ಅಂಪೈರ್ ಜತೆಗೆ ಧೋನಿ ಫಿಕ್ಸಿಂಗ್, ಋತುರಾಜ್-ಖಲೀಲ್ ಚೆಂಡು ವಿರೂಪ; ಸಿಎಸ್ಕೆ ವಿರುದ್ಧ ನೆಟ್ಟಿಗರು ಗಂಭೀರ ಆರೋಪ, VIDEO
ಮ್ಯಾಚ್ ಫಿಕ್ಸಿಂಗ್, ಚೆಂಡು ವಿರೂಪಗೊಳಿಸಿ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯವನ್ನು ಗೆದ್ದುಕೊಂಡಿದೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ. ಅನುಮಾನ ಹುಟ್ಟಿಸಿದ 2 ವಿಡಿಯೋಗಳು ವೈರಲ್ ಆಗುತ್ತಿವೆ.

18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನ ಮೂರನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಮುಂಬೈ ಇಂಡಿಯನ್ಸ್ ವಿರುದ್ಧ 4 ವಿಕೆಟ್ಗಳಿಂದ ಗೆಲುವು ಸಾಧಿಸಿದ ಚೆನ್ನೈ ಸೂಪರ್ ಕಿಂಗ್ಸ್ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ. ಚೆಂಡು ವಿರೂಪಗೊಳಿಸಿ ಪಂದ್ಯವನ್ನು ಗೆದ್ದುಕೊಂಡಿದೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ. ಅದಕ್ಕೆ ಸಂಬಂಧಿಸಿ ಅನುಮಾನ ಹುಟ್ಟಿಸುವಂತಹ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಮತ್ತೆ ಫಿಕ್ಸಿಂಗ್ ಮಾಡಿದೆ ಎಂದು ಟೀಕೆಗೆ ಗುರಿಯಾಗಿದೆ.
ಚೆನ್ನೈನ ಚೆಪಾಕ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಋತುರಾಜ್ ಗಾಯಕ್ವಾಡ್ ನೇತೃತ್ವದ ಚೆನ್ನೈ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಇನ್ನಿಂಗ್ಸ್ ಆರಂಭಿಸಿದ ಮುಂಬೈ, ಸಿಎಸ್ಕೆ ಬೌಲರ್ಗಳ ದಾಳಿಗೆ ತತ್ತರಿಸಿತು. ಪರಿಣಾಮ ಎಂಐ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿತು. ಈ ಗುರಿ ಹಿಂಬಾಲಿಸಿದ ಸಿಎಸ್ಕೆ 19.1 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 158 ರನ್ ಪೇರಿಸಿತು. ಕಳೆದ 13 ಆವೃತ್ತಿಗಳಿಂದ ಮುಂಬೈ ತನ್ನ ಮೊದಲ ಪಂದ್ಯದಲ್ಲಿ ಸೋಲು ಕಂಡಿದೆ. ತವರಿನಲ್ಲಿ ಸಿಎಸ್ಕೆ ಪ್ರಾಬಲ್ಯ ಸಾಧಿಸಿತು.
2016 ಮತ್ತು 2017ರಲ್ಲಿ ಐಪಿಎಲ್ನಿಂದ ಬ್ಯಾನ್ ಆಗಿದ್ದ ಸಿಎಸ್ಕೆ, ಇದೀಗ ಮತ್ತೊಮ್ಮೆ ಅದೇ ಆರೋಪಕ್ಕೆ ಗುರಿಯಾಗಿದೆ. ಏಕೆಂದರೆ ಪಂದ್ಯದ ಕೆಲವೊಂದು ಅನುಮಾನ ಹುಟ್ಟಿಸುವ ವಿಡಿಯೋಗಳು ವೈರಲ್ ಆಗುತ್ತಿವೆ. ಚೆಂಡು ವಿರೂಪ ಮತ್ತು ಮ್ಯಾಚ್ ಫಿಕ್ಸಿಂಗ್ ಮಾಡಿ ಮುಂಬೈ ವಿರುದ್ಧ ಗೆದ್ದಿದ್ದಾರೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ. ಒಂದು ವಿಡಿಯೋದಲ್ಲಿ ಖಲೀಲ್ ಅಹ್ಮದ್ - ಋತುರಾಜ್ ಗಾಯಕ್ವಾಡ್ ಚೆಂಡನ್ನು ವಿರೂಪಗೊಳಿಸುವಂತೆ ಕಂಡಿದ್ದರೆ, ಮತ್ತೊಂದರಲ್ಲಿ ಎಂಎಸ್ ಧೋನಿ ಅಂಪೈರ್ ಜೊತೆಗೆ ರಹಸ್ಯವಾಗಿ ಮಾತನಾಡುತ್ತಾರೆ.
