ಮಳೆ ಅಡ್ಡಿಯಾದರೂ ರೋಚಕ ಪಂದ್ಯ ಗೆದ್ದು ಬೀಗಿದ ಗುಜರಾತ್ ಟೈಟನ್ಸ್;‌ ಗೆಲುವಿನ ಅಂಚಿನಲ್ಲಿ ಎಡವಿದ ಮುಂಬೈಗೆ ನಿರಾಶೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಮಳೆ ಅಡ್ಡಿಯಾದರೂ ರೋಚಕ ಪಂದ್ಯ ಗೆದ್ದು ಬೀಗಿದ ಗುಜರಾತ್ ಟೈಟನ್ಸ್;‌ ಗೆಲುವಿನ ಅಂಚಿನಲ್ಲಿ ಎಡವಿದ ಮುಂಬೈಗೆ ನಿರಾಶೆ

ಮಳೆ ಅಡ್ಡಿಯಾದರೂ ರೋಚಕ ಪಂದ್ಯ ಗೆದ್ದು ಬೀಗಿದ ಗುಜರಾತ್ ಟೈಟನ್ಸ್;‌ ಗೆಲುವಿನ ಅಂಚಿನಲ್ಲಿ ಎಡವಿದ ಮುಂಬೈಗೆ ನಿರಾಶೆ

ಮಳೆಯಿಂದಾಗಿ ಪಂದ್ಯವನ್ನು 19 ರನ್‌ಗಳಿಗೆ ಸೀಮಿತಗೊಳಿಸಲಾಯ್ತು. ಹೀಗಾಗಿ ಗುಜರಾತ್‌ ಟೈಟನ್ಸ್ ತಂಡಕ್ಕೆ ಕೊನೆಯ ಒಂದು ಓವರ್‌ನಲ್ಲಿ 15 ರನ್‌ಗಳ ಗುರಿ ಸಿಕ್ಕಿತು. ಇದನ್ನು ಯಶಸ್ವಿಯಾಗಿ ಚೇಸಿಂಗ್‌ ಮಾಡು ಮೂಲಕ ಜಿಟಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಮಳೆ ಅಡ್ಡಿಯಾದರೂ ಮುಂಬೈ ವಿರುದ್ಧದ ರೋಚಕ ಪಂದ್ಯ ಗೆದ್ದು ಬೀಗಿದ ಗುಜರಾತ್ ಟೈಟನ್ಸ್
ಮಳೆ ಅಡ್ಡಿಯಾದರೂ ಮುಂಬೈ ವಿರುದ್ಧದ ರೋಚಕ ಪಂದ್ಯ ಗೆದ್ದು ಬೀಗಿದ ಗುಜರಾತ್ ಟೈಟನ್ಸ್ (PTI)

ಗುಜರಾತ್‌ ಟೈಟನ್ಸ್ ತಂಡವು ಪ್ರಸಕ್ತ ಐಪಿಎಲ್‌ ಆವೃತ್ತಿಯಲ್ಲಿ 8ನೇ ಗೆಲುವು ಸಾಧಿಸುವುದರೊಂದಿಗೆ ಪ್ಲೇಆಫ್‌ ಸುತ್ತಿಗೆ ಬಹುತೇಕ ಹತ್ತಿರವಾಗಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ರೋಚಕವಾಗಿ ಗೆದ್ದ ತಂಡವು ಅಂಕಪಟ್ಟಿಯಲ್ಲಿಯೂ ಅಗ್ರಸ್ಥಾನಕ್ಕೇರಿದೆ. ಆ ಮೂಲಕ ಆರ್‌ಸಿಬಿ ತಂಡ ಎರಡನೇ ಸ್ಥಾನಕ್ಕೆ ಜಾರಿದೆ. ಮಳೆ ಅಡ್ಡಿಯಾದ ಪಂದ್ಯದಲ್ಲಿ ಕೊನೆಗೂ ಡಿಎಲ್‌ಎಸ್‌ ನಿಯಮದ ಪ್ರಕಾರ ಗುಜರಾತ್‌ ತಂಡಕ್ಕೆ 3 ವಿಕೆಟ್‌ಗಳ ರೋಚಕ ಗೆಲುವು ಒಲಿದಿದೆ. ಇದರೊಂದಿಗೆ ಮುಂಬೈಗೆ ಭಾರಿ ನಿರಾಶೆಯಾಗಿದೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಮುಂಬೈ, 8 ವಿಕೆಟ್‌ ಕಳೆದುಕೊಂಡು 155 ರನ್‌ ಗಳಿಸಿತು. ಚೇಸಿಂಗ್‌ ನಡೆಸಿದ ಗುಜರಾತ್‌ 18 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 132 ರನ್‌ ಗಳಿಸಿತ್ತು. ಈ ವೇಳೆ ಜೋರಾಗಿ ಮಳೆ ಸುರಿಯಿತು. ಡಿಎಲ್‌ಎಸ್‌ ನಿಯಮದ ಪ್ರಕಾರ ಈ ಹಂತದಲ್ಲಿ ಗುಜರಾತ್ ತಂಡವು 4 ರನ್‌ಗಳಿಂದ ಹಿಂದಿತ್ತು. ಮಳೆ ನಿಂತ ಬಳಿಕ ಪಂದ್ಯವನ್ನು 19 ರನ್‌ಗಳಿಗೆ ಸೀಮಿತಗೊಳಿಸಲಾಯ್ತು. ಹೀಗಾಗಿ ಗುಜರಾತ್‌ ತಂಡಕ್ಕೆ ಕೊನೆಯ ಒಂದು ಓವರ್‌ನಲ್ಲಿ 15 ರನ್‌ಗಳ ಗುರಿ ಸಿಕ್ಕಿತು. ಕೊನೆಯ ಎಸೆತದಲ್ಲಿ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟುವ ಮೂಲಕ ತಂಡ ರೋಚಕ ಜಯ ಸಾಧಿಸಿತು.

ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ಇಂಡಿಯನ್ಸ್‌, ಆರಂಭದಲ್ಲೇ ಎರಡೆರಡು ಆಘಾತ ಅನುಭವಿಸಿತು. ಪವರ್‌ಪ್ಲೇ ಒಳಗಡೆ ಇಬ್ಬರು ಆರಂಭಿಕರು ವಿಕೆಟ್‌ ಒಪ್ಪಿಸಿದರು. ಮೊಹಮ್ಮದ್‌ ಸಿರಾಜ್‌ ಮೊದಲ ಓವರ್‌ನ ಎರಡನೇ ಎಸೆತದಲ್ಲಿ ರಿಕಲ್ಟನ್‌ ವಿಕೆಟ್‌ ಕಿತ್ತರು. ಅನುಭವಿ ಆಟಗಾರ ರೋಹಿತ್‌ ಶರ್ಮಾ, ಕೇವಲ 7 ರನ್‌ ಗಳಿಸಿ ನಿರ್ಗಮಿಸಿದರು. ಈ ವೇಳೆ ವಿಲ್‌ ಜಾಕ್ಸ್‌ ಮತ್ತು ಸೂರ್ಯಕುಮಾರ್‌ ಆಕರ್ಷಕ ಜೊತೆಯಾಟವಾಡಿದರು. ಜಾಕ್ಸ್‌ 35 ಎಸೆತಗಳಲ್ಲಿ 53 ರನ್‌ಗಳೊಂದಿಗೆ ಅರ್ಧಶತಕ ಬಾರಿಸಿದರೆ, ಸೂರ್ಯಕುಮಾರ್‌ ಪ್ರಸಕ್ತ ಐಪಿಎಲ್‌ ಆವೃತ್ತಿಯಲ್ಲಿ ಸತತ 12ನೇ ಪಂದ್ಯದಲ್ಲಿ 25 ಕ್ಕೂ ಅಧಿಕ ರನ್‌ ಕಲೆ ಹಾಕಿದರು. ಅಂತಿಮವಾಗಿ 35 ರನ್‌ ಗಳಿಸಿ ವಿಕೆಟ್‌ ಓಪ್ಪಿಸಿದರು.

ಒಂದು ಹಂತದಲ್ಲಿ 97 ರನ್‌ವರೆಗೂ 2 ವಿಕೆಟ್‌ ಮಾತ್ರ ಕಳೆದುಕೊಂಡಿದ್ದ ಮುಂಬೈ, ಸೂರ್ಯಕುಮಾರ್‌ ಔಟಾಗುತ್ತಿದ್ದಂತೆ ಏಕಾಏಕಿ ಕುಸಿಯಿತು. 113 ರನ್‌ ಆಗುವಷ್ಟರಲ್ಲಿ 6 ವಿಕೆಟ್‌ ಕಳೆದುಕೊಂಡಿತು. ತಿಲಕ್‌ ವರ್ಮಾ, ಹಾರ್ದಿಕ್‌ ಪಾಂಡ್ಯ ಹಾಗೂ ನಮನ್‌ ಒಂದಂಕಿ ಮೊತ್ತಕ್ಕೆ ಔಟಾಗಿ ನಿರಾಶೆ ಮೂಡಿಸಿದರು. ಡೆತ್‌ ಓವರ್‌ಗಳಲ್ಲಿ ಕಾರ್ಬಿನ್ ಬಾಷ್ 27 ರನ್‌ ಗಳಿಸುವ ಮೂಲಕ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.

