ಆವೇಶ್ ಖಾನ್ ಮಾರಕ ದಾಳಿ, ಲಕ್ನೋಗೆ 2 ರನ್ ರೋಚಕ ಗೆಲುವು; ಕೈಗೆ ಬಂದ ತುತ್ತು ಕೈಚೆಲ್ಲಿದ ರಾಜಸ್ಥಾನ್ ರಾಯಲ್ಸ್
ಕೊನೆಯ ಎಸೆತದವರೆಗೂ ಪಂದ್ಯ ರಾಜಸ್ಥಾನ್ ರಾಯಲ್ಸ್ ಕೈಯಲ್ಲಿತ್ತು. ಆದರೆ ಆವೇಶ್ ಖಾನ್ ಅವರ ಕೊನೆಯ ಓವರ್ ಪಂದ್ಯದ ಫಲಿತಾಂಶವನ್ನೇ ಬದಲಿಸಿತು. ಕೈಗೆ ಬಂದ ತುತ್ತು ಬಾಯಿಗೆ ತರುವಲ್ಲಿ ರಾಜಸ್ಥಾನ ಎಡವಿತು. ಹೀಗಾಗಿ ಇದು ಅನಿರೀಕ್ಷಿತ ಗೆಲುವು.
ಲಕ್ನೋ ಸೂಪರ್ ಜೈಂಟ್ಸ್ ತಂಡವು ಮತ್ತೆ ಗೆಲುವಿನ ಹಳಿಗೆ ಮರಳಿದೆ. ಅತ್ತ ಕೊನೆಯ ಮೂರು ಪಂದ್ಯಗಳಲ್ಲಿ ಸೋತು ಕಂಗೆಟ್ಟಿದ್ದ ರಾಜಸ್ಥಾನ್ ರಾಯಲ್ಸ್, ಸತತ ಸೋಲಿನ ಸಂಖ್ಯೆಯನ್ನು ನಾಲ್ಕಕ್ಕೇ ಏರಿಸಿದೆ. ರಾಯಲ್ಸ್ ತವರು ಮೈದಾನದಲ್ಲಿ ನಡೆದ ಪಂದ್ಯವು, ಕೊನೆಯ ಓವರ್ನ ಕೊನೆಯ ಎಸೆತದವರೆಗೂ ರೋಚಕತೆ ಉಳಿಸಿತ್ತು. ಆವೇಶ್ ಖಾನ್ ಎಸೆದ ಅಂತಿಮ ಓವರ್ನಲ್ಲಿ ಗೆಲುವಿನ ದಡ ಸೇರಲು ರಾಜಸ್ಥಾನಕ್ಕೆ ಸಾಧ್ಯವಾಗಲಿಲ್ಲ. ಅಂತಿಮ ಓವರ್ನಲ್ಲಿ ಕೇವಲ 6 ರನ್ ಬಿಟ್ಟಿಕೊಟ್ಟು ರಾಯಲ್ಸ್ ದಾಂಡಿಗರನ್ನು ಕಟ್ಟಿಹಾಕಿದ ಆವೇಶ್, ಪಂದ್ಯಕ್ಕೆ ಅಚ್ಚರಿಯ ಫಲಿತಾಂಶ ತಂದುಕೊಡುವಲ್ಲಿ ಯಶಸ್ವಿಯಾದರು.
