ಭಾರತ ತಂಡ ಮಾಡಿದ್ದು ಒಂದೆರಡಲ್ಲ ಬರೋಬ್ಬರಿ ಐದು ತಪ್ಪುಗಳು; ದುಬಾರಿಯಾದ್ವು ನೋ ಬಾಲ್, ಕ್ಯಾಚ್ ಡ್ರಾಪ್ಗಳು
Indian Cricket Team Mistakes: ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು ಟೀಮ್ ಇಂಡಿಯಾ ಒಂದಲ್ಲ, ಎರಡಲ್ಲ, ಬರೋಬ್ಬರಿ ಐದು ತಪ್ಪುಗಳನ್ನು ಮಾಡಿದೆ.
Indian Cricket Team Mistakes: ಬಾರ್ಡರ್ ಗವಾಸ್ಕರ್ ಟ್ರೋಫಿಯ ನಾಲ್ಕನೇ ಟೆಸ್ಟ್ ರೋಚಕ ಘಟ್ಟಕ್ಕೆ ತಲುಪಿದೆ. 4ನೇ ಟೆಸ್ಟ್ನಲ್ಲಿ ಟೀಮ್ ಇಂಡಿಯಾ ವಿರುದ್ಧದ 2ನೇ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ 9 ವಿಕೆಟ್ ನಷ್ಟಕ್ಕೆ 228 ರನ್ ಗಳಿಸಿ ನಾಲ್ಕನೇ ದಿನ ಪೂರ್ಣಗೊಳಿಸಿದೆ. ಪ್ರಸ್ತುತ 333 ರನ್ಗಳ ಮುನ್ನಡೆ ಸಾಧಿಸಿರುವ ಆಸೀಸ್, ಕೊನೆಯ ದಿನವೂ ಮತ್ತಷ್ಟು ರನ್ ಸೇರಿಸುವ ಗುರಿ ಹಾಕಿಕೊಂಡಿದೆ. ಐಕಾನಿಕ್ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಮೊದಲ ಇನ್ನಿಂಗ್ಸ್ನಲ್ಲಿ 474 ರನ್ ಬಾರಿಸಿದ್ದ ಆತಿಥೇಯ ತಂಡ, 2ನೇ ಇನ್ನಿಂಗ್ಸ್ನಲ್ಲಿ ಪೆವಿಲಿಯನ್ ಪರೇಡ್ ನಡೆಸಿತು. ಕೊನೆಯ ವಿಕೆಟ್ಗೆ ದಾಖಲೆಯ 50 ರನ್ಗಳ ಜೊತೆಯಾಟ ಬರದೇ ಇದ್ದಿದ್ದರೆ ಆಸೀಸ್ ಇಷ್ಟು ರನ್ ಕಲೆಹಾಕ್ತಿರಲಿಲ್ಲ. ಇದಕ್ಕೆ ಭಾರತ ಮಾಡಿದ ತಪ್ಪುಗಳೇ ಕಾರಣ.
ಮೊದಲ ಇನ್ನಿಂಗ್ಸ್ನಲ್ಲಿ ಆಸೀಸ್ 474 ರನ್ ಬಾರಿಸಿದ್ದರೆ, ಭಾರತ 369 ರನ್ ಗಳಿಸಿತ್ತು. ಹೀಗಾಗಿ 105 ರನ್ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಸೀಸ್, 150 ರನ್ ಒಳಗೆ ಆಲೌಟ್ ಆಗುವ ಹಂತಕ್ಕೆ ಬಂದಿತ್ತು. ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ದಾಳಿಗೆ ನಲುಗಿದ ಪ್ಯಾಟ್ ಕಮಿನ್ಸ್ ಪಡೆ ಕೇವಲ 91 ರನ್ಗಳಿಗೆ 6 ವಿಕೆಟ್ ಕಳೆದುಕೊಂಡಿತು. ಆದರೆ ಫೀಲ್ಡಿಂಗ್ನಲ್ಲಿ ಭಾರತೀಯ ಆಟಗಾರರು ತಪ್ಪುಗಳು ಎದುರಾಳಿ ತಂಡಕ್ಕೆ ದೊಡ್ಡ ಮಟ್ಟದಲ್ಲಿ ಲಾಭ ತಂದುಕೊಟ್ಟವು. ಭಾರತ ಒಂದಲ್ಲ, ಎರಡಲ್ಲ, ಒಟ್ಟು ಐದು ತಪ್ಪುಗಳನ್ನು ಮಾಡಿತು. ಕ್ಯಾಚ್ಗಳನ್ನು ಕೈಚೆಲ್ಲಿದ್ದಲ್ಲದೆ, ನೋ ಬಾಲ್ಗಳನ್ನು ಹಾಕಿ ದುಬಾರಿಯಾಯಿತು. ಇದರೊಂದಿಗೆ ಭಾರತ ಸೋಲಿನ ಭೀತಿಗೆ ಸಿಲುಕಿದೆ. ಹಾಗಿದ್ದರೆ ಭಾರತ ಮಾಡಿದ ತಪ್ಪುಗಳೇನು? ಇಲ್ಲಿದೆ ವಿವರ.
