Video: ಮುಂಬೈ ತಂಡ ಸೇರಿದ ಬೆನ್ನಲ್ಲೇ ಅಭ್ಯಾಸ ಆರಂಭಿಸಿದ ಸೂರ್ಯಕುಮಾರ್ ಯಾದವ್; ಡೆಲ್ಲಿ ವಿರುದ್ಧ ಕಣಕ್ಕಿಳಿಯೋದು ಖಚಿತ
Suryakumar Yadavಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಐಪಿಎಲ್ ಪಂದ್ಯಕ್ಕೂ ಮುನ್ನ, ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ತಂಡ ಸೇರಿಕೊಂಡಿದ್ದಾರೆ. ಅಲ್ಲದೆ ವಾಂಖೆಡೆ ಮೈದಾನದಲ್ಲಿ ಅಭ್ಯಾಸ ಆರಂಭಿಸಿದ್ದಾರೆ.

ಸೋಲಿನ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿರುವ ಮುಂಬೈ ಇಂಡಿಯನ್ಸ್ ತಂಡವು ನಿರಾಳವಾಗುವ ಸಮಯ ಬಂದಿದೆ. ವಿಶ್ವದ ನಂಬರ್ ವನ್ ಟಿ20 ಬ್ಯಾಟರ್ ಸೂರ್ಯಕುಮಾರ್ ಯಾದವ್ (Suryakumar Yadav), ಮಾಜಿ ಚಾಂಪಿಯನ್ ತಂಡದ ಶಿಬಿರ ಸೇರಿಕೊಂಡಿದ್ದಾರೆ. ದೀರ್ಘಕಾಲದ ಗಾಯದ ಸಮಸ್ಯೆಯಿಂದಾಗಿ ಕ್ರಿಕೆಟ್ನಿಂದ ಹೊರಗುಳಿದಿದ್ದ ಸೂರ್ಯ, ಫಿಟ್ನೆಸ್ ಕ್ಲಿಯರೆನ್ಸ್ ಮಾಡಲಾಗದೆ ಈವರೆಗೂ ತಂಡದಿಂದ ಹೊರಗುಳಿದಿದ್ದರು. ಆದರೆ, ಏಪ್ರಿಲ್ 4ರ ಗುರುವಾರ ತಂಡ ಸೇರಿಕೊಂಡ ಅವರು; ಏಪ್ರಿಲ್ 5ರ ಶುಕ್ರವಾರ ಮುಂಬೈ ಇಂಡಿಯನ್ಸ್ ತಂಡದೊಂದಿಗೆ ತರಬೇತಿ ಆರಂಭಿಸಿದ್ದಾರೆ. ಇದು ಫ್ರಾಂಚೈಸ್ ಮಾತ್ರವಲ್ಲದೆ ಅಭಿಮಾನಿಗಳಿಗೂ ಖುಷಿ ಕೊಟ್ಟಿದೆ.
ಪಂದ್ಯಾವಳಿ ಆರಂಭವಾದ ಸಂದರ್ಭದಲ್ಲಿ ಸೂರ್ಯಕುಮಾರ್ ಯಾದವ್ ತಂಡ ಸೇರಿಕೊಳ್ಳುವ ನಿರೇಕ್ಷೆ ಇತ್ತು. ಆದರೆ, ಎಲ್ಲಾ ರೀತಿಯ ಫಿಟ್ನೆಸ್ ಪರೀಕ್ಷೆಯಲ್ಲಿ ಅವರು ಪಾಸ್ ಆಗಿರಲಿಲ್ಲ. ಹೀಗಾಗಿ ತಡವಾಗಿ ತಂಡದ ಶಿಬಿರ ಸೇರಿಕೊಂಡಿದ್ದಾರೆ. ಅಭ್ಯಾಸದ ವೇಳೆ ಯಾವುದೇ ರೀತಿಯ ಅಸ್ವಸ್ಥತೆ ಇಲ್ಲದೆ, ಅವರು ತಮ್ಮ ಟ್ರೇಡ್ ಮಾರ್ಕ್ ಶಾಟ್ಗಳನ್ನು ಅಭ್ಯಾಸ ಮಾಡಿದ್ದಾರೆ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ತಂಡದ ಮುಂದಿನ ಪಂದ್ಯದಲ್ಲಿ ಆವರು ಆಡುವುದು ಬಹುತೇಕ ಖಚಿತವಾಗಿದೆ.
ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾಗಿರುವ ಮುಂಬೈ ಇಂಡಿಯನ್ಸ್, ಐದು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಆದರೆ ಪ್ರಸಕ್ತ ಆವೃತ್ತಿಯಲ್ಲಿ ತಂಡ ಈವರೆಗೆ ಆಡಿರುವ ಎಲ್ಲಾ ಮೂರು ಪಂದ್ಯಗಳಲ್ಲಿ ಸೋತು, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಇದೀಗ ಸೂರ್ಯಕುಮಾರ್ ಆಗಮನದಿಂದ ತಂಡಕ್ಕೆ ಆನೆಬಲ ಬಂದಂತಾಗಿದ್ದು, ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡದ ಅದೃಷ್ಟ ಬದಲಾವಣೆಯಾಗುತ್ತಾ ಎಂಬುದನ್ನು ಕಾದುನೋಡಬೇಕಿದೆ.
ಜನವರಿಯಿಂದ ಕ್ರಿಕೆಟ್ ಆಡಿಲ್ಲ ಸೂರ್ಯ
ಈ ವರ್ಷದ ಜನವರಿ ತಿಂಗಳಿಂದ ಸೂರ್ಯ ಮೈದಾನಕ್ಕಿಳಿದಿಲ್ಲ. ಕಳೆದ ವರ್ಷದ ಕೊನೆಯಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಪಾದದ ಗಾಯಕ್ಕೆ ಒಳಗಾಗಿದ್ದ ಸೂರ್ಯ, ಆ ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆ ನಂತರ ಬೆಂಗಳೂರಿನ ಎನ್ಸಿಎನಲ್ಲಿ ಚೇತರಿಸಿಕೊಂಡಿದ್ದಾರೆ.
ಇದನ್ನೂ ಓದಿ | IPL 2024: ಮೋಹಿತ್ ಶರ್ಮಾಗೆ ಪರ್ಪಲ್ ಕ್ಯಾಪ್; ಆರೆಂಜ್ ಕ್ಯಾಪ್ ರೇಸ್ನಲ್ಲಿ ಶುಭ್ಮನ್ ಗಿಲ್, ಸಾಯಿ ಸುದರ್ಶನ್
ಐಪಿಎಲ್ 2024 ಟೀಮ್ ಸ್ಟಾಟ್
ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಸಿಬ್ಬಂದಿಯು ಸೂರ್ಯ ಅವರಿಗೆ ಮೈದಾನಕ್ಕಿಳಿಯಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅದರಂತೆಯೇ ಮುಂಬೈನ ವಾಂಖೆಡೆ ಮೈದಾನದಲ್ಲಿ ಅವರು ಒಂದು ಗಂಟೆಗೂ ಹೆಚ್ಚು ಕಾಲ ನೆಟ್ಸ್ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಅಲ್ಲದೆ, ಥ್ರೋಡೌನ್ ಸ್ಪೆಷಲಿಸ್ಟ್ಗಳು ಮತ್ತು ಮುಂಬೈ ತಂಡದ ಸ್ಪಿನ್ನರ್ ಕುಮಾರ್ ಕಾರ್ತಿಕೇಯ ಎಸೆತಕ್ಕೆ ಬ್ಯಾಟಿಂಗ್ ಅಭ್ಯಾಸ ಮಾಡಿದ್ದಾರೆ. ಈ ವೇಳೆ ಮೈದಾನದ ಎಲ್ಲಾ ಭಾಗಗಳಿಗೂ ಹೊಡೆದಿದ್ದಾರೆ.
ಮುಂಬೈ ತಂಡವು ತವರು ನೆಲದಲ್ಲಿ ಆಡಿದ ಕೊನೆಯ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರು ವಿಕೆಟ್ಗಳಿಂದ ಸೋತಿತ್ತು. ಇದೀಗ ತಂಡಕ್ಕೆ ಗೆಲುವು ಅನಿವಾರ್ಯವಾಗಿದ್ದು, ಡೆಲ್ಲಿ ವಿರುದ್ಧ ಜಯದ ಹಳಿಗೆ ನಿರೀಕ್ಷೆ ತಂಡದ್ದು.
ಇದನ್ನೂ ಓದಿ | ಆರ್ಸಿಬಿ ಸೋಲಿಗೂ ಅಶ್ವಿನಿ ಪುನೀತ್ ರಾಜ್ಕುಮಾರ್ಗೂ ಎಲ್ಲಿಂದ ಎಲ್ಲಿಯ ಸಂಬಂಧ! ಮನಸ್ಸು ಒಡೆಯಿತು ಅತಿರೇಕದ ಪೋಸ್ಟ್
ಐಪಿಎಲ್ 2024 ಪಾಯಿಂಟ್ಸ್ ಟೇಬಲ್
ಐಪಿಎಲ್ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