ಕೊನೆಯ ಓವರ್ನ ಕೊನೆಯ ಎಸೆತದವರೆಗೂ ರಾಜಸ್ಥಾನಕ್ಕೆ ಗೆಲುವು ಹತ್ತಿರವಿತ್ತು. ಆದರೆ ಕೊನೆಯ ಓವರ್ ಎಲ್ಲವನ್ನೂ ಬದಲಿಸಿತು. ಈ ಶ್ರೇಯಸ್ಸು ಆವೇಶ್ ಖಾನ್ಗೆ ಸಲ್ಲುತ್ತದೆ. ಇದು ಲಕ್ನೋ ಪಾಲಿಗೆ ಅಚ್ಚರಿಯ ಗೆಲುವೇ ಸರಿ. ಇದೇ ವೇಳೆ ರಾಜಸ್ಥಾನಕ್ಕೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಬೇಸರವಂತೂ ಪಕ್ಕ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಎಲ್ಎಸ್ಜಿ 180 ರನ್ ಗಳಿಸಿತು. ಚೇಸಿಂಗ್ ನಡೆಸಿದ ರಾಯಲ್ಸ್ 5 ವಿಕೆಟ್ ಕಳೆದುಕೊಂಡು 178 ರನ್ ಗಳಿಸಿತು. ಇದರೊಂದಿಗೆ ಕೇವಲ 2 ರನ್ಗಳಿಂದ ಪಂದ್ಯ ಸೋತಿತು. ಹಲವು ದಾಖಲೆಗಳು ಹಾಗೂ ಹೊಸತನಕ್ಕೆ ಕಾರಣವಾದ ಪಂದ್ಯದಲ್ಲಿ ಎಲ್ಎಸ್ಜಿ ಗೆದ್ದು ಬೀಗಿದೆ. ಲಕ್ನೋ ತಂಡಕ್ಕೆ ಇದು ಟೂರ್ನಿಯಲ್ಲಿ 5ನೇ ಗೆಲುವಾದರೆ, ರಾಜಸ್ಥಾನಕ್ಕೆ ಇದು 6ನೇ ಸೋಲು.
ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಪರ, ಇನ್ಫಾರ್ಮ್ ಬ್ಯಾಟರ್ ಮಿಚೆಲ್ ಮಾರ್ಷ್ 4 ರನ್ ಮಾತ್ರ ಗಳಿಸಿ ಔಟಾದರು. ಟೂರ್ನಿಯ ಆರೆಂಜ್ ಕ್ಯಾಪ್ ವಿಜೇತ ಆಟಗಾರ ನಿಕೋಲಸ್ ಪೂರನ್, 11 ರನ್ ಗಳಿಸಿದ್ದಾಗ ಸಂದೀಪ್ ಶರ್ಮಾ ಎಸೆತದಲ್ಲಿ ಎಲ್ಬಿಡಬ್ಲ್ಯು ಬಲೆಗೆ ಬಿದ್ದರು. ಟೂರ್ನಿಯಲ್ಲಿ ತಂಡದ ಇಬ್ಬರು ಟಾಪ್ ಸ್ಕೋರರ್ಗಳು ಅಲ್ಪಮೊತ್ತಕ್ಕೆ ಔಟಾಗಿ ನಿರಾಶೆ ಮೂಡಿಸಿದರು. ಮತ್ತೆ ಬ್ಯಾಟ್ ಬೀಸಲು ವಿಫಲರಾದ ನಾಯಕ ರಿಷಭ್ ಪಂತ್ 3 ರನ್ ಮಾತ್ರ ಗಳಿಸಿದರು.
ಮರ್ಕ್ರಾಮ್ - ಬದೋನಿ ಜೊತೆಯಾಟ
ಈ ವೇಳೆ ಒಂದಾದ ಮರ್ಕ್ರಾಮ್ ಮತ್ತು ಆಯುಷ್ ಬದೋನಿ ಆಕರ್ಷಕ ಜೊತೆಯಾಟವಾಡಿದರು. ಮರ್ಕ್ರಾಮ್ ಆಕರ್ಷಕ ಅರ್ಧಶತಕ ಸಿಡಿಸಿದರು. 45 ಎಸೆತಗಳಲ್ಲಿ ಮೂರು ಸಿಕ್ಸರ್ ಸಹಿತ 66 ರನ್ ಸಿಡಿಸಿದರು. ಆಯುಷ್ ಬದೋನಿ ಕೂಡಾ ಅರ್ಧಶತಕ ಸಿಡಿಸಿ ವಿಕೆಟ್ ಒಪ್ಪಿಸಿದರು. ಕೊನೆಯ ಓವರ್ನಲ್ಲಿ ಅಬ್ಬರಿಸಿದ ಅಬ್ದುಲ್ ಸಮದ್, ನಾಲ್ಕು ಸ್ಫೋಟಕ ಸಿಕ್ಸರ್ ಸಹಿತ 30 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.
