ಭಾರತ ತಂಡಕ್ಕೆ ಕಠಿಣ 10 ಮಾರ್ಗಸೂಚಿ ಪ್ರಕಟಿಸಿದ ಬಿಸಿಸಿಐ; ಈ ನಿಯಮ ಪಾಲಿಸದಿದ್ದರೆ ಐಪಿಎಲ್ನಿಂದಲೂ ಔಟ್, ವೇತನವೂ ಇಲ್ಲ!
Indian Cricket Team: ಭಾರತ ಕ್ರಿಕೆಟ್ ತಂಡಕ್ಕೆ ಬಿಸಿಸಿಐ ಕಠಿಣ 10 ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಈ ನಿಯಮಗಳನ್ನು ಪಾಲಿಸದಿದ್ದರೆ ಐಪಿಎಲ್ನಿಂದಲೂ ಔಟ್, ವೇತನವೂ ಇಲ್ಲ ಎಂದು ಬಿಸಿಸಿಐ ಆದೇಶ ಹೊರಡಿಸಿದೆ.

ಭಾರತೀಯ ಕ್ರಿಕೆಟ್ ತಂಡದ 'ಸ್ಟಾರ್ ಸಂಸ್ಕೃತಿ' ಮೇಲೆ ಚಾಟಿ ಬೀಸಿದ ಬಿಸಿಸಿಐ 'ಶಿಸ್ತು ಮತ್ತು ಏಕತೆ' ಉತ್ತೇಜಿಸುವ ಸಲುವಾಗಿ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಇತ್ತೀಚೆಗೆ ಟೀಮ್ ಇಂಡಿಯಾ ನೀಡಿರುವ ಪ್ರದರ್ಶನಕ್ಕೆ ಅಸಮಾಧಾನ ತೋರಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ, 10 ಅಂಶಗಳ ಹೊಸ ನೀತಿ ಜಾರಿಗೆ ತಂದಿದೆ. ಈ ನಿಯಮಗಳನ್ನು ಅನುಕರಿಸದೆ ಇದ್ದರೆ ದಂಡದ ಶಿಕ್ಷೆಗೆ ಗುರಿಯಾಗಬೇಕು ಎಂದು ಬಿಸಿಸಿಐ ಎಚ್ಚರಿಕೆ ನೀಡಿದೆ. ದೇಶೀಯ ಕ್ರಿಕೆಟ್ ಆಡುವುದು, ಪ್ರವಾಸದಲ್ಲಿ ಕುಟುಂಬ ಉಪಸ್ಥಿತಿ ನಿರ್ಬಂಧ, ಸರಣಿಗಳ ಮಧ್ಯೆ ವೈಯಕ್ತಿಕ ಜಾಹೀರಾತು ನಿಷೇಧ.. ಸೇರಿ 10 ಮಾರ್ಗಸೂಚಿಗಳು ಒಳಗೊಂಡಿವೆ.
1. ದೇಶೀಯ ಕ್ರಿಕೆಟ್ ಆಡಬೇಕು
ಭಾರತ ಕ್ರಿಕೆಟ್ ತಂಡದ ಆಟಗಾರರು ದೇಶೀಯ ಕ್ರಿಕೆಟ್ ಆಡುವುದು ಕಡ್ಡಾಯ ಎಂದು ಮಂಡಳಿ ಹೇಳಿದೆ. ಯಾವುದೇ ಸರಣಿಗಳು ಇಲ್ಲದ ವೇಳೆ ದೇಶೀಯ ಪಂದ್ಯಗಳಿಗೆ ಲಭ್ಯವಿರಬೇಕು ಎಂದು ಆದೇಶಿಸಿದೆ. ಇದು ಫಾರ್ಮ್ ಕಳೆದುಕೊಂಡವರು ಲಯಕ್ಕೆ ಮರಳಲು, ಪಂದ್ಯದ ಫಿಟ್ನೆಸ್ ಕಾಪಾಡಿಕೊಳ್ಳಲು ನೆರವಾಗುತ್ತದೆ. ಒಟ್ಟು ದೇಶೀಯ ಕ್ರಿಕೆಟ್ ವ್ಯವಸ್ಥೆ ಮತ್ತಷ್ಟು ಬಲಪಡಿಸುತ್ತದೆ ಎಂದು ಬಿಸಿಸಿಐ ಸೂಚಿಸಿದೆ. ಆ ಮೂಲಕ ಕೇಂದ್ರದ ಒಪ್ಪಂದಗಳಿಗೆ ಅರ್ಹರಾಗಲಿದ್ದೀರಿ ಎಂದಿದೆ. ವಿರಾಟ್ ಕೊಹ್ಲಿ 2012 ರಿಂದ ಮತ್ತು ರೋಹಿತ್ ಶರ್ಮಾ 2015 ರಿಂದ ರಣಜಿ ಪಂದ್ಯವನ್ನಾಡಿಲ್ಲ. ಆದರೆ ಸಚಿನ್ 2013ರಲ್ಲಿ ಅಂದರೆ ನಿವೃತ್ತಿಗೂ ಒಂದು ತಿಂಗಳಿಗೂ ಮುನ್ನ ರಣಜಿ ಆಡಿದ್ದರು. ಕಟ್ಟುನಿಟ್ಟಿನ ಆದೇಶದ ನಂತರ ಎಲ್ಲಾ ಆಟಗಾರರು ರಣಜಿ ಆಡಲು ಸಜ್ಜಾಗಿದ್ದಾರೆ.
