ಪ್ಲೇಆಫ್ ಸನಿಹದಲ್ಲಿರುವ ಆರ್ಸಿಬಿಗೆ ದೊಡ್ಡ ಆಘಾತ; ಗಾಯದಿಂದ ದೇವದತ್ ಪಡಿಕ್ಕಲ್ ಔಟ್, ಮತ್ತೊಬ್ಬ ಕನ್ನಡಿಗ ಸೇರ್ಪಡೆ
2025ರ ಐಪಿಎಲ್ನಲ್ಲಿ ಪ್ಲೇಆಫ್ ಸನಿಹದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ದೊಡ್ಡ ಆಘಾತವಾಗಿದೆ. ಗಾಯದಿಂದ ದೇವದತ್ ಪಡಿಕ್ಕಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.

18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪ್ಲೇಆಫ್ ಸನಿಹಕ್ಕೆ ಬಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ದೊಡ್ಡ ಆಘಾತವಾಗಿದೆ. ಇಂಪ್ಯಾಕ್ಟ್ ಪ್ಲೇಯರ್ ಆಗಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತಿದ್ದ ಕನ್ನಡಿಗ ಹಾಗೂ ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್ ಅವರು ಗಾಯಗೊಂಡು ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಪಡಿಕ್ಕಲ್ ಬದಲಿಗೆ ಮತ್ತೊಬ್ಬ ಕನ್ನಡಿಗ ಮಯಾಂಕ್ ಅಗರ್ವಾಲ್ ಆರ್ಸಿಬಿ ಸೇರಿದ್ದಾರೆ.
ಪ್ರಸಕ್ತ ಆವೃತ್ತಿಯಲ್ಲಿ ಆರ್ಸಿಬಿ ಪರ 10 ಪಂದ್ಯಗಳನ್ನು ಆಡಿರುವ ಪಡಿಕ್ಕಲ್, ಭರ್ಜರಿ 2 ಅರ್ಧಶತಕಗಳ ಸಹಾಯದಿಂದ 247 ರನ್ ಗಳಿಸಿದ್ದರು. ಆದರೆ ಪಡಿಕ್ಕಲ್ ಬಲ ಮಂಡಿರಜ್ಜು ಗಾಯಕ್ಕೆ ಒಳಗಾಗಿರುವ ಹಿನ್ನೆಲೆ ತಂಡದಿಂದ ಹೊರಬಿದ್ದಿದ್ದಾರೆ. ಅಲ್ಲದೆ, ಅವರನ್ನು ಕಳೆದುಕೊಂಡಿರುವ ಆರ್ಸಿಬಿಗೂ ನಷ್ಟವಾಗಿದೆ. ಅಗರ್ವಾಲ್ ಈವರೆಗೆ 127 ಐಪಿಎಲ್ ಪಂದ್ಯಗಳನ್ನು ಆಡಿದ್ದು, 2661 ರನ್ ಗಳಿಸಿದ್ದಾರೆ. ಶತಕ ಮತ್ತು 13 ಅರ್ಧಶತಕ ಸಿಡಿಸಿದ್ದು, 1 ಕೋಟಿ ರೂ.ಗೆ ಆರ್ಸಿಬಿ ಸೇರಿದ್ದಾರೆ.
ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಮಾಯಾಂಕ್ ಅವರ ಮೂಲ ಬೆಲೆ 1 ಕೋಟಿ ರೂಪಾಯಿ ಹೊಂದಿದ್ದರು. ಆದರೂ ಅನ್ಸೋಲ್ಡ್ ಆಗಿದ್ದರು. ಇದೀಗ ಮಯಾಂಕ್ರನ್ನು ತಂಡಕ್ಕೆ ಸೇರ್ಪಡೆ ಮಾಡಿರುವ ಕುರಿತು ಐಪಿಎಲ್ ಆಡಳಿತ ಮಂಡಳಿ ದೃಢಪಡಿಸಿದೆ. 'ಗಾಯಗೊಂಡ ದೇವದತ್ ಪಡಿಕ್ಕಲ್ ಬದಲಿಗೆ ಮಾಯಾಂಕ್ ಅವರನ್ನು ಆರ್ಸಿಬಿ ಆಯ್ಕೆ ಮಾಡಿದೆ ಎಂದು ತಿಳಿಸಿದೆ. ಪಡಿಕ್ಕಲ್ ಅವರು ಮೂಲ ಬೆಲೆ 2 ಕೋಟಿ ರೂ. ಆರ್ಸಿಬಿ ತಂಡಕ್ಕೆ ಖರೀದಿಯಾಗಿದ್ದರು.