ಜೈಸ್ವಾಲ್ ಒಬ್ಬರೇ ಮೂರು ಕ್ಯಾಚ್ ಡ್ರಾಪ್
ಬ್ಯಾಟಿಂಗ್ನಲ್ಲಿ ಅನಗತ್ಯ ರನ್ ಕದಿಯಲು ಯತ್ನಿಸಿ ರನೌಟ್ ಆಗಿ ಶತಕ ಮಿಸ್ ಮಾಡಿಕೊಂಡಿದ್ದ ಯಶಸ್ವಿ ಜೈಸ್ವಾಲ್, ನಾಲ್ಕನೇ ದಿನದಲ್ಲಿ ಆಸೀಸ್ ಬ್ಯಾಟಿಂಗ್ ವೇಳೆ ಪ್ರಮುಖ ಮೂರು ಕ್ಯಾಚ್ ಕೈಬಿಟ್ಟರು. ಬುಮ್ರಾ ಬೌಲಿಂಗ್ನಲ್ಲಿ ಲೆಗ್ ಗಲ್ಲಿ ಕಡೆಗೆ ಉಸ್ಮಾನ್ ಖವಾಜ ಬಾರಿಸಿದ ಚೆಂಡನ್ನು ಕೈಚೆಲ್ಲಿದರು. ಬಳಿಕ 70 ರನ್ ಗಳಿಸಿ ಭಾರತಕ್ಕೆ ಕಾಡಿದ ಮಾರ್ನಸ್ ಲಬುಶೇನ್ ಅವರ ಕ್ಯಾಚ್ ಅನ್ನು ಬಿಟ್ಟರು. ಆಗ ಆಸೀಸ್ ಸ್ಕೊರ್ 99ಕ್ಕೆ 6 ವಿಕೆಟ್ ಆಗಿತ್ತು. ಆದರೆ ಲಬುಶೇನ್ ಕೈಬಿಟ್ಟಿದ್ದು ಭಾರತಕ್ಕೆ ದುಬಾರಿಯಾಯ್ತು. ಅಲ್ಲದೆ, ಪ್ಯಾಟ್ ಕಮಿನ್ಸ್ ಅವರ ಕ್ಯಾಚ್ ಅನ್ನೂ ಜೈಸ್ವಾಲ್ ಡ್ರಾಪ್ ಮಾಡಿದರು. ಇದರಿಂದ ರೋಹಿತ್ ಮೈದಾನದಲ್ಲೇ ಕೋಪಗೊಂಡು ಜೈಸ್ವಾಲ್ ಮೇಲೆ ರೇಗಾಡಿದ್ರು.
