ಕೆಕೆಆರ್​​ vs ಪಿಬಿಕೆಎಸ್​ ಪಂದ್ಯ ಮಳೆಗೆ ಆಹುತಿ; ಉಭಯ ತಂಡಗಳಿಗೂ ಸಿಕ್ತು ತಲಾ ಒಂದು ಅಂಕ
ಕನ್ನಡ ಸುದ್ದಿ  /  ಕ್ರಿಕೆಟ್  /  ಕೆಕೆಆರ್​​ Vs ಪಿಬಿಕೆಎಸ್​ ಪಂದ್ಯ ಮಳೆಗೆ ಆಹುತಿ; ಉಭಯ ತಂಡಗಳಿಗೂ ಸಿಕ್ತು ತಲಾ ಒಂದು ಅಂಕ

ಕೆಕೆಆರ್​​ vs ಪಿಬಿಕೆಎಸ್​ ಪಂದ್ಯ ಮಳೆಗೆ ಆಹುತಿ; ಉಭಯ ತಂಡಗಳಿಗೂ ಸಿಕ್ತು ತಲಾ ಒಂದು ಅಂಕ

ಇಂಡಿಯನ್ ಪ್ರೀಮಿಯರ್ ಲೀಗ್​ 2025ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳ ನಡುವಿನ 44ನೇ ಪಂದ್ಯವು ಮಳೆಯಿಂದ ರದ್ದಾಗಿದ್ದು, ಉಭಯ ತಂಡಗಳಿಗೂ ತಲಾ ಒಂದು ಅಂಕ ಸಿಕ್ಕಿದೆ.

ಕೆಕೆಆರ್​​ vs ಪಿಬಿಕೆಎಸ್​ ಪಂದ್ಯ ಮಳೆಗೆ ಆಹುತಿ; ಉಭಯ ತಂಡಗಳಿಗೂ ಸಿಕ್ತು ತಲಾ ಒಂದು ಅಂಕ
ಕೆಕೆಆರ್​​ vs ಪಿಬಿಕೆಎಸ್​ ಪಂದ್ಯ ಮಳೆಗೆ ಆಹುತಿ; ಉಭಯ ತಂಡಗಳಿಗೂ ಸಿಕ್ತು ತಲಾ ಒಂದು ಅಂಕ (Hindustan Times)

ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ 2025ರ ಇಂಡಿಯನ್ ಪ್ರೀಮಿಯರ್ ಲೀಗ್​ನ 44ನೇ ಪಂದ್ಯವು ಮಳೆಯಿಂದ ರದ್ದಾಯಿತು. 202 ರನ್​​ಗಳ ಗುರಿ ಬೆನ್ನಟ್ಟಿದ ಕೆಕೆಆರ್​, ಮೊದಲ ಓವರ್​​ನಲ್ಲಿ 7 ರನ್ ಕಲೆ ಹಾಕಿತು. ಗೆಲುವಿಗೆ 114 ಎಸೆತಗಳಿಗೆ 195 ರನ್​ಗಳ ಅಗತ್ಯವಿದ್ದ ವೇಳೆ ಆರಂಭವಾದ ಬಿಡುವು ನೀಡದೆ ಸುರಿಯಿತು. ಓವರ್​​ಗಳ ಕಡಿತಕ್ಕೂ ಅವಕಾಶ ನೀಡದ ಹಿನ್ನೆಲೆ ಪಂದ್ಯವು ಮಳೆಗೆ ಆಹುತಿ ಆಯಿತು. ಹೀಗಾಗಿ ಉಭಯ ತಂಡಗಳಿಗೆ ತಲಾ ಒಂದು ಅಂಕ ನೀಡಲಾಗಿದೆ. ಪ್ಲೇಆಫ್ ದೃಷ್ಟಿಯಿಂದ ಕೆಕೆಆರ್​ಗೆ ಈ ಪಂದ್ಯದ ಗೆಲುವು ಅನಿವಾರ್ಯವಾಗಿತ್ತು.