ಮಯಾಂಕ್ಗೆ ಸಿಗುತ್ತಾ ಆಡುವ ಅವಕಾಶ?
ಪಡಿಕ್ಕಲ್ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಮಿಂಚಿದ್ದರು. ಆದರೀಗ ಅವರ ಸ್ಥಾನಕ್ಕೆ ಆಯ್ಕೆಯಾದ ಮಯಾಂಕ್ಗೆ ಪ್ಲೇಯಿಂಗ್ 11ನಲ್ಲಿ ಆಡುವ ಅವಕಾಶ ಸಿಗುವ ಸಾಧ್ಯತೆ ತೀರಾ ಕಡಿಮೆ ಎನ್ನಬಹುದು. ಏಕೆಂದರೆ ತಂಡವು ಉತ್ತಮ ಲಯದಲ್ಲಿದ್ದು, ಪ್ರಯೋಗಕ್ಕೆ ಮುಂದಾಗುವುದಿಲ್ಲ ಎನ್ನಬಹುದು. ಆದರೆ ಆ ಸ್ಥಾನಕ್ಕೆ ಸ್ವಸ್ತಿಕ್ ಚಿಕಾರ ಅವರಿಗೆ ಅವಕಾಶ ನೀಡಬಹುದು. ಸದ್ಯ ಆರ್ಸಿಬಿ ಆಡಿರುವ 11 ಪಂದ್ಯಗಳಲ್ಲಿ 8 ಗೆಲುವು, 3 ಸೋಲಿನೊಂದಿಗೆ 16 ಅಂಕ ಪಡೆದು ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.
ಫಿಲ್ ಸಾಲ್ಟ್, ಹೇಜಲ್ವುಡ್ಗೂ ಗಾಯ?
ದೇವದತ್ ಪಡಿಕ್ಕಲ್ ಜೊತೆಗೆ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಮತ್ತು ವೇಗದ ಬೌಲರ್ ಜೋಶ್ ಹೇಜಲ್ವುಡ್ ಅವರೂ ಗಾಯಗೊಂಡಿದ್ದಾರೆ. ಇದೇ ಕಾರಣಕ್ಕೆ ಕಳೆದ ಪಂದ್ಯದಲ್ಲಿ ಇಬ್ಬರೂ ಕಣಕ್ಕಿಳಿದಿರಲಿಲ್ಲ. ಇವರ ಬದಲಿಗೆ ಜೇಕಬ್ ಬೆಥಲ್ ಮತ್ತು ಲುಂಗಿ ಎನ್ಗಿಡಿ ಅವಕಾಶ ಪಡೆದಿದ್ದರು. ಅಲ್ಲದೆ, ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ಮತ್ತೊಂದೆಡೆ ನಾಯಕ ರಜತ್ ಪಾಟೀದಾರ್ ಸಹ ಬೆರಳು ನೋವಿಗೆ ತುತ್ತಾಗಿದ್ದಾರೆ ಎಂದು ವರದಿಯಾಗಿದೆ.
ಆರ್ಸಿಬಿ ಪರಿಷ್ಕೃತ ತಂಡ
ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ರಜತ್ ಪಾಟೀದಾರ್ (ನಾಯಕ), ಲಿಯಾಮ್ ಲಿವಿಂಗ್ಸ್ಟೋನ್, ಜಿತೇಶ್ ಶರ್ಮಾ, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ರಸಿಕ್ ದಾರ್ ಸಲಾಂ, ಸುಯಾಶ್ ಶರ್ಮಾ, ಜೋಶ್ ಹೇಜಲ್ವುಡ್, ಯಶ್ ದಯಾಳ್, ಮಯಾಂಕ್ ಅಗರ್ವಾಲ್, ಅಭಿನಂದನ್ ಸಿಂಗ್, ಮನೋಜ್ ಭಾಂಡಗೆ, ರೊಮಾರಿಯೊ ಶೆಫರ್ಡ್, ಸ್ವಪ್ನಿಲ್ ಸಿಂಗ್, ಭುವನೇಶ್ವರ್ ಕುಮಾರ್, ಲುಂಗಿ ಎನ್ಗಿಡಿ, ನುವಾನ್ ತುಶಾರ, ಜೇಕಬ್ ಬೆಥಲ್, ಮೋಹಿತ್ ರಾಠಿ, ಸ್ವಸ್ತಿಕ್ ಚಿಕಾರ.