ಮಗನಿಗಾಗಿ ವಾಯುಪಡೆಯ ಕೆಲಸವನ್ನೇ ತೊರೆದ ತಂದೆ; ಗ್ರೆಗ್ ಚಾಪೆಲ್ ಕಣ್ಣಿಗೆ ಬಿದ್ದು ಕ್ರಿಕೆಟರ್ ಆದವನ ಕಥೆ ಇದು!
ಮಗನ ಭವಿಷ್ಯ ರೂಪಿಸಲು ವಾಯುಪಡೆಯಲ್ಲಿ ತಂದೆ ಕೆಲಸವನ್ನೇ ತೊರೆದರು. ಮಗ ಭಾರತ ತಂಡಕ್ಕೆ ಆಯ್ಕೆಯಾಗಿ ಉಡುಗೊರೆ ನೀಡಿದರು. ಇದು ಕೇವಲ ಕ್ರಿಕೆಟ್ ಮೇಲಿರುವ ಪ್ರೀತಿ ಮಾತ್ರವಲ್ಲ, ತಂದೆ-ಮಗನ ಪ್ರೀತಿಗೂ ಸಾಕ್ಷಿಯಾಗಿದೆ.

ಟೀಮ್ ಇಂಡಿಯಾ ವೇಗದ ಬೌಲಿಂಗ್ ಆಲ್ರೌಂಡರ್ ದೀಪಕ್ ಚಹರ್ ಪ್ರಸ್ತುತ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದಾರೆ. 2018 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಡೆಬ್ಯೂ ಮಾಡಿದ ದೀಪಕ್ ಚಹರ್, ಕೊನೆಯದಾಗಿ ಆಡಿದ್ದು 2023ರಲ್ಲಿ. ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಬಲಗೈ ಬೌಲರ್ ಜೀವನದ ಕಥೆ ಅದೆಷ್ಟೋ ಯುವಕರಿಗೆ ಸ್ಫೂರ್ತಿಯಾಗಲಿದೆ. ಇದು ಕೇವಲ ಕ್ರಿಕೆಟ್ ಮೇಲಿರುವ ಪ್ರೀತಿ ಮಾತ್ರವಲ್ಲ, ತಂದೆ-ಮಗನ ಪ್ರೀತಿಗೂ ಸಾಕ್ಷಿಯಾಗಿದೆ.
ದೀಪಕ್ ಚಹರ್ ಜನಿಸಿದ್ದು 1992ರ ಆಗಸ್ಟ್ 7ರಂದು. ಆಗ್ರಾದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ಬಲಗೈ ಬೌಲರ್ ತಂದೆ ಭಾರತೀಯ ವಾಯುಪಡೆಯಲ್ಲಿ ಸೈನಿಕರಾಗಿದ್ದರು. ಆರಂಭದಲ್ಲಿ ಪುತ್ರನ ಓದಿನ ಕಡೆಗೆ ಹೆಚ್ಚು ಗಮನ ಹರಿಸಿದ್ದರೆ, ದೀಪಕ್ ಮಾತ್ರ ಕ್ರಿಕೆಟ್ ಕಡೆಗೆ ಹೆಚ್ಚು ಒಲವು ತೋರಿದ್ದರು. ಆದರೆ ತಂದೆ ಮೇಲಿದ್ದ ಭಯದಿಂದ ತನಗೆ ಕ್ರಿಕೆಟ್ ಮೇಲಿರುವ ಪ್ರೀತಿಯನ್ನು ಎಂದಿಗೂ ವ್ಯಕ್ತಪಡಿಸಿರಲಿಲ್ಲ. ಚಹರ್ಗೆ ಓದು ಅಷ್ಟಾಗಿ ತಲೆಗೆ ಹತ್ತುತ್ತಿರಲಿಲ್ಲ.