ಗುಜರಾತ್‌ ಕಳಪೆ ಆರಂಭ

ಚೇಸಿಂಗ್‌ ಆರಂಭಿಸಿದ ಗುಜರಾತ್‌ ಆರಂಭವೂ ಉತ್ತಮವಾಗಿರಲಿಲ್ಲ. ಟೂರ್ನಿಯಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ಸಾಯಿ ಸುದರ್ಶನ್‌ 5 ರನ್‌ ಗಳಿಸಿ ಬೋಲ್ಟ್‌ ಎಸೆತದಲ್ಲಿ ಔಟಾದರು. ಈ ವೇಳೆ ಜೋಸ್‌ ಬಟ್ಲರ್‌ ಜೊತೆಗೂಡಿದ ಶುಭ್ಮನ್‌ ಗಿಲ್‌ 50 ರನ್‌ಗಳ ಜೊತೆಯಾಟವಾಡಿದರು. ಈ ವೇಳೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಮಳೆಯಿಂದ ಪಂದ್ಯ ನಿಂತರೆ ಡಿಎಲ್‌ಎಸ್‌ ನಿಯಮದ ಪ್ರಕಾರ ಫಲಿತಾಂಶ ನಿರ್ಣಯಿಸಲಾಗುತ್ತದೆ. ಹೀಗಾಗಿ ಇಬ್ಬರೂ ಜವಾಬ್ದಾರಿಯುತವಾಗಿ ಬ್ಯಾಟ್‌ ಬೀಸಿ ಡಿಎಲ್‌ಎಸ್‌ ನಿಯಮದ ಪ್ರಕಾರ ಇರಬೇಕಾಗಿದ್ದ ಪಾರ್‌ ಸ್ಕೋರ್‌ ಅಂತರ ಕಾಪಾಡುತ್ತಾ ಹೋದರು. ಈ ವೇಳೆ ಬಟ್ಲರ್‌ 30 ರನ್‌ ಗಳಿಸಿ ಔಟಾದರು.

ಮತ್ತೆ ಅಡ್ಡಿಯಾದ ಮಳೆ

ಈ ಸಮಯದಲ್ಲಿ ಮೈದಾನಕ್ಕೆ ಬಂದ ರುದರ್‌ಫೋರ್ಡ್‌ ವೇಗದ ಆಟವಾಡಿದರು. 12 ಎಸೆತಗಳಲ್ಲಿ 26 ರನ್‌ ಗಳಿಸಿ ರನ್‌ ವೇಗ ಹೆಚ್ಚಿಸಿದರು. 14 ಓವರ್‌ ಮುಕ್ತಾಯವಾದ ವೇಳೆ ಜೋರಾಗಿ ಮಳೆ ಸುರಿದು ಪಂದ್ಯವನ್ನು ಮೊಟಕುಗೊಳಿಸಲಾಯ್ತು. ಆ ಕ್ಷಣದಲ್ಲೂ ತಂಡದ ರನ್‌ ವೇಗ ಉತ್ತಮವಾಗಿತ್ತು. ಪಂದ್ಯ ಪುನರಾರಂಭವಾದ ಬೆನ್ನಲ್ಲೇ ಗಿಲ್‌ ಮತ್ತು ರುದರ್‌ಫೋರ್ಡ್‌ ಔಟಾದರು. ಪ್ರಸಕ್ತ ಆವೃತ್ತಿಯಲ್ಲಿ ಇದೇ ಮೊದಲ ಬಾರಿಗೆ ಸುದರ್ಶನ್‌, ಗಿಲ್‌ ಹಾಗೂ ಬಟ್ಲರ್‌ ಈ ಮೂವರಲ್ಲಿ ಕನಿಷ್ಠ ಒಬ್ಬರೂ ಅರ್ಧಶತಕ ಗಳಿಸದೆ ವಿಕೆಟ್‌ ಒಪ್ಪಿಸಿದರು. ಶಾರುಖ್‌ ಖಾನ್‌ ಹಾಗೂ ರಶಿದ್‌ ಖಾನ್‌ ಖಾನ್‌ ಕೂಡಾ ಬೇಗನೆ ಔಟಾದರು. ರಾಹುಲ್‌ ತೆವಾಟಿಯಾ ಹಾಗೂ ಗೆರಾಲ್ಡ್‌ ಕೊಯೆಟ್ಜಿ ಚೇಸ್‌ ಮಾಡುವ ಪ್ರಯತ್ನ ಮಾಡಿದಾಗ ಮತ್ತೆ ಮಳೆ ಅಡ್ಡಿಯಾಯ್ತು. ಮಳೆ ನಿಂತ ಬಳಿಕ ನಡೆದ ಒಂದು ಓವರ್‌ ಪಂದ್ಯದಲ್ಲಿ 15 ರನ್‌ ಗಳಿಸಿದ ಜಿಟಿ ಗೆದ್ದು ಬೀಗಿತು. ಕೊನೆಯ ಎಸೆತದಲ್ಲಿ ರನೌಟ್‌ ಅವಕಾಶ ಕೈಚೆಲ್ಲಿದ ಮುಂಬೈ ಬಳಗದಲ್ಲಿ ನಿರಾಶೆ ಕಂಡಿತು.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.