ಹೋರಾಟವೇ ತೋರದೆ ಶರಣಾದ ಹಾಲಿ ಚಾಂಪಿಯನ್; ಕೆಕೆಆರ್ ವಿರುದ್ಧ ಗುಜರಾತ್ಗೆ 39 ರನ್ನುಗಳ ಭರ್ಜರಿ ಗೆಲುವು
18ನೇ ಆವೃತ್ತಿಯ ಐಪಿಎಲ್ 39ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ 39 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆಯಿತು.

ಕಳಪೆ ಬ್ಯಾಟಿಂಗ್ ನಿರ್ವಹಣೆಯಿಂದ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತವರಿನ ಮೈದಾನದಲ್ಲಿ ಮತ್ತೊಂದು ಸೋಲಿಗೆ ಶರಣಾಯಿತು. ಸರ್ವಾಂಗೀಣ ಪ್ರದರ್ಶನ ತೋರಿದ ಗುಜರಾತ್ ಟೈಟಾನ್ಸ್ ಪ್ರಸಕ್ತ ಟೂರ್ನಿಯಲ್ಲಿ 6ನೇ ಗೆಲುವು ದಾಖಲಿಸಿತು. 39 ರನ್ಗಳಿಂದ ಜಯಿಸಿದ ಜಿಟಿ ಅಂಕಪಟ್ಟಿಯಲ್ಲಿ 12 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರೆದರೆ, ಹೋರಾಟವೇ ತೋರದೆ ಶರಣಾದ ಕೆಕೆಆರ್ 5ನೇ ಸೋಲಿನೊಂದಿಗೆ 7ನೇ ಸ್ಥಾನದಲ್ಲಿದೆ. ಪ್ಲೇಆಫ್ ದೃಷ್ಟಿಯಿಂದ ಉಳಿದ 6 ಪಂದ್ಯಗಳನ್ನೂ ಗೆಲ್ಲುವುದು ಅನಿವಾರ್ಯ.
ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಬೀಸಿದ ಗುಜರಾತ್ ತಂಡವು ಗಿಲ್ ಮತ್ತು ಸುದರ್ಶನ್ರ ಅರ್ಧಶತಕಗಳ ಬಲದಿಂದ 20 ಓವರ್ಗಳಿಗೆ 3 ವಿಕೆಟ್ ಕಳೆದುಕೊಂಡು 198 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಕೆಕೆಆರ್, ಕಳಪೆ ಬ್ಯಾಟಿಂಗ್ ನಿರ್ವಹಣೆಯಿಂದ 20 ಓವರ್ಗಳಿಗೆ 8 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು. ಜಿಟಿ ಬೌಲರ್ಗಳು ಉತ್ತಮ ಬೌಲಿಂಗ್ ಮಾಡಿದ್ದರ ಜೊತೆಗೆ ರನ್ ನಿಯಂತ್ರಿಸಿದರು.
ಬ್ಯಾಟಿಂಗ್ ಸ್ನೇಹಿ ಪಿಚ್ನಲ್ಲಿ ಸವಾಲಿನ ಗುರಿ ಬೆನ್ನಟ್ಟಿದ ಕೆಕೆಆರ್ ನಿರೀಕ್ಷಿತ ಆರಂಭ ಪಡೆಯಲಿಲ್ಲ. ರೆಹಮಾನುಲ್ಲಾ ಗುರ್ಬಾಜ್ ಮೊದಲ ಓವರ್ನಲ್ಲೇ ನಿರ್ಗಮಿಸಿದರು. ಮೊಹಮ್ಮದ್ ಸಿರಾಜ್ ಅವರು ಎಲ್ಬಿ ಬಲೆಗೆ ಬೀಳಿಸಿದರು. ಬಳಿಕ ಸುನಿಲ್ ನರೈನ್ 17 ರನ್ಗೆ ಸುಸ್ತಾದರು. ಆ ಬಳಿಕ ಕೆಕೆಆರ್ ಮತ್ತಷ್ಟು ನಿಧಾನವಾಯಿತು. ಕೈಯಲ್ಲಿ ವಿಕೆಟ್ಗಳಿದ್ದರೂ ವಿಕೆಟ್ ಕಾಪಾಡಲು ಅಜಿಂಕ್ಯ ರಹಾನೆ ಮತ್ತು ವೆಂಕಟೇಶ್ ಅಯ್ಯರ್ ಯತ್ನ ನಡೆಸಿದ್ದು ಅಚ್ಚರಿ ಮೂಡಿಸಿತು. ಮತ್ತೊಂದೆಡೆ ಜಿಟಿ ಬೌಲರ್ಸ್ ಕೂಡ ಮಿಂಚಿದರು.