ಮೊದಲ ವಿಡಿಯೋದಲ್ಲಿ ಏನಿದೆ?
ಸ್ಪಷ್ಟವಾಗಿ ಕಾಣುವಂತೆ ಮೊದಲ ಕ್ಲಿಪ್ನಲ್ಲಿ ಸಿಎಸ್ಕೆ ವೇಗಿ ಖಲೀಲ್ ಅಹ್ಮದ್ ನಾಯಕ ಮತ್ತು ಋತುರಾಜ್ ಗಾಯಕ್ವಾಡ್ ಅವರೊಂದಿಗೆ ಚರ್ಚೆ ನಡೆಸುತ್ತಿರುವಾಗ ಚೆಂಡನ್ನು ಸ್ವಚ್ಛಗೊಳಿಸುತ್ತಿರುವುದನ್ನು ಕಾಣಬಹುದು. ಖಲೀಲ್ ತನ್ನ ಟವಲ್ ಅನ್ನು ಬಳಸದ ಕಾರಣ, ಅಭಿಮಾನಿಗಳು ಚೆಂಡನ್ನು ವಿರೂಪಗೊಳಿಸಿದ್ದಾರೆ ಎಂದು ಆರೋಪಿಸಿ ನಿಷೇಧಿತ ವಸ್ತುವನ್ನು ಉಜ್ಜಿದ್ದಾರೆ ಎಂದು ಊಹಿಸಿದ್ದಾರೆ. ಬಳಿಕ ಋತುರಾಜ್ ಮತ್ತು ಖಲೀಲ್ ಇಬ್ಬರೂ ಯಾವುದೋ ವಸ್ತುವನ್ನು ಜೇಬಿನೊಳಗೆ ಹಾಕಿಕೊಂಡಂತೆ ಕಂಡಿತು.
ಎರಡನೇ ವಿಡಿಯೋದಲ್ಲಿ ಏನಿದೆ?
ಇನ್ನೊಂದು ವಿಡಿಯೋದಲ್ಲಿ ಮೈದಾನದಲ್ಲಿರುವ ಅಂಪೈರ್ ಮತ್ತು ಮಾಜಿ ಸಿಎಸ್ಕೆ ನಾಯಕ ಎಂಎಸ್ ಧೋನಿ ನಡುವಿನ ಸಂಭಾಷಣೆ ನಡೆಯುತ್ತದೆ. ಈ ಕ್ಲಿಪ್ನಲ್ಲಿ ಅಂಪೈರ್ಗೆ ಧೋನಿ ಏನೋ ರಹಸ್ಯವಾಗಿ ಹೇಳುತ್ತಿರುವುದನ್ನು ಕಾಣಬಹುದು. ಮಾಹಿ ಹೇಳಿದ ಬೆನ್ನಲ್ಲೇ ಅಂಪೈರ್ ಓಕೆ ಎನ್ನುವ ರೀತಿ ಥಂಬ್ ಮೂಲಕ ಸೂಚಿಸುತ್ತಾರೆ. ಇದು ಪಕ್ಕಾ ಫಿಕ್ಸಿಂಗ್ ಎಂದು ಅಭಿಮಾನಿಗಳು ಅನುಮಾನಿಸಿದ್ದಾರೆ. ಚರ್ಚೆಯ ವಿಷಯದ ಬಗ್ಗೆ ಸ್ಪಷ್ಟತೆ ಇಲ್ಲ, ಆದರೆ ಅಭಿಮಾನಿಗಳು ಅಂಪೈರ್ ಮತ್ತು ಕ್ರಿಕೆಟಿಗರು ದುರುದ್ದೇಶಪೂರಿತ ಕೃತ್ಯದಲ್ಲಿ ಭಾಗಿಯಾಗಿದ್ದಾರೆಂದು ಊಹಿಸಿದ್ದಾರೆ. ಆದರೆ, ಈ ಆರೋಪಗಳು ಆಧಾರರಹಿತ ಎನ್ನಲಾಗುತ್ತದೆ.