2. ಕುಟುಂಬದೊಂದಿಗೆ ಪ್ರಯಾಣ ನಿರ್ಬಂಧ
ಇನ್ಮುಂದೆ ಆಟಗಾರರು ತಂಡದೊಂದಿಗೆ ಮತ್ತು ತಂಡದ ಬಸ್ನೊಂದಿಗೆ ಪ್ರಯಾಣಿಸಬೇಕು. ಶಿಸ್ತು ಮತ್ತು ತಂಡದ ಒಗ್ಗಟ್ಟು ಕಾಪಾಡಿಕೊಳ್ಳಲು ಕುಟುಂಬದೊಂದಿಗೆ ಪ್ರತ್ಯೇಕವಾಗಿ ಪ್ರಯಾಣಿಸಲು ನಿರ್ಬಂಧಿಸಲಾಗಿದೆ. ಒಂದು ವೇಳೆ ಕುಟುಂಬ ಸದಸ್ಯರೊಂದಿಗೆ ಪ್ರಯಾಣಿಸಬೇಕು ಎಂದರೆ ಹೆಡ್ಕೋಚ್ ಗೌತಮ್ ಗಂಭೀರ್, ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಅವರಿಂದ ಪೂರ್ವ ಅನುಮೋದನೆ ಪಡೆಯಬೇಕು. ಇತ್ತೀಚಿಗೆ ಇಬ್ಬರು ದೊಡ್ಡ ಸ್ಟಾರ್ಗಳು, ಆಸ್ಟ್ರೇಲಿಯಾ ಪ್ರವಾಸದಲ್ಲಿ ತಂಡದೊಂದಿಗೆ ಪ್ರಯಾಣಿಸಲು ನಿರಾಕರಿಸಿದ್ದರು. ಈ ಪೈಕಿ ಒಬ್ಬ ಆಟಗಾರ ಆಸ್ಟ್ರೇಲಿಯಾದ ನಗರದಿಂದ ಮತ್ತೊಂದು ನಗರಕ್ಕೆ ಪ್ರಯಾಣ ಬೆಳೆಸಲು ಚಾರ್ಟರ್ ಫ್ಲೈಟ್ ಬಾಡಿಗೆಗೆ ಪಡೆದಿದ್ದರು.
3. ಬ್ಯಾಗೇಜ್ ಮಿತಿ
ಬಿಸಿಸಿಐ ತನ್ನ ಆಟಗಾರರ ಬ್ಯಾಗೇಜ್ ಮಿತಿಗೂ ಕಡಿವಾಣ ಹಾಕಿದೆ. ಹೆಚ್ಚುವರಿ ಲಗೇಜ್ ತಂದಿದ್ದೇ ಆದರೆ, ಅದರ ವೆಚ್ಚವನ್ನು ಅವರೇ ಭರಿಸಬೇಕಾಗುತ್ತದೆ. ಸುದೀರ್ಘ ಪ್ರವಾಸಗಳಿಗೆ ಲಗೇಜ್ ತೂಕದ ಮಿತಿ 150 ಕೆಜಿಗೆ ಇರಿಸಲಾಗಿದೆ. ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದ ಆಟಗಾರರು ತಮ್ಮ ಪಾಲುದಾರರು, ಮಕ್ಕಳು ಮತ್ತು ವೈಯಕ್ತಿಕ ಸಿಬ್ಬಂದಿಯ ಬ್ಯಾಗ್ಗಳನ್ನು ತಮ್ಮ ಖಾತೆಗೆ ಸೇರಿಸುತ್ತಿದ್ದರು. ಹೀಗಾಗಿ ನಿರ್ದಿಷ್ಟ ಲಗೇಜ್ ತೂಕಕ್ಕೆ ಸೀಮಿತಗೊಳಿಸಲಾಗಿದೆ.
