ಅಶುತೋಷ್ ಆರ್ಭಟಕ್ಕೆ ಬೆಚ್ಚಿದ ಲಕ್ನೋ, ಸೋಲುವ ಪಂದ್ಯದಲ್ಲಿ ಡೆಲ್ಲಿಗೆ 1 ವಿಕೆಟ್ ರೋಚಕ ಗೆಲುವು
ಕನ್ನಡ ಸುದ್ದಿ  /  ಕ್ರಿಕೆಟ್  /  ಅಶುತೋಷ್ ಆರ್ಭಟಕ್ಕೆ ಬೆಚ್ಚಿದ ಲಕ್ನೋ, ಸೋಲುವ ಪಂದ್ಯದಲ್ಲಿ ಡೆಲ್ಲಿಗೆ 1 ವಿಕೆಟ್ ರೋಚಕ ಗೆಲುವು

ಅಶುತೋಷ್ ಆರ್ಭಟಕ್ಕೆ ಬೆಚ್ಚಿದ ಲಕ್ನೋ, ಸೋಲುವ ಪಂದ್ಯದಲ್ಲಿ ಡೆಲ್ಲಿಗೆ 1 ವಿಕೆಟ್ ರೋಚಕ ಗೆಲುವು

Delhi Capitals vs Lucknow Super Giants: ಇಂಡಿಯನ್ ಪ್ರೀಮಿಯರ್ ಲೀಗ್​​ನ 4ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 1 ವಿಕೆಟ್​​ ರೋಚಕ ಗೆಲುವು ದಾಖಲಿಸಿದೆ.

ಅಶುತೋಷ್ ಆರ್ಭಟಕ್ಕೆ ಬೆಚ್ಚಿದ ಲಕ್ನೋ, ಸೋಲುವ ಪಂದ್ಯದಲ್ಲಿ ಡೆಲ್ಲಿಗೆ 1 ವಿಕೆಟ್ ರೋಚಕ ಗೆಲುವು
ಅಶುತೋಷ್ ಆರ್ಭಟಕ್ಕೆ ಬೆಚ್ಚಿದ ಲಕ್ನೋ, ಸೋಲುವ ಪಂದ್ಯದಲ್ಲಿ ಡೆಲ್ಲಿಗೆ 1 ವಿಕೆಟ್ ರೋಚಕ ಗೆಲುವು (PTI)

ರೋಚಕ ಕ್ಷಣಕ್ಕೆ ಸಾಕ್ಷಿಯಾದ ಇಂಡಿಯನ್ ಪ್ರೀಮಿಯರ್ ಲೀಗ್ 4ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆದ್ದು ಬೀಗಿದೆ. ಸೋಲುವ ಪಂದ್ಯದಲ್ಲಿ 1 ವಿಕೆಟ್ ಗೆಲುವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್ ಅಭಿಯಾನ ಆರಂಭಿಸಿದೆ. ಅಶುತೋಷ್ ಶರ್ಮಾ (66) ಆರ್ಭಟಕ್ಕೆ ಬೆಚ್ಚಿದ ಲಕ್ನೋ ಸೂಪರ್ ಜೈಂಟ್ಸ್​, ತಾನು ಮಾಡಿದ ತಪ್ಪುಗಳಿಂದಲೇ ಗೆಲ್ಲುವ ಪಂದ್ಯ ಕೈ ಚೆಲ್ಲುವ ಮೂಲಕ ತೀವ್ರ ಮುಖಭಂಗಕ್ಕೆ ಗುರಿಯಾಯಿತು.

