ ವಾರಭವಿಷ್ಯ

ಮಾರ್ಚ್ 10ರಿಂದ ಮಾರ್ಚ್ 16 ರವರೆಗಿನ ವಾರ ಭವಿಷ್ಯ: ಪ್ರತಿ ರಾಶಿಗೂ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಈ ವಾರ ಯಾವ ರಾಶಿಯವರಿಗೆ ಏನು ಫಲ? ಒಂದು ವಾರದ ಭವಿಷ್ಯ ಇಲ್ಲಿದೆ. ಎಲ್ಲರಿಗೂ ಸದಾ ಒಳಿತೇ ಆಗುತ್ತದೆ ಎನ್ನುವುದು ಭಾರತೀಯ ಪರಂಪರೆಯ ದೃಢ ನಂಬಿಕೆ. ( March 10 to March 16 Weekly Horoscope)

ವಾರ ಭವಿಷ್ಯ
ವಾರ ಭವಿಷ್ಯ

ಮಾರ್ಚ್ 10 ರಿಂದ ಮಾರ್ಚ್ 16 ರವರೆಗಿನ ವಾರ ಭವಿಷ್ಯ: ‘ನಾಳೆ ಏನಾಗುವುದೋ ಬಲ್ಲವರು ಯಾರು’ ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸಿಕ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್.ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (March 10 to March 16 Weekly Horoscope)

ರಾಶಿ ಫಲಗಳು

ಮೇಷ

ಗಾಳಿ ಸುದ್ದಿಯಿಂದಾಗಿ ಕಾನೂನಿನ ವಿಚಾರದಲ್ಲಿ ಯೋಚನೆ ಇರುತ್ತದೆ. ನಿಮ್ಮ ತಪ್ಪು ನಿರ್ಧಾರಗಳಿಂದ ಕುಟುಂಬದಲ್ಲಿ ಅಶಾಂತಿ ನೆಲೆಸುತ್ತದೆ. ಉದ್ಯೋಗದಲ್ಲಿ ಪ್ರಮುಖ ಬದಲಾವಣೆ ಕಂಡು ಬರಲಿದೆ. ಕೆಲವೊಂದು ಆತುರದ ನಿರ್ಣಯಗಳು ಎಲ್ಲರ ಬೇಸರಕ್ಕೆ ಕಾರಣವಾಗುತ್ತದೆ. ಏಕಾಂಗಿತನ ಮನಸ್ಸಿನ ಮೇಲೆ ಪ್ರಭಾವ ಬೀರಲಿದೆ. ಮನದ ಬೇಸರದಿಂದ ಹೊರಬರಲು ದೂರದ ಸ್ಥಳಕ್ಕೆ ತೆರಳುವಿರಿ. ನೀವು ತೆಗೆದುಕೊಳ್ಳುವ ತೀರ್ಮಾನವೊಂದು ಬದುಕಿನ ಜಾಡನ್ನೇ ಬದಲಿಸುತ್ತದೆ. ಕ್ರಮೇಣವಾಗಿ ನಿಮ್ಮ ಕಾರ್ಯಕ್ಷೇತ್ರವು ವಿಸ್ತಾರಗೊಳ್ಳುತ್ತದೆ. ಹೊಸ ರೀತಿಯಬದಲಾವಣೆಗಳು ಸಂತೋಷ ಉಂಟು ಮಾಡುತ್ತದೆ. ದುಡುಕದೆ ಮುಂದುವರೆದರೆ ಯಾವುದೇ ತೊಂದರೆ ಉಂಟಾಗದು. ಹೊಸ ಕೆಲಸವನ್ನು ಆರಂಭಿಸುವ ಮೊದಲು ಎಲ್ಲರೊಂದಿಗೆ ಚರ್ಚಿಸಿ.

