ಭಾರತ-ಪಾಕ್ ಯುದ್ಧದ ಬಗ್ಗೆ ಜ್ಯೋತಿಷಿ ಮಾತು: ಜೂನ್ನಲ್ಲಿ ಮಹತ್ವದ ಘೋಷಣೆ, ಜುಲೈ 15ರ ವೇಳೆಗೆ ದೊಡ್ಡ ಶಸ್ತ್ರಾಸ್ತ್ರಗಳ ಪ್ರಯೋಗ ಸಾಧ್ಯತೆ
ಪಹಲ್ಗಾಮ್ ದಾಳಿಯ ಬಳಿಕ ಭಾರತ-ಪಾಕಿಸ್ತಾನ ನಡುವೆ ಯುದ್ಧದ ಕಾರ್ಮೋಡ ಆವರಿಸಿದೆ. ಎರಡೂ ದೇಶಗಳಲ್ಲಿ ಯುದ್ಧದ ಚರ್ಚೆ ಕಾವೇರಿದೆ. ಈ ಹಂತದಲ್ಲಿ ಪ್ರಸ್ತುತ ಗ್ರಹಗತಿಗಳು ಏನು ಸೂಚನೆ ಕೊಡುತ್ತಿವೆ ಎನ್ನುವ ಬಗ್ಗೆ ‘ಜಿಕೆ’ ಕಾವ್ಯನಾಮದ ಜ್ಯೋತಿಷಿ ವಿವರಿಸಿದ್ದಾರೆ.

ಭಾರತ ಪಾಕಿಸ್ತಾನದ ಮೇಲೆ ಯುದ್ಧ ಮಾಡುವುದಾದರೆ ಆ ಬಗ್ಗೆ ಗ್ರಹಗತಿಗಳ ಸೂಚನೆ ಹೇಗಿರಬಹುದು ಎನ್ನುವ ಕುತೂಹಲ ಉಳ್ಳವರಿಗೆ, ಗ್ರಹಗತಿಗಳ ಪರಿಣಾಮದ ಬಗ್ಗೆ ಹಲವು ಜನರಲ್ಲಿ ಒಂದು ತಪ್ಪು ಅಭಿಪ್ರಾಯ ಇದೆ. ಎಲ್ಲವನ್ನೂ ಗ್ರಹಗಳೇ ಮಾಡಿಸುತ್ತವೆ ಎನ್ನವುದು ತಪ್ಪು ಅಭಿಪ್ರಾಯ. ನಾವೇನಾದರೂ ಮಾಡುವುದಿದ್ದರೆ ಗ್ರಹಗಳು ನಮ್ಮ ಮೇಲೆ ಪರಿಣಾಮ ಬೀರುತ್ತದೆ ವಿನಃ ಗ್ರಹಗಳೇ ನಮ್ಮಿಂದ ಎಲ್ಲವನ್ನು ಮಾಡಿಸುವುದಿಲ್ಲ.
ನಮ್ಮ ಚಟುವಟಿಕೆಗಳ ಮೇಲೆ ಗ್ರಹಗಳ ಪರಿಣಾಮ ಇರುತ್ತದೆ. ಅಲ್ಲಿ ಪೊಲೀಸರು ನಿಂತಿದ್ದಾರೆ ಅಂದರೆ ಪೊಲೀಸರು ಲಾಠಿ ಬೀಸಿಕೊಂಡು ಯಾರಿಗೂ ಪೆಟ್ಟು ಕೊಡಲು ಹೋಗುವುದಿಲ್ಲ. ಅಲ್ಲಿ ಇರುವ ಜನರು ನಿಯಮಗಳನ್ನು ಮೀರಿದಾಗ ಪೊಲೀಸರು ಅವರ ಕೆಲಸ ಮಾಡುತ್ತಾರೆ. ಆದರೆ ಪೊಲೀಸ್ ಇರುವುದು ಮಾತ್ರ ಸತ್ಯ. ಪೊಲೀಸರಿಗೆ ಅವರ ಅಧಿಕಾರ ಇರುವುದು ಕೂಡ ಅಷ್ಟೇ ಸತ್ಯ. ಹಾಗೆ ಈ ಗ್ರಹಗಳ ಪರಿಣಾಮಗಳು ಕೂಡ.
