ಸ್ಟಂಪಿಂಗ್ ಕೈಬಿಟ್ಟು ಲಕ್ನೋ ಸೋಲಿಗೆ ಕಾರಣರಾದ್ರಾ ಅನ್ಲಕ್ಕಿ ರಿಷಭ್ ಪಂತ್; ಡೆಲ್ಲಿ ವಿರುದ್ಧ LSG ಸೋಲಿಗೆ ಪ್ರಮುಖ ಕಾರಣಗಳಿವು
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ಸೋಲುತ್ತೆ ಎಂದು ಯಾರೂ ಊಹಿಸಿರಲಿಲ್ಲ. ಆದರೆ ಪಂದ್ಯ ಅನಿರೀಕ್ಷಿತ ತಿರುವು ಪಡೆಯಿತು. ವಿಪ್ರಾಜ್ ನಿಗಮ್ ಮತ್ತು ಅಶುತೋಷ್ ಪಂದ್ಯದ ದಿಕ್ಕನ್ನೇ ಬದಲಿಸಿದರು. ಲಕ್ನೋ ತಂಡದ ಸೋಲಿಗೆ ಕೆಲವೊಂದು ತಪ್ಪುಗಳು ಎದ್ದು ಕಂಡವು.

ಐಪಿಎಲ್ ಪಂದ್ಯಾವಳಿಯು ದಿನದಿಂದ ದಿನಕ್ಕೆ ರೋಚಕವಾಗಿ ಸಾಗುತ್ತಿದೆ. ಸೋಮವಾರ (ಮಾ.24) ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 1 ವಿಕೆಟ್ ಅಂತರದ ರೋಮಾಂಚಕ ಜಯ ಸಾಧಿಸಿತು. ಒಂದು ಹಂತದಲ್ಲಿ ಡೆಲ್ಲಿಗೆ ಸೋಲು ಖಚಿತ ಎಂದೇ ಭಾವಿಸಲಾಗಿತ್ತು. ಆದರೆ, ವಿಪ್ರಾಜ್ ನಿಗಮ್ ಹಾಗೂ ಅಶುತೋಷ್ ಶರ್ಮಾ ಆಟವು ಪಂದ್ಯದ ಫಲಿತಾಂಶವನ್ನೇ ಬದಲಿಸಿತು. ಕಳೆದ ಆವೃತ್ತಿಯಲ್ಲಿ ಡೆಲ್ಲಿ ನಾಯಕನಾಗಿದ್ದ ರಿಷಭ್ ಪಂತ್ ಈ ಬಾರಿ ಎದುರಾಳಿ ತಂಡದ ನಾಯಕತ್ವ ವಹಿಸಿದ್ದರು. ಹೀಗಾಗಿ ಡೆಲ್ಲಿ ವಿರುದ್ಧ ಗೆಲ್ಲುವುದು ಅವರಿಗೆ ಪ್ರತಿಷ್ಠೆಯಾಗಿತ್ತು. ನಾಯಕನಾಗಿ, ಬ್ಯಾಟರ್ ಆಗಿ ಹಾಗೂ ಒಬ್ಬ ವಿಕೆಟ್ ಕೀಪರ್ ಆಗಿ ಪಂತ್ ಮಾಡಿದ ಕೆಲವು ತಪ್ಪುಗಳ ಎಲ್ಎಸ್ಜಿ ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿತು.
ಪಂದ್ಯದಲ್ಲಿ ಲಕ್ನೋ ನೀಡಿದ 210 ರನ್ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ತಂಡವು 19.3 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 211 ರನ್ ಗಳಿಸಿ ಗೆದ್ದು ಬೀಗಿತು. ಇಂಪ್ಯಾಕ್ಟ್ ಆಟಗಾರನಾಗಿ ಬಂದ ಅಶುತೋಷ್ ಶರ್ಮಾ 31 ಎಸೆತಗಳಲ್ಲಿ ಅಜೇಯ 66 ರನ್ ಸಿಡಿಸಿದ ತಂಡಕ್ಕೆ ಅತಿರೋಚಕ ಗೆಲುವು ತಂದುಕೊಟ್ಟರು. ವಿಪ್ರಾಜ್ ನಿಗಮ್ 15 ಎಸೆತಗಳಲ್ಲಿ 39 ರನ್ ಗಳಿಸಿದರು.
ಪಂದ್ಯ ತಿರುವು ಪಡೆದಿದ್ದು ಎಲ್ಲಿ? ಡೆಲ್ಲಿ ಸೋಲಿಗೆ ಕಾರಣಗಳೇನು?
- ಪಂದ್ಯಕ್ಕೆ ತಿರುವು ಕೊಟ್ಟಿದ್ದು ವಿಪ್ರಾಜ್ ಮತ್ತು ಅಶುತೋಷ್ ಶರ್ಮಾ ಅವರ ಬ್ಯಾಟಿಂಗ್. ಇದನ್ನು ಪಂದ್ಯದ ಬಳಿಕ ಪಂತ್ ಕೂಡಾ ಒಪ್ಪಿಕೊಂಡರು. ಸ್ಟಬ್ಸ್ ಔಟಾದ ನಂತರ ಡೆಲ್ಲಿ ಸೋಲು ಖಚಿತ ಎನ್ನಲಾಗಿತ್ತು. ಆದರೆ ಆಗ ಬಂದ ವಿಪಿನ್ ದೊಡ್ಡ ಹೊಡೆತಗಳಿಂದ ಗುರಿ ತಗ್ಗಿಸಿದರು. ಇದು ಅಶುತೋಷ್ ಆಟಕ್ಕೂ ನೆರವಾಯ್ತು.
