ಹಚ್ಚೆ ಇಲ್ಲ, ಫ್ಯಾನ್ಸಿ ಬಟ್ಟೆ ಧರಿಸಲ್ಲ; ಕರುಣ್ ನಾಯರ್ ಕಡೆಗಣನೆಗೆ ಬಿಸಿಸಿಐ ವಿರುದ್ಧ ಹರ್ಭಜನ್ ಸಿಂಗ್ ಆಕ್ರೋಶ
ಭಾರತ ಕ್ರಿಕೆಟ್ ತಂಡಕ್ಕೆ ಕರುಣ್ ನಾಯರ್ ಅವರನ್ನು ಕಡೆಗಣಿಸಲಾಗಿದೆ ಎಂದು ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಹೇಳಿದ್ದಾರೆ. ದೇಶೀಯ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಅವರಿಗೆ ನ್ಯಾಯ ಸಿಗುತ್ತಿಲ್ಲ. ಅವರು ಹಚ್ಚೆ ಹಾಕಿಸಿಲ್ಲ, ಫ್ಯಾನ್ಸಿ ಬಟ್ಟೆ ಧರಿಸಲ್ಲ ಎಂದು ಈ ರೀತಿ ಮಾಡುತ್ತಿದ್ದೀರಾ ಎಂದು ಬಿಸಿಸಿಐಗೆ ಪ್ರಶ್ನೆ ಹಾಕಿದ್ದಾರೆ.

ಸದ್ಯ ದೇಶೀಯ ಕ್ರಿಕೆಟ್ನಲ್ಲಿ ಹೆಚ್ಚು ಸುದ್ದಿಯಲ್ಲಿರುವವರು ಕರುಣ್ ನಾಯರ್. ವಿಜಯ್ ಹಜಾರೆ ಟ್ರೋಫಿಯಲ್ಲಿ ವಿದರ್ಭ ಪರ ಆಡುತ್ತಿರುವ ಕನ್ನಡಿಗ ಕರುಣ್, ಆಡಿದ ಕೇವಲ ಆರು ಇನ್ನಿಂಗ್ಸ್ಗಳಲ್ಲಿ ದಾಖಲೆಯ 664 ರನ್ ಗಳಿಸಿದ್ದಾರೆ. ಆ ಮೂಲಕ ಪ್ರಸಕ್ತ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ದಾಖಲೆ ಹೊಂದಿದ್ದಾರೆ. ಟೂರ್ನಿಯುದ್ದಕ್ಕೂ ಐದು ಶತಕ ಸಿಡಿಸಿರುವ ಆಟಗಾರ, ಒಮ್ಮೆ ಮಾತ್ರ ಔಟಾಗಿದ್ದಾರೆ. ಅದ್ಭುತ ಪ್ರದರ್ಶನವು ಅವರನ್ನು ಇಲ್ಲಿಯವರೆಗೆ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಮಾಡಿದೆ.
ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನದ ನಂತರ, ಕ್ರಿಕೆಟ್ ವಲಯದಲ್ಲಿ ನಾಯರ್ ಅವರ ಹೆಸರು ಮತ್ತೊಮ್ಮೆ ಚರ್ಚೆಯಲ್ಲಿದೆ. ಸಾಮಾಜಿಕ ಮಾಧ್ಯಮದಲ್ಲಿ ಅನೇಕರು ಅವರು ಮತ್ತೆ ಟೀಮ್ ಇಂಡಿಯಾ ಪರ ಆಡಬೇಕೆಂದು ಪ್ರತಿಪಾದಿಸುತ್ತಿದ್ದಾರೆ. ಹಲವು ಮಾಜಿ ಕ್ರಿಕೆಟಿಗರು ಕೂಡಾ ಇದೇ ವಾದ ಮಾಡುತ್ತಿದ್ದಾರೆ. ಹೀಗಾಗಿ ಬಿಸಿಸಿಐ ಆಯ್ಕೆದಾರರು ಮುಂದೆ ಕರುಣ್ ಅವರನ್ನು ಟೀಮ್ ಇಂಡಿಯಾಗೆ ಆಯ್ಕೆ ಮಾಡುವ ಸಾಧ್ಯತೆಯೂ ಇದೆ.
ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡ ಕರುಣ್ ನಾಯರ್ ಪರ ಮಾತನಾಡಿದ್ದಾರೆ. 2016ರ ಡಿಸೆಂಬರ್ ತಿಂಗಳಲ್ಲಿ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ತ್ರಿಶತಕ ಬಾರಿಸಿದ ವಿಶೇಷ ದಾಖಲೆ ಹೊಂದಿರುವ ನಾಯರ್, ವಿಶ್ವ ಕ್ರಿಕೆಟ್ನಲ್ಲಿ ಮನೆಮಾತಾಗಿದ್ದರು. ಆದರೂ, ಅವರನ್ನು ಟೀಮ್ ಇಂಡಿಯಾದಿಂದ ಕೈಬಿಡಲಾಯ್ತು. ಕರುಣ್ ಭಾರತದ ಪರ ಆಡಿದ್ದು ಕೇವಲ ಮೂರು ಟೆಸ್ಟ್ ಪಂದ್ಯಗಳನ್ನು ಮಾತ್ರ.
ಇದು ಅನ್ಯಾಯ ಎಂದ ಹರ್ಭಜನ್
“ನಾನು ಕರುಣ್ ಅಂಕಿ-ಅಂಶಗಳನ್ನು ನೋಡುತ್ತಿದ್ದೇನೆ. 2024/25ರಲ್ಲಿ ಅವರು ಆರು ಇನ್ನಿಂಗ್ಸ್ಗಳನ್ನು ಆಡಿ, 5ರಲ್ಲಿ ಅಜೇಯರಾಗಿದ್ದಾರೆ. 664 ರನ್ ಗಳಿಸಿದ್ದು, ಅಷ್ಟೇ ಸರಾಸರಿ ಕೂಡಾ ಹೊಂದಿದ್ದಾರೆ. 120ರ ಸ್ಟ್ರೈಕ್ ರೇಟ್ನಲ್ಲಿ ಆಡಿದ್ದಾರೆ. ಆದರೂ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡುವುದಿಲ್ಲ. ಇದು ಅನ್ಯಾಯ,” ಎಂದು ಹರ್ಭಜನ್ ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿದ್ದಾರೆ.
ಟೀಮ್ ಇಂಡಿಯಾದಲ್ಲಿ ಸದ್ಯ ಕಳಪೆ ಫಾರ್ಮ್ ಹಾಗೂ ತಂಡದ ಸೋಲಿನ ಕುರಿತ ಚರ್ಚೆ ನಡೆಯುತ್ತಿದೆ. ಕಳಪೆ ಫಾರ್ಮ್ನಿಂದಾಗಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರನ್ನು ರಣಜಿ ಟ್ರೋಫಿಯಲ್ಲಿ ಆಡುವಂತೆ ಒತ್ತಾಯಿಸಲಾಗುತ್ತಿದೆ. ಇದೇ ವೇಳೆ ದೇಶೀಯ ಪಂದ್ಯಾವಳಿಗಳಲ್ಲಿ ಉತ್ತಮ ಪ್ರದರ್ಶನ ನೀಡುವವರಿಗೆ ಸೂಕ್ತ ಗೌರವ ನೀಡಲಾಗುತ್ತಿಲ್ಲ ಎಂದು, ಆಯ್ಕೆಯ ಮಾನದಂಡವನ್ನು ಮಾಜಿ ಸ್ಪಿನ್ನರ್ ಪ್ರಶ್ನಿಸಿದ್ದಾರೆ.
