ಸಿಎಸ್ಕೆ ಪ್ಲೇಆಫ್ ಹೋಗುವುದು ಕಷ್ಟ; ತನ್ನ ನೆಚ್ಚಿನ ಚೆನ್ನೈ ತಂಡಕ್ಕೆ ಬೆಂಡೆತ್ತಿದ ಅಂಬಾಟಿ ರಾಯುಡು
ಮುಂದಿನ ಐಪಿಎಲ್ಗೆ ಸಿದ್ಧತೆ ನಡೆಸುತ್ತಿರುವ ಕುರಿತು ಎಂಎಸ್ ಧೋನಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅಂಬಾಟಿ ರಾಯುಡು, ಸಿಎಸ್ಕೆ ಪ್ಲೇಆಫ್ಗೆ ಹೋಗುವುದು ಕಷ್ಟ ಎಂದು ಹೇಳಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ 38ನೇ ಪಂದ್ಯದಲ್ಲಿ ಮುಂಬೈನ ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧ 9 ವಿಕೆಟ್ಗಳ ಸೋಲಿನ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ಅಂಬಾಟಿ ರಾಯುಡು ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಟೀಕಿಸಿದ್ದಾರೆ. ಪ್ಲೇಆಫ್ಗೆ ಪ್ರವೇಶಿಸುವ ಅವಕಾಶ ಸಿಎಸ್ಕೆ ಕಳೆದುಕೊಂಡಿರಬಹುದು ಎಂದು ರಾಯುಡು ಅಭಿಪ್ರಾಯಪಟ್ಟಿದ್ದಾರೆ.
ಋತುರಾಜ್ ಗಾಯಕ್ವಾಡ್ ನಾಯಕತ್ವದಲ್ಲಿ ಸಿಎಸ್ಕೆ 5 ಪಂದ್ಯಗಳಲ್ಲಿ ಕೇವಲ 1 ಗೆಲುವು, 4 ಸೋಲು ಕಂಡಿತ್ತು. ಇಂಜುರಿಯಿಂದ ಗಾಯಕ್ವಾಡ್ ಹೊರಬಿದ್ದ ಹಿನ್ನೆಲೆ ಎಂಎಸ್ ಧೋನಿ ಮತ್ತೆ ನಾಯಕನಾಗಿ ನೇಮಕಗೊಂಡರು. ಹೀಗಾಗಿ ಸಿಎಸ್ಕೆಗೆ ಗೆಲುವಿನ ಟ್ರ್ಯಾಕ್ಗೆ ಮರಳುವ ವಿಶ್ವಾಸ ಹೊಂದಿತ್ತು. ಆದರೆ ಅವರು ನಾಯಕನಾಗಿ ಮರಳಿದ ಪಂದ್ಯದಲ್ಲೇ ಸಿಎಸ್ಕೆ ಮುಗ್ಗರಿಸಿತ್ತು. ಆದರೆ ಮರು ಪಂದ್ಯದಲ್ಲೇ ಕಂಬ್ಯಾಕ್ ಮಾಡಿದರು.
ಸತತ ಐದು ಸೋಲುಗಳ ನಂತರ ಧೋನಿ ನಾಯಕತ್ವದ ಸಿಎಸ್ಕೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿತ್ತು. ಇದರೊಂದಿಗೆ ಮರಳುವ ಭರವಸೆ ಮೂಡಿಸಿತ್ತು. ಆದರೆ, ಐದು ಬಾರಿ ಚಾಂಪಿಯನ್ ಆಗಿರುವ ಸಿಎಸ್ಕೆ ಇದೀಗ ಮತ್ತೆ ಮುಗ್ಗರಿಸಿದೆ. ಮುಂಬೈ ವಿರುದ್ಧ ಸೋಲು ಅನುಭವಿಸಿತು. ಆದರೆ ಈ ಸೋಲು ಪ್ಲೇಆಫ್ ಪ್ರವೇಶಿಸಲು ಮತ್ತಷ್ಟು ಕಠಿಣವಾಗುವಂತೆ ಮಾಡಿದೆ.