ಮಿಚೆಲ್ ಮಾರ್ಷ್ (72) ಮತ್ತು ನಿಕೋಲಸ್ ಪೂರನ್ (75) ಅವರ ಸ್ಫೋಟಕ ಬ್ಯಾಟಿಂಗ್​ ಬಲದಿಂದ ದೊಟ್ಟ ಮೊತ್ತ ಪೇರಿಸಿದ ಹೊರತಾಗಿ ಲಕ್ನೋ ಶುಭಾರಂಭ ಮಾಡುವಲ್ಲಿ ವಿಫಲವಾಯಿತು. ನೂತನ ನಾಯಕನೊಂದಿಗೆ ಕಣಕ್ಕಿಳಿದ ಉಭಯ ತಂಡಗಳ ಪೈಕಿ ಅಕ್ಷರ್​ ಪಟೇಲ್ ನೇತೃತ್ವದಲ್ಲಿ ಡೆಲ್ಲಿ ಜಯದ ಸಿಹಿ ಕಂಡಿದೆ. ವಿಶಾಖಪಟ್ಟಣದ ವೈಎಸ್​ ರಾಜಶೇಖರರೆಡ್ಡಿ ಕ್ರಿಕೆಟ್ ಮೈದಾನವು ರೋಚಕ ಕ್ಷಣಕ್ಕೆ ಸಾಕ್ಷಿಯಾಯಿತು.

ಟಾಸ್ ಗೆದ್ದ ಡೆಲ್ಲಿ, ಲಕ್ನೋ ತಂಡವನ್ನು ಬ್ಯಾಟಿಂಗ್​ಗೆ ಆಹ್ವಾನ ಮಾಡಿತು. ಅದರಂತೆ ಇನ್ನಿಂಗ್ಸ್ ಆರಂಭಿಸಿದ ಲಕ್ನೋ ತಂಡವು ಮಾರ್ಷ್ ಮತ್ತು ಪೂರನ್ ಅಬ್ಬರಕ್ಕೆ ಬೃಹತ್ ಮೊತ್ತ ಪೇರಿಸಿತು. ಈ ಸುನಾಮಿ ಬ್ಯಾಟಿಂಗ್​​ಗೆ ಬೆದರಿದ ಡೆಲ್ಲಿ ಬೌಲರ್​ಗಳು ರನ್​ ಲೀಕ್ ಮಾಡಿದರು. ಪರಿಣಾಮ 20 ಓವರ್​​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 209 ರನ್ ಪೇರಿಸಿತು. ಇದರ ನಡುವೆಯೂ ಮಿಚೆಲ್ ಸ್ಟಾರ್ಕ್ 3, ಕುಲ್ದೀಪ್ ಯಾದವ್ 3 ವಿಕೆಟ್ ಕಿತ್ತು ಮಿಂಚಿದರು.

ಅಶುತೋಷ್ ಶರ್ಮಾ ಆರ್ಟಭ

210 ಗುರಿ ಬೆನ್ನಟ್ಟಿದ ಡೆಲ್ಲಿ ಆರಂಭಿಕ ಓವರ್​​ನಿಂದಲೇ ಸಂಕಷ್ಟಕ್ಕೆ ಸಿಲುಕಿತು. ಅನ್​ಸೋಲ್ಡ್ ಆಗಿದ್ದ ಶಾರ್ದೂಲ್ ಠಾಕೂರ್ ಮೊದಲ ಓವರ್​​ನಲ್ಲೇ 2 ವಿಕೆಟ್​ ಕಿತ್ತರು. ಬಳಿಕ ಉಳಿದ ಬೌಲರ್​​ಗಳು ಕೂಡ ಸಾಥ್ ಕೊಟ್ಟರು. ಪರಿಣಾಮ 113 ರನ್​ಗೆ 6 ವಿಕೆಟ್ ಕಳೆದುಕೊಂಡು ಸೋಲಿನಂಚಿಗೆ ಸಿಲುಕಿತ್ತು. ಆದರೆ, ಅಶುತೋಷ್ ಶರ್ಮಾ ಮತ್ತು ವಿಪ್ರಜ್ ನಿಗಮ್ ಅಬ್ಬರಿಸಿ 7ನೇ ವಿಕೆಟ್​ಗೆ 55 ರನ್​ ಗಳಿಸಿ ಪಂದ್ಯದ ಗತಿ ಬದಲಿಸಿದರು.

