ಸತತ ಸೋಲುಗಳಿಂದ ಕಂಗೆಟ್ಟ ರಾಜಸ್ಥಾನ್ ರಾಯಲ್ಸ್​ಗೆ ಮತ್ತೊಂದು ಹಿನ್ನಡೆ; ಆರ್​ಸಿಬಿ ವಿರುದ್ಧದ ಪಂದ್ಯದಿಂದ ಸಂಜು ಔಟ್!
ಕನ್ನಡ ಸುದ್ದಿ  /  ಕ್ರಿಕೆಟ್  /  ಸತತ ಸೋಲುಗಳಿಂದ ಕಂಗೆಟ್ಟ ರಾಜಸ್ಥಾನ್ ರಾಯಲ್ಸ್​ಗೆ ಮತ್ತೊಂದು ಹಿನ್ನಡೆ; ಆರ್​ಸಿಬಿ ವಿರುದ್ಧದ ಪಂದ್ಯದಿಂದ ಸಂಜು ಔಟ್!

ಸತತ ಸೋಲುಗಳಿಂದ ಕಂಗೆಟ್ಟ ರಾಜಸ್ಥಾನ್ ರಾಯಲ್ಸ್​ಗೆ ಮತ್ತೊಂದು ಹಿನ್ನಡೆ; ಆರ್​ಸಿಬಿ ವಿರುದ್ಧದ ಪಂದ್ಯದಿಂದ ಸಂಜು ಔಟ್!

ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಗಾಯಗೊಂಡಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಆಡುವುದಿಲ್ಲ ಎಂದು ರಾಜಸ್ಥಾನ್ ರಾಯಲ್ಸ್ ದೃಢಪಡಿಸಿದೆ.

Rajasthan Royals' captain Sanju Samson
Rajasthan Royals' captain Sanju Samson (AP)

ಏಪ್ರಿಲ್ 24ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯಕ್ಕೂ ಮುನ್ನ ಸತತ ಸೋಲಿನಿಂದ ಕಂಗೆಟ್ಟಿರುವ ರಾಜಸ್ಥಾನ್ ರಾಯಲ್ಸ್​ಗೆ ಮತ್ತೆ ಹಿನ್ನಡೆಯಾಗಿದೆ. ಆರ್​ಆರ್​ ನಾಯಕ ಸಂಜು ಸ್ಯಾಮ್ಸನ್ ಮತ್ತೆ ಗಾಯಗೊಂಡಿದ್ದು, ಮುಂದಿನ ಪಂದ್ಯಕ್ಕೆ ಅವರು ಆಡುವುದಿಲ್ಲ ಎಂದು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ದೃಢಪಡಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ವೇಳೆ ಸ್ನಾಯು ಸೆಳೆತಕ್ಕೆ ಒಳಗಾಗಿದ್ದ