ಅಲ್ಲಿ ಶನಿ ಬಂತು ಇಲ್ಲಿ ರಾಹು ಬಂತು, ಇನ್ನೊಂದು ಕಡೆ ಕೇತು ಬಂತು, ಕುಜ ಬಂತು ಅಂತ ಹೇಳಿದ ಕ್ಷಣ ಯುದ್ಧಗಳು ಸಂಭವಿಸುವುದಿಲ್ಲ. ಅಲ್ಲಿ ಯುದ್ಧ ಸಂಭವಿಸಲಿಕ್ಕೆ ಸೂಕ್ತವಾದ ಕಾರಣಗಳು ಬೇಕು. ಯುದ್ಧ ಮಾಡಲು ಉತ್ಸುರಾಗಿರುವಂತಹ ಜನರು ಬೇಕು. ಒಂದು ವೇಳೆ ಯುದ್ಧದ ಸಂಭವನೀಯತೆ ಇರುವುದು ಹೌದಾದರೆ, ಈ ಗ್ರಹಗತಿಗಳು ಹೇಗೆ ಪರಿಣಾಮ ಬೀರಬಹುದು ಅನ್ನುವುದರ ಸಂಕ್ಷಿಪ್ತ ಚಿಂತನೆಗಳು ಮಾತ್ರ ಗ್ರಹಗತಿಗಳ ಪರಿಣಾಮದ ಅಧ್ಯಯನ ಮಾಡುವುದರಿಂದ ಸಿಗುವುದು.
ಯುದ್ಧಗಳು ನಡೆಯಬೇಕಾದರೆ 5 ಗ್ರಹಗಳ ಸಂಯೋಜನೆ ಕೆಲಸ ಮಾಡಬೇಕಾಗುತ್ತದೆ. ಅವೆಂದರೆ ಶನಿ, ಕುಜ, ರಾಹು, ಕೇತು, ರವಿ. ನಮ್ಮ ಈಗಿನ ಜ್ಯೋತಿಷ್ಯ ಗಣಿತದ ಲೆಕ್ಕಗಳು ಎಷ್ಟೋ ಸಾವಿರ ವರ್ಷಗಳ ಹಿಂದೆ ರಚಿತವಾದಂತಹವುಗಳು. ಆನಂತರ ಗ್ರಹಗಳ ನಡೆಯಲ್ಲಿ ಕಿಂಚಿತ್ ನಿಧಾನ ಆಗಿರುವುದರಿಂದ ಆ ಗಣಿತಗಳು ಈಗ ನಮ್ಮಲ್ಲಿ ಲೆಕ್ಕಕ್ಕೆ ಬರದಿರುವುದರಿಂದ ಗ್ರಹಗತಿಗಳ ಲೆಕ್ಕಾಚಾರ ಮಾಡುವಾಗ ಸ್ವಲ್ಪ ಫಲಿತಾಂಶದಲ್ಲಿ ಏರುಪೇರು ಆಗುವುದನ್ನು ಕಾಣಬಹುದು.
ಜುಲೈ 15ರ ಆಸು ಪಾಸಿನಲ್ಲಿ ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳ ಪ್ರಯೋಗ ಮಾಡುವ ಸಾಧ್ಯತೆ
ಅಂದರೆ ಕಾಲ ನಿರ್ಣಯದಲ್ಲಿ..ಈ ಕಾಲದ ಗ್ರಹಗಳು ಅದರ ಲೆಕ್ಕಾಚಾರ ಸರಿ ಇರುವುದಾದರೆ ಈ ಯುದ್ಧ ಆರಂಭವಾಗುವ ಸಮಯ ಜೂನ್ ತಿಂಗಳ ಮೊದಲನೇ ವಾರ. ಇದು ಕೂಡ ಎದುರಾಳಿಗಳ ಒಂದು ತಪ್ಪು ನಿರ್ಣಯದಿಂದಾಗಿ ಆಗುವ ಸಾಧ್ಯತೆಗಳು ಹೆಚ್ಚಿರುತ್ತದೆ. ಒಂದು ವೇಳೆ ಈ ಯುದ್ಧ ತೀವ್ರಾವಸ್ಥೆಗೆ ಹೋಗುವುದಾದಲ್ಲಿ ಜುಲೈ 15ರ ಆಸುಪಾಸಿನಲ್ಲಿ ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳ ಪ್ರಯೋಗ ಆಗುವ ಸಾಧ್ಯತೆಗಳು ಇರುತ್ತದೆ. ಅಂದರೆ ಅಗ್ನಿ ಸ್ಫೋಟಗಳ ತೀವ್ರತೆ ಜಾಸ್ತಿಯಾಗಲಿದೆ. ಈ ಮೇಲಿನ 5 ಗ್ರಹಗಳ ಕಾರಕತ್ವ ಏನು ಅಂತ ಆಸಕ್ತರು ಕೇಳುವುದಾದರೆ, ಐದು ಗ್ರಹಗಳನ್ನು ಯುದ್ಧಕ್ಕೆ ಸಂಬಂಧಪಟ್ಟು ವಿವರಿಸಿದರೆ ಕೆಲವು ಪುಟಗಳಷ್ಟು ಬರೆಯಬೇಕಾದೀತು.