ಮಗನಿಗಾಗಿ ಕೆಲಸ ತೊರೆದ ತಂದೆ
ತಂದೆ ಲೋಕೆಂದರ್ ಸಿಂಗ್ ಅವರಿಗೂ ಗೊತ್ತಾಗಿತ್ತು. ಹಾಗಾಗಿ ಚಹರ್ನನ್ನು ಓದುವಂತೆ ತಂದೆ ಗದರುತ್ತಿದ್ದರು. ಹೀಗಿದ್ದಾಗ ಮಗ ಕ್ರಿಕೆಟ್ ಆಡುವುದರ ಬಗ್ಗೆ ತಂದೆಗೆ ಗೊತ್ತಾಯಿತು. ಓದಿಗಿಂತ ಆಟದ ಮೇಲೆ ಹೆಚ್ಚು ಒಲವಿರುವುದು ಗೊತ್ತಾಯಿತು. ಹೀಗಾಗಿ, ನೆರೆಹೊರೆಯವರ ಸಲಹೆಯೂ ಪಡೆದರು. ದೀಪಕ್ ಚಹರ್ ಆಟದಲ್ಲಿ ಅತ್ಯುತ್ತಮ ಬೌಲರ್ ಕಂಡ ಲೋಕೇಂದರ್ ಸಿಂಗ್ ಅವರು ಜೈಪುರದ ಕ್ರಿಕೆಟ್ ಅಕಾಡೆಮಿಗೆ ಸೇರಿಸಿದರು. ತಂದೆಗೂ ರಾಜಸ್ಥಾನಕ್ಕೆ ಪೋಸ್ಟಿಂಗ್ ಹಾಕಲಾಗಿತ್ತು. ಬಳಿಕ ಮಗನಿಗೆ ಅವರೇ ಕೋಚ್ ಆದರು.
ಚಹರ್ ಅತ್ಯುತ್ತಮ ಪ್ರದರ್ಶನ ನೀಡುವುದನ್ನು ಅರಿತ ತಂದೆಯು, ಮಗನಿಗೆ ಹೆಚ್ಚಿನ ಅಭ್ಯಾಸ ಅಗತ್ಯ ಇದೆ ಎನ್ನುವ ಕಾರಣಕ್ಕೆ ತಾನೇ ಕೆಲಸ ತೊರೆದು ಮಗನ ಭವಿಷ್ಯಕ್ಕೆ ನೀರೆರೆದರು. ಹೌದು, ಚಹರ್ಗಾಗಿ ಲೋಕೇಂದರ್ ಅವರು ಕೆಲಸವನ್ನೇ ತೊರೆದರು. ಆ ಮೂಲಕ ಮಗನಿಗಾಗಿ ತನ್ನ ಮಹತ್ವದ ಹುದ್ದೆಯನ್ನೇ ತ್ಯಾಗ ಮಾಡಿದರು. ದಿನಂಪ್ರತಿ 500 ಎಸೆತಗಳನ್ನು ಎಸೆಯುತ್ತಿದ್ದ ಲೋಕೇಂದರ್ ಅವರು ಮಗನ ಉತ್ತಮ ಅಭ್ಯಾಸ ನೀಡುತ್ತಿದ್ದರು. ಅದರಲ್ಲಿ 250 ಇನ್ಸ್ವಿಂಗ್ ಮತ್ತು 250 ಔಟ್ ಸ್ವಿಂಗ್ ಎಸೆತಗಳನ್ನೇ ಹಾಕಿಸುತ್ತಿದ್ದರು.
ದಿನಗಳು ಉರುಳುತ್ತಿದ್ದಂತೆ ಚಹರ್ ವೇಗದಲ್ಲಿ ಸುಧಾರಣೆ ಕಂಡಿತು. ರಾತ್ರಿ ಹಗಲು ಅಭ್ಯಾಸ ಮಾಡಲು ಆರಂಭಿಸಿದರು. ಈ ಎಲ್ಲದರ ಫಲವಾಗಿ ದೀಪಕ್ 2008ರ ರಣಜಿ ಟ್ರಯಲ್ಸ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಅಂದು ರಾಜಸ್ಥಾನ ಕ್ರಿಕೆಟ್ ಅಸೋಸಿಯೇಷನ್ನ ನಿರ್ದೇಶಕ ಗ್ರೆಗ್ ಚಾಪೆಲ್ ಆಗಿದ್ದರು. ದೀಪಕ್ ಬೌಲಿಂಗ್ಗೆ ಬೆರಗಾಗಿದ್ದ ಚಾಪೆಲ್ ನಿಮ್ಮ ಮಗ ಭಾರತಕ್ಕೆ ಆಡಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರಂತೆ. ಆಗ ಚಹರ್ ಕಠಿಣ ಅಭ್ಯಾಸದಲ್ಲಿ ತೊಡಗಿದ್ದರು.
