ಭಾರತ ಕ್ರಿಕೆಟ್ ತಂಡದಲ್ಲಿ ಮೇಜರ್ ಸರ್ಜರಿ; ಗೌತಮ್ ಗಂಭೀರ್ ಆಪ್ತರನ್ನು ವಜಾಗೊಳಿಸಿದ ಬಿಸಿಸಿಐ, ಕಾರಣ ಹೀಗಿದೆ!
ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತ ಕ್ರಿಕೆಟ್ ತಂಡದಲ್ಲಿ ಮೇಜರ್ ಸರ್ಜರಿ; ಗೌತಮ್ ಗಂಭೀರ್ ಆಪ್ತರನ್ನು ವಜಾಗೊಳಿಸಿದ ಬಿಸಿಸಿಐ, ಕಾರಣ ಹೀಗಿದೆ!

ಭಾರತ ಕ್ರಿಕೆಟ್ ತಂಡದಲ್ಲಿ ಮೇಜರ್ ಸರ್ಜರಿ; ಗೌತಮ್ ಗಂಭೀರ್ ಆಪ್ತರನ್ನು ವಜಾಗೊಳಿಸಿದ ಬಿಸಿಸಿಐ, ಕಾರಣ ಹೀಗಿದೆ!

ಭಾರತ ಕ್ರಿಕೆಟ್ ತಂಡದಲ್ಲಿ ಮೇಜರ್ ಸರ್ಜರಿಯಾಗಿದೆ. ಹೆಡ್​ಕೋಚ್ ಗೌತಮ್ ಗಂಭೀರ್ ಅವರ ಮೂವರು ಸಹಾಯಕ ಸಿಬ್ಬಂದಿಯನ್ನು ಬಿಸಿಸಿಐ ವಜಾಗೊಳಿಸಿದೆ. ಅದಕ್ಕೆ ಕಾರಣ ಹೀಗಿದೆ!

ಗೌತಮ್ ಗಂಭೀರ್ ಸಹಾಯಕ ಸಿಬ್ಬಂದಿಗೆ ಕತ್ತರಿ ಹಾಕಿದ ಬಿಸಿಸಿಐ
ಗೌತಮ್ ಗಂಭೀರ್ ಸಹಾಯಕ ಸಿಬ್ಬಂದಿಗೆ ಕತ್ತರಿ ಹಾಕಿದ ಬಿಸಿಸಿಐ (PTI)

ಟೀಮ್ ಇಂಡಿಯಾ ಕೋಚ್​​ಗಳ ಮೇಲಿರುವ ಸಿಟ್ಟನ್ನು ಬಿಸಿಸಿಐ ತೀರಿಸಿಕೊಂಡಿದೆ. ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಮೂವರು ಸಹಾಯಕ ಸಿಬ್ಬಂದಿಯನ್ನು ಬಿಸಿಸಿಐ ವಜಾಗೊಳಿಸಿದೆ. ಬಾರ್ಡರ್​ ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಿರಾಶಾದಾಯಕ ಪ್ರದರ್ಶನದ ಹಿನ್ನೆಲೆ ಎಂಟು ತಿಂಗಳ ಹಿಂದಷ್ಟೇ ನೇಮಕವಾಗಿದ್ದ ಸಹಾಯಕ ಕೋಚ್ ಅಭಿಷೇಕ್ ಶರ್ಮಾ ಅವರನ್ನು ಕಿತ್ತು ಹಾಕಲಾಗಿದೆ. ಇವರ ಜೊತೆಗೆ ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಮತ್ತು ಸ್ಟ್ರೆಂಥ್ ಆ್ಯಂಡ್ ಕಂಡೀಷನಿಂಗ್ ಕೋಚ್ ಸೋಹಂ ದೇಸಾಯಿ ಅವರನ್ನೂ ವಜಾಗೊಳಿಸಲಾಗಿದೆ.

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿ ಅಂತ್ಯದ ಬಳಿಕ ಬಿಸಿಸಿಐ ಸಹಾಯಕ ಸಿಬ್ಬಂದಿ ತೆಗೆದು ಹಾಕುವ ಕುರಿತು ಚರ್ಚೆಗಳು ನಡೆದಿದ್ದವು. ಕಳಪೆ ಪ್ರದರ್ಶನ ನೀಡಿದ್ದರ ಜೊತೆಗೆ ಡ್ರೆಸ್ಸಿಂಗ್ ರೂಮ್ ಮಾಹಿತಿ ಸೋರಿಕೆಯೂ ವಜಾಗೊಳಿಸಲು ಕಾರಣವಾಗಿದೆ. ಕೋಚ್ ಆದ ಬೆನ್ನಲ್ಲೇ ಅಂದಿನ ಸಹಾಯಕ ಸಿಬ್ಬಂದಿಯನ್ನು ಉಳಿಸಿಕೊಳ್ಳುವ ಸ್ವಾತಂತ್ರ್ಯವನ್ನು ಗಂಭೀರ್​ಗೆ ಬಿಸಿಸಿಐ ಸೂಚನೆ ನೀಡಿತ್ತು. ವಜಾಗೊಂಡ ಮೂವರು ಸಿಬ್ಬಂದಿಯನ್ನು ಗಂಭೀರ್ ಅವರ ಆಪ್ತರೆಂದು ಪರಿಗಣಿಸಲಾಗಿದೆ. ಈ ಬಗ್ಗೆ ದೈನಿಕ್ ಜಾಗರಣ್ ವರದಿ ವರದಿ ಮಾಡಿದೆ. ಟಿ ದಿಲೀಪ್, ಸೋಹಂ ದೇಸಾಯಿ ಇಬ್ಬರೂ ಕಳೆದ 3 ವರ್ಷಗಳಿಂದ ಭಾರತ ತಂಡದೊಂದಿಗೆ ಸೇವೆ ಸಲ್ಲಿಸಿದ್ದಾರೆ.