ಗೆಲುವಿಗೆ ಇನ್ನೂ 23 ಎಸೆತಗಳಲ್ಲಿ 42 ರನ್ ಬೇಕಿದ್ದಾಗ ವೀರಾವೇಶದ 39 ರನ್ ಗಳಿಸಿದ್ದ ವಿಪ್ರಜ್ ಔಟಾದರು. ಇದು ಡೆಲ್ಲಿ ಕ್ಯಾಂಪ್​ನಲ್ಲಿ ಕೊಂಚ ನಿರಾಸೆ ಉಂಟು ಮಾಡಿತು. ಆದರೆ ಕ್ರೀಸ್​ನಲ್ಲಿ ಅಶುತೋಷ್ ಅಬ್ಬರ ನಿಲ್ಲಲಿಲ್ಲ. 19ಕ್ಕೆ 19 ರನ್ ಗಳಿಸಿದ್ದ ಶರ್ಮಾ ಮುಂದಿನ 12 ಎಸೆತಗಳಲ್ಲಿ 47 ರನ್ ಚಚ್ಚಿದರು. ಏಕಾಂಗಿಯಾಗಿ ಕೊನೆಯ ತನಕ ಕ್ರೀಸ್​ನಲ್ಲೇ ಉಳಿದು ತಂಡವನ್ನು ಗೆಲುವಿನ ದಡ ಸೇರಿಸಿದರು.

ಕೊನೆಯ 4 ಓವರ್​​​ಗಳಲ್ಲಿ 42 ರನ್ ಬೇಕಿತ್ತು. ಆದರೆ ವಿಕೆಟ್​​ಗಳು ಕೈಯಲ್ಲಿ ಇರಲಿಲ್ಲ. ವಿಪ್ರಜ್​ 15 ಎಸೆತಗಳಲ್ಲಿ 35 ರನ್ ಗಳಿಸಿ ತನ್ನ ಸಾಮರ್ಥ್ಯ ಜಗತ್ತಿಗೆ ತೋರಿಸಿದರು. ಬಳಿಕ ಮಿಚೆಲ್ ಸ್ಟಾರ್ಕ್​  2 ರನ್, ಕುಲ್ದೀಪ್ 5 ರನ್ ಗಳಿಸಿ ಔಟಾದರು. ಇದು ಸೋಲನ್ನು ಇನ್ನಷ್ಟು ಹತ್ತಿರಕ್ಕೆ ತಂದಿತು. ಆದರೆ ಅಶುತೋಷ್ ಅದಕ್ಕೆ ಅವಕಾಶ ನೀಡಲಿಲ್ಲ. ಇದರ ನಡುವೆಯೂ ಕೊನೆಯ ಓವರ್​​ನಲ್ಲಿ 6 ಬಾಲ್​ಗೆ 6 ರನ್ ಬೇಕಿತ್ತು.

ಆಗ ಕ್ರೀಸ್​ನಲ್ಲಿ ಇದ್ದದ್ದು ಮೋಹಿತ್​ ಶರ್ಮಾ. ಇವರನ್ನು ಸ್ಟಂಪ್​ಔಟ್ ಮಾಡುವ ಉತ್ತಮ ಅವಕಾಶ ತನ್ನ ಮುಂದಿದ್ದರೂ ರಿಷಭ್ ಪಂತ್ ಕೈಚೆಲ್ಲಿದರು. ಇದು ಸ್ಟಂಪ್ ಮಾಡಿದ್ದರೆ ಗೆಲುವು ಲಕ್ನೋ ಪಾಲಾಗುತ್ತಿತ್ತು. ಅದರ ಮರು ಎಸೆತವೇ ಆಯುಷ್ ಬದೋನಿ ರನೌಟ್ ಮಿಸ್ ಮಾಡಿದರು. ಬಳಿಕ ಆಗ ಗೆಲುವಿಗೆ 5 ರನ್ ಬೇಕಿತ್ತು. ಕ್ರೀಸ್​ಗೆ ಬಂದ ಅಶುತೋಷ್​ ಸಿಕ್ಸರ್​ ಸಿಡಿಸಿ ಗೆಲುವಿನ ಕೇಕೆ ಹಾಕಿದರು. 