2010ರಲ್ಲಿ ರಣಜಿಗೆ ಪದಾರ್ಪಣೆ
ದೀಪಕ್ ಪರಿಶ್ರಮ ವ್ಯರ್ಥವಾಗಲಿಲ್ಲ. ಚಾಪೆಲ್ ಹೇಳಿದ ಎರಡು ವರ್ಷಗಳ ನಂತರ ಚಹರ್ 2010ರ ಫೆಬ್ರವರಿಯಲ್ಲಿ ಪ್ರಥಮ ದರ್ಜೆ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು. ಇಲ್ಲಿ ದೀಪಕ್ ಚಹರ್ ಬೌಲಿಂಗ್ ಮಾಡಿದ 7 ಓವರ್ಗಳಲ್ಲಿ 8 ವಿಕೆಟ್ ಉರುಳಿಸಿ ಗಮನ ಸೆಳೆದರು. ಆ ಮೂಲಕ ತಮ್ಮ ಬೌಲಿಂಗ್ ಸಾಮರ್ಥ್ಯವನ್ನು ಜಗತ್ತಿನ ಮುಂದೆ ತೆರೆದಿಟ್ಟರು. ದೇಶೀಯ ಕ್ರಿಕೆಟ್ನಲ್ಲಿ ಮಿಂಚಿದರೂ ಭಾರತ ತಂಡಕ್ಕೆ ಆಯ್ಕೆಯಾಗಲು ಅವರ ಮುಂದಿದ್ದ ಹಾದಿ ಸುಲಭದ್ದಾಗಿರಲಿಲ್ಲ.
ಪದೆಪದೇ ಗಾಯಗೊಳ್ಳುತ್ತಿದ್ದ ಚಹಲ್, ಮೂರು ವರ್ಷಗಳ ಕಾಲ ದೇಶೀಯ ಕ್ರಿಕೆಟ್ನಲ್ಲಿ ಆಡಲು ಸಾಧ್ಯವಾಗಿರಲಿಲ್ಲ. ಬಳಿಕ 2011ರಲ್ಲಿ ಆರ್ಸಿಬಿಗೆ ಚಹರ್ ನೆಟ್ ಬೌಲರ್ ಆಗಿ ಸೇರಿಕೊಂಡರು. ಪ್ರತಿಭೆಯ ಹೊರತಾಗಿಯೂ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಿಲ್ಲ. ಹೀಗಿದ್ದರೂ ಅವರು ಎದೆಗುಂದಲಿಲ್ಲ. ನಿರಂತರ ಶ್ರಮಿಸಿದರು. ಪರಿಣಾಮ 2016ರಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಭಾಗವಾದರು. ಆದರೆ 2 ವರ್ಷಗಳೂ ಬೆಂಚ್ಗೆ ಸೀಮಿತರಾದರು. ಅಲ್ಲಿ ಎಂಎಸ್ ಧೋನಿ ಕಣ್ಣಿಗೆ ಬಿದ್ದಿದ್ದ ಚಹರ್, ಸಿಎಸ್ಕೆ ಸೇರಿದಾಗ ಆಡುವ ಅವಕಾಶ ದೊರೆಯಿತು. ಅದರ ನಂತರ ಚಹರ್ ಹಿಂತಿರುಗಿ ನೋಡಲಿಲ್ಲ.
