ಪಹಲ್ಗಾಮ್ ಉಗ್ರ ದಾಳಿ ಬೆನ್ನಲ್ಲೇ ಭಾರತದಲ್ಲಿ ಪಿಎಸ್ಎಲ್ ಪ್ರಸಾರ ನಿಲ್ಲಿಸಿದ ಫ್ಯಾನ್ಕೋಡ್; ಎಲ್ಲಾ ಕಂಟೆಂಟ್ ಡಿಲೀಟ್
ದಕ್ಷಿಣ ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದ 26 ಜನರು ಸಾವನ್ನಪ್ಪಿದರು. ಉಗ್ರ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನದ ಪಿಎಸ್ಎಲ್ ಟೂರ್ನಿಯ ಪ್ರಸಾರವನ್ನು ಭಾರತದಲ್ಲಿ ಸಂಪೂರ್ಣವಾಗಿ ನಿಲ್ಲಿಸಲಾಗಿದೆ.

ಭಾರತದಲ್ಲಿ ಐಪಿಎಲ್ ಟೂರ್ನಿ ನಡೆಯುತ್ತಿರುವಾಗಲೇ ಪಾಕಿಸ್ತಾನದಲ್ಲಿ ಐಪಿಎಲ್ನಂತೆಯೇ ಪಿಎಸ್ಎಲ್ ಟೂರ್ನಿ ನಡೆಯುತ್ತಿದೆ. ಭಾರತದಲ್ಲಿ ಈ ಟೂರ್ನಿಯು ಫ್ಯಾನ್ಕೋಡ್ ಮೂಲಕ ಲೈವ್ ಸ್ಟ್ರೀಮಿಂಗ್ ಆಗುತ್ತಿತ್ತು. ಇದೀಗ ಭಾರತೀಯ ಲೈವ್ ಸ್ಟ್ರೀಮಿಂಗ್ ವೇದಿಕೆಯು, ಮುಂಬರುವ ಪಾಕಿಸ್ತಾನ ಸೂಪರ್ ಲೀಗ್ ಪಂದ್ಯಗಳನ್ನು ಪ್ರಸಾರ ಮಾಡುವುದಿಲ್ಲ. ಇದಕ್ಕೆ ಕಾರಣ ಪಹಲ್ಗಾಮ್ ಭಯೋತ್ಪಾದಕ ದಾಳಿ. ದಕ್ಷಿಣ ಕಾಶ್ಮೀರದ ಪಹಲ್ಗಾಮ್ನಲ್ಲಿ ಇತ್ತೀಚೆಗಷ್ಟೇ 26 ಜನರನ್ನು ಬಲಿ ತೆಗೆದುಕೊಂಡ ಮಾರಣಾಂತಿಕ ಉಗ್ರ ದಾಳಿಯ ಬೆನ್ನಲ್ಲೇ, ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಪಹಲ್ಗಾಮ್ ದಾಳಿಯ ನಂತರ ಭಾರತವು ಪಾಕಿಸ್ತಾನ ವಿರುದ್ಧ ನಿಷ್ಠುರ ಧೋರಣೆ ಕೈಗೊಳ್ಳುತ್ತಿದೆ. ಪಾಕಿಸ್ತಾನವು ಭಯೋತ್ಪಾದನೆ ಬೆಂಬಲಿಸುತ್ತಿದೆ ಎಂದು ಹಲವು ವರ್ಷಗಳಿಂದ ಭಾರತ ಆರೋಪಿಸುತ್ತಿದೆ. ಆದರೂ ಉಗ್ರ ಚಟುವಟಿಕೆ ಕಾಶ್ಮೀರದಲ್ಲಿ ಮತ್ತೆ ಮತ್ತೆ ಬೆಳಕಿಗೆ ಬರುತ್ತಿದೆ. ಈ ಬಾರಿ ಅಮಾಯಕರು ಪ್ರಾಣ ಕಳೆದುಕೊಂಡ ಬೆನ್ನಲ್ಲೇ, ಕೇಂದ್ರ ಸರ್ಕಾರ ಕೆಂಡವಾಗಿದೆ. ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ.