ಉತ್ತಮ ಪ್ರದರ್ಶನ ಹೊರತಾಗಿಯೂ ರಾಜಸ್ಥಾನಕ್ಕೆ ಸೋಲು
ಚೇಸಿಂಗ್ ಆರಂಭಿಸಿದ ರಾಜಸ್ಥಾನಕ್ಕೆ ಉತ್ತಮ ಆರಂಭ ಸಿಕ್ಕಿತು. ಯಶಸ್ವಿ ಜೈಸ್ವಾಲ್ ಹಾಗೂ ಐಪಿಎಲ್ ಪದಾರ್ಪಣೆ ಮಾಡಿದ ಅತ್ಯಂಕ ಕಿರಿಯ ಆಟಗಾರ ವೈಭವ್ ಸೂರ್ಯವಂಶಿ ಮೊದಲ ವಿಕೆಟ್ಗೆ 85 ರನ್ಗಳ ಆಕರ್ಷಕ ಜೊತೆಯಾಟವಾಡಿದರು. ಚೊಚ್ಚಲ ಐಪಿಎಲ್ ಪಂದ್ಯದಲ್ಲೇ ಅಬ್ಬರಿಸಿದ ವೈಭವ್, 20 ಎಸೆತಗಳಲ್ಲಿ 34 ರನ್ ಸಿಡಿಸಿ ಔಟಾದರು. ಅವರ ಬೆನ್ನಲ್ಲೇ 8 ರನ್ ಗಳಿಸಿದ ನಿತೀಶ್ ರಾಣಾ ಕೂಡಾ ವಿಕೆಟ್ ಒಪ್ಪಿಸಿದರು.
ಕೊನೆಯ ರೋಚಕ ಓವರ್
ತಂಡದ ಮೊತ್ತ 156 ಆಗುವವರೆಗೂ ರಾಜಸ್ಥಾನ ಕೇವಲ 2 ವಿಕೆಟ್ ಮಾತ್ರ ಕಳೆದುಕೊಂಡು ಸುಸ್ಥಿತಿಯಲ್ಲಿತ್ತು. ಆದರೆ, 52 ಎಸೆತಗಳಲ್ಲಿ 74 ರನ್ ಗಳಿಸಿದ್ದ ಜೈಸ್ವಾಲ್ ಔಟಾಗುತ್ತಿದ್ದಂತೆಯೇ ತಂಡದ ಸೋಲು ಸನ್ನಿಹಿತವಾಯ್ತು. ರಿಯಾನ್ ಪರಾಗ್ 39 ರನ್ ಗಳಿಸಿ ಔಟಾದ ಬೆನ್ನಲ್ಲೇ ಹೆಟ್ಮಾಯರ್ ಕೂಡಾ 12 ರನ್ ಗಳಿಸಿ ಔಟಾದರು. ಧ್ರುವ್ ಜುರೆಲ್ಗೆ ಸ್ಟ್ರೈಕ್ ಸರಿಯಾಗಿ ಸಿಗಲಿಲ್ಲ. ಕೊನೆಯ 3 ಎಸೆತಗಳಲ್ಲಿ 6 ರನ್ ಅಗತ್ಯವಿದ್ದಾಗ ಶುಭಂ ದುಬೆ ಸ್ಟ್ರೈಕ್ಗೆ ಬಂದರು. ಆದರೆ ಅವರಿಂದ 3 ರನ್ ಮಾತ್ರ ಗಳಿಸಲು ಸಾಧ್ಯವಾಯ್ತು.