ಆದರೆ ಇಲ್ಲಿ ಎರಡು ವಾಕ್ಯಗಳಲ್ಲಿ ವಿವರಿಸಲು ಪ್ರಯತ್ನಿಸುತ್ತೇನೆ. ಶನಿಯು ಕರ್ಮಗಳನ್ನು ಆಧರಿಸಿ ಕೆಲಸ ಮಾಡುತ್ತದೆ. ಶನಿಯು ಮೀನ ರಾಶಿಯಲ್ಲಿ ಇರುವುದರಿಂದ ಅದು ಧರ್ಮಕ್ಕೆ ಸಂಬಂಧಪಟ್ಟದ್ದು ಆಗಿರುತ್ತದೆ. ರಾಹುವಿನ ವಿಚಾರದಲ್ಲಿ ನಾವು ಧರ್ಮಭ್ರಷ್ಟತೆಯನ್ನು ಗಮನಿಸಬೇಕಾಗುತ್ತದೆ. ಹಿಂದೂ ಎಂದು ಖಾತ್ರಿಪಡಿಸಿಕೊಂಡು ಗುಂಡಿಟ್ಟು ಕೊಂದಿದ್ದು ಅಮಾನವೀಯತೆಯ ತುತ್ತತುದಿ. ಶನಿಯು ಹಳೆಯ ಕರ್ಮಗಳ ಲೆಕ್ಕಾಚಾರವನ್ನು ಚುಕ್ತ ಮಾಡಿಸುವ ಗ್ರಹ.
ಅಗ್ನಿಯಲ್ಲಿ ಮೂರು ವಿಧ
ರಾಹುವು ಅನ್ಯರನ್ನು ಸೂಚಿಸುತ್ತದೆ. ಕೇತು, ಸೂರ್ಯ ಮತ್ತು ಕುಜ ಈ ಮೂರು ಕೂಡ ಅಗ್ನಿಗೆ ಸಂಬಂಧಪಟ್ಟ ಗ್ರಹಗಳು. ಈ ಅಗ್ನಿಯಲ್ಲಿ ಕೂಡ ಮೂರು ವಿಧಗಳು ಇದೆ. ಮೇಲ್ನೋಟಕ್ಕೆ ಅಗ್ನಿ ಎಂದು ಕಾಣಿಸದೆ ಸ್ಫೋಟಗೊಂಡ ಬಳಿಕ ಗೊತ್ತಾಗುವಂತೆ ಮಾಡುವ ಕಾರಕ ಗ್ರಹ ಕೇತು.
ಕುಜನೂ ಅಗ್ನಿಯನ್ನು ಉತ್ಪಾದಿಸುವ ಗ್ರಹ. ಸೂರ್ಯನು ಸ್ವಯಂ ಅಗ್ನಿ. ನಿರಂತರವಾಗಿ ಉರಿಯುವಂತಹ ಅಗ್ನಿಗೆ ಕಾರಕ ಸೂರ್ಯ. ಯಾಕೆಂದರೆ ಸೂರ್ಯನು ಕೂಡ ಸ್ವಯಂ ಉರಿಯುವಂತವನು. ಸೂರ್ಯನು ರಾಜ ಮತ್ತು ಸಮಾಜ.
ಕುಜನು ದಂಡನಾಯಕ. ಸೈನ್ಯ, ಸೇನಾಧಿಪತಿ, ದಂಡನೆ ನೀಡುವವನು. ಶನಿ, ಗುರು ಮತ್ತು ರಾಹು ಅಪಾರ ಪ್ರಮಾಣದಲ್ಲಿ ಕಷ್ಟನಷ್ಟಗಳನ್ನು ಸಾವುನೋವುಗಳನ್ನು ಅಪರಿಮಿತವಾದ ಧನ ನಷ್ಟವನ್ನು ಉಂಟು ಮಾಡಿಸುವಂತ ಗ್ರಹಗಳು. ಈ ನಾಲ್ಕು ಅಥವಾ ಐದು ಗ್ರಹಗಳು ಕೆಲಸ ಮಾಡಬೇಕಾದರೆ ಈ ಐದರಲ್ಲಿ ಒಂದು ಗ್ರಹ ಇನ್ನೊಂದು ಗ್ರಹವನ್ನು ಬಡಿಯಬೇಕಾಗುತ್ತದೆ. ಆ ಕೆಲಸವನ್ನು ಕುಜನು ಮಾಡುತ್ತಾನೆ. ಬಡಿಯುವ ಗ್ರಹಗಳಲ್ಲಿ ಕುಜನದೇ ಪರಮಾಧಿಕಾರ.