ಧೋನಿ ನೇತೃತ್ವದ ತಂಡವು ಆಡಿರುವ 8 ಪಂದ್ಯಗಳಲ್ಲಿ 2 ಗೆಲುವು, 6 ಸೋಲಿನೊಂದಿಗೆ 4 ಅಂಕ ಪಡೆದು ಕೊನೆಯ ಸ್ಥಾನದಲ್ಲಿದೆ. ಈಗ ಸಿಎಸ್ಕೆ ಮುಂದೆ 6 ಪಂದ್ಯಗಳಷ್ಟೇ ಇದ್ದು, ಎಲ್ಲವನ್ನೂ ಗೆದ್ದರಷ್ಟೆ ಉಳಿಗಾಲ. ಒಂದು ಪಂದ್ಯ ಸೋತರೂ ಲೀಗ್ ಹಂತದಿಂದಲೇ ಹೊರಬೀಳುವ ಸಾಧ್ಯತೆ ಇದೆ. ಇದೀಗ ಮುಂಬೈ ವಿರುದ್ಧ ಸೋಲಿನ ಬೆನ್ನಲ್ಲೇ ಅಂಬಾಟಿ ರಾಯುಡು ಚೆನ್ನೈನ ಭವಿಷ್ಯ ನುಡಿದಿದ್ದಾರೆ.
ಚೆನ್ನೈ ಪ್ರದರ್ಶನ ಮತ್ತು ಆ ತಪ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಅಂಬಾಟಿ ರಾಯುಡು, 'ಮಧ್ಯಮ ಓವರ್ಗಳಲ್ಲಿ ಸುಮಾರು 7 ಓವರ್ಗಳು ಕೇವಲ 35 ರನ್ ಗಳಿಸಿದೆ. ಇದು ಅವರಿಗೆ ದೊಡ್ಡ ನಷ್ಟವನ್ನುಂಟು ಮಾಡಿತು. ಟಿ20 ಕ್ರಿಕೆಟ್ನಲ್ಲಿ ಇನ್ನು ಮುಂದೆ ಯಾರೂ ಹಾಗೆ ಆಡಬಾರದು. ಆಟವು ವಿಕಸನಗೊಂಡಿದೆ. ಮಧ್ಯಮ ಓವರ್ಗಳಲ್ಲೂ ಸಹ, ತಂಡಗಳು ಆರೋಗ್ಯಕರ ಸ್ಟ್ರೈಕ್ ರೇಟ್ನಲ್ಲಿ ಸ್ಕೋರ್ ಮಾಡಬೇಕಾಗಿದೆ ಎಂದು ಸಲಹೆ ನೀಡಿದ್ದಾರೆ.
ಸಿಎಸ್ಕೆ ಪ್ಲೇಆಫ್ ಬಗ್ಗೆ ರಾಯುಡು ಭವಿಷ್ಯ
ಸಿಎಸ್ಕೆ ಮುಂದಿನ ಒಂದು ಪಂದ್ಯ ಕಳೆದುಕೊಂಡರೂ ಪ್ರಯಾಣ ಅಂತ್ಯವಾಗಬಹುದು. ಆದರೆ ನೀವು ಹೋರಾಡಬೇಕಾಗುತ್ತದೆ. ಯಾವುದೋ ಒಂದು ಹಂತವನ್ನು ದಾಟಲು ಪ್ರಯತ್ನಿಸಬಾರದು. ಪಿಚ್ಗೆ ತಕ್ಕಂತೆ ಆಡಬೇಕು. ವಾಂಖೆಡೆಯಲ್ಲಿ 190+ ಸ್ಕೋರ್ ಬೇಕಿತ್ತು. ಆದರೆ ಸಿಎಸ್ಕೆ ಸರಿಸಮನಾದ ಹೋರಾಟ ನೀಡಲಿಲ್ಲ. ನಿರ್ಣಾಯಕ ಮಧ್ಯಮ ಹಂತದಲ್ಲಿ ಕಳಪೆ ಬ್ಯಾಟಿಂಗ್ ನೀಡಿದ್ದು ನಿಜಕ್ಕೂ ಅಚ್ಚರಿ ಮೂಡಿಸಿತು ಎಂದಿದ್ದಾರೆ.