2018ರಲ್ಲಿ ಭಾರತ ತಂಡಕ್ಕೆ ಸೇರ್ಪಡೆ
ಐಪಿಎಲ್ನಲ್ಲಿ ಮಿಂಚಿದ ಹಿನ್ನೆಲೆ ಭಾರತ ತಂಡದಲ್ಲಿ ಆಡುವ ಸುವರ್ಣಾವಕಾಶ ಪಡೆದರು. 2018ರಲ್ಲಿ ಇಂಗ್ಲೆಂಡ್ ವಿರುದ್ಧ ಚೊಚ್ಚಲ ಟಿ20 ಆಡುವ ಮೂಲಕ ತನ್ನ ಬಹುಕಾಲದ ಕನಸನ್ನು ಈಡೇರಿಸಿಕೊಂಡರು. ಆದರೆ ಅವರಿಗೆ ನಿರಂತರ ಅವಕಾಶಗಳು ಸಿಗಲಿಲ್ಲ. ಅಸ್ಥಿರ ಪ್ರದರ್ಶನದ ಜೊತೆಗೆ ಪದೆಪದೇ ಇಂಜುರಿಯಿಂದಲೂ ತಂಡದಿಂದಲೇ ದೂರ ಉಳಿದರು. 7 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ನ ವೃತ್ತಿಜೀವನದಲ್ಲಿ ಈವರೆಗೂ 13 ಏಕದಿನ ಪಂದ್ಯ, 25 ಟಿ20ಗಳನ್ನಷ್ಟೇ ಆಡಿದ್ದಾರೆ. ಕ್ರಮವಾಗಿ 16, 31 ವಿಕೆಟ್ ಪಡೆದಿದ್ದಾರೆ. ಐಪಿಎಲ್ನಲ್ಲಿ 89 ಪಂದ್ಯಗಳನ್ನಾಡಿದ್ದು 83 ವಿಕೆಟ್ ಉರುಳಿಸಿದ್ದಾರೆ.
ತಂದೆಗಾಗಿ ಕ್ರಿಕೆಟ್ ತ್ಯಜಿಸಿದ ಚಹರ್
2023ರ ಅಂತ್ಯದಲ್ಲಿ ಲೋಕೆಂದರ್ ಸಿಂಗ್ ಬ್ರೈನ್ಸ್ಟೋಕ್ಗೆ ಗುರಿಯಾಗಿದ್ದರು. ಅಂದು ಆಸ್ಟ್ರೇಲಿಯಾ ವಿರುದ್ಧ ಐದು ಪಂದ್ಯಗಳ ಟಿ20 ಸರಣಿ ಆಡುತ್ತಿದ್ದಾಗ, ಸರಣಿ ಮಧ್ಯದಲ್ಲೇ ಚಹರ್ ಭಾರತ ತಂಡವನ್ನು ತೊರೆದಿದ್ದರು. ತಂದೆಯ ಆರೋಗ್ಯದಲ್ಲಿ ಏರುಪೇರಾಗಿದ್ದ ಕಾರಣ ಅವರು ತಕ್ಷಣವೇ ತಂಡದಿಂದ ನಿರ್ಗಮಿಸಿದ್ದರು. ಆದರೆ ಯಾರಿಗೂ ಈ ವಿಷಯ ಗೊತ್ತಿರಲಿಲ್ಲ. ತಂದೆ ಚೇತರಿಸಿಕೊಂಡ ಕೆಲವು ತಿಂಗಳ ನಂತರ ಈ ಘಟನೆ ಬಗ್ಗೆ ವಿವರಣೆ ನೀಡಿದ್ದರು. ನನ್ನ ತಂದೆಗಿಂತ ಬೇರೆ ಏನು ಇಲ್ಲ ಎಂದು ದುಃಖಿಸಿದ್ದರು. ಅಂದು ಮಗನಿಗಾಗಿ ತಂದೆ ಕೆಲಸ ಬಿಟ್ಟರೆ, ಬಳಿಕ ತಂದೆಗಾಗಿ ಕ್ರಿಕೆಟ್ ಅನ್ನೇ ತ್ಯಜಿಸಲು ಚಹರ್ ನಿರ್ಧರಿಸಿದ್ದರು.