4. ವೈಯಕ್ತಿಕ ಸಿಬ್ಬಂದಿಯ ಮೇಲಿನ ನಿರ್ಬಂಧ
ವ್ಯವಸ್ಥಾಪಕರು, ಬಾಣಸಿಗರು, ಸಹಾಯಕರು ಮತ್ತು ಭದ್ರತೆ ಸೇರಿದಂತೆ ವೈಯಕ್ತಿಕ ಸಿಬ್ಬಂದಿ ಕರೆ ತರುವುದನ್ನು ನಿರ್ಬಂಧಿಸಲಾಗಿದೆ. ಬಿಸಿಸಿಐ ಸ್ಪಷ್ಟವಾಗಿ ಅನುಮೋದಿಸದ ಹೊರತು ಪ್ರವಾಸಗಳು ಅಥವಾ ಸರಣಿಗಳಲ್ಲಿ ವೈಯಕ್ತಿಕ ಸಿಬ್ಬಂದಿಯನ್ನು ಕರೆತರುವಂತಿಲ್ಲ.
5. ಸಾಮಗ್ರಿ ಲಾಜಿಸ್ಟಿಕ್ಸ್
ಬೆಂಗಳೂರಿನಲ್ಲಿರುವ ಸೆಂಟರ್ ಆಫ್ ಎಕ್ಸಲೆನ್ಸ್ಗೆ ಉಪಕರಣಗಳು ಮತ್ತು ವೈಯಕ್ತಿಕ ವಸ್ತುಗಳನ್ನು ಕಳುಹಿಸುವುದಕ್ಕೂ ಮುನ್ನ ಟೀಮ್ ಮ್ಯಾನೇಜ್ಮೆಂಟ್ನೊಂದಿಗೆ ಆಟಗಾರರು ಸಮನ್ವಯ ಸಾಧಿಸುವುದು ಕಡ್ಡಾಯ. ಪ್ರತ್ಯೇಕ ವ್ಯವಸ್ಥೆ ಮಾಡಿದರೆ ಉಂಟಾಗುವ ಯಾವುದೇ ಹೆಚ್ಚುವರಿ ವೆಚ್ಚ ಆಟಗಾರನ ಜವಾಬ್ದಾರಿಯಾಗಿರುತ್ತದೆ. ಕೆಲವು ಹಿರಿಯ ಆಟಗಾರರು ಎನ್ಸಿಎಗೆ ಪುನರ್ವಸತಿಗೆ ಆಗಮಿಸುವುದಕ್ಕೂ ಮುನ್ನ ತಮ್ಮ ಉಪಕರಣಗಳು ಅಥವಾ ಕಿಟ್ಗಳನ್ನು ಕಳುಹಿಸುತ್ತಿದ್ದಾರೆ. ಆದರೆ, ಹೆಚ್ಚಿನ ವೆಚ್ಚವನ್ನು ಪಾವತಿಸುತ್ತಿಲ್ಲ.
6. ನಿಗದಿತ ಅಭ್ಯಾಸ
ಎಲ್ಲಾ ಆಟಗಾರರು ನಿಗದಿತ ಅಭ್ಯಾಸದ ಅವಧಿಯ ಸಂಪೂರ್ಣ ಅವಧಿ ತನಕ ಇರುವಂತೆ ಕಡ್ಡಾಯಗೊಳಿಸಲಾಗಿದೆ. ಬದ್ಧತೆ ಮತ್ತು ಒಗ್ಗಟ್ಟು ಪ್ರದರ್ಶಿಸಲು ಸ್ಥಳಕ್ಕೆ ಮತ್ತು ಹೊರಕ್ಕೆ ಪ್ರಯಾಣಿಸಬೇಕಾಗುತ್ತದೆ. ತಮಗಿಷ್ಟ ಬಂದ ಅವಧಿಗೆ ನೆಟ್ ಪ್ರಾಕ್ಟೀಸ್ ತೊರೆಯುವಂತಿಲ್ಲ. ನಿಗದಿತ ಅಭ್ಯಾಸ ಅವಧಿ ಪೂರ್ಣಗೊಳಿಸಬೇಕು.
7. ಜಾಹೀರಾತು ಶೂಟಿಂಗ್ ಇಲ್ಲ
ಸರಣಿ ಅಥವಾ ಪ್ರವಾಸದ ಸಮಯದಲ್ಲಿ ಆಟಗಾರರು ವೈಯಕ್ತಿಕ ಜಾಹೀರಾತು ಶೂಟ್ಗಳು ಅಥವಾ ಜಾಹೀರಾತು ಅನುಮೋದನೆ ಪಡೆಯಲು ನಿರ್ಬಂಧಿಸಿದೆ.
