ಡೆವಾಲ್ಡ್ ಬ್ರೆವಿಸ್ ಅಬ್ಬರ, ಸಿಎಸ್​ಕೆಗೆ 3ನೇ ಜಯ; ಸೋತರೂ ಕೆಕೆಆರ್​ ಪ್ಲೇಆಫ್ ಆಸೆ ಇನ್ನೂ ಜೀವಂತ!
ಕನ್ನಡ ಸುದ್ದಿ  /  ಕ್ರಿಕೆಟ್  /  ಡೆವಾಲ್ಡ್ ಬ್ರೆವಿಸ್ ಅಬ್ಬರ, ಸಿಎಸ್​ಕೆಗೆ 3ನೇ ಜಯ; ಸೋತರೂ ಕೆಕೆಆರ್​ ಪ್ಲೇಆಫ್ ಆಸೆ ಇನ್ನೂ ಜೀವಂತ!

ಡೆವಾಲ್ಡ್ ಬ್ರೆವಿಸ್ ಅಬ್ಬರ, ಸಿಎಸ್​ಕೆಗೆ 3ನೇ ಜಯ; ಸೋತರೂ ಕೆಕೆಆರ್​ ಪ್ಲೇಆಫ್ ಆಸೆ ಇನ್ನೂ ಜೀವಂತ!

2025ರ ಇಂಡಿಯನ್ ಪ್ರೀಮಿಯರ್ ಲೀಗ್​ನ 57ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 2 ವಿಕೆಟ್​​ಗಳ ಭರ್ಜರಿ ಗೆಲುವು ಸಾಧಿಸಿತು.

ಡೆವಾಲ್ಡ್ ಬ್ರೆವಿಸ್ ಅಬ್ಬರ, ಸಿಎಸ್​ಕೆಗೆ 3ನೇ ಜಯ; ಸೋತರೂ ಕೆಕೆಆರ್​ ಪ್ಲೇಆಫ್ ಆಸೆ ಇನ್ನೂ ಜೀವಂತ!
ಡೆವಾಲ್ಡ್ ಬ್ರೆವಿಸ್ ಅಬ್ಬರ, ಸಿಎಸ್​ಕೆಗೆ 3ನೇ ಜಯ; ಸೋತರೂ ಕೆಕೆಆರ್​ ಪ್ಲೇಆಫ್ ಆಸೆ ಇನ್ನೂ ಜೀವಂತ! (PTI)

ಡೆವಾಲ್ಡ್ ಬ್ರೇವಿಸ್ (52) ಬೆಂಕಿ ಬಿರುಗಾಳಿ ಬ್ಯಾಟಿಂಗ್ ಬಲದಿಂದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್​​​ ಎರಡು ವಿಕೆಟ್​​ಗಳ ಗೆಲುವು ದಾಖಲಿಸಿತು. ಇದು ಟೂರ್ನಿಯಲ್ಲಿ ಸಿಕ್ಕ 3ನೇ ಗೆಲುವು. ಮತ್ತೊಂದೆಡೆ ಈಗಾಗಲೇ ದುರ್ಬಲವಾಗಿದ್ದ ಹಾಲಿ ಚಾಂಪಿಯನ್ ಕೆಕೆಆರ್​ ಪ್ಲೇಆಫ್ ಆಸೆಗೆ ಮಾರಕ ಹೊಡೆತ ನೀಡಿದೆ. ಹಾಗಂತ ಪ್ಲೇಆಫ್​ ರೇಸ್​​ನಿಂದ ಹೊರಬಿದ್ದಿಲ್ಲವಾದರೂ ಬಹುತೇಕ ಅಂತ್ಯ ಎನ್ನಬಹುದು.