- ಪಂದ್ಯದ ಕೊನೆಯ ಓವರ್ ಎಸೆಯಲು ಪಂತ್, ಸ್ಪಿನ್ನರ್ ಶಹಬಾಜ್ ಕೈಗೆ ಚೆಂಡು ನೀಡಿದರು. ಇಲ್ಲಿ ವೇಗಿಗೆ ಅವಕಾಶ ನೀಡಬೇಕಿತ್ತು ಎಂಬುದು ತಜ್ಞರ ಅಭಿಪ್ರಾಯ. ಕ್ರೀಸ್ನಲ್ಲಿ ಸ್ಫೋಟಕ ಬ್ಯಾಟರ್ ಇರುವಾಗ ಅನುಭವಿ ವೇಗದ ಬೌಲರ್ ಬೌಲಿಂಗ್ ಮಾಡಿದರೆ, ಪಂದ್ಯದ ಫಲಿತಾಂಶ ಬದಲಾವಣೆಯಾಗುವ ಸಾಧ್ಯತೆ ಇತ್ತು.
- ಶಹಬಾಜ್ ಆರಂಭ ಉತ್ತಮವಾಗಿತ್ತು. ಆದರ, ನಾಯಕ ಪಂತ್ ಸ್ಟಂಪಿಂಗ್ ಅವಕಾಶ ಮಿಸ್ ಮಾಡಿಕೊಂಡರು. ಮೊದಲ ಎಸೆತದಲ್ಲಿ, ಶಹಬಾಜ್ ಅಹ್ಮದ್ ಎಸೆತ ಎದುರಿದ ಮೋಹಿತ್ ಶರ್ಮಾ, ಪಾಪಿಂಗ್ ಕ್ರೀಸ್ನಿಂದ ಮುಂದೆ ಬಂದು ಬ್ಯಾಟ್ ಬೀಸಿದರು. ಆದರೆ ಚೆಂಡು ಕನೆಕ್ಟ್ ಆಗಲಿಲ್ಲ. ಆಗ ಸ್ಟಂಪಿಗ್ ಮಾಡುವ ದೊಡ್ಡ ಅವಕಾಶವಿತ್ತು. ರಿಷಭ್ ಪಂತ್ ಚೆಂಡನ್ನು ಸರಿಯಾಗಿ ಸಂಗ್ರಹಿಸುವಲ್ಲಿ ವಿಫಲರಾದರು. ಒಂದು ವೇಳೆ ಅದು ಸ್ಟಂಪಿಂಗ್ ಆಗಿದ್ದರೆ ಡೆಲ್ಲಿ ಆಲೌಟ್ ಆಗಿ ಲಕ್ನೋಗೆ ಗೆಲುವು ಒಲಿಯುತ್ತಿತ್ತು.
ಇದನ್ನೂ ಓದಿ | ಅಶುತೋಷ್ ಶರ್ಮಾ ಒಮ್ಮೆ ಖಿನ್ನತೆಗೆ ಒಳಗಾಗಿದ್ದರಂತೆ! ತನಗೆ ಸಿಕ್ಕ ಪಂದ್ಯಶ್ರೇಷ್ಠ ಅರ್ಪಿಸಿದ್ದು ಯಾರಿಗೆ?
4. ಕೊನೆಯ ಓವರ್ನ ಎರಡನೇ ಎಸೆತದಲ್ಲಿ (19.1) ರನೌಟ್ ಮಾಡುವ ಅವಕಾಶವೂ ಇತ್ತು. ಆಯುಶ್ ಬದೋನಿ ಚೆಂಡು ಸಂಗ್ರಹಿಸುವಲ್ಲಿ ವಿಫಲರಾದರು. ಇದು ಪಂತ್ ನಿರಾಶೆಗೂ ಕಾರಣವಾಯ್ತು. ನಂತರದ ಎಸೆತದಲ್ಲಿ ಅಶುತೋಷ್ ಸಿಕ್ಸರ್ ಬಾರಿಸಿ ತಂಡವನ್ನು ಗೆಲ್ಲಿಸಿದರು.
5. ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಒಂದು ಹಂತದಲ್ಲಿ ಕನಿಷ್ಠ 230 ರನ್ ಕಲೆಹಾಕುವ ಸುಳಿವು ನೀಡಿತ್ತು. 161 ರನ್ವರೆಗೂ ತಂಡ ಕಳೆದುಕೊಂಡಿದ್ದು 2 ವಿಕೆಟ್ ಮಾತ್ರ. ಆದರೆ ಪಂತ್ ಶೂನ್ಯಕ್ಕೆ ಔಟಾಗುವುದರೊಂದಿಗೆ ತಂಡದ ಮೊತ್ತವೂ ಕುಸಿಯಿತು. 27 ಕೋಟಿ ರೂ.ಗೆ ಲಕ್ನೋ ತಂಡ ಸೇರಿದ್ದ ಆಟಗಾರ 6 ಎಸೆತಗಳಲ್ಲಿ 0 ಸುತ್ತಿ ಔಟಾದರು. ಔಟಾದ ಬಳಿಕ ಮಾಲೀಕ ಸಂಜೀವ್ ಗೊಯೆಂಕಾ ಅವರಿಗೆ ಹೆದರುತ್ತಾ ಡಗೌಟ್ ಪ್ರವೇಶಿಸಿದಂತೆ ಕಂಡಿತು.