ವೃಷಭ

ಮನದಲ್ಲಿರುವ ಭಾವನೆಯನ್ನು ಎಲ್ಲರೊಂದಿಗೆ ಹಂಚಿಕೊಳ್ಳುವಿರಿ. ಸುಲಭವಾಗಿ ಯಾರ ವಿಚಾರದಲ್ಲಿಯೂ ಭಾಗಿಯಾಗುವುದಿಲ್ಲ. ಸ್ವಂತ ಕೆಲಸ ಕಾರ್ಯಗಳಿಗೆ ಮಾತ್ರ ನಿಮ್ಮಲ್ಲಿನ ಬುದ್ಧಿಶಕ್ತಿ ಸೀಮಿತವಾಗುತ್ತದೆ. ಶುಭ ಕೆಲಸ ಕಾರ್ಯಗಳಿಗೆ ಹಣವನ್ನು ವಿನಿಯೋಗಿಸುವಿರಿ. ಕುಟುಂಬದ ಭಿನ್ನಾಭಿಪ್ರಾಯಗಳು ಮರೆಯಾಗಲಿವೆ. ನಿಮ್ಮ ಆರ್ಥಿಕ ಪರಿಸ್ಥಿತಿಯು ನೀವು ತೆಗೆದುಕೊಳ್ಳುವ ತೀರ್ಮಾನವನ್ನು ಅವಲಂಬಿಸುತ್ತದೆ. ಕುಟುಂಬದ ಸದಸ್ಯರೊಂದಿಗೆ ಸ್ನೇಹಿತರಂತೆ ವರ್ತಿಸುವಿರಿ. ಅನಿರೀಕ್ಷಿತ ಖರ್ಚು ವೆಚ್ಚಗಳನ್ನು ಭರಿಸಬಲ್ಲಿರಿ. ಕೈಹಿಡಿದ ಕೆಲಸ ಕಾಯಗಳು ಪೂರ್ಣಗೊಳ್ಳುವವರೆಗೂ ಮತ್ತೊಂದು ಕೆಲಸವನ್ನು ಆರಂಭಿಸುವುದಿಲ್ಲ. ವಿದ್ಯಾರ್ಥಿಗಳು ಏಕಾಗ್ರತೆಯಿಂದ ಕಲಿಕೆಯಲ್ಲಿ ಮುಂದುವರೆಯುತ್ತಾರೆ. ಹಠದ ಗುಣಕ್ಕೆ ವಯಸ್ಸಿನ ಅಂತರವಿರುವುದಿಲ್ಲ. ಆಪತ್ಕಾಲಕ್ಕೆಂದು ಹಣವನ್ನು ಉಳಿಸುವಿರಿ.

ಮಿಥುನ

ಹತ್ತು ಹಲವು ಕಾರ್ಯಕ್ರಮಗಳ ಕಾರಣ ಆಹಾರದ ಮಿತಿ ಇರುವುದಿಲ್ಲ. ಆತ್ಮೀಯರಿಗೆ ರುಚಿಕರವಾದ ಭೋಜನ ನೀಡುವುದರಲ್ಲಿ ಸಂತಸ ಕಾಣುವಿರಿ. ಸ್ತ್ರೀಯರು ಅನೇಕ ಶುಭ ಕಾರ್ಯಕ್ರಮಗಳಿಗೆ ಆಧಾರವಾಗುತ್ತಾರೆ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಿರಬೇಕು. ಹಣಕಾಸಿನ ವ್ಯವಹಾರದಲ್ಲಿ ಸುಲಭವಾಗಿ ಯಶಸ್ಸನ್ನು ಗಳಿಸುವಿರಿ. ನಿಮ್ಮ ವಿಶಾಲವಾದ ಮನಸ್ಸಿಗೆ ಎಲ್ಲರೂ ಸೋಲುತ್ತಾರೆ. ಸ್ವಾರ್ಥಿಗಳಲ್ಲದೆ ಹೋದರು ಮೊದಲ ಆದ್ಯತೆಯನ್ನು ಸ್ವಂತ ಕೆಲಸಗಳಿಗೆ ನೀಡುವಿರಿ. ಬೇರೆಯವರಿಗೆ ಅಸಾಧ್ಯ ಎನಿಸುವ ಕೆಲಸಗಳನ್ನು ಸುಲಭವಾಗಿ ಮಾಡಬಲ್ಲಿರಿ. ಸಾಧ್ಯವಾದಷ್ಟು ವೆಚ್ಚಗಳನ್ನು ನಿಯಂತ್ರಿಸಿ. ದೊರೆಯುವ ಉತ್ತಮ ಅವಕಾಶಗಳನ್ನು ನಿಮಗೆ ಅನುಕೂಲವಾಗುವಂತೆ ಪರಿವರ್ತಿಸಿಕೊಳ್ಳುವಿರಿ.