ಎಂಎಸ್ ಧೋನಿ ನೇತೃತ್ವದ ಯೆಲ್ಲೋ ಆರ್ಮಿ, ಪ್ರಸಕ್ತ ಆವೃತ್ತಿಯಲ್ಲಿ ಆಡಿರುವ 12 ಪಂದ್ಯಗಳಲ್ಲಿ 9 ಸೋಲು, 3 ಗೆಲುವಿನೊಂದಿಗೆ 6 ಅಂಕಗಳೊಂದಿಗೆ ಕೊನೆಯ ಸ್ಥಾನ ಪಡೆದಿದೆ. ಮತ್ತೊಂದೆಡೆ, ಕೆಕೆಆರ್​ ಇಷ್ಟೇ ಪಂದ್ಯಗಳನ್ನಾಡಿದ್ದು, 5 ಜಯ, 6 ಸೋಲು ಮತ್ತು 1 ಪಂದ್ಯ ರದ್ದಾಗುವುದರೊಂದಿಗೆ 11 ಅಂಕ ಗಳಿಸಿದೆ. ಪಾಯಿಂಟ್ಸ್ ಟೇಬಲ್​ನಲ್ಲಿ 6ನೇ ಸ್ಥಾನ ಪಡೆದಿದೆ.

ಕೆಕೆಆರ್​ ಪ್ಲೇಆಫ್ ಲೆಕ್ಕಾಚಾರ ಏನು?

ಈ ಪಂದ್ಯದ ಸೋಲಿನೊಂದಿಗೆ ಕೆಕೆಆರ್​ ಪ್ಲೇಆಫ್​ ಅವಕಾಶಗಳು ಕುಸಿದವು. ಆದರೆ ಇನ್ನೂ ಅವಕಾಶ ಇದೆ. ಉಳಿದ ಎರಡೂ ಪಂದ್ಯಗಳಲ್ಲಿ ಜಯದ ನಗೆ ಬೀರಿದರೆ ಒಟ್ಟು 15 ಅಂಕ ಪಡೆಯಬಹುದು. ಆದರೆ ಪ್ಲೇಆಫ್ ರೇಸ್​​ನಲ್ಲಿರುವ ತಂಡಗಳು ಫಲಿತಾಂಶ ಕೆಕೆಆರ್​​ ಪ್ಲೇಆಫ್ ಭವಿಷ್ಯವನ್ನು ನಿರ್ಧರಿಸಲಿದೆ. ಆರ್​​ಸಿಬಿ ಮತ್ತು ಜಿಟಿ ತಂಡಗಳು ಈಗಾಗಲೇ 16 ಅಂಕ ಪಡೆದಿದ್ದು, ಉಳಿದ ತಂಡಗಳೊಂದಿಗೆ ಸ್ಪರ್ಧಿಸಬೇಕಾಗಿದೆ.

ಈಗಾಗಲೇ 15 ಅಂಕ ಪಡೆದಿರುವ ಪಂಜಾಬ್ ಉಳಿದ ಪಂದ್ಯಗಳಲ್ಲಿ ಸೋಲಬೇಕಿದೆ. ಮತ್ತೊಂದೆಡೆ ಮುಂಬೈ 14 ಅಂಕ, ಡೆಲ್ಲಿ 13 ಅಂಕ ಮತ್ತು ಲಕ್ನೋ 10 ಅಂಕ ಪಡೆದಿದ್ದು, ಪ್ಲೇಆಫ್​​ ಪ್ರವೇಶಿಸಲು ಸ್ಪರ್ಧೆಯಲ್ಲಿವೆ. ಆದರೆ ಹೀಗಿರುವಾಗ ಕೆಕೆಆರ್​ ಉಳಿದ ಎರಡಲ್ಲಿ ಗೆಲ್ಲುವುದರ ಜೊತೆಗೆ ನೆಟ್​ರನ್​ರೇಟ್ ಅನ್ನೂ ಹೆಚ್ಚಿಸಿಕೊಳ್ಳಬೇಕು. ಯಾವ ತಂಡವೂ 15 ಅಂಕ ಮೀರದಿದ್ದರೆ ಕೆಕೆಆರ್​​ ಪ್ಲೇಆಫ್ ಜೀವಂತವಾಗಿರಲಿದೆ.