ಸಿಎಸ್ಕೆ ಪ್ಲೇಆಫ್ ಬಗ್ಗೆ ಭವಿಷ್ಯ ನುಡಿದ ರಾಯುಡು, ಪ್ರಸಕ್ತ ಆವೃತ್ತಿಯಲ್ಲಿ ಮತ್ತೆ ಸಿಎಸ್ಕೆ ಕಂಬ್ಯಾಕ್ ಮಾಡುವ ಸಾಧ್ಯತೆ ಕಡಿಮೆ. ಪಂದ್ಯದ ನಂತರದ ಮಾತನಾಡಿದ ಧೋನಿ ಕೂಡ ಇದನ್ನೇ ಒಪ್ಪಿಕೊಂಡಿದ್ದಾರೆ. ಅವರು ಮುಂದಿನ ಸೀಸನ್ಗಾಗಿ ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ ಎಂದಿದ್ದಾರೆ. ಚೆನ್ನೈ ಯುವ ಆಟಗಾರರನ್ನು ಬೆಳೆಸಲು ಮತ್ತು ನಿರ್ಭೀತ ಕ್ರಿಕೆಟ್ ಸಂಸ್ಕೃತಿಯನ್ನು ನಿರ್ಮಿಸಲು ಬಯಸುತ್ತಿದೆ. ಅವರು ಹೆಚ್ಚು ಸಕಾರಾತ್ಮಕ ಉದ್ದೇಶದಿಂದ ಆಡಬೇಕು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೊಹ್ಲಿಯನ್ನು ಬಣ್ಣಿಸಿದ ರಾಯುಡು
ಪಿಬಿಕೆಎಸ್ vs ಆರ್ಸಿಬಿ ಪಂದ್ಯದ ಸಮಯದಲ್ಲಿ ವಿರಾಟ್ ಕೊಹ್ಲಿ ಅವರ ದಾಖಲೆಯ 67ನೇ ಐಪಿಎಲ್ 50 ಪ್ಲಸ್ ಕುರಿತು ಪ್ರತಿಕ್ರಿಯಿಸಿದ ಅಂಬಾಟಿ, ಕೊಹ್ಲಿಗೆ ಇದು ಹೇಳಿ ಮಾಡಿಸಿದ ಪರಿಸ್ಥಿತಿಯಾಗಿತ್ತು. ಅವರು ಅದ್ಭುತವಾಗಿ ಪ್ರದರ್ಶನ ನೀಡಿದರು. ಅವರ ತಲೆಯಲ್ಲಿ ಕಂಪ್ಯೂಟರ್ ಇದ್ದಂತೆ, ಇನ್ನಿಂಗ್ಸ್ ಅನ್ನು ಹೇಗೆ ವೇಗಗೊಳಿಸಬೇಕೆಂದು ಅವರಿಗೆ ನಿಖರವಾಗಿ ತಿಳಿದಿದೆ. ಯಾವಾಗ ದಾಳಿ ಮಾಡಬೇಕು ಮತ್ತು ಯಾವಾಗ ಸ್ಟ್ರೈಕ್ ಅನ್ನು ತಿರುಗಿಸಬೇಕು ಎಂದು ತಿಳಿದುಕೊಳ್ಳುವಲ್ಲಿ ಅವರು ಅದ್ಭುತರು ಎಂದಿದ್ದಾರೆ.