ಕಟಕ

ಸಣ್ಣಪುಟ್ಟ ಕೆಲಸ ಕಾರ್ಯಗಳನ್ನು ಮನಸ್ಸಿಟ್ಟು ಪೂರೈಸುವಿರಿ. ಉತ್ತಮ ಆರೋಗ್ಯ ಇರುತ್ತದೆ. ಯಾವುದೇ ಸಮಸ್ಯೆ ಎದುರಾದರೂ ಸೂಕ್ತ ಪರಿಹಾರವನ್ನು ಕಂಡುಹಿಡಿಯುವಿರಿ. ಕುಟುಂಬದ ಬಗ್ಗೆ ವಿಶೇಷ ಕಾಳಜಿ ತೋರುವಿರಿ. ಸದಾ ಒಳ್ಳೆಯದನ್ನೇ ಚಿಂತಿಸುವಿರಿ. ಈ ಕಾರಣದಿಂದ ಮನಸ್ಸಿನಗೆ ನೆಮ್ಮದಿ ಇರುತ್ತದೆ. ಕುಟುಂಬದ ಕಿರಿಯ ಸದಸ್ಯರಿಗೆ ಉಡುಗೊರೆಯನ್ನು ನೀಡುವಿರಿ. ಜನಸೇವಾ ಕಾರ್ಯಕ್ರಮ ಒಂದನ್ನು ಯಶಸ್ವಿಯಾಗಿ ನಿರ್ವಹಿಸುವಿರಿ. ಖರ್ಚು ವೆಚ್ಚಗಳು ಹೆಚ್ಚೆನಿಸಿದರು ಯೋಚಿಸುವುದಿಲ್ಲ. ಮೇಲಧಿಕಾರಿಗಳ ವಿಶ್ವಾಸ ಗಳಿಸಲು ಸಫಲರಾಗುವಿರಿ. ಅನಾವಶ್ಯಕವಾಗಿ ಯಾರನ್ನು ಕಡೆಗಣ್ಣಿನಿಂದ ನೋಡುವುದಿಲ್ಲ. ಪ್ರತಿಯೊಬ್ಬರ ಕೆಲಸ ಕಾರ್ಯಗಳಿಗೂ ಬೆನ್ನು ತಟ್ಟಿ ಪ್ರೋತ್ಸಾಹಿಸುವಿರಿ. ಒಟ್ಟಾರೆ ನೀವು ಸಂತಸದಿಂದ ಇರುವುದಲ್ಲದೆ ಬೇರೆಯವರ ಸುಖವಾದ ಜೀವನಕ್ಕೂ ಕಾರಣರಾಗುವಿರಿ. ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಅವಿರತ ಶ್ರಮ ಪಡಬೇಕು.