ಅತ್ತ ಕ್ರಿಕೆಟ್ ಕ್ಷೇತ್ರದಲ್ಲೂ ಪಾಕಿಸ್ತಾನ ವಿರುದ್ಧ ಭಾರತದ ಕಠಿಣ ಕ್ರಮಗಳು ಹೊರಬರುತ್ತಿವೆ. ಭಾರತದಲ್ಲಿ ಈವರೆಗೆ ಪಾಕಿಸ್ತಾನದ ಪಿಎಸ್ಎಲ್ ಪಂದ್ಯಗಳನ್ನು ಫ್ಯಾನ್ಕೋಡ್ ಮೂಲಕ ಅಧಿಕೃತವಾಗಿ ಸ್ಟ್ರೀಮಿಂಗ್ ಮಾಡಲಾಗುತ್ತಿತ್ತು. ಈ ಒಂದೇ ವೇದಿಕೆ ಪಿಎಸ್ಎಲ್ ಪ್ರಸಾರವನ್ನು ಭಾರತದಲ್ಲಿ ಮಾಡುತ್ತಿತ್ತು. ಈ ಟಿ20 ಲೀಗ್ ಪಂದ್ಯಾವಳಿಯ ಮೊದಲ 13 ಪಂದ್ಯಗಳನ್ನು ಈ ವೇದಿಕೆ ಪ್ರಸಾರ ಮಾಡಿತ್ತು. ಆದರೆ, ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಒಟಿಟಿ ವೇದಿಕೆ ಇನ್ನು ಮುಂದೆ ಪಿಎಸ್ಎಲ್ ಆಟಗಳ ಪ್ರಸಾರವನ್ನು ನಿಲ್ಲಿಸಲು ನಿರ್ಧರಿಸಿದೆ. ಈ ಕುರಿತು ಮೂಲಗಳು ಹಿಂದೂಸ್ತಾನ್ ಟೈಮ್ಸ್ಗೆ ದೃಢಪಡಿಸಿವೆ.
ಇದಕ್ಕೆ ಪುಷ್ಠಿ ಎನ್ನುವಂತೆ, ಈ ಋತುವಿನಲ್ಲಿ ಈವರೆಗೆ ನಡೆದ ಎಲ್ಲಾ ಪಂದ್ಯಗಳ ತುಣುಕುಗಳನ್ನು ಸೈಟ್ ತೆಗೆದುಹಾಕಿದೆ. ಅಲ್ಲದೆ ಮುಂಬರುವ ಪಿಎಸ್ಎಲ್ ಪಂದ್ಯಗಳ ಬಗ್ಗೆ ಇದ್ದ ಎಲ್ಲಾ ಮಾಹಿತಿಯನ್ನು ಅಳಿಸಿದೆ. ಈ ಕ್ರಮದಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ (ಪಿಸಿಬಿ) ಗಮನಾರ್ಹ ಹೊಡೆತ ನೀಡಲಿದೆ. ತನ್ನ ದೇಶದ ಪಂದ್ಯಾವಳಿಯ ವೀಕ್ಷಕರ ಸಂಖ್ಯೆಯ ದೊಡ್ಡ ಕುಸಿತಕ್ಕೆ ಸಾಕ್ಷಿಯಾಗಲಿದೆ.
ಪಹಲ್ಗಾಮ್ ಭೀಕರ ದಾಳಿ
ಏ. 22ರ ಮಂಗಳವಾರ ಸಂಜೆ ಪಹಲ್ಗಾಮ್ನ ಬೈಸರನ್ ಹುಲ್ಲುಗಾವಲಿನಲ್ಲಿ ಭಯೋತ್ಪಾದಕರು ನಡೆಸಿದ ಭೀಕರ ದಾಳಿಯಲ್ಲಿ 26 ಜನರು ಪ್ರವಾಸಿಗರು ಪ್ರಾಣ ಕಳೆದುಕೊಂಡರು. ಇದು 2019ರ ಪುಲ್ವಾಮಾ ದಾಳಿಯ ನಂತರ ಕಾಶ್ಮೀರ ಕಣಿವೆಯಲ್ಲಿ ನಡೆದ ಭೀಕರ ದಾಳಿಯಾಗಿದೆ. ಭಯೋತ್ಪಾದಕರು ಅಮಾಯಕ ನಾಗರಿಕರ ಮೇಲೆ ಗುಂಡು ಹಾರಿಸಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ. ಪಾಕಿಸ್ತಾನ ಮೂಲದ ನಿಷೇಧಿತ ಉಗ್ರ ಸಂಘಟನೆಯಾದ ಲಷ್ಕರ್-ಎ-ತೈಬಾ (ಎಲ್ಇಟಿ) ಅಂಗಸಂಸ್ಥೆಯಾಗಿರುವ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್) ಈ ದಾಳಿಯ ಹೊಣೆ ಹೊತ್ತಿದೆ. ಈ ದಾಳಿಗೆ ವಿಶ್ವದಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿದೆ.