ಐಸಿಸಿ ಚಾಂಪಿಯನ್ಸ್ ಟ್ರೋಫಿ ಬಳಿಕ ಭವಿಷ್ಯ ನಿರ್ಧರಿಸುವಂತೆ ರೋಹಿತ್​​ ಶರ್ಮಾಗೆ ಬಿಸಿಸಿಐ ಸೂಚನೆ, ಕೊಹ್ಲಿಗಿಲ್ಲ ಆತಂಕ
ಕನ್ನಡ ಸುದ್ದಿ  /  ಕ್ರಿಕೆಟ್  /  ಐಸಿಸಿ ಚಾಂಪಿಯನ್ಸ್ ಟ್ರೋಫಿ ಬಳಿಕ ಭವಿಷ್ಯ ನಿರ್ಧರಿಸುವಂತೆ ರೋಹಿತ್​​ ಶರ್ಮಾಗೆ ಬಿಸಿಸಿಐ ಸೂಚನೆ, ಕೊಹ್ಲಿಗಿಲ್ಲ ಆತಂಕ

ಐಸಿಸಿ ಚಾಂಪಿಯನ್ಸ್ ಟ್ರೋಫಿ ಬಳಿಕ ಭವಿಷ್ಯ ನಿರ್ಧರಿಸುವಂತೆ ರೋಹಿತ್​​ ಶರ್ಮಾಗೆ ಬಿಸಿಸಿಐ ಸೂಚನೆ, ಕೊಹ್ಲಿಗಿಲ್ಲ ಆತಂಕ

ಐಸಿಸಿ ಚಾಂಪಿಯನ್ಸ್ ಟ್ರೋಫಿ ಬಳಿಕ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ರೋಹಿತ್​​ ಶರ್ಮಾಗೆ ಬಿಸಿಸಿಐ ನಿವೃತ್ತಿಯ ಗಡುವು ನೀಡಿದೆ. ಆದರೆ ಈ ವಿಚಾರದಲ್ಲಿ ವಿರಾಟ್ ಕೊಹ್ಲಿಗೆ ಯಾವುದೇ ಆತಂಕ ಇಲ್ಲ.

ಚಾಂಪಿಯನ್ಸ್ ಟ್ರೋಫಿ ಬಳಿಕ ಭವಿಷ್ಯ ನಿರ್ಧರಿಸು; ರೋಹಿತ್​​ ಶರ್ಮಾಗೆ ನಿವೃತ್ತಿಯ ಗಡುವು ನೀಡಿದ ಬಿಸಿಸಿಐ, ಕೊಹ್ಲಿಗಿಲ್ಲ ಆತಂಕ
ಚಾಂಪಿಯನ್ಸ್ ಟ್ರೋಫಿ ಬಳಿಕ ಭವಿಷ್ಯ ನಿರ್ಧರಿಸು; ರೋಹಿತ್​​ ಶರ್ಮಾಗೆ ನಿವೃತ್ತಿಯ ಗಡುವು ನೀಡಿದ ಬಿಸಿಸಿಐ, ಕೊಹ್ಲಿಗಿಲ್ಲ ಆತಂಕ (PTI)

ಟೀಮ್ ಇಂಡಿಯಾ ನಾಯಕ ರೋಹಿತ್​ ಶರ್ಮಾ (Rohit Sharma) ಅವರಿಗೆ ಬಿಸಿಸಿಐ (BCCI) ನಿವೃತ್ತಿಯ ಗಡುವು ನೀಡಿದೆ. ಫೆಬ್ರವರಿ 19ರಿಂದ ಶುರುವಾಗುವ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ (ICC Champions Trophy 2025) ನಂತರ ತಮ್ಮ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ಸೂಚನೆ ನೀಡಿದೆ. ಐಸಿಸಿ ಈವೆಂಟ್​ನಲ್ಲಿ ಭಾರತ ಹೇಗೆ ಪ್ರದರ್ಶನ ನೀಡುತ್ತದೆ ಎಂಬುದನ್ನು ಲೆಕ್ಕಿಸದೆ, ಭಾರತದ ನಾಯಕನನ್ನು ಅವರ ಭವಿಷ್ಯದ ಬಗ್ಗೆ ಚರ್ಚಿಸಲು ಕೇಳಲಾಗಿದೆ. ಆದರೆ ವಿರಾಟ್ ಕೊಹ್ಲಿಗೆ (Virat Kohli) ಇಂತಹ ಯಾವುದೇ ಸೂಚನೆ ನೀಡಿಲ್ಲ ಎಂದು ವರದಿಯಾಗಿದೆ.