ಸಿಂಹ

ಕುಟುಂಬದಲ್ಲಿ ಅನೇಕ ಬದಲಾವಣೆಗಳು ಉಂಟಾಗಲು ಕಾರಣರಾಗುವಿರಿ. ಕೆಲಸ ಕಾರ್ಯಗಳ ನಡುವೆ ಆರೋಗ್ಯದ ಕಡೆ ಗಮನವಿರಲಿ. ಉತ್ತಮ ಆಹಾರ ಸೇವನೆಯ ಬಗ್ಗೆ ಅರಿತು ನಡೆಯುವಿರಿ. ಮಕ್ಕಳ ಮೇಲೆ ವಿಶೇಷವಾದ ಪ್ರೀತಿ ವಿಶ್ವಾಸವಿರುತ್ತದೆ. ಮಕ್ಕಳ ಸಂತೋಷಕ್ಕಾಗಿ ಹೆಚ್ಚಿನ ಹಣ ಖರ್ಚು ಮಾಡುವಿರಿ. ಬೇರೆಯವರನ್ನು ನಂಬಿ ಯಾವುದೇ ವ್ಯಾಪಾರ ವ್ಯವಹಾರಗಳಲ್ಲಿ ಹಣ ತೊಡಗಿಸದಿರಿ. ಕುಟುಂಬದಲ್ಲಿ ಬೇಸರದ ಸನ್ನಿವೇಶವೊಂದು ನಡೆಯಬಹುದು. ಕ್ರೀಡಾ ಮನೋಭಾವನೆಯಿಂದ ತಪ್ಪನ್ನು ಕ್ಷಮಿಸುವುದು ಒಳ್ಳೆಯದು. ವೃತ್ತಿಜೀವನದಲ್ಲಿ ಉನ್ನತಮಟ್ಟ ತಲುಪುವಿರಿ. ನಿಮ್ಮ ಕಷ್ಟದ ಸಂದರ್ಭದಲ್ಲಿ ಕುಟುಂಬದ ಹಿರಿಯರ ಸಹಾಯ ದೊರೆಯುತ್ತದೆ. ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳುತ್ತದೆ. ಉದ್ಯೋಗದಲ್ಲಿ ವಿಶೇಷವಾದ ಅನುಕೂಲತೆ ದೊರೆಯಲಿದೆ.

ಕನ್ಯಾ

ಜೀವನದ ಸಂತಸದ ಕ್ಷಣಗಳನ್ನು ಅನುಭವಿಸುವಿರಿ. ಕುಟುಂಬದವರ ಸಹಾಯ ಸಹಕಾರ ನಿಮ್ಮದಾಗುತ್ತದೆ. ಆರಂಭಿಸುವ ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸು ದೊರೆಯುತ್ತದೆ. ನಿಮ್ಮ ಹಠದ ಗುಣ ಜಯದ ಸರಮಾಲೆಯನ್ನು ನೀಡಲಿದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ನಿಮ್ಮ ಅರಿವಿಗೆ ಬಾರದಂತೆ ಇರುವ ಹಣವೆಲ್ಲ ವೆಚ್ಚಾಗಬಹುದು. ಆತ್ಮೀಯರಿಗೆ ನೀಡಿದ ಹಣ ಮರಳಿ ಬಾರದು. ಹಣಕಾಸಿನ ಸಮಸ್ಯೆಗಳನ್ನು ಸುಲಭವಾಗಿ ಎದುರಿಸುವಿರಿ. ಗೆಲ್ಲುವವರೆಗೂ ವಿರಮಿಸುವುದಿಲ್ಲ. ನಿಮ್ಮ ಮೇಲಧಿಕಾರಿಗಳಿಂದ ನೀವು ಮೆಚ್ಚುಗೆ ಗಳಿಸುವಿರಿ. ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಅವಕಾಶ ಲಭಿಸುತ್ತದೆ. ತಪ್ಪು ನಿರ್ಧಾರವನ್ನು ತೆಗೆದುಕೊಂಡು ಬೇಸರಕ್ಕೆ ಒಳಗಾಗುವಿರಿ.