ವಜಾ ಮಾಡಿರುವ ಮೂವರ ಸ್ಥಾನಕ್ಕೆ ಶೀಘ್ರದಲ್ಲೇ ನೇಮಕಾತಿ ಮಾಡಬಹುದು. ಅಭಿಷೇಕ್ ನಾಯರ್ ಅವರನ್ನು ಗೌತಮ್ ಗಂಭೀರ್ ಅವರ ನೆಚ್ಚಿನ ಆಟಗಾರ ಎಂದು ಪರಿಗಣಿಸಲಾಗಿದೆ. ಇಬ್ಬರೂ ಕೋಲ್ಕತಾ ನೈಟ್ ರೈಡರ್ಸ್​​ನಲ್ಲಿ ಒಟ್ಟಿಗೆ ಸೇವೆ ಸಲ್ಲಿಸಿದ್ದಾರೆ. ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಟೀಮ್ ಇಂಡಿಯಾದ ಪ್ರದರ್ಶನವು ತುಂಬಾ ನಿರಾಶಾದಾಯಕವಾಗಿತ್ತು. 3-1 ರಿಂದ ಸೋಲು ಎದುರಿಸಬೇಕಾಯಿತು. ಸೋಲಿಗೆ ಬಿಸಿಸಿಐ ಯಾವುದೇ ಕ್ರಮ ಕೈಗೊಳ್ಳಲು ಮುಂದಾಗದಿದ್ದರೂ ಆ ಸರಣಿಯ ನಂತರ ಡ್ರೆಸ್ಸಿಂಗ್ ರೂಮ್ ವಿಷಯಗಳು ಒಂದರ ನಂತರ ಒಂದರಂತೆ ಸೋರಿಕೆಯಾಗಿದ್ದು ಮಂಡಳಿ ಕೋಪಕ್ಕೆ ಕಾರಣವಾಯಿತು.

ಆಟಗಾರರೂ ಭಾಗಿ

ಕೋಚ್​ಗಳು ಮಾತ್ರವಲ್ಲದೆ, ಆಟಗಾರರೂ ಸೋರಿಕೆಯ ಭಾಗವಾಗಿದ್ದರು ಎಂದು ವರದಿಗಳು ಹೇಳಿದ್ದವು. ಸುದ್ದಿ ಸೋರಿಕೆಗೆ ಸಂಬಂಧಿಸಿ ಕೋಚ್ ಗೌತಮ್ ಗಂಭೀರ್ ಅವರು ಸರ್ಫರಾಜ್ ಖಾನ್ ಅವರನ್ನು ದೂಷಿಸಿದ್ದರು ಎಂಬ ವರದಿಗಳಿದ್ದವು. ಆದಾಗ್ಯೂ, 'ಡ್ರೆಸ್ಸಿಂಗ್ ರೂಮ್​ನಲ್ಲಿ ಎಲ್ಲವೂ ಸರಿಯಾಗಿಲ್ಲ' ಎಂದು ಹೆಚ್ಚುತ್ತಿರುವ ಚರ್ಚೆಗಳ ಮಧ್ಯೆ, ಗೌತಮ್ ಗಂಭೀರ್ ಇದಕ್ಕೆ ಪ್ರತಿಕ್ರಿಯಿಸಿ ಇದೆಲ್ಲವೂ ಸತ್ಯಕ್ಕೆ ದೂರವಾದ ಸುದ್ದಿಗಳು ಎಂದು ಹೇಳುವ ಮೂಲಕ ವಿಷಯವನ್ನು ತಣ್ಣಗಾಗಿಸಲು ಪ್ರಯತ್ನಿಸಿದರು. ದಿಲೀಪ್ ಅವರ ಬದಲಿಗೆ ಸಹಾಯಕ ಕೋಚ್ ರಿಯಾನ್ ಟೆನ್ ಡೋಸ್ಚೇಟ್​ಗೆ ಫೀಲ್ಡಿಂಗ್ ಜವಾಬ್ದಾರಿ ನೀಡಲಾಗಿದೆ. ಸೋಹಂ ದೇಸಾಯಿ ಬದಲಿಗೆ ದಕ್ಷಿಣ ಆಫ್ರಿಕಾದ ಆಡ್ರಿಯನ್ ಲೆ ರೌಕ್ಸ್​ಗೆ ಫಿಟ್ನೆಸ್ ಜವಾಬ್ಧಾರಿ ನೀಡಲಾಗಿದೆ.

ಮುಂದಿನ ತಿಂಗಳೊಳಗೆ ನೇಮಕದ ಸಾಧ್ಯತೆ

ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯಗೊಳ್ಳಲು ಒಂದೂವರೆ ತಿಂಗಳ ಕಾಲ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿಗೆ ಎರಡು ತಿಂಗಳ ಕಾಲ ಸಮಯ ಇದೆ. ಅಷ್ಟರೊಳಗೆ ಜಾಹೀರಾತು ಮೂಲಕ ನೇಮಕದ ಸಂಬಂಧ ಅರ್ಜಿ ಆಹ್ವಾನ ಮಾಡಲಾಗುತ್ತದೆ. ಬಳಿಕ ಸಂದರ್ಶನ ಮತ್ತು ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಭಾರತದ ಕ್ರಿಕೆಟ್ ತಂಡದ ಮುಂದಿನ ಸರಣಿಯೊಳಗೆ ಮೂವರು ಕೋಚ್ ಸಿಬ್ಬಂದಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಲು ಬಿಸಿಸಿಐ ಸಜ್ಜಾಗಿದೆ ಎಂದು ವರದಿಯಾಗಿದೆ.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.