8. ಕುಟುಂಬ ಪ್ರಯಾಣ
ಆಟಗಾರರು ತಮ್ಮ ಪತ್ನಿ ಮತ್ತು ಕುಟುಂಬದೊಂದಿಗೆ ಪ್ರಯಾಣಿಸುವ ನಿಯಮದಲ್ಲೂ ಬದಲಾವಣೆ ತರಲಾಗಿದೆ. ಕ್ರಿಕೆಟ್ ಪ್ರವಾಸವು 45 ದಿನ ಅಥವಾ ಅದಕ್ಕಿಂತ ಜಾಸ್ತಿ ಇದ್ದರೆ, ಕುಟುಂಬ ಸದಸ್ಯರು ಕ್ರಿಕೆಟಿಗರ ಜೊತೆಗೆ ಗರಿಷ್ಠ 2 ವಾರ ಮಾತ್ರ ಇರಬಹುದು. ಒಂದು ವೇಳೆ ಪ್ರವಾಸ ಕಡಿಮೆ ದಿನಗಳದ್ದಾಗಿದ್ದರೆ ಒಂದು ವಾರ ಮಾತ್ರ ಕುಟುಂಬ ಸದಸ್ಯರಿಗೆ ಅವಕಾಶ ಇರಲಿದೆ. (ಮಕ್ಕಳು - 18 ವರ್ಷದೊಳಗಿನವರು)
9. ಬಿಸಿಸಿಐ ಚಟುವಟಿಕೆಗಳಿಗೆ ಲಭ್ಯವಿರಬೇಕು
ಬಿಸಿಸಿಐನ ಯಾವುದೇ ಅಧಿಕೃತ ಶೂಟ್, ಪ್ರಚಾರ ಚಟುವಟಿಕೆಗಳು ಮತ್ತು ಕಾರ್ಯಗಳಿಗೆ ಆಟಗಾರರು ಲಭ್ಯವಿರುವುದು ಕಡ್ಡಾಯ. ಇದೆಲ್ಲವೂ ಬಿಸಿಸಿಐ ಪಾಲುದಾರರಿಗೆ ಸಂಬಂಧಿಸಿದ ಪ್ರಚಾರವಾಗಿರುತ್ತದೆ.
10. ಸರಣಿ ಪೂರ್ಣಗೊಳಿಸಬೇಕು
ಆಟಗಾರರು ವೇಳಾಪಟ್ಟಿ ಮುಗಿಯುವವರೆಗೂ ಅಥವಾ ಸರಣಿ ಮುಗಿಯುವವರೆಗೂ ತಂಡದೊಂದಿಗೆ ಇರಬೇಕು. ಪಂದ್ಯಗಳು ನಿಗದಿ ಮಾಡಿದ್ದಕ್ಕಿಂತ ಮುಂಚಿತವಾಗಿಯೇ ಮುಕ್ತಾಯಗೊಳ್ಳುತ್ತವೆ ಎಂಬುದನ್ನು ಲೆಕ್ಕಿಸದೆ ಸರಣಿ ಅಥವಾ ಪ್ರವಾಸದ ನಿಗದಿತ ಅಂತ್ಯದ ತನಕ ತಂಡದೊಂದಿಗೆ ಇರಬೇಕು.
ನಿಯಮ ಪಾಲಿಸದಿದ್ದರೆ ದಂಡದ ಎಚ್ಚರಿಕೆ
ಎಲ್ಲಾ ಆಟಗಾರರು ಮೇಲಿನ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಬಿಸಿಸಿಐ ನಿರೀಕ್ಷಿಸಿದೆ. ಯಾವುದೇ ವಿನಾಯಿತಿ ಪಡೆಯಲು ಆಯ್ಕೆ ಸಮಿತಿಯ ಅಧ್ಯಕ್ಷ ಮತ್ತು ಹೆಡ್ಕೋಚ್ ಅವರಿಂದ ಅನುಪತಿ ಪಡೆಯಬೇಕು. ನಿಯಮ ಪಾಲಿಸದಿದ್ದರೆ ಬಿಸಿಸಿಐ ಶಿಸ್ತು ಕ್ರಮಕ್ಕೆ ಮುಂದಾಗಲಿದೆ. 1. ಇಂಡಿಯನ್ ಪ್ರೀಮಿಯರ್ ಲೀಗ್ ಸೇರಿದಂತೆ ಬಿಸಿಸಿಐ ನಡೆಸುವ ಎಲ್ಲಾ ಪಂದ್ಯಾವಳಿಗಳಲ್ಲಿ ಭಾಗವಹಿಸದಂತೆ ಸಂಬಂಧಪಟ್ಟ ಆಟಗಾರನ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. 2. ಬಿಸಿಸಿಐ ಆಟಗಾರರ ಒಪ್ಪಂದದ ಅಡಿಯಲ್ಲಿ ಉಳಿಸಿಕೊಳ್ಳುವವರ ಮೊತ್ತ/ಪಂದ್ಯ ಶುಲ್ಕದಿಂದ ಕಡಿತ ಮಾಡಲಾಗುತ್ತದೆ.
