Shubman Gill: ಮೆಲ್ಬೋರ್ನ್ ಟೆಸ್ಟ್ ಪಂದ್ಯಕ್ಕೆ ಶುಭ್ಮನ್ ಗಿಲ್ ಕೈಬಿಟ್ಟಿದ್ದೇಕೆ?; ಇಲ್ಲಿದೆ ಅಸಲಿ ಕಾರಣ
ಕನ್ನಡ ಸುದ್ದಿ  /  ಕ್ರಿಕೆಟ್  /  Shubman Gill: ಮೆಲ್ಬೋರ್ನ್ ಟೆಸ್ಟ್ ಪಂದ್ಯಕ್ಕೆ ಶುಭ್ಮನ್ ಗಿಲ್ ಕೈಬಿಟ್ಟಿದ್ದೇಕೆ?; ಇಲ್ಲಿದೆ ಅಸಲಿ ಕಾರಣ

Shubman Gill: ಮೆಲ್ಬೋರ್ನ್ ಟೆಸ್ಟ್ ಪಂದ್ಯಕ್ಕೆ ಶುಭ್ಮನ್ ಗಿಲ್ ಕೈಬಿಟ್ಟಿದ್ದೇಕೆ?; ಇಲ್ಲಿದೆ ಅಸಲಿ ಕಾರಣ

Shubman Gill: ಸ್ಟಾರ್ ಬ್ಯಾಟರ್​ ಶುಭ್ಮನ್ ಗಿಲ್ ಅವರನ್ನು ಪ್ಲೇಯಿಂಗ್ 11ನಿಂದ ಕೈಬಿಡಲು ಕಾರಣ ಏನೆಂಬುದನ್ನು ಭಾರತ ತಂಡದ ಸಹಾಯಕ ಕೋಚ್ ಅಭಿಷೇಕ್ ನಾಯರ್ ಅವರು ಬಹಿರಂಗಪಡಿಸಿದ್ದಾರೆ.

Shubman Gill: ಮೆಲ್ಬೋರ್ನ್ ಟೆಸ್ಟ್ ಪಂದ್ಯಕ್ಕೆ ಶುಭ್ಮನ್ ಗಿಲ್ ಕೈಬಿಟ್ಟಿದ್ದೇಕೆ; ಕಾರಣ ಬಹಿರಂಗ
Shubman Gill: ಮೆಲ್ಬೋರ್ನ್ ಟೆಸ್ಟ್ ಪಂದ್ಯಕ್ಕೆ ಶುಭ್ಮನ್ ಗಿಲ್ ಕೈಬಿಟ್ಟಿದ್ದೇಕೆ; ಕಾರಣ ಬಹಿರಂಗ (AAP Image via REUTERS)

ಗಾಯದ ಕಾರಣ ಪರ್ತ್​​ ಟೆಸ್ಟ್​​ಗೆ ಅಲಭ್ಯರಾಗಿದ್ದರೂ ಚೇತರಿಕೆಯ ನಂತರ ಅಡಿಲೇಡ್​, ಬ್ರಿಸ್ಬೇನ್​ ಟೆಸ್ಟ್​ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಟೀಮ್ ಇಂಡಿಯಾ ಬ್ಯಾಟರ್ ಶುಭ್ಮನ್ ಗಿಲ್ ಅವರು ನಾಲ್ಕನೇ​ ಪಂದ್ಯಕ್ಕೆ ಅವಕಾಶ ವಂಚಿತರಾಗಲು ಕಾರಣ ಏನೆಂಬುದು ಇದೀಗ ಬಹಿರಂಗಗೊಂಡಿದೆ. ಗಿಲ್ ಕೈಬಿಟ್ಟಿದ್ದೇಕೆ ಎಂದು ಭಾರತದ ಸಹಾಯಕ ಕೋಚ್ ಅಭಿಷೇಕ್ ನಾಯರ್ ತಿಳಿಸಿದ್ದಾರೆ. ‘ಪಿಚ್​​ ಪರಿಸ್ಥಿತಿಗಳಿಗೆ ಅನುಗುಣವಾಗಿ ಪ್ಲೇಯಿಂಗ್​ 11 ನಲ್ಲಿ ಬದಲಾವಣೆ ಮಾಡಲಾಗಿದೆ. ಈ ಪಿಚ್ ಸ್ಪಿನ್ನರ್​​ಗಳಿಗೆ ನೆರವಾಗುವ ದೃಷ್ಟಿಯಿಂದ ರವೀಂದ್ರ ಜಡೇಜಾ ಅವರೊಂದಿಗೆ ವಾಷಿಂಗ್ಟನ್ ಸುಂದರ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿ ಶುಭ್ಮನ್ ಗಿಲ್ ಅವರನ್ನು ಕೈಬಿಡಲಾಯಿತು’ ಎಂದಿದ್ದಾರೆ.

