ಗುಜರಾತ್ ವಿರುದ್ಧ ಎಲಿಮಿನೇಟರ್ ಜಯಿಸಿದ ಮುಂಬೈ; 2ನೇ ಕ್ವಾಲಿಫೈಯರ್ಗೆ ಎಂಐ ಲಗ್ಗೆ, ಪಂಜಾಬ್ ಕಿಂಗ್ಸ್ ಎದುರಾಳಿ
18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಜಯಿಸಿದ ಮುಂಬೈ ಇಂಡಿಯನ್ಸ್ ಎರಡನೇ ಕ್ವಾಲಿಫೈಯರ್ಗೆ ಲಗ್ಗೆ ಇಟ್ಟಿದೆ.

ರೋಹಿತ್ ಶರ್ಮಾ (81) ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 20 ರನ್ಗಳ ಅಮೋಘ ಗೆಲುವು ಸಾಧಿಸಿ 2ನೇ ಕ್ವಾಲಿಫೈಯರ್ಗೆ ಲಗ್ಗೆ ಇಟ್ಟಿದೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಸೋತಿದ್ದ ಪಂಜಾಬ್ ಕಿಂಗ್ಸ್ ತಂಡವನ್ನು ಮುಂಬೈ ಎದುರಿಸಲಿದೆ. ಈ ಪಂದ್ಯ ಜೂನ್ 1ರಂದು ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಇಲ್ಲಿ ಗೆದ್ದ ತಂಡವು ಜೂನ್ 3ರಂದು ನಡೆಯಲಿರುವ ಫೈನಲ್ಗೆ ಅರ್ಹತೆ ಪಡೆದುಕೊಳ್ಳಲಿದೆ.
ಮುಲ್ಲನ್ಪುರದ ಮಹಾರಾಜ ಯಾದವೀಂದ್ರ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ತಂಡವು ರೋಹಿತ್ ಶರ್ಮಾ ಅವರ ಭರ್ಜರಿ ಬ್ಯಾಟಿಂಗ್ ನೆರವಿನೊಂದಿಗೆ (81) ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 228 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಜಿಟಿ ತಂಡವು ಸಾಯಿ ಸುದರ್ಶನ್ (80) ಹೋರಾಟದ ಹೊರತಾಗಿಯೂ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿತು. 2022ರ ಚಾಂಪಿಯನ್ ತಂಡವು ಎಲಿಮಿನೇಟರ್ನಲ್ಲೇ ತನ್ನ ಅಭಿಯಾನ ಕೊನೆಗೊಳಿಸಿತು.
ಸಾಯಿ ಸುದರ್ಶನ್ ಹೋರಾಟ ವ್ಯರ್ಥ
229 ರನ್ಗಳ ಗುರಿ ಬೆನ್ನಟ್ಟಿದ ಜಿಟಿಗೆ ಸಾಯಿ ಸುದರ್ಶನ್ ನೆರವಾದರು. ಶುಭ್ಮನ್ ಗಿಲ್ (1) ಮೊದಲ ಓವರ್ನಲ್ಲೇ ಔಟಾದರೂ, ಅದರ ಒತ್ತಡದ ನಡುವೆಯೂ ಸುದರ್ಶನ್ ಮುಂಬೈ ಬೌಲರ್ಗಳ ಮೇಲೆ ದಂಡಯಾತ್ರೆ ನಡೆಸಿದರು. 20 ರನ್ಗಳ ಅಲ್ಪಕಾಣಿಕೆ ಒದಗಿಸಿದ ಕುಸಾಲ್ ಮೆಂಡೀಸ್, 2ನೇ ವಿಕೆಟ್ಗೆ 64 ರನ್ಗಳ ಪಾಲುದಾರಿಕೆಗೆ ಸಹಾಯ ಮಾಡಿದರು. ಇವರ ನಂತರ ವಾಷಿಂಗ್ಟನ್ ಸುಂದರ್ ಎಂಐ ಬೌಲರ್ಗಳ ಮೇಲೆ ಸವಾರಿ ಆರಂಭಿಸಿದರು. ಸುದರ್ಶನ್-ಸುಂದರ್ 3ನೇ ವಿಕೆಟ್ಗೆ 84 ರನ್ ಸೇರಿಸಿದರು. ಆದರೆ 48 ರನ್ (5 ಬೌಂಡರಿ, 3 ಸಿಕ್ಸರ್) ಗಳಿಸಿದ್ದಾಗ ಸುಂದರ್ ಔಟಾದರು.