ಕೋಲ್ಕತ್ತಾದ ಈಡನ್ ಗಾರ್ಡನ್ಸ್​ ಮೈದಾನದಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ ಕಿಂಗ್ಸ್​ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತು. ಪ್ರಭುಸಿಮ್ರಾನ್ ಸಿಂಗ್ (83) ಮತ್ತು ಪ್ರಿಯಾಂಶ್ ಆರ್ಯ (69) ಇಬ್ಬರ ಭರ್ಜರಿ ಅರ್ಧಶತಕಗಳು ಬೃಹತ್ ಮೊತ್ತ ಪೇರಿಸಲು ನೆರವಾಯಿತು. ಕೆಕೆಆರ್ ಪರ ವೈಭವ್ ಆರೋರಾ 2, ಆಂಡ್ರೆ ರಸೆಲ್ ಮತ್ತು ವರುಣ್ ಚಕ್ರವರ್ತಿ ತಲಾ 1 ವಿಕೆಟ್ ಉರುಳಿಸಿದರು. ಬಳಿಕ ಕೋಲ್ಕತ್ತಾ ಮೊದಲ ಓವರ್​​ನಲ್ಲಿ 7 ರನ್ ಗಳಿಸಿತು. ಸುನಿಲ್ ನರೈನ್ 4, ರೆಹಮಾನುಲ್ಲಾ ಗುರ್ಬಾಜ್ 1 ರನ್ ಗಳಿಸಿ ಕ್ರೀಸ್​​ನಲ್ಲಿದ್ದರು.

ಕೆಕೆಆರ್​ ಪ್ಲೇಆಫ್ ಚಾನ್ಸ್

ಕೋಲ್ಕತ್ತಾ ತಂಡವು ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಹಾಲಿ ಚಾಂಪಿಯನ್ ಪಟ್ಟ ಉಳಿಸಿಕೊಳ್ಳಲು ಉಳಿದ ಐದು ಪಂದ್ಯಗಳನ್ನು ಗೆದ್ದು ಪ್ಲೇಆಫ್​​ಗೆ ಪ್ರವೇಶಿಸಬೇಕಿದೆ. ಪ್ರಸ್ತುತ 9 ಪಂದ್ಯಗಳಲ್ಲಿ 3 ಗೆಲುವು, 5 ಸೋಲು, 1 ಪಂದ್ಯ ಫಲಿತಾಂಶ ಕಾಣದೆ ಅಂತ್ಯ ಕಂಡಿದ್ದು 7 ಅಂಕ ಪಡೆದಿದೆ. ಪ್ಲೇಆಫ್ ಪ್ರವೇಶಿಸಲು 14 ಅಂಕ ಪಡೆಯುವುದು ಅಗತ್ಯ. ಜೊತೆಗೆ ಉಳಿದ ತಂಡಗಳು ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಹಿನ್ನೆಲೆ 14 ಅಂಕ ಸಾಲುವುದಿಲ್ಲ ಎಂದೆನಿಸುತ್ತದೆ. ಹೀಗಾಗಿ ಉಳಿದ ಐದು ಪಂದ್ಯಗಳನ್ನೂ ಗೆದ್ದು 17 ಅಂಕ ಪಡೆದರೆ ಪ್ಲೇಆಫ್​ಗೆ ಸುಲಭವಾಗಿ ನಾಲ್ಕರ ಘಟಕ್ಕೆ ಪ್ರವೇಶಿಸಲಿದೆ.

ಪಂಜಾಬ್​​ ಮೂರು ಗೆದ್ದರೆ ಸಾಕು

ಕೆಕೆಆರ್​ಗೆ ಹೋಲಿಸಿದರೆ ಪಂಜಾಬ್​ ಪ್ಲೇಆಫ್​ ಸಾಧ್ಯತೆಗಳು ಸುಲಭವಾಗಿವೆ. ಆಡಿದ 9 ಪಂದ್ಯಗಳಲ್ಲಿ 5 ಗೆಲುವು, 3 ಸೋಲು, 1 ಡ್ರಾ ಸಾಧಿಸಿದ್ದು, 11 ಅಂಕ ಪಡೆದಿದೆ. ಉಳಿದ 5 ಪಂದ್ಯಗಳಲ್ಲಿ 3 ಗೆದ್ದರೆ ಸಾಕು ಪ್ಲೇಆಫ್​ಗೆ ಅರ್ಹತೆ ಪಡೆದುಕೊಳ್ಳಲಿದೆ. ಸದ್ಯ ಎಲ್ಲಾ ತಂಡಗಳ ಕಾಂಪಿಟೇಷನ್ ಹೆಚ್ಚಾಗಿದ್ದು, ಯಾವ ತಂಡವು ಪ್ಲೇಆಫ್​ಗೆ ಪ್ರವೇಶಿಸಲಿದೆ ಎನ್ನುವ ಗೊಂದಲ ಮುಂದುವರೆದಿದೆ. ಈವರೆಗೂ ಯಾವುದೇ ತಂಡ ಎಲಿಮಿನೇಟ್ ಆಗಿಲ್ಲ. ಎಲ್ಲಾ ತಂಡಗಳಿಗೂ ಇನ್ನೂ ಅವಕಾಶ ಇದ್ದು, ಮುಂದಿನ ದಿನಗಳ ಇದರ ಸಂಪೂರ್ಣ ಚಿತ್ರಣ ಗೊತ್ತಾಗಲಿದೆ.

ಆರ್ಯ, ಪ್ರಭು ಅಬ್ಬರ

ಈಡನ್ ಗಾರ್ಡನ್ಸ್​​ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಿಬಿಕೆಎಸ್​, ಉತ್ತಮ ಪ್ರದರ್ಶನ ನೀಡಿತು. ಮೊದಲ ವಿಕೆಟ್​ಗೆ 120 ರನ್​ಗಳು ಹರಿದು ಬಂದವು. ಪ್ರಿಯಾಂಶ್ ಆರ್ಯ ಮತ್ತು ಪ್ರಭುಸಿಮ್ರಾನ್ ಸಿಂಗ್ ಕೆಕೆಆರ್​ ಬೌಲರ್​ಗಳ ಮೇಲೆ ದಂಡಯಾತ್ರೆ ನಡೆಸಿದರು. ಇಬ್ಬರೂ ಅರ್ಧಶತಕ ಸಿಡಿಸಿ ಅಬ್ಬರಿಸಿದರು. ಪ್ರಿಯಾಂಶ್ 35 ಎಸೆತಗಳಲ್ಲಿ 8 ಬೌಂಡರಿ, 4 ಸಿಕ್ಸರ್​ ಸಹಿತ 69 ರನ್ ಗಳಿಸಿದರೆ, ಪ್ರಭು 49 ಎಸೆತಗಳಲ್ಲಿ ತಲಾ 6 ಬೌಂಡರಿ, ಸಿಕ್ಸರ್​​ನೊಂದಿಗೆ 83 ರನ್ ಚಚ್ಚಿದರು. ಶ್ರೇಯಸ್ ಅಯ್ಯರ್ ಅಜೇಯ 25 ರನ್, ಜೋಸ್ ಇಂಗ್ಲಿಸ್ ಅಜೇಯ 6 ರನ್ ಗಳಿಸಿದರು. ಗ್ಲೆನ್ ಮ್ಯಾಕ್ಸ್​ವೆಲ್ ಮತ್ತೆ ನಿರಾಸೆ ಮೂಡಿಸಿದರು. ಅವರು 7 ರನ್​ಗೆ ಆಟ ಮುಗಿಸಿದರು.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.