ಬಾರ್ಡರ್ ಗವಾಸ್ಕರ್ ಟ್ರೋಫಿಯ ಆರಂಭಿಕ ಪಂದ್ಯಕ್ಕೂ ಮುನ್ನ ಗಿಲ್ ಗಾಯಗೊಂಡಿದ್ದರು. ಹೀಗಾಗಿ ಪರ್ತ್​ ಟೆಸ್ಟ್​ಗೆ ಗಿಲ್ ಅಲಭ್ಯರಾಗಿದ್ದರು. ಬಳಿಕ 2ನೇ ಟೆಸ್ಟ್​ಗೂ ಮುನ್ನವೇ ಚೇತರಿಸಿಕೊಂಡರು. ಅಡಿಲೇಡ್​ ಮತ್ತು ಬ್ರಿಸ್ಬೇನ್​ ಟೆಸ್ಟ್​ಗಳಲ್ಲಿ ಕಣಕ್ಕಿಳಿದಿದ್ದ ಪಂಜಾಬ್ ಪುತ್ತರ್​, ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾದರು. 2 ಪಂದ್ಯಗಳ ಮೂರು ಇನ್ನಿಂಗ್ಸ್​​ಗಳಲ್ಲಿ ಗಿಲ್ ಸಿಡಿಸಿದ್ದು ಕೇವಲ 60 ರನ್. ಮೆಲ್ಬೋರ್ನ್​ ಟೆಸ್ಟ್​ಗೆ ಅವಕಾಶ ಪಡೆದು ಮಿಂಚುವ ಭರವಸೆಯಲ್ಲಿದ್ದ ಗಿಲ್​ಗೆ ಇದೀಗ ನಿರಾಸೆಯಾಗಿದೆ. ಪ್ಲೇಯಿಂಗ್​ 11ನಲ್ಲಿ ಅವಕಾಶ ವಿಫಲವಾದ ಗಿಲ್, ಅಂತಿಮ ಹಾಗೂ ಐದನೇ ಟೆಸ್ಟ್​​ಗೂ ಬೆಂಚ್ ಕಾಯುವ ನಿರೀಕ್ಷೆ ಇದೆ ಎಂದು ವರದಿಯಾಗಿದೆ. ಆದರೆ ನಾಲ್ಕನೇ ಟೆಸ್ಟ್​ಗೆ ಅವರನ್ನು ಕೈಬಿಟ್ಟಿದ್ದರ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದ್ದಿವೆ.

ಅನಿರೀಕ್ಷಿತ ನಿರ್ಧಾರ ಎಂದ ನಾಯರ್​

ಶುಭ್ಮನ್ ಗಿಲ್ ಅವರನ್ನು ಆಡುವ 11ರ ಬಳಗದಿಂದ ಕೈ ಬಿಟ್ಟಿರುವ ಕುರಿತು ಕ್ರಿಕೆಟ್ ವಲಯದಲ್ಲಿ ಎದ್ದಿರುವ ಗೊಂದಲಗಳಿಗೆ ಸಹಾಯಕ ಕೋಚ್ ಅಭಿಷೇಕ್ ನಾಯರ್ ಉತ್ತರಿಸಿದ್ದು, ಪಿಚ್​ ಪರಿಸ್ಥಿತಿಗಳಿಂದ ತಂಡದಲ್ಲಿ ಬದಲಾವಣೆ ಸಾಧ್ಯವಾಯಿತು ಎಂದು ಹೇಳಿಕೆ ನೀಡಿದ್ದಾರೆ. ‘ಇದೊಂದು ಅನಿರೀಕ್ಷಿತ ನಿರ್ಧಾರ. ಆದರೆ ಗಿಲ್ ಅವರನ್ನು ಬೆಂಚ್​ಗೆ ಕೂರಿಸಲು ತೆಗೆದುಕೊಂಡ ನಿರ್ಧಾರ ತುಂಬಾ ಕಷ್ಟಕರವಾಯಿತು. ಆದರೆ ಪಿಚ್ ಪ್ರಕ್ರಿಯೆ, ಪಾರದರ್ಶಕತೆ, ಬೌಲಿಂಗ್ ದಾಳಿಯನ್ನು ಗಮನಿಸಿದಾಗ ವಾಷಿಂಗ್ಟನ್ ಸುಂದರ್​ ಬೇಕು ಎಂದು ನಮಗೆ ಅನಿಸಿತು. ಫಾರ್ಮ್​ನಲ್ಲಿರುವ ಟ್ರಾವಿಸ್ ಹೆಡ್ ಸೇರಿ ಪ್ರಮುಖ ಆಟಗಾರರ ಬ್ಯಾಟಿಂಗ್​ ಲೈನಪ್​ಗೆ ಸರಿಯಾದ ಬೌಲಿಂಗ್ ಅಟ್ಯಾಕ್ ನಿರ್ಮಿಸಬೇಕು ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡೆವು’ ಎಂದು ಹೇಳಿದ್ದಾರೆ.