ಪ್ರಥಮ ದರ್ಜೆ ಕ್ರಿಕೆಟ್ನಲ್ಲಿಯೂ ಅಬ್ಬರ
2024ರಲ್ಲಿ, ನಾಯರ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಯಶಸ್ಸಿನ ಉತ್ತುಂಗಕ್ಕೇರಿದರು. ತಮ್ಮ ಫೇವರೆಟ್ ಸ್ವರೂಪದಲ್ಲಿ 44.42ರ ಸರಾಸರಿಯಲ್ಲಿ ಬ್ಯಾಟ್ ಬೀಸಿ 1,466 ರನ್ ಗಳಿಸಿದರು. ಇದರಲ್ಲಿ ನಾಲ್ಕು ಶತಕಗಳು ಮತ್ತು 7 ಅರ್ಧಶತಕಗಳು ಸೇರಿವೆ. ಗರಿಷ್ಠ ಸ್ಕೋರ್ ಅಜೇಯ 202 ರನ್. ಅತ್ತ ಇಂಗ್ಲೆಂಡ್ನ ಕೌಂಟಿ ಕ್ರಿಕೆಟ್ನಲ್ಲಿ ನಾರ್ಥಾಂಪ್ಟನ್ಶೈರ್ ಪರ ಆಡಿದ ಏಳು ಪಂದ್ಯಗಳಲ್ಲಿ 48.70ರ ಸರಾಸರಿಯಲ್ಲಿ 487 ರನ್ ಗಳಿಸಿದ್ದಾರೆ. ಇದರಲ್ಲಿಯೂ ಒಂದು ಶತಕ ಮತ್ತು ಮೂರು ಅರ್ಧಶತಕಗಳು ಸೇರಿವೆ.
“ಹಲವು ಆಟಗಾರರನ್ನು ಕೇವಲ ಎರಡು ಪಂದ್ಯಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಇನ್ನೂ ಕೆಲವರನ್ನು ಐಪಿಎಲ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಹಾಗಿದ್ದರೆ, ಕರುಣ್ ವಿಷಯದಲ್ಲಿ ಮಾತ್ರ ನಿಯಮಗಳು ಏಕೆ ಭಿನ್ನವಾಗಿವೆ? ರೋಹಿತ್ ಮತ್ತು ವಿರಾಟ್ ಫಾರ್ಮ್ನಲ್ಲಿಲ್ಲ ಎಂದು ಜನರು ಹೇಳುತ್ತಾರೆ. ಅವರನ್ನು ನೀವು ರಣಜಿ ಕ್ರಿಕೆಟ್ ಆಡಲು ಹೇಳುತ್ತೀರಿ. ಆದರೆ ರಣಜಿ ಆಡಿ ರನ್ ಗಳಿಸುತ್ತಿರುವವರನ್ನು ಏಕೆ ನಿರ್ಲಕ್ಷಿಸುತ್ತಿದ್ದೀರಿ” ಎಂದು ಹರ್ಭಜನ್ ಪ್ರಶ್ನೆ ಮಾಡಿದ್ದಾರೆ.
ಹಚ್ಚೆ ಹಾಕಿಸಿಕೊಂಡಿಲ್ಲ, ಫ್ಯಾನ್ಸಿ ಬಟ್ಟೆ ಹಾಕಲ್ಲ
“ತ್ರಿಶತಕದ ನಂತರವೂ ಅವರನ್ನು ಯಾಕೆ ಕೈಬಿಡಲಾಯಿತು ಎಂದು ನನಗೆ ಅರ್ಥವಾಗಲಿಲ್ಲ. ಅವರಂತಹ ಆಟಗಾರರ ಬಗ್ಗೆ ಯಾರೂ ಮಾತನಾಡದಿರುವುದು ನನಗೆ ನೋವುಂಟು ಮಾಡುತ್ತದೆ. ವಿಭಿನ್ನ ಆಟಗಾರಿಗೆ ಇಲ್ಲಿ ವಿಭಿನ್ನ ನಿಯಮಗಳು. ಆ ರೀತಿ ಇರಬಾರದು. ಅವರು ನಿರಂತರವಾಗಿ ರನ್ ಗಳಿಸುತ್ತಿರುವಾಗ ಅವರನ್ನು ಆಡಿಸಬೇಕಲ್ವೇ? ಆತ ಹಚ್ಚೆ ಹಾಕಿಸಿಕೊಂಡಿಲ್ಲ, ಅಲಂಕಾರಿಕ ಬಟ್ಟೆ ಧರಿಸಲ್ಲ ಅನ್ನೋದೇ ನೀವು ಆತನನ್ನು ಆಯ್ಕೆ ಮಾಡದಿರಲು ಕಾರಣವೇ? ಆತ ಕಷ್ಟಪಟ್ಟು ಕೆಲಸ ಮಾಡುವುದಿಲ್ಲವೇ?” ಎಂದು ಹರ್ಭಜನ್ ಪ್ರಶ್ನಿಸಿದ್ದಾರೆ.