ಇದರ ಬಳಿಕ 49 ಎಸೆತಗಳಲ್ಲಿ 10 ಬೌಂಡರಿ, 1 ಸಿಕ್ಸರ್ ಸಹಿತ 80 ರನ್ ಸಿಡಿಸಿ ಸುದರ್ಶನ್ ಔಟಾದರು. ಇಲ್ಲಿಯತನಕ ಗೆಲ್ಲುವ ಭರವಸೆ ಮೂಡಿಸಿದ್ದ ಜಿಟಿ ಆತಂಕ ಸೃಷ್ಟಿಸಿತು. ಶರ್ಫಾನೆ ರುದರ್ಫೋರ್ಡ್ (24), ರಾಹುಲ್ ತೆವಾಟಿಯಾ (16) ಮತ್ತು ಶಾರೂಖ್ ಖಾನ್ (13) ಗೆಲುವಿಗಾಗಿ ಪ್ರಯತ್ನ ನಡೆಸಿದರಾದರೂ ಅದಕ್ಕೆ ಜಸ್ಪ್ರೀತ್ ಬುಮ್ರಾ ಅವಕಾಶ ನೀಡಲಿಲ್ಲ. ಕೊನೆಯ ಓವರ್ನಲ್ಲಿ ಮಾರಕ ಬೌಲಿಂಗ್ ದಾಳಿ ನಡೆಸಿ ಪಂದ್ಯದ ಚಿತ್ರಣವನ್ನೇ ಬದಲಿಸಿದರು. ಟ್ರೆಂಟ್ ಬೋಲ್ಟ್ 2, ಬುಮ್ರಾ, ಗ್ಲೀಸನ್, ಮಿಚೆಲ್ ಸ್ಯಾಂಟ್ನರ್, ಅಶ್ವಾನಿ ಕುಮಾರ್ ತಲಾ 1 ವಿಕೆಟ್ ಕಿತ್ತರು.
ರೋಹಿತ್ ಶರ್ಮಾ ಪರಾಕ್ರಮ
ಮೊದಲು ಬ್ಯಾಟಿಂಗ್ ನಡೆಸಿದ ಎಂಐ, ಅದ್ಭುತ ಆರಂಭ ಪಡೆಯಿತು. ಮಹತ್ವದ ಪಂದ್ಯದಲ್ಲಿ ರೋಹಿತ್ ಶರ್ಮಾ ಮಿಂಚಿನ ಅರ್ಧಶತಕ ಬಾರಿಸಿದರು. ಇವರಿಗೆ ಜಾನಿ ಬೈರ್ಸ್ಟೋ ಭರ್ಜರಿ ಸಾಥ್ ಕೊಟ್ಟರು. ಮೊದಲ ವಿಕೆಟ್ಗೆ 84 ರನ್ ಹರಿದು ಬಂತು. ಬೈರ್ಸ್ಟೋ 47 ರನ್ ಸಿಡಿಸಿ 3 ರನ್ನಿಂದ ಅರ್ಧಶತಕ ತಪ್ಪಿಸಿಕೊಂಡರು. ಬಳಿಕ ಕಣಕ್ಕೆ ಇಳಿದ ಸೂರ್ಯಕುಮಾರ್ ಸತತ 15ನೇ 25+ ಸ್ಕೋರ್ ಸಿಡಿಸಿದರು. ರೋಹಿತ್ ಜತೆಗೆ 2ನೇ ವಿಕೆಟ್ಗೆ 51 ರನ್ ಜೊತೆಯಾಟವಾಡಿದ ಸೂರ್ಯ, 33 ರನ್ ಸಿಡಿಸಿ ಔಟಾದರು.
ಮತ್ತೊಂದೆಡೆ ನಾಕೌಟ್ನಲ್ಲಿ ಆಕರ್ಷಕ ಅರ್ಧಶತಕ ಬಾರಿಸಿ ರೋಹಿತ್ ಪರಾಕ್ರಮ ಮೆರೆದರು. 50 ಎಸೆತಗಳಲ್ಲಿ 9 ಬೌಂಡರಿ, 4 ಸಿಕ್ಸರ್ ಸಹಿತ 81 ರನ್ ಸಿಡಿಸಿ ಪ್ರಸಿದ್ಧ್ ಕೃಷ್ಣ ಬೌಲಿಂಗ್ನಲ್ಲಿ ಔಟಾದರು. ಅಗ್ರ ಕ್ರಮಾಂಕದ ಮೂವರ ಬಿರುಸಿನ ಬ್ಯಾಟಿಂಗ್ ಬಳಿಕ ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ ಸ್ಕೋರ್ ಕಾರ್ಡ್ನಲ್ಲಿ ತಂಡದ ಮೊತ್ತವನ್ನು 200 ಗಡಿ ದಾಟಿಸುವ ಮೂಲಕ ಗಮನ ಸೆಳೆದರು.
ಅದರಲ್ಲೂ ಹಾರ್ದಿಕ್ ಕೊನೆಯ ಓವರ್ನಲ್ಲಿ 22 ರನ್ ಚಚ್ಚುವ ಮೂಲಕ ಗೆಲುವಿನಲ್ಲಿ ದೊಡ್ಡ ಮೊತ್ತ ಕಲೆ ಹಾಕಲು ನೆರವಾದರು. ತಿಲಕ್ 25 (3 ಸಿಕ್ಸರ್), ಪಾಂಡ್ಯ ಅಜೇಯ 22 ರನ್ (3 ಸಿಕ್ಸರ್) ಸಿಡಿಸಿದರು. ಗುಜರಾತ್ ಪರ ಪ್ರಸಿದ್ಧ್ ಕೃಷ್ಣ ಮತ್ತು ಸಾಯಿ ಕಿಶೋರ್ ತಲಾ 2 ವಿಕೆಟ್ ಪಡೆದರು. ಮೊಹಮ್ಮದ್ ಸಿರಾಜ್ 1 ವಿಕೆಟ್ ಉರುಳಿಸಿದರು. ಆದರೆ ವಿಕೆಟ್ ಪಡೆದರೂ ಹೆಚ್ಚು ರನ್ ಬಿಟ್ಟುಕೊಟ್ಟರು.