ಕೆಟ್ಟ ಪ್ರದರ್ಶನಕ್ಕೆ ಕೈಬಿಡಲಾಯಿತೇ?

‘ಟ್ರಾವಿಸ್ ಹೆಡ್ ಮತ್ತು ಅಲೆಕ್ಸ್ ಕ್ಯಾರಿ ರನ್ ಗಳಿಸುತ್ತಿರುವ ರೀತಿ ನೋಡಿದರೆ, ಸುಂದರ್​ ನಮಗೆ ಜಡ್ಡು ಜೊತೆ ಒಗ್ಗಟ್ಟು ಪ್ರದರ್ಶಿಸಬಹುದು ಎಂದು ನಾವು ಭಾವಿಸಿದೆವು. ಹೀಗಾಗಿ ಅವರ ಆಯ್ಕೆ ಅಂತಿಮವಾಯಿತು. ಹಾಗಂತ ಗಿಲ್​ ಕೈಬಿಟ್ಟಿದ್ದೇವೆ ಎಂದು ಹೇಳಲು ಸಾಧ್ಯವಿಲ್ಲ’ ಎಂದು ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ನಾಯರ್ ಹೇಳಿದ್ದಾರೆ. ಪಿಂಕ್​ ಬಾಲ್​ ಟೆಸ್ಟ್​ನ ಎರಡೂ ಇನ್ನಿಂಗ್ಸ್​ಗಳಲ್ಲಿ ಕ್ರಮವಾಗಿ 28 ಮತ್ತು 31 ರನ್ ಗಳಿಸಿದ್ದ ಗಿಲ್, ಬ್ರಿಸ್ಟೇನ್​ನಲ್ಲಿ ಕಣಕ್ಕಿಳಿದ ಏಕೈಕ ಇನ್ನಿಂಗ್ಸ್​​ನಲ್ಲಿ 1 ರನ್ ಮಾತ್ರ ಕಲೆ ಹಾಕಿದ್ದರು. ಕೆಟ್ಟ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಗಿಲ್​ ಅವರು ಪ್ಲೇಯಿಂಗ್ 11 ನಿಂದ ಹೊರಗಿಡಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸುತ್ತಿವೆ. 2020ರ ಬಾರ್ಡರ್​ ಗವಾಸ್ಕರ್​ ಸರಣಿಯಲ್ಲಿ ಇದೇ ಪಿಚ್​​ಗಳಲ್ಲಿ ಗಿಲ್ ಅದ್ಭುತ ಪ್ರದರ್ಶನ ನೀಡಿದ್ದರು.

ಪ್ರಸ್ತುತ ನಡೆಯುತ್ತಿರುವ ಮೆಲ್ಬೋರ್ನ್​ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಕೆಎಲ್ ರಾಹುಲ್ ಆರಂಭಿಕ ಸ್ಥಾನದಿಂದ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ. ಉಳಿದಂತೆ ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್ ಕ್ರಮವಾಗಿ 4 ಮತ್ತು 5ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಬಹುದು. ಇವರಲ್ಲದೆ, ಸುಂದರ್, ಜಡೇಜಾ ಮತ್ತು ನಿತೀಶ್ ರೆಡ್ಡಿ ಬ್ಯಾಟ್ ಮಾಡಲಿದ್ದಾರೆ.

Whats_app_banner