31 ಎಸೆತಗಳಲ್ಲಿ 5 ಬೌಂಡರಿ, 5 ಸಿಕ್ಸರ್ ಸಹಿತ ಅಶುತೋಷ್ 66 ರನ್ ಗಳಿಸಿದರು. ವಿಪ್ರಜ್ 35 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಆದರೆ ಜೇಕ್ ಫ್ರೇಸರ್-ಮೆಕ್‌ಗುರ್ಕ್ (1), ಫಾಫ್ (29), ಪೊರೆಲ್ (0), ಅಕ್ಷರ್ (22) ನಿರಾಸೆ ಮೂಡಿಸಿದರು. ಆದರೆ ಕೊನೆಯಲ್ಲಿ ಟ್ರಿಸ್ಟಾನ್ ಸ್ಟಬ್ಸ್ 34 ರನ್​ ಸಿಡಿಸಿ ಮಿಂಚಿದರು. ಶಾರ್ದೂಲ್ ಠಾಕೂರ್, ಮಣಿಮಾರನ್ ಸಿದ್ಧಾರ್ಥ್, ದಿಗ್ವೇಶ್ ರಥಿ, ರವಿ ಬಿಷ್ಣೋಯ್ ತಲಾ 2 ವಿಕೆಟ್ ಕಿತ್ತರು. 

ರನ್ ಮಳೆ ಹರಿಸಿದ ಮಾರ್ಷ್​-ಪೂರನ್

ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಉತ್ತಮ ಆರಂಭ ಪಡೆದರೂ ಏಡನ್ ಮಾರ್ಕ್ರಮ್ 15 ರನ್ ಗಳಿಸಿ ನಿರಾಸೆ ಮೂಡಿಸಿದರು. ಆ ಬಳಿಕ ಜೊತೆಯಾದ ಮಿಚೆಲ್ ಮಾರ್ಷ್ ಮತ್ತು ನಿಕೋಲಸ್ ಪೂರನ್ ಡೆಲ್ಲಿ ಬೌಲಿಂಗ್ ಘಟಕವನ್ನು ಪುಡಿಗಟ್ಟಿದರು. ತಂಡವು 10 ಓವರ್​​ಗಳಲ್ಲಿ 108 ರನ್ ಪೇರಿಸಿ ಬೃಹತ್ ಮೊತ್ತ ಪೇರಿಸುವ ಮುನ್ಸೂಚನೆ ನೀಡಿದರು. ಇದೇ ವೇಳೆ ಇಬ್ಬರು ತಲಾ ಅರ್ಧಶತಕ ಪೂರ್ಣಗೊಳಿಸಿದರು. 

ಮುಕೇಶ್ ಬೌಲಿಂಗ್​ನಲ್ಲಿ 12ನೇ ಓವರ್​ನ 4ನೇ ಎಸೆತವನ್ನು ಜಡ್ಜ್​ ಮಾಡುವಲ್ಲಿ ಎಡವಿದ ಮಾರ್ಷ್ 36 ಎಸೆತಗಳಲ್ಲಿ 6 ಸಿಕ್ಸರ್, 6 ಬೌಂಡರಿ ಸಹಿತ 72 ರನ್ ಬಾರಿಸಿ ಔಟಾದರು.  ಕಣಕ್ಕಿಳಿದ ಐಪಿಎಲ್​ನ ದುಬಾರಿ ಆಟಗಾರ ರಿಷಭ್ ಪಂತ್, 6 ಎಸೆತಗಳನ್ನು ಎದುರಿಸಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಬಳಿಕ 30 ಎಸೆತಗಳಲ್ಲಿ 7 ಸಿಕ್ಸರ್, 6 ಸಿಕ್ಸರ್​ ಸಹಿತ 75 ರನ್ ಗಳಿಸಿ ಪೂರನ್ ಕ್ಲೀನ್ ಬೋಲ್ಡ್ ಆದರು. ಡೇವಿಡ್ ಮಿಲ್ಲರ್​ 27 ರನ್ ಸಿಡಿಸಿದರು.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner