ಪಹಲ್ಗಾಮ್ ದಾಳಿ ಬಳಿಕ ಬಿಸಿಸಿಐ ಮಹತ್ವದ ಕ್ರಮ, ಪಾಕಿಸ್ತಾನ ವಿರುದ್ಧ ಪಂದ್ಯ ರದ್ದುಗೊಳಿಸಲು ಐಸಿಸಿಗೆ ಪತ್ರ?, ಏಷ್ಯಾ ಕಪ್‌ ಕಥೆ ಏನು
ಕನ್ನಡ ಸುದ್ದಿ  /  ಕ್ರಿಕೆಟ್  /  ಪಹಲ್ಗಾಮ್ ದಾಳಿ ಬಳಿಕ ಬಿಸಿಸಿಐ ಮಹತ್ವದ ಕ್ರಮ, ಪಾಕಿಸ್ತಾನ ವಿರುದ್ಧ ಪಂದ್ಯ ರದ್ದುಗೊಳಿಸಲು ಐಸಿಸಿಗೆ ಪತ್ರ?, ಏಷ್ಯಾ ಕಪ್‌ ಕಥೆ ಏನು

ಪಹಲ್ಗಾಮ್ ದಾಳಿ ಬಳಿಕ ಬಿಸಿಸಿಐ ಮಹತ್ವದ ಕ್ರಮ, ಪಾಕಿಸ್ತಾನ ವಿರುದ್ಧ ಪಂದ್ಯ ರದ್ದುಗೊಳಿಸಲು ಐಸಿಸಿಗೆ ಪತ್ರ?, ಏಷ್ಯಾ ಕಪ್‌ ಕಥೆ ಏನು

ಭಾರತ - ಪಾಕ್ ಕ್ರಿಕೆಟ್ ಪಂದ್ಯ: ಪಹಲ್ಗಾಮ್ ದಾಳಿಯ ಬಳಿಕ ಮಹತ್ವದ ಬೆಳವಣಿಗೆಯಲ್ಲಿ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಭಾರತ - ಪಾಕಿಸ್ತಾನ ಪಂದ್ಯಗಳನ್ನು ರದ್ದುಗೊಳಿಸುವಂತೆ ಐಸಿಸಿಗೆ ಪತ್ರ ಬರೆದಿದೆ ಎಂದು ವರದಿ ಹೇಳಿದೆ. ಏಷ್ಯಾ ಕಪ್‌ನಲ್ಲಿ ಭಾರತ- ಪಾಕ್ ಆಡಲಿದೆಯೇ ಹಾಗಾದರೆ?

ಪಹಲ್ಗಾಮ್ ದಾಳಿ ಬಳಿಕ ಬಿಸಿಸಿಐ ಮಹತ್ವದ ಕ್ರಮಕ್ಕೆ ಮುಂದಾಗಿದ್ದು ಪಾಕಿಸ್ತಾನ ವಿರುದ್ಧ ಪಂದ್ಯ ರದ್ದುಗೊಳಿಸಲು ಐಸಿಸಿಗೆ ಪತ್ರ ಬರೆದಿದೆ. (ಸಾಂಕೇತಿಕ ಚಿತ್ರ)
ಪಹಲ್ಗಾಮ್ ದಾಳಿ ಬಳಿಕ ಬಿಸಿಸಿಐ ಮಹತ್ವದ ಕ್ರಮಕ್ಕೆ ಮುಂದಾಗಿದ್ದು ಪಾಕಿಸ್ತಾನ ವಿರುದ್ಧ ಪಂದ್ಯ ರದ್ದುಗೊಳಿಸಲು ಐಸಿಸಿಗೆ ಪತ್ರ ಬರೆದಿದೆ. (ಸಾಂಕೇತಿಕ ಚಿತ್ರ)

ಭಾರತ - ಪಾಕ್ ಕ್ರಿಕೆಟ್ ಪಂದ್ಯ: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ನಡೆದ ಬಳಿಕ ಭಾರತ ಸರ್ಕಾರ ಪಾಕಿಸ್ತಾನದ ವಿರುದ್ಧ ವಿವಿಧ ರಾಜತಾಂತ್ರಿಕ ಕ್ರಮಗಳನ್ನು ಘೋಷಿಸಿದೆ. ಇದರ ಬೆನ್ನಿಗೆ ಭಾರತೀಯ ಕ್ರಿಕೆಟ್ ಮಂಡಳಿ ಬಿಸಿಸಿಐ ಕೂಡ ಭಾರತ - ಪಾಕ್ ಪಂದ್ಯಗಳನ್ನು ರದ್ದುಗೊಳಿಸುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಗೆ ಪತ್ರ ಬರೆದಿದೆ ಎಂದು ಹೇಳಲಾಗುತ್ತಿದೆ.

ಪಾಕಿಸ್ತಾನ ವಿರುದ್ಧ ಪಂದ್ಯ ರದ್ದುಗೊಳಿಸಲು ಐಸಿಸಿಗೆ ಬಿಸಿಸಿಐ ಪತ್ರ

ದಕ್ಷಿಣ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್ 22 ರಂದು ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಪ್ರಾಣ ಕಳೆದುಕೊಂಡರು. ಭಾರತ ಸರ್ಕಾರ ಉಗ್ರ ನಿಗ್ರಹಕ್ಕಾಗಿ ಕಠಿಣ ಕ್ರಮಗಳನ್ನು ತೆಗೆದುಕೊಂಡ ಬೆನ್ನಲ್ಲೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೂಡ ಪಾಕಿಸ್ತಾನ ವಿರುದ್ಧದ ಪಂದ್ಯಗಳನ್ನು ರದ್ದುಗೊಳಿಸುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಗೆ ಪತ್ರ ಬರೆದಿದೆ ಎಂಬ ಸುದ್ದಿಗಳು ಗಮನಸೆಳೆದಿವೆ. ಇನ್ನು ಮುಂದೆ ಐಸಿಸಿ ಟೂರ್ನಿಗಳಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳನ್ನು ಒಂದೇ ಗ್ರೂಪ್‌ನಲ್ಲಿ ಸೇರಿಸದಂತೆ ಮನವಿ ಮಾಡಿರುವುದಾಗಿಯೂ ಹೇಳಲಾಗುತ್ತಿದೆ. ಐಸಿಸಿ ಪಂದ್ಯಾವಳಿಗಳಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುವುದನ್ನು ಬಿಸಿಸಿಐ ಬಯಸುತ್ತಿಲ್ಲ ಎಂದು ಕ್ರಿಕ್‌ಬಝ್ ವರದಿ ಮಾಡಿದೆ.

ಆದಾಗ್ಯೂ, ಸೆಪ್ಟೆಂಬರ್‌ನಲ್ಲಿ ಮುಂದಿನ ದೊಡ್ಡ ಐಸಿಸಿ ಪಂದ್ಯಾವಳಿ - ಮಹಿಳಾ ಏಕದಿನ ವಿಶ್ವಕಪ್ ನಡೆಯಲಿದೆ. ಇದನ್ನು ಭಾರತವೇ ಆಯೋಜಿಸುತ್ತಿದೆ. ಎಂಟು ತಂಡಗಳ ಪಂದ್ಯಾವಳಿಗೆ ಪಾಕಿಸ್ತಾನ ತಂಡವೂ ಅರ್ಹತೆ ಪಡೆದುಕೊಂಡಿದೆ. ಈ ಪಂದ್ಯಾವಳಿಯಲ್ಲಿ ಪ್ರತಿ ತಂಡವೂ ರೌಂಡ್ ರಾಬಿನ್ ಮಾದರಿಯಲ್ಲಿ ಎಲ್ಲ ತಂಡದ ಎದುರೂ ಆಡಲಿದೆ. ಇದು ಪೂರ್ವ ನಿಗದಿತ ವ್ಯವಸ್ಥೆಯಾಗಿದ್ದು, ಪಾಕಿಸ್ತಾನ ತಂಡ ಭಾರತದಲ್ಲಿ ಯಾವ ಪಂದ್ಯವನ್ನೂ ಆಡಲ್ಲ. ಹೀಗಾಗಿ ಮೂರನೇ ದೇಶದಲ್ಲಿ ಈ ಪಂದ್ಯಗಳನ್ನು ಆಯೋಜಿಸಬೇಕಾಗುತ್ತದೆ. ಈ ಬಗ್ಗೆ ಐಸಿಸಿ ಏನು ತೀರ್ಮಾನ ತೆಗೆದುಕೊಳ್ಳಲಿದೆ ಎಂಬ ಕುತೂಹಲ ಸದ್ಯ ಕಾಡಿದೆ.

ಇನ್ನೊಂದೆಡೆ, ಈಗಾಗಲೇ ನಿಗದಿಯಾಗಿರುವ 2026ರಲ್ಲಿ ನಡೆಯಲಿರುವ ಇನ್ನೊಂದು ಐಸಿಸಿ ಪಂದ್ಯಾವಳಿ ಟಿ20 ವಿಶ್ವಕಪ್. ಇದು ಪುರುಷರ ಪಂದ್ಯವಾಗಿದ್ದು, ಭಾರತ ಮತ್ತು ಶ್ರೀಲಂಕಾಗಳು ಆತಿಥ್ಯವಹಿಸಲಿವೆ. ಫೆಬ್ರವರಿ - ಮಾರ್ಚ್ ತಿಂಗಳಲ್ಲಿ ಈ ಪಂದ್ಯಾವಳಿ ನಡೆಯಲಿದೆ. ಈ ಬಗ್ಗೆಯೂ ಐಸಿಸಿ ತೀರ್ಮಾನ ತೆಗೆದುಕೊಳ್ಳಬೇಕಾಗಬಹುದು.