ಸಿರಾಜ್ ಕೂಡ ಬಿಟ್ರು ಕ್ಯಾಚ್
ಮೊಹಮ್ಮದ್ ಸಿರಾಜ್ ಸಹ ಕ್ಯಾಚೊಂದನ್ನು ಡ್ರಾಪ್ ಮಾಡಿದರು. ಇದು ಕಷ್ಟಕರ ಕ್ಯಾಚ್ ಆಗಿತ್ತು. ಒಂದು ವೇಳೆ ಈ ಕ್ಯಾಚ್ ಪಡೆದಿದ್ದರೆ ಆಸೀಸ್ ಬೇಗನೇ ಆಲೌಟ್ ಆಗುತ್ತಿತ್ತು. ಕೊನೆಯ ವಿಕೆಟ್ಗೆ ನಾಥನ್ ಲಿಯಾನ್ ಮತ್ತು ಸ್ಕಾಟ್ ಬೋಲ್ಯಾಂಡ್ ಅಜೇಯ 50+ ರನ್ಗಳ ಜೊತೆಯಾಟವಾಡಿದ್ದಾರೆ. ಆದರೆ ಬೋಲ್ಯಾಂಡ್ ಬ್ಯಾಟಿಂಗ್ ನಡೆಸುವ ವೇಳೆ ದಾಳಿ ನಡೆಸಿದ ಸಿರಾಜ್, ಕ್ಯಾಚ್ ಪಡೆಯುವ ಅವಕಾಶ ಸಿಕ್ಕಿತ್ತು. ಆದರೆ ಇದು ತುಂಬಾ ಕಷ್ಟಕರವಾಗಿತ್ತು. ಒಂದು ವೇಳೆ ಕ್ಯಾಚ್ ಪಡೆದಿದ್ದರೆ, ಆಸೀಸ್ 300+ ರನ್ಗಳ ಮುನ್ನಡೆ ಪಡೆಯುತ್ತಿರಲಿಲ್ಲ.
ಕೆಎಲ್ ರಾಹುಲ್ ಕ್ಯಾಚ್, ಬುಮ್ರಾ ನೋ ಬಾಲ್
ಜಸ್ಪ್ರೀತ್ ಬುಮ್ರಾ ನಾಲ್ಕನೇ ದಿನದಂದು ಅದ್ಭುತ ಬೌಲಿಂಗ್ ಪ್ರದರ್ಶಿಸಿದರು. ಈಗಾಗಲೇ 2ನೇ ಇನ್ನಿಂಗ್ಸ್ನಲ್ಲಿ ಅವರು 4 ವಿಕೆಟ್ ಪಡೆದಿದ್ದಾರೆ. ಆದರೆ, ದಿನದ ಕೊನೆಯಲ್ಲಿ ದೊಡ್ಡ ತಪ್ಪೊಂದನ್ನು ಮಾಡಿಬಿಟ್ಟರು. ಬುಮ್ರಾ ಬೌಲಿಂಗ್ನಲ್ಲಿ ನಾಥನ್ ಅವರ ಬ್ಯಾಟ್ಗೆ ಎಡ್ಜ್ ಆದ ಚೆಂಡು ಸ್ಲಿಪ್ನಲ್ಲಿ ನಿಂತಿದ್ದ ಕೆಎಲ್ ರಾಹುಲ್ ಕೈ ಸೇರಿತು. ಆದರೆ, ಈ ಚೆಂಡು ಕೈಗೆ ಸೇರದೆ ಕಾಲುಗಳ ನಡುವೆ ಸಿಲುಕಿತು. ಇದು ಔಟೆಂದು ಸಂಭ್ರಮಿಸುತ್ತಿದ್ದ ಆಗ ಅಂಪೈರ್ ಶಾಕ್ ನೀಡಿದರು. ಬುಮ್ರಾ ಹಾಕಿದ ಆ ಎಸೆತ ನೋ ಬಾಲ್ ಎಂದು ಘೋಷಿಸಿದರು. ಅದು ನೋ ಬಾಲ್ ಆಗಿರದಿದ್ದರೆ ಆಸೀಸ್ ಆಲೌಟ್ ಆಗುತ್ತಿತ್ತು. ಈ ಎಲ್ಲದರ ಪರಿಣಾಮ ಭಾರತ ದೊಡ್ಡ ಟಾರ್ಗೆಟ್ ಪಡೆಯುವಂತಾಗಿದೆ.
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. https://kannada.hindustantimes.com/astrology/yearly-horoscope