ಬೌಲಿಂಗ್ ವೇಳೆ ಗಾಯಗೊಂಡ ಹಾರ್ದಿಕ್ ಪಾಂಡ್ಯ; ಮುಂದಿನ ಎಸೆತದಲ್ಲೇ ಅಭಿಷೇಕ್ ವಿಕೆಟ್ ಪಡೆದು ಕಮ್ಬ್ಯಾಕ್
ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ವೇಳೆ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಗಾಯ ಭೀತಿ ಎದುರಿಸಿದರು. ಆದರೆ, ಮುಂದಿನ ಎಸೆತದಲ್ಲೇ ವಿಕೆಟ್ ಪಡೆದು ತ್ವರಿತ ಕಮ್ಬ್ಯಾಕ್ ಮಾಡಿದರು. ಎಂಐ ನಾಯಕ ಮುಂದಿನ ಪಂದ್ಯದಲ್ಲಿ ಆಡುವ ನಿರೀಕ್ಷೆ ಇದೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ಐಪಿಎಲ್ ಪಂದ್ಯದ ಸಮಯದಲ್ಲಿ ಹಾರ್ದಿಕ್ ಪಾಂಡ್ಯ ಗಾಯಕ್ಕೆ ತುತ್ತಾದರು. ಎಸ್ಆರ್ಎಚ್ ಇನ್ನಿಂಗ್ಸ್ನಲ್ಲಿ ಪಾಂಡ್ಯ ಎಸೆದ ಮೊದಲ ಓವರ್ನಲ್ಲಿಯೇ ಗಾಯದ ಭೀತಿ ಎದುರಿಸಿದರು. ಎರಡನೇ ಎಸೆತವನ್ನು ಎಸೆದ ನಂತರ, ಹಾರ್ದಿಕ್ ತಮ್ಮ ಫಾಲೋ-ಅಪ್ನಲ್ಲಿ ಎಡವಿದರು. ತಕ್ಷಣವೇ ಪಾದವನ್ನು ಹಿಡಿದು ಕೆಲಕಾಲ ಸುಧಾರಿಸಿಕೊಂಡರು. ಗಾಯದ ಭೀತಿ ಹೊರತಾಗಿಯೂ ಪಂದ್ಯದ ಕೊನೆಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಸುಲಭ ಜಯ ಸಾಧಿಸಿತು.
ಹಾರ್ದಿಕ್ ಗಾಯಗೊಂಡಾಗ, ಎಂಐ ತಂಡದ ಫಿಸಿಯೋ ಮೈದಾನಕ್ಕೆ ಬಂದು ಹಾರ್ದಿಕ್ ಗಾಯವನ್ನು ಪರಿಶೀಲಿಸಿದರು. ಹೀಗಾಗಿ ಆಟವನ್ನು ಕೆಲ ಸಮಯದವರೆಗೆ ನಿಲ್ಲಿಸಬೇಕಾಯಿತು. ಹಾರ್ದಿಕ್ ಅವರು ಅಭಿಷೇಕ್ ಶರ್ಮಾಗೆ ನಿಧಾನಗತಿಯ ಎಸೆತವನ್ನು ಎಸೆದರು. ಆ ವೇಳೆ ಚೆಂಡು ಅವರ ಕೈಯಿಂದ ಜಾರಿದಂತಾಗಿ ತಕ್ಷಣ ಎಡ ಪಾದವನ್ನು ಹಿಡಿದುಕೊಂಡಂತಾಯ್ತು. ಹೀಗಾಗಿ ಕೆಲಕಾಲ ಗಾಯದ ಭೀತಿ ಎದುರಾಯ್ತು.
ಆ ಕ್ಷಣಕ್ಕೆ ಹಾರ್ದಿಕ್ ಅವರ ಬಾಡಿ ಲಾಂಗ್ವೇಜ್ ನೋಡಿದರೆ ಗಾಯದ ಸಮಸ್ಯೆ ಗಂಭೀರವಾದಂತೆ ತೋರಿತು. ಅನಾನುಕೂಲತೆಯ ಹೊರತಾಗಿಯೂ, ಹಾರ್ದಿಕ್ ತಮ್ಮ ಓವರ್ ಅನ್ನು ಮುಂದುವರಿಸಿದರು. ಆ ಬಳಿಕವೂ ಓವರ್ ಎಸೆದು ತಂಡದ ಪರ ಅಮೂಲ್ಯ ವಿಕೆಟ್ ಪಡೆದರು. ಮುಂದಿನ ಎಸೆತದಲ್ಲಿ ಪ್ರಭಾವ ಬೀರಿದ ಎಂಐ ನಾಯಕ, ನಿರ್ಣಾಯಕ ವಿಕೆಟ್ ಕಿತ್ತರು. ಅಭಿಷೇಕ್ ಶರ್ಮಾ ವಿಕೆಟ್ ಒಪ್ಪಿಸಿ ಪೆವಿಲಿಯನ್ಗೆ ನಡೆದರು.
ವಿಡಿಯೋ
ಬೌಂಡರಿ ಲೈನ್ ಬಳಿ ರಾಜ್ ಬಾವಾ ಹಿಡಿದ ಅಮೋಘ ಕ್ಯಾಚ್ಗೆ 28 ಎಸೆತಗಳಲ್ಲಿ 40 ರನ್ ಗಳಿಸಿದ್ದ ಅಭಿಷೇಕ್ ಔಟಾದರು. ನಾಯಕ ಹಾರ್ದಿಕ್ ತಮ್ಮ ತಂಡಕ್ಕೆ ಅಗತ್ಯವಾದ ಕಮ್ಬ್ಯಾಕ್ ಕೊಟ್ಟರು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್ರೈಸರ್ಸ್, 162 ರನ್ ಗಳಿಸಿ ಅಬ್ಬರಿಸಿತು. ಇದಕ್ಕೆ ಪ್ರತಿಯಾಗಿ ಚೇಸಿಂಗ್ ನಡೆಸಿದ ಮುಂಬೈ, ಇನ್ನೂ 11 ಎಸೆತಗಳಲ್ಲಿ ಉಳಿಸಿ 166 ರನ್ ಗಳಿಸಿ ಗೆದ್ದು ಬೀಗಿತು. ಈ ಗೆಲುವಿನೊಂದಿಗೆ ಮುಂಬೈ ತಂಡ ಅಂಕಪಟ್ಟಿಯಲ್ಲಿ ಏಳನೇ ಸ್ಥಾನ ಪಡೆದಿದೆ. ಅಲ್ಲದೆ ಪ್ಲೇಆಫ್ ಆಸೆ ಜೀವಂತವಾಗಿರಿಸಿಕೊಂಡಿದೆ. ಸದ್ಯ ಮುಂಬೈ ನಾಯಕನಿಗೆ ಗಂಭೀರ ಗಾಯಗಳಾಗಿರುವ ಕುರಿತು ವರದಿಗಳಿಲ್ಲಿ. ಹೀಗಾಗಿ ಮುಂಬೈ ತಂಡದ ಮುಂದಿನ ಪಂದ್ಯಕ್ಕೆ ಅವರ ಲಭ್ಯತೆ ಕುರಿತು ಇನ್ನಷ್ಟೇ ತಿಳಿಯಬೇಕಿದೆ.