ಇದಕ್ಕೂ ಮೊದಲು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಮಾತನಾಡುತ್ತ, ಭಾರತ ಸರ್ಕಾರ ಏನು ತೀರ್ಮಾನ ತೆಗೆದುಕೊಳ್ಳುವುದೋ ಅದಕ್ಕೆ ಪೂರಕವಾಗಿ ಮಂಡಳಿ ನಡೆದುಕೊಳ್ಳಲಿದೆ ಎಂದು ಹೇಳಿದ್ದಾಗಿ ವರದಿ ವಿವರಿಸಿದೆ.

ಏಷ್ಯಾ ಕಪ್‌ ಕಥೆ ಏನು

ಹಾಗಾದರೆ, ಏಷ್ಯಾ ಕಪ್ ಕಥೆ ಏನು ಎಂಬ ವಿಚಾರ ಮುನ್ನೆಲೆಗೆ ಬಂದಿದೆ. ಏಷ್ಯಾ ಕಪ್ ಪಂದ್ಯವನ್ನು ಭಾರತವೇ ಆಯೋಜಿಸುತ್ತಿದ್ದು, ಇದು ಸೆಪ್ಟೆಂಬರ್‌ನಲ್ಲಿ ನಡೆಯಲಿದೆ. ಕ್ರಿಕ್‌ಬಝ್ ಈ ಹಿಂದೆ ಪ್ರಕಟಿಸಿದ ವರದಿ ಪ್ರಕಾರ, ಈ ಪಂದ್ಯಾವಳಿ ದುಬೈ ಮತ್ತು ಶ್ರೀಲಂಕಾಗಳಲ್ಲಿ ನಡೆಯಬಹುದು. ಈಗ ಈ ಬಗ್ಗೆ ಬಿಸಿಸಿಐ ನಿರ್ಧಾರ ತೆಗೆದುಕೊಳ್ಳಬೇಕಷ್ಟೆ. ಈಗ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಪಹಲ್ಗಾಮ್ ದಾಳಿ ಕಾರಣ ಬಿಕ್ಕಟ್ಟು ಏರ್ಪಟ್ಟಿದೆ. ಹೀಗಾಗಿ ಪಂದ್ಯಾವಳಿಯ ಭವಿಷ್ಯವೂ ನಿರ್ಧಾರವಾಗಬೇಕಷ್ಟೆ.

ಕ್ರಿಕ್‌ಬಝ್‌ನ ಹೊಸ ವರದಿ ಪ್ರಕಾರ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಏಷ್ಯಾ ಕಪ್‌ನ ನಾಲ್ಕು ಆವೃತ್ತಿಗಳ ಮಾಧ್ಯಮ ಹಕ್ಕುಗಳನ್ನು ಮಾರಾಟ ಮಾಡಿಮಾಧ್ಯಮ ಹಕ್ಕುಗಳನ್ನು 170 ಮಿಲಿಯನ್ ಡಾಲರ್‌ಗೆ ಮಾರಾಟ ಮಾಡಿದೆ. ಇದರಲ್ಲಿ 2025ರ ಮಾಧ್ಯಮ ಹಕ್ಕುಗಳ ಮೌಲ್ಯ ಸರಾಸರಿ 42.5 ಮಿಲಿಯನ್ ಡಾಲರ್ ಬದಲು 38 ಮಿಲಿಯನ್ ಡಾಲರ್ ವೆಚ್ಚವಾಗಬಹುದು ಎಂದು ಅಂದಾಜಿಸಲಾಗುತ್ತಿದೆ. ಪ್ರತಿ ಆವೃತ್ತಿಯಲ್ಲೂ ಕನಿಷ್ಠ ಎರಡು ಭಾರತ -ಪಾಕಿಸ್ತಾನ ಪಂದ್ಯಗಳಿವೆ ಎಂದು ಹೇಳಲಾಗುತ್ತಿದೆ. ಈ ತಂಡಗಳು ಫೈನಲ್ ತಲುಪಿದರೆ ಮೂರನೇ ಪಂದ್ಯ ಎದುರಾಗಬಹುದು. 2023ರ ಏಷ್ಯಾ ಕಪ್‌ ಪಂದ್ಯದಲ್ಲಿ ಬಾರತ - ಪಾಕಿಸ್ತಾನ ಗ್ರೂಪ್ ಹಂತದಲ್ಲಿ ಹಾಗೂ ಸೂಪರ್ ಫೋರ್ ಹಂತದಲ್ಲಿ ಎರಡು ಬಾರಿ ಮುಖಾಮುಖಿಯಾಗಿದ್ದವು. ಎರಡನೇ ಪಂದ್ಯದಲ್ಲಿ ಪಾಕಿಸ್ತಾನವನ್ನು ಭಾರತ ಸೋಲಿಸಿತ್ತು. ಫೈನಲ್‌ನಲ್ಲಿ ಶ್ರೀಲಂಕಾವನ್ನು ಸೋಲಿಸಿ ಟೀಂ ಇಂಡಿಯಾ ಕಪ್ ತನ್ನದಾಗಿಸಿಕೊಂಡಿತ್ತು.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.