ಕುಜನ ಮಾರಕ ದೃಷ್ಟಿ
ಜೂನ್ ಏಳರಂದು ಮುಂಜಾನೆ ಕುಜನು ಅಗ್ನಿರಾಶಿಯಾದ ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ. ಅದು ಕೂಡ ಅಗ್ನಿಯೇ ಆಗಿರುವಂತಹ ಕೇತುವಿನ ನಕ್ಷತ್ರದಲ್ಲಿ. ಅಲ್ಲಿಗೆ ಒಂದು ರಾಶಿಯಲ್ಲಿ ಕೇತು, ಸೂರ್ಯ ಮತ್ತೆ ಕುಜ ಇವರು ಒಟ್ಟಾಗಿ ಸೇರಿದಂತೆ ಆಗುತ್ತದೆ. ಕುಜನು ತನ್ನ ಮಾರಕವಾದ ಎಂಟನೆಯ ದೃಷ್ಟಿಯಿಂದ ಮೀನ ರಾಶಿಯಲ್ಲಿ ಇರುವ ಶನಿಯನು ನೋಡುತ್ತಾನೆ. ಅಷ್ಟೇ ಅಲ್ಲ ಪಕ್ಕದಲ್ಲಿ ಇರುವ ರಾಹುವನ್ನು ನೋಡುತ್ತಾನೆ. ನೋಡುತ್ತಾನೆ ಅಂದರೆ ದುರ್ಬೀನ್ ಇಟ್ಟುಕೊಂಡು ನೋಡುತ್ತಾನೆ ಅಂತ ಅರ್ಥ ಅಲ್ಲ. ತನ್ನ ರಶ್ಮಿಯನ್ನು ಅಲ್ಲಿಗೆ ಬದಲಾಯಿಸುತ್ತಾನೆ ಅಂತ ಅರ್ಥ. ಅಥವಾ ಕುಜನಿಂದ ರಶ್ಮಿಯು ನಾಲ್ಕು ಏಳು ಎಂಟನೇ ರಾಶಿಗೆ ಪ್ರಸರಿಸುವಾಗ ಆ ಜಾಗದಲ್ಲಿ ಇರುವಂತ ಗ್ರಹವು ಕುಜನಿಂದ ರಶ್ಮಿಯನ್ನು ಸ್ವೀಕರಿಸುತ್ತದೆ ಅಂತ ಅರ್ಥ. ಇದು ಗ್ರಹಗಳ ಲೆಕ್ಕಾಚಾರಗಳು
ಈ ನಮ್ಮ ಊಹೆಗಳು ಆಗಲೂಬಹುದು ಆಗದೆಯೂ ಇರಬಹುದು. ಇದನ್ನು ಈ ರೀತಿ ದ್ವಂದ್ವಕ್ಕೆ ಒಳಪಡಿಸುವುದು ಬುಧ ಗ್ರಹ. ಬುಧನು ಹಠಾತ್ ಬದಲಾವಣೆಗೆ ಕಾರಣವಾಗುವ ಗ್ರಹ. ಬುಧನು ಎಣಿಸಿದ್ದನ್ನು ಆಗದೆ ಇರುವಂತೆ ಮಾಡುವಂತಹ ಸಾಮರ್ಥ್ಯ ಉಳ್ಳ ಗ್ರಹವೂ ಹೌದು. ಬುಧ ಅಂದರೆ ವಾಣಿ. ನಾವು ಮಾತಾಡುವ ವಾಕ್ ಅಥವಾ ವಾಣಿಗೆ ಅಧಿಪತಿ ಬುಧ. ‘ಬುಧೋ ವೈ ವಿಷ್ಣುಃ’ ಎಂಬ ಮಾತಿದೆ. ದೇವರ ಸ್ವರೂಪಗಳಲ್ಲಿ ವಿಷ್ಣುವಿನ ಸ್ವರೂಪವು ವಿಭಿನ್ನವಾಗಿದೆ. ಮಹಾವಿಷ್ಣು ಸದಾ ನಗುತ್ತಿರುತ್ತಾನೆ. ಆ ನಗುವಿನ ಹಿಂದೆ ನಿಗೂಢವಾದ ಅರ್ಥ ಇರುತ್ತದೆ.
ಹೀಗೆ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಿಜವಾಗಿಯೂ ನಡೆಯುತ್ತದೆಯೇ? ಯುದ್ಧ ಹೇಗಿರುತ್ತದೆ ಎನ್ನುವ ಪ್ರಶ್ನೆಗೆ ನೇರವಾಗಿ ಉತ್ತರ ಹೇಳುವುದು ಕಷ್ಟ. ಹಲವು ಲೆಕ್ಕಾಚಾರಗಳ ಅನ್ವಯ ಮೇಲಿನಂತೆ ವಿವರಿಸಬಹುದು. ಈ ಬರಹದಲ್ಲಿ ನಾನು ಅದೇ ಪ್ರಯತ್ನ ಮಾಡಿದ್ದೇನೆ.