ಪ್ಲೇಆಫ್ ಸನಿಹದಲ್ಲಿರುವ ಆರ್​ಸಿಬಿಗೆ ದೊಡ್ಡ ಆಘಾತ; ಗಾಯದಿಂದ ದೇವದತ್ ಪಡಿಕ್ಕಲ್ ಔಟ್, ಮತ್ತೊಬ್ಬ ಕನ್ನಡಿಗ ಸೇರ್ಪಡೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಪ್ಲೇಆಫ್ ಸನಿಹದಲ್ಲಿರುವ ಆರ್​ಸಿಬಿಗೆ ದೊಡ್ಡ ಆಘಾತ; ಗಾಯದಿಂದ ದೇವದತ್ ಪಡಿಕ್ಕಲ್ ಔಟ್, ಮತ್ತೊಬ್ಬ ಕನ್ನಡಿಗ ಸೇರ್ಪಡೆ

ಪ್ಲೇಆಫ್ ಸನಿಹದಲ್ಲಿರುವ ಆರ್​ಸಿಬಿಗೆ ದೊಡ್ಡ ಆಘಾತ; ಗಾಯದಿಂದ ದೇವದತ್ ಪಡಿಕ್ಕಲ್ ಔಟ್, ಮತ್ತೊಬ್ಬ ಕನ್ನಡಿಗ ಸೇರ್ಪಡೆ

2025ರ ಐಪಿಎಲ್​ನಲ್ಲಿ ಪ್ಲೇಆಫ್ ಸನಿಹದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ದೊಡ್ಡ ಆಘಾತವಾಗಿದೆ. ಗಾಯದಿಂದ ದೇವದತ್ ಪಡಿಕ್ಕಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಪ್ಲೇಆಫ್ ಸನಿಹದಲ್ಲಿರುವ ಆರ್​ಸಿಬಿಗೆ ದೊಡ್ಡ ಆಘಾತ; ಗಾಯದಿಂದ ಟೂರ್ನಿಯಿಂದ ಹೊರಬಿದ್ದ ಸ್ಟಾರ್​ ಆಟಗಾರ
ಪ್ಲೇಆಫ್ ಸನಿಹದಲ್ಲಿರುವ ಆರ್​ಸಿಬಿಗೆ ದೊಡ್ಡ ಆಘಾತ; ಗಾಯದಿಂದ ಟೂರ್ನಿಯಿಂದ ಹೊರಬಿದ್ದ ಸ್ಟಾರ್​ ಆಟಗಾರ (AFP)

18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಪ್ಲೇಆಫ್ ಸನಿಹಕ್ಕೆ ಬಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ದೊಡ್ಡ ಆಘಾತವಾಗಿದೆ. ಇಂಪ್ಯಾಕ್ಟ್ ಪ್ಲೇಯರ್​ ಆಗಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತಿದ್ದ ಕನ್ನಡಿಗ ಹಾಗೂ ಎಡಗೈ ಬ್ಯಾಟರ್​ ದೇವದತ್ ಪಡಿಕ್ಕಲ್ ಅವರು ಗಾಯಗೊಂಡು ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಪಡಿಕ್ಕಲ್ ಬದಲಿಗೆ ಮತ್ತೊಬ್ಬ ಕನ್ನಡಿಗ ಮಯಾಂಕ್ ಅಗರ್ವಾಲ್ ಆರ್​ಸಿಬಿ ಸೇರಿದ್ದಾರೆ.

ಪ್ರಸಕ್ತ ಆವೃತ್ತಿಯಲ್ಲಿ ಆರ್‌ಸಿಬಿ ಪರ 10 ಪಂದ್ಯಗಳನ್ನು ಆಡಿರುವ ಪಡಿಕ್ಕಲ್, ಭರ್ಜರಿ 2 ಅರ್ಧಶತಕಗಳ ಸಹಾಯದಿಂದ 247 ರನ್ ಗಳಿಸಿದ್ದರು. ಆದರೆ ಪಡಿಕ್ಕಲ್ ಬಲ ಮಂಡಿರಜ್ಜು ಗಾಯಕ್ಕೆ ಒಳಗಾಗಿರುವ ಹಿನ್ನೆಲೆ ತಂಡದಿಂದ ಹೊರಬಿದ್ದಿದ್ದಾರೆ. ಅಲ್ಲದೆ, ಅವರನ್ನು ಕಳೆದುಕೊಂಡಿರುವ ಆರ್​ಸಿಬಿಗೂ ನಷ್ಟವಾಗಿದೆ. ಅಗರ್ವಾಲ್ ಈವರೆಗೆ 127 ಐಪಿಎಲ್ ಪಂದ್ಯಗಳನ್ನು ಆಡಿದ್ದು, 2661 ರನ್ ಗಳಿಸಿದ್ದಾರೆ. ಶತಕ ಮತ್ತು 13 ಅರ್ಧಶತಕ ಸಿಡಿಸಿದ್ದು, 1 ಕೋಟಿ ರೂ.ಗೆ ಆರ್‌ಸಿಬಿ ಸೇರಿದ್ದಾರೆ.

ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಮಾಯಾಂಕ್ ಅವರ ಮೂಲ ಬೆಲೆ 1 ಕೋಟಿ ರೂಪಾಯಿ ಹೊಂದಿದ್ದರು. ಆದರೂ ಅನ್​ಸೋಲ್ಡ್​ ಆಗಿದ್ದರು. ಇದೀಗ ಮಯಾಂಕ್​ರನ್ನು ತಂಡಕ್ಕೆ ಸೇರ್ಪಡೆ ಮಾಡಿರುವ ಕುರಿತು ಐಪಿಎಲ್ ಆಡಳಿತ ಮಂಡಳಿ ದೃಢಪಡಿಸಿದೆ. 'ಗಾಯಗೊಂಡ ದೇವದತ್ ಪಡಿಕ್ಕಲ್ ಬದಲಿಗೆ ಮಾಯಾಂಕ್ ಅವರನ್ನು ಆರ್​​ಸಿಬಿ ಆಯ್ಕೆ ಮಾಡಿದೆ ಎಂದು ತಿಳಿಸಿದೆ. ಪಡಿಕ್ಕಲ್ ಅವರು ಮೂಲ ಬೆಲೆ 2 ಕೋಟಿ ರೂ. ಆರ್​ಸಿಬಿ ತಂಡಕ್ಕೆ ಖರೀದಿಯಾಗಿದ್ದರು.

ಮಯಾಂಕ್​ಗೆ ಸಿಗುತ್ತಾ ಆಡುವ ಅವಕಾಶ?

ಪಡಿಕ್ಕಲ್ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಮಿಂಚಿದ್ದರು. ಆದರೀಗ ಅವರ ಸ್ಥಾನಕ್ಕೆ ಆಯ್ಕೆಯಾದ ಮಯಾಂಕ್​ಗೆ ಪ್ಲೇಯಿಂಗ್​ 11ನಲ್ಲಿ ಆಡುವ ಅವಕಾಶ ಸಿಗುವ ಸಾಧ್ಯತೆ ತೀರಾ ಕಡಿಮೆ ಎನ್ನಬಹುದು. ಏಕೆಂದರೆ ತಂಡವು ಉತ್ತಮ ಲಯದಲ್ಲಿದ್ದು, ಪ್ರಯೋಗಕ್ಕೆ ಮುಂದಾಗುವುದಿಲ್ಲ ಎನ್ನಬಹುದು. ಆದರೆ ಆ ಸ್ಥಾನಕ್ಕೆ ಸ್ವಸ್ತಿಕ್ ಚಿಕಾರ ಅವರಿಗೆ ಅವಕಾಶ ನೀಡಬಹುದು. ಸದ್ಯ ಆರ್​ಸಿಬಿ ಆಡಿರುವ 11 ಪಂದ್ಯಗಳಲ್ಲಿ 8 ಗೆಲುವು, 3 ಸೋಲಿನೊಂದಿಗೆ 16 ಅಂಕ ಪಡೆದು ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.

ಫಿಲ್ ಸಾಲ್ಟ್, ಹೇಜಲ್​ವುಡ್​ಗೂ ಗಾಯ?

ದೇವದತ್ ಪಡಿಕ್ಕಲ್ ಜೊತೆಗೆ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಮತ್ತು ವೇಗದ ಬೌಲರ್ ಜೋಶ್ ಹೇಜಲ್​​ವುಡ್ ಅವರೂ ಗಾಯಗೊಂಡಿದ್ದಾರೆ. ಇದೇ ಕಾರಣಕ್ಕೆ ಕಳೆದ ಪಂದ್ಯದಲ್ಲಿ ಇಬ್ಬರೂ ಕಣಕ್ಕಿಳಿದಿರಲಿಲ್ಲ. ಇವರ ಬದಲಿಗೆ ಜೇಕಬ್ ಬೆಥಲ್ ಮತ್ತು ಲುಂಗಿ ಎನ್​ಗಿಡಿ ಅವಕಾಶ ಪಡೆದಿದ್ದರು. ಅಲ್ಲದೆ, ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ಮತ್ತೊಂದೆಡೆ ನಾಯಕ ರಜತ್ ಪಾಟೀದಾರ್ ಸಹ ಬೆರಳು ನೋವಿಗೆ ತುತ್ತಾಗಿದ್ದಾರೆ ಎಂದು ವರದಿಯಾಗಿದೆ.

ಆರ್​ಸಿಬಿ ಪರಿಷ್ಕೃತ ತಂಡ

ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ರಜತ್ ಪಾಟೀದಾರ್ (ನಾಯಕ), ಲಿಯಾಮ್ ಲಿವಿಂಗ್​ಸ್ಟೋನ್, ಜಿತೇಶ್ ಶರ್ಮಾ, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ರಸಿಕ್ ದಾರ್​ ಸಲಾಂ, ಸುಯಾಶ್ ಶರ್ಮಾ, ಜೋಶ್ ಹೇಜಲ್​ವುಡ್, ಯಶ್ ದಯಾಳ್, ಮಯಾಂಕ್ ಅಗರ್ವಾಲ್, ಅಭಿನಂದನ್ ಸಿಂಗ್, ಮನೋಜ್ ಭಾಂಡಗೆ, ರೊಮಾರಿಯೊ ಶೆಫರ್ಡ್, ಸ್ವಪ್ನಿಲ್ ಸಿಂಗ್, ಭುವನೇಶ್ವರ್ ಕುಮಾರ್, ಲುಂಗಿ ಎನ್​ಗಿಡಿ, ನುವಾನ್ ತುಶಾರ, ಜೇಕಬ್ ಬೆಥಲ್, ಮೋಹಿತ್ ರಾಠಿ, ಸ್ವಸ್ತಿಕ್ ಚಿಕಾರ.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.