ತುಲಾ

ಆತ್ಮವಿಶ್ವಾಸ ಸಲ್ಪ ಹೆಚ್ಚಾಗಿಯೇ ಇರುತ್ತದೆ. ಈ ಕಾರಣದಿಂದ ಸುಲಭವಾಗಿ ಮುಖ್ಯವಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಆರಂಭದಲ್ಲಿ ಕೈ ಕೈಹಿಡಿದ ಕೆಲಸ ಕಾರ್ಯಗಳಲ್ಲಿ ಹಿನ್ನಡೆ ಲಭಿಸುತ್ತದೆ. ಕುಟುಂಬದ ಜೀವನದಲ್ಲಿ ಮುಖ್ಯ ಪಾತ್ರ ವಹಿಸುವಿರಿ. ಉದ್ಯೋಗದಲ್ಲಿ ಧನಾತ್ಮಕ ಕೆಲಸ ಕಾರ್ಯಗಳಿಗೆ ಕಾಯಕಲ್ಪ ನೀಡುವಿರಿ. ಬೇರೆಯವರ ಸಲಹೆಯನ್ನು ಪಾಲಿಸದೆ ಹೋದರು ಕೇಳಿಸಿಕೊಳ್ಳಿ. ವಿದ್ಯಾರ್ಥಿಗಳು ತಮ್ಮ ಕರ್ತವ್ಯವನ್ನು ಪಾಲಿಸಿ ವಿಶ್ರಾಂತಿಗೆ ಜಾರುತ್ತಾರೆ. ಸಣ್ಣ ವಿಚಾರವಾದರೂ ಕಡೆಗಣ್ಣಿನಿಂದ ನೋಡದಿರಿ. ಅನಾವಶ್ಯಕವಾಗಿ ಆತ್ಮೀಯರ ಬಗ್ಗೆತಪ್ಪು ಅಭಿಪ್ರಾಯಕ್ಕೆ ಬರುವಿರಿ. ಸಮಯ ಸಂದರ್ಭವನ್ನು ಆಧರಿಸಿ ಅವಶ್ಯಕ ತಕ್ಕಂತೆ ಹಣ ಗಳಿಸುವುದು ಸಾಧ್ಯ.

ವೃಶ್ಚಿಕ

ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತದೆ. ಕುಟುಂಬದಲ್ಲಿ ಧನಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ಸಾಲವಾಗಿ ಕೊಟ್ಟ ಹಣ ಮರಳಿ ಕೈ ಸೇರುವುದು. ಕುಟುಂಬದಲ್ಲಿ ಹಣಕಾಸಿನ ವಿಚಾರದಲ್ಲಿಅಸಮಾಧಾನ ಉಂಟಾಗಬಹುದು. ಮಾನಸಿಕವಾಗಿ ಒತ್ತಡವು ಹೆಚ್ಚಬಹುದು. ವೃತ್ತಿ ಜೀವನದಲ್ಲಿ ಉತ್ತಮ ಬದಲಾವಣೆಗಳು ಎದುರಾಗಲಿವೆ. ಹಣದ ತೊಂದರೆ ಇರುವುದಿಲ್ಲ. ಸುಲಭವಾಗಿ ಬೇರೆಯುವ ಪ್ರಭಾವಕ್ಕೆ ಒಳಗಾಗುವಿರಿ. ಉದ್ಯೋಗದ ಸಲುವಾಗಿ ದೂರದ ಊರಿಗೆ ಪ್ರಯಾಣ ಬೆಳೆಸುವಿರಿ. ವಿದ್ಯಾರ್ಥಿಗಳು ನಿರೀಕ್ಷೆಯಲ್ಲಿ ಕಾಲ ಕಳೆಯುತ್ತಾರೆ. ನಿಮ್ಮಲ್ಲಿನ ಹಾಸ್ಯದ ಮನೋಭಾವನೆ ಎಲ್ಲರ ಮನಸ್ಸನ್ನು ಶುದ್ಧಗೊಳಿಸುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉನ್ನತ ಮಟ್ಟ ತಲುಪುವಿರಿ.

ಧನಸ್ಸು

ಕುಟುಂಬದ ಮತ್ತು ನೆರೆಹೊರೆಯ ಜನರೊಂದಿಗೆ ಆತ್ಮೀಯವಾಗಿ ವರ್ತಿಸುವಿರಿ. ನಿಮ್ಮ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಿ ಬೇರೆಯವರ ಸಹಾಯಕ್ಕೆ ಮುಂದಾಗುವಿರಿ. ಮಾನಸಿಕ ಶಕ್ತಿ ಉದ್ಯೋಗದಲ್ಲಿ ಯಶಸ್ಸನ್ನು ನೀಡುತ್ತದೆ. ಸಮಯಕ್ಕೆ ತಕ್ಕಂತೆ ಆಹಾರ ಸೇವಿಸಲು ಸಾಧ್ಯವಾಗುವುದಿಲ್ಲ. ಪಾಲುಗಾರಿಕೆಯ ವ್ಯಾಪಾರದಲ್ಲಿ ಉತ್ತಮ ಲಾಭವಿರುತ್ತದೆ. ಹಣದ ವಿಚಾರವಾಗಿ ಆತ್ಮೀಯರಲ್ಲಿ ಮನಸ್ತಾಪ ಉಂಟಾಗುತ್ತದೆ. ಮನೆಯ ಸದಸ್ಯರಿಗೆ ಅಮೂಲ್ಯವಾದ ಸಮಯವನ್ನು ಮೀಸಲಿಡುವಿರಿ. ಹಣಕಾಸಿನ ಕೊರತೆಯು ಕಡಿಮೆಯಾಗುತ್ತದೆ. ಸಮಾಜದ ಗಣ್ಯ ವ್ಯಕ್ತಿಗಳ ಒಡನಾಟ ಅನಿವಾರ್ಯವಾಗುತ್ತದೆ. ಕಷ್ಟವಾದರೂ ವ್ಯಾಪಾರವನ್ನು ವಿಸ್ತರಿಸುವಿರಿ. ಸಾಧ್ಯವಾದಷ್ಟು ನಿಧಾನಗತಿಯಿಂದ ಹಣದ ವಿಚಾರವಾಗಿ ನಿರ್ಧಾರಗಳನ್ನು ಕೈಗೊಳ್ಳಿರಿ. ಒಳ್ಳೆಯ ಭಾವನೆ ಇರುವ ಜನರೊಂದಿಗೆ ಬೆರೆಯಿರಿ.

ಮಕರ

ಸ್ತ್ರೀಯರಿಗೆ ವಿಶೇಷವಾದಂತಹ ಫಲಗಳು ದೊರೆಯಲಿವೆ. ಆರೋಗ್ಯದಲ್ಲಿ ಏರಿಳಿತ ಇರುತ್ತದೆ. ಮನದಲ್ಲಿ ಅನಾವಶ್ಯಕ ಚಿಂತೆ ಮನೆ ಮಾಡಿರುತ್ತದೆ. ಕುಟುಂಬದ ಸದಸ್ಯರೊಬ್ಬರು ನಿಮ್ಮ ಕೆಲಸ ಕಾರ್ಯಗಳಿಗೆ ಸಹಾಯ ನೀಡುತ್ತಾರೆ. ದೈಹಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಯೋಗ ವ್ಯಾಯಾಮವನ್ನು ಅವಲಂಬಿಸುವಿರಿ. ಪ್ರಯೋಜನಕ್ಕೆ ಬಾರದ ವಿಚಾರಗಳಿಗೆ ಯೋಚನೆ ಮಾಡುವುದಿಲ್ಲ. ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಹಣ ವಿನಿಯೋಗಿಸುವಿರಿ. ಬರಲಿರುವ ದಿನಗಳಿಗಾಗಿ ಹಣ ಉಳಿತಾಯ ಮಾಡುವಿರಿ. ನಿಮ್ಮಲ್ಲಿರುವ ಬುದ್ಧಿವಂತಿಕೆಯನ್ನು ಸರಿಯಾದ ಮಾರ್ಗದಲ್ಲಿ ಬಳಸಿಕೊಳ್ಳಿ. ಬಿಡುವಿಲ್ಲದೆ ಕೆಲಸ ನಿರ್ವಹಿಸಬೇಕಾಗುತ್ತದೆ. ನಿಮ್ಮಲ್ಲಿನ ಒಳ್ಳೆಯತನವನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುವ ಜನದಿಂದ ದೂರವಿರಿ. ಸೋಲು ಮತ್ತು ಗೆಲುವನ್ನು ಒಂದೇ ದೃಷ್ಠಿಕೋನದಿಂದ ಸ್ವೀಕರಿಸಿ.

ಕುಂಭ

ಬಹು ಹಿಂದೆಯೇ ಆಯೋಜಿಸಿದ್ದ ಪ್ರವಾಸ ಒಂದನ್ನು ರದ್ದು ಮಾಡಬೇಕಾಗುತ್ತದೆ. ಕೌಟುಂಬಿಕ ವಿಚಾರದಿಂದಾಗಿ ಮಾನಸಿಕ ಒತ್ತಡವು ಹೆಚ್ಚುತ್ತದೆ. ಕುಟುಂಬದ ಹಿರಿಯರ ಸಹಕಾರ ಇರಲಿದೆ. ತೀರ್ಮಾನವೊಂದನ್ನು ಕೈಗೊಳ್ಳುವಿರಿ. ನಿಮ್ಮಲ್ಲಿನ ಉತ್ಸಾಹ ಭರಿತ ಮಾತುಕತೆ ಕಿರಿಯರಿಗೆ ವರದಾನವಾಗಲಿದೆ. ವಿಶೇಷವಾದಂತಹ ಸೌಕರ್ಯಗಳಿಂದ ಜೀವನವು ಸಂತಸದಿಂದ ಕೂಡಿರುತ್ತದೆ. ಭಾವನಾ ಜೀವಿಗಳು. ಸಣ್ಣಪುಟ್ಟ ನಿರಾಸೆಯನ್ನು ಆರಗಿಸಿಕೊಳ್ಳುವುದಿಲ್ಲ. ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಮುಂದುವರಿಸುತ್ತಾರೆ. ಸಮಾಜ ಸೇವೆಯಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುವಿರಿ. ಅನಾವಶ್ಯಕವಾಗಿ ವೇಳೆಯನ್ನು ವ್ಯರ್ಥ ಮಾಡದಿರಿ. ಹೊಸ ವ್ಯಾಪಾರ ವ್ಯವಹಾರ ಒಂದನ್ನು ಆರಂಭಿಸುವಿರಿ. ನಂಬಲು ಅಸಾಧ್ಯವೆನಿಸುವ ಮೂಲದಿಂದ ಹಣದ ಸಹಾಯ ದೊರೆಯುತ್ತದೆ

ಮೀನ

ಮನದಲ್ಲಿ ಅನಾವಶ್ಯಕ ಒತ್ತಡವಿರುತ್ತದೆ. ಅಸಾಧಾರಣ ಶಕ್ತಿಯಿಂದ ಎದುರಾಗುವ ಸಮಸ್ಯೆಯನ್ನು ದೂರ ಮಾಡುವಿರಿ. ಮನೆ ಕಟ್ಟಬೇಕೆನ್ನುವ ಹಿರಿಯರ ಆಸೆಯನ್ನು ಪೂರೈಸುವಿರಿ. ಪರಿಪಕ್ವ ಆಹಾರ ಕ್ರಮದಿಂದ ಉತ್ತಮ ಆರೋಗ್ಯವನ್ನು ಗಳಿಸುವಿರಿ. ವ್ಯಾಯಾಮಕ್ಕೆ ಸಮಯ ನೀಡುವುದಿಲ್ಲ. ಬಿಡುವಿಲ್ಲದ ಕೆಲಸ ಕಾರ್ಯಗಳ ಮಧ್ಯೆ ಕುಟುಂಬದ ಸೇವೆಗೆ ಸಿದ್ದರಾಗುವಿರಿ. ಕ್ರಮೇಣವಾಗಿ ಹಣಕಾಸಿನ ಕೊರತೆಯು ಕಡಿಮೆಯಾಗುತ್ತದೆ. ತಡವಾದರೂ ಸಮಯಕ್ಕೆ ತಕ್ಕಂತೆ ಕೆಲಸ ಕಾರ್ಯಗಳನ್ನು ನಿರ್ವಹಿಸುವಿರಿ. ಉದ್ಯೋಗದಲ್ಲಿ ಎಲ್ಲರ ಸಹಕಾರ ನಿಮಗೆ ದೊರೆಯಲಿದೆ. ಕೈ ಹಿಡಿದ ಕೆಲಸ ಕಾರ್ಯಗಳಲ್ಲಿ ಧನಾತ್ಮಕ ಫಲಿತಾಂಶಗಳನ್ನು ಪಡೆಯುವಿರಿ. ವಿದ್ಯಾರ್ಥಿಗಳು ಶಿಕ್ಷಣದ ಕಡೆ ಹೆಚ್ಚಿನ ಗಮನ ನೀಡಬೇಕು.

ಜ್ಯೋತಿಷಿ: ಎಚ್‌. ಸತೀಶ್‌, ಬೆಂಗಳೂರು

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.