38 ವರ್ಷದ ರೋಹಿತ್​ ಚಾಂಪಿಯನ್ಸ್ ಟ್ರೋಫಿ ಬಳಿಕ ಭಾರತ ತಂಡದ ಪರ ಆಡುವ ಸಾಧ್ಯತೆ ಬಹುತೇಕ ಕಡಿಮೆ ಎಂದು ವರದಿಗಳು ಹೇಳುತ್ತಿವೆ. ಬಾರ್ಡರ್ ಗವಾಸ್ಕರ್ ಟ್ರೋಫಿಯ ಕೊನೆಯ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯದೆ ಹಿಂದೆ ಸರಿದಾಗಲೇ ಈ ವದಂತಿಗಳು ಹುಟ್ಟಿಕೊಂಡಿದ್ದವು. ಆದರೆ ಅಂದು ಮಾತನಾಡಿ, ನನ್ನ ನಿವೃತ್ತಿಯನ್ನು ನಾನು ತೆಗೆದುಕೊಳ್ಳುತ್ತೇನೆ ಎಂದು ಹಿಟ್​ಮ್ಯಾನ್​ ತನ್ನ ವಿರುದ್ಧ ಕೇಳಿಬಂದ ಗಾಸಿಪ್​ಗಳಿಗೆ ಖಡಕ್ ಉತ್ತರ ಕೊಟ್ಟಿದ್ದರು. ಇದೀಗ ಭವಿಷ್ಯ ನಿರ್ಧರಿಸುವಂತೆ ಬಿಸಿಸಿಐನಿಂದಲೇ ಪ್ರಶ್ನೆ ಬಂದಿರುವುದು ಅಂದಿನ ವದಂತಿಗಳಿಗೆ ಪುಷ್ಠಿ ನೀಡಿದೆ.

ಅತ್ಯಂತ ಕೆಟ್ಟ ಪ್ರದರ್ಶನ ನೀಡುತ್ತಿರುವ ಹಿಟ್​ಮ್ಯಾನ್, ಇಂಗ್ಲೆಂಡ್ ವಿರುದ್ಧದ ಏಕದಿನ ಮತ್ತು ಚಾಂಪಿಯನ್ಸ್​ ಟ್ರೋಫಿಯಲ್ಲಿ ಅಸಾಧ್ಯವಾದ ಬ್ಯಾಟಿಂಗ್ ನಡೆಸಿದರೂ ಜೂನ್​ನಲ್ಲಿ ಇಂಗ್ಲೆಂಡ್​ಗೆ ಹೋಗುವ ಸಾಧ್ಯತೆಗಳು ತೀರಾ ಕಡಿಮೆ ಎಂದೇ ಹೇಳಲಾಗುತ್ತಿದೆ. ಅಷ್ಟರೊಳಗೆ ಭಾರತದ ಮುಂದಿನ ನಾಯಕನನ್ನು ಅಂತಿಮಗೊಳಿಸಬೇಕಿರುವ ಕಾರಣ ಬಿಸಿಸಿಐ, ಚಾಂಪಿಯನ್ಸ್ ಟ್ರೋಫಿ ಬಳಿಕ ತಮ್ಮ ಭವಿಷ್ಯದ ಕುರಿತು ಅಪ್ಡೇಟ್ ನೀಡುವಂತೆ ತಿಳಿಸಿದೆ. ಈ ಬಗ್ಗೆ ಬಿಸಿಸಿಐ ಮೂಲವೊಂದು ಟೈಮ್ಸ್ ಆಫ್ ಇಂಡಿಯಾಗೆ ಮಾಹಿತಿ ನೀಡಿದೆ.

ಬಿಸಿಸಿಐ ಮೂಲಗಳು ಹೇಳಿದ್ದೇನು?

ಕಳೆದ ಆಯ್ಕೆ ಸಮಿತಿ ಸಭೆಯ ಸಮಯದಲ್ಲಿ ಆಯ್ಕೆದಾರರು ಮತ್ತು ಮಂಡಳಿ ಸದಸ್ಯರು ರೋಹಿತ್ ಅವರೊಂದಿಗೆ ಈ ಚರ್ಚೆ ನಡೆಸಿದ್ದರು. ಚಾಂಪಿಯನ್ಸ್ ಟ್ರೋಫಿಯ ನಂತರ ತಮ್ಮ ಭವಿಷ್ಯ ಹೇಗೆ ಯೋಜಿಸಲು ಬಯತ್ತೀರಿ ಎಂಬುದನ್ನು ನಿರ್ಧರಿಸುವಂತೆ ಅವರಿಗೆ ತಿಳಿಸಲಾಗಿದೆ. ಮುಂದಿನ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ (WTC) ಆವೃತ್ತಿ, ಮುಂದಿನ ಏಕದಿನ ವಿಶ್ವಕಪ್​ಗೆ ತಂಡ ಸಜ್ಜುಗೊಳಿಸುವ ಮತ್ತು ನೂತನ ಸಾರಥಿ ನೇಮಕ ಸೇರಿ ಕೆಲವು ಯೋಜನೆಗಳನ್ನು ಹೊಂದಿದ್ದೇವೆ. ಹಾಗಾಗಿ ನಿಮ್ಮಿಂದ ಖಚಿತ ಮಾಹಿತಿಗೆ ಕಾಯುತ್ತೇವೆ ಎಂದು ಸಭೆಯಲ್ಲಿ ಕೇಳಲಾಗಿತ್ತು ಎಂದು ಮೂಲಗಳು ತಿಳಿಸಿವೆ.

2027ಕ್ಕೆ ರೋಹಿತ್​ಗೆ 40 ವರ್ಷ

ನಾಯಕ ರೋಹಿತ್​ ಶರ್ಮಾ ಮತ್ತು ಭಾರತ ತಂಡಕ್ಕೆ ಏಕದಿನ ಮಾದರಿಯಲ್ಲಿ ಐಸಿಸಿ ಟ್ರೋಫಿ ಗೆಲ್ಲುವ ಕನಸು ನನಸಾಗಿಯೇ ಉಳಿದುಕೊಂಡಿದೆ. 2011ರಲ್ಲಿ ಭಾರತ ಏಕದಿನ ವಿಶ್ವಕಪ್ ಗೆದ್ದಿತ್ತು. ತದನಂತರ 2023ರ ಏಕದಿನ ವಿಶ್ವಕಪ್ ಫೈನಲ್​ನಲ್ಲಿ ಸೋತು ರನ್ನರ್​ಅಪ್​ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಆದರೆ ಮತ್ತೆ ಏಕದಿನ ವಿಶ್ವಕಪ್ ಜರುಗುವುದು 2027ರಲ್ಲಿ. ಆದರೆ ಅಷ್ಟೊತ್ತಿಗೆ ರೋಹಿತ್​ಗೆ 40 ವರ್ಷ ತುಂಬುತ್ತದೆ. ಅಲ್ಲದೆ, ಅವರ ಫಿಟ್​ನೆಸ್ ಸಹ ಇನ್ನಷ್ಟು ದುರ್ಬಲವಾಗುತ್ತದೆ. ಇದೇ ಕಾರಣಕ್ಕೆ ಭವಿಷ್ಯದ ಕುರಿತು ಚರ್ಚಿಸುವಂತೆ ಬಿಸಿಸಿಐ ತಿಳಿಸಿದೆ.

ರೋಹಿತ್​ ಫಾರ್ಮ್​ ಸಮಸ್ಯೆ

ಆದಾಗ್ಯೂ, ದೊಡ್ಡ ಸಮಸ್ಯೆ ಏನೆಂದರೆ ರೋಹಿತ್ ಅವರ ಫಾರ್ಮ್. ಇಂಗ್ಲೆಂಡ್ ವಿರುದ್ಧ 3 ಏಕದಿನ ಪಂದ್ಯಗಳು, ನಂತರ ಚಾಂಪಿಯನ್ಸ್ ಟ್ರೋಫಿ ಇರುವುದರಿಂದ ನಾಯಕ ಮತ್ತೆ ಫಾರ್ಮ್​ಗೆ ಮರಳಬೇಕಿದೆ. ಇತ್ತೀಚೆಗೆ ರಣಜಿ ಆಡಿದ್ದ ರೋಹಿತ್​, ಅಲ್ಲೂ ಕೆಟ್ಟ ಪ್ರದರ್ಶನ ಮುಂದುವರೆಸಿದ್ದರು. ಮೊದಲ ಇನ್ನಿಂಗ್ಸ್​​ 3, ಎರಡನೇ ಇನ್ನಿಂಗ್ಸ್​​ನಲ್ಲಿ 28 ರನ್​ಗಳಿಗೆ ಔಟಾಗಿದ್ದರು. ಇದೀಗ ಭಾರತ ತಂಡಕ್ಕೆ ಮರಳಿರುವ ಹಿಟ್​ಮ್ಯಾನ್, ಮುಂದಿನ ಪಂದ್ಯಗಳಲ್ಲಿ ತನ್ನ ಭವಿಷ್ಯವೇ ಬದಲಾಗುವಂತೆ ಪ್ರದರ್ಶನ ನೀಡಬೇಕು.

ರೋಹಿತ್ ಅವರಂತೆ ವಿರಾಟ್ ಕೊಹ್ಲಿ ಕೂಡ ಫಾರ್ಮ್​​ಗೆ ಮರಳಲು ಹೆಣಗಾಡುತ್ತಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಐದು ಟೆಸ್ಟ್ ಸರಣಿಯನ್ನು 9 ಇನ್ನಿಂಗ್ಸ್​​ಗಳಿಂದ 190 ರನ್​ ಗಳಿಸಿ ಕೆಟ್ಟ ಪ್ರದರ್ಶನ ನೀಡಿದ್ದರು. ಇದರಲ್ಲಿ ಒಂದು ಶತಕವೂ ಸೇರಿದೆ. ಆದರೆ ಆಯ್ಕೆದಾರರು ಮತ್ತು ಬಿಸಿಸಿಐ ಕೊಹ್ಲಿ ಭವಿಷ್ಯದ ಕುರಿತು ಯಾವುದೇ ಚಕಾರ ಎತ್ತಿಲ್ಲ. ‘ವಿರಾಟ್ ಕೊಹ್ಲಿಗೆ ಸಂಬಂಧಿಸಿ ಆಯ್ಕೆದಾರರು ಇನ್ನಷ್ಟು ಕಾಯುವುದಾಗಿ ತಿಳಿಸಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

Whats_app_banner