ವೆಂಕಟೇಶ್ 19 ಎಸೆತಗಳಲ್ಲಿ 14 ರನ್ ಗಳಿಸಿ ನಿರಾಸೆ ಮೂಡಿಸಿದರೆ, ರಹಾನೆ 36 ಎಸೆತಗಳಲ್ಲಿ 50 ರನ್ ಗಳಿಸಿ ಔಟಾದರು. ಬೌಲರ್ಗಳ ಮೇಲೆ ಒತ್ತಡ ಹಾಕಲು ಯತ್ನಿಸಿದ ಈ ಇಬ್ಬರ ನಿಧಾನದ ಆಟದಿಂದ ಕೆಕೆಆರ್ ಒತ್ತಡಕ್ಕೆ ಸಿಲುಕಿತು. ಕಡಿಮೆ ಎಸೆತಗಳಿಗೆ ದೊಡ್ಡ ಗುರಿ ಬೆನ್ನಟ್ಟುವ ಸ್ಥಿತಿಗೆ ತಲುಪಿತು. ಇದು ಮಧ್ಯಮ ಮತ್ತು ಕೆಳ ಕ್ರಮಾಂಕದ ಬ್ಯಾಟರ್ಗಳ ಒತ್ತಡ ಹೆಚ್ಚಿಸಿತು. ಆಂಡ್ರೆ ರಸೆಲ್ ಮತ್ತೆ ನಿರಾಸೆ ಮೂಡಿಸಿದರೆ, ಮೊಯಿನ್ ಅಲಿ (0), ರಮಣದೀಪ್ಗೆ (1) ಪ್ರಸಿದ್ದ್ ಕೃಷ್ಣ ಗೇಟ್ಪಾಸ್ ಕೊಟ್ಟರು. ಕೊನೆಯಲ್ಲಿ ಆಂಗ್ಕ್ರಿಷ್ ರಘುವಂಶಿ (27) ಮತ್ತು ರಿಂಕು ಸಿಂಗ್ (17) ಸೋಲಿನ ಅಂತರ ತಗ್ಗಿಸಿದರು.
ಶುಭ್ಮನ್, ಸುದರ್ಶನ್ ಅಬ್ಬರ
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಜಿಟಿ ಭರ್ಜರಿ ಆರಂಭ ಪಡೆಯಿತು. ಶುಭ್ಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಮೊದಲ ವಿಕೆಟ್ಗೆ 114 ರನ್ ಕಲೆ ಹಾಕಿದರು. ಪವರ್ಪ್ಲೇನಲ್ಲಿ 45 ರನ್ ಗಳಿಸಿದ್ದ ಈ ಜೋಡಿ, ನಂತರ ಬ್ಯಾಟಿಂಗ್ ಗೇರ್ ಚೇಂಜ್ ಮಾಡಿತು. ಮಿಂಚಿನ ಪ್ರದರ್ಶನದೊಂದಿಗೆ ಕೆಕೆಆರ್ ಬೌಲರ್ಗಳ ಮೇಲೆ ಸವಾರಿ ಮಾಡಿದರು. ಉತ್ತಮ ಬ್ಯಾಟಿಂಗ್ ನಡೆಸುತ್ತಿದ್ದ ಸಾಯಿ ಸುದರ್ಶನ್ 36 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಹಿತ 52 ರನ್ ಗಳಿಸಿ ಆಂಡ್ರೆ ರಸೆಲ್ ಬೌಲಿಂಗ್ನಲ್ಲಿ ಔಟಾದರು.
ಇದರ ನಂತರವೂ ಗಿಲ್ ಅಬ್ಬರ ಮುಂದುವರೆಯಿತು. ತಾನೂ ಅಮೋಘ ಅರ್ಧಶತಕ ಸಿಡಿಸಿ ಶತಕದತ್ತ ದಾಪುಗಾಲಿಟ್ಟರು. ಮತ್ತೊಂದೆಡೆ ವಿಕೆಟ್ಗಾಗಿ ಬೌಲರ್ಗಳ ಪರದಾಟ ಮುಂದುವರೆಯಿತು. ಜೋಸ್ ಬಟ್ಲರ್ ಕೂಡ ಕೆಕೆಆರ್ಗೆ ಕಾಡಿದರು. ಗಿಲ್ 55 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸರ್ ಸಹಿತ 90 ರನ್ ಗಳಿಸಿ ಶತಕದ ಅಂಚಿನಲ್ಲಿ ವಿಕೆಟ್ ಒಪ್ಪಿಸಿದರು. ಬಟ್ಲರ್-ಗಿಲ್ ಕೂಡ ಅರ್ಧಶತಕದ ಜೊತೆಯಾಟವಾಡಿದರು. ಗಿಲ್ ಬೆನ್ನಲ್ಲೇ ರಾಹುಲ್ ತೆವಾಟಿಯಾ ಸಹ ಸೊನ್ನೆ ಸುತ್ತಿ ನಿರ್ಗಮಿಸಿದರು. ಬಟ್ಲರ್ ಅಜೇಯ 41 ರನ್ ಸಿಡಿಸಿದರೆ, ಶಾರೂಖ್ ಖಾನ್ ಅಜೇಯ 11 ರನ್ ಬಾರಿಸಿದರು.