ಸಿಎಸ್​ಕೆಗೆ ಗೆಲುವು

ಕೋಲ್ಕತ್ತಾದ ಈಡನ್ ಗಾರ್ಡನ್ಸ್​ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್​, ನಿಗದಿತ 20 ಓವರ್​​​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತು. ನೂರ್ ಅಹ್ಮದ್​ ಪ್ರಮುಖ 4 ವಿಕೆಟ್ ಉರುಳಿಸಿ ಕೆಕೆಆರ್​ ತಂಡದ ರನ್ ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಈ ಗುರಿ ಬೆನ್ನಟ್ಟಿದ ಸಿಎಸ್​ಕೆ ಕೊನೆಯ ಓವರ್​​ನಲ್ಲಿ ಜಯದ ನಗೆ ಬೀರಿತು. 19.4 ಓವರ್​​ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಗೆದ್ದು ಬೀಗಿತು. ಡೆವಾಲ್ಡ್ ಬ್ರೇವಿಸ್​ ಸ್ಫೋಟಕದ ಆಟವೇ ಇದಕ್ಕೆ ಕಾರಣ.

ಬ್ರೆವಿಸ್ ಒಂದೇ ಓವರ್​​ನಲ್ಲಿ 30 ರನ್, ನೂರ್ 4 ವಿಕೆಟ್

ಚೇಸಿಂಗ್ ಮಾಡುವ ಅವಧಿಯಲ್ಲಿ ಸಿಎಸ್​ಕೆ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಪವರ್​​ಪ್ಲೇ ಒಳಗೆ 5 ವಿಕೆಟ್ ಕಳೆದುಕೊಂಡಿತ್ತು. ಆಗ ಕ್ರೀಸ್​ಗೆ ಬಂದ ಡೆವಾಲ್ಡ್ ಬ್ರೆವಿಸ್ ಆರಂಭದಲ್ಲಿ ನಿಧಾನವಾಗಿ ಬ್ಯಾಟ್ ಬೀಸಿದರೂ ಬಳಿಕ ಸಿಡಿದೆದ್ದರು. ಅದರಲ್ಲೂ 11ನೇ ಓವರ್​ನಲ್ಲಿ ವೈಭವ್ ಆರೋರಾ ಬೌಲಿಂಗ್​ನಲ್ಲಿ 30 ರನ್ ಚಚ್ಚಿದ ಬ್ರೆವಿಸ್ ಪಂದ್ಯದ ಚಿತ್ರಣ ಬದಲಿಸಿದರು. 16 ಎಸೆತಗಳಲ್ಲಿ 20 ರನ್ ಗಳಿಸಿದ್ದ ಬ್ರೆವಿಸ್, 11ನೇ ಓವರ್​​ನಲ್ಲಿ 30 ರನ್ ಗಳಿಸುವ ಮೂಲಕ 22 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅರ್ಧಶತಕ ಬೆನ್ನಲ್ಲೇ ಔಟಾದರು. 25 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್ ಸಹಿತ 52 ರನ್ ಗಳಿಸಿ ಔಟಾದರು.

ಕೆಕೆಆರ್​ ಬ್ಯಾಟಿಂಗ್ ನಡೆಸುವ ಅವಧಿಯಲ್ಲಿ ನೂರ್​ ಅಹ್ಮದ್ ಮಾರಕ ಸ್ಪಿನ್ ದಾಳಿ ನಡೆಸಿದರು. 4 ಓವರ್​​ಗಳಲ್ಲಿ 31 ರನ್ ಬಿಟ್ಟುಕೊಟ್ಟು 4 ವಿಕೆಟ್ ಉರುಳಿಸಿದರು. ಪರಿಣಾಮ ಕೆಕೆಆರ್ ತಂಡದ ಸ್ಕೋರ್​ ಹಠಾತ್ ಕುಸಿಯಿತು. ಅವರ ಅದ್ಭುತ ಪ್ರದರ್ಶನಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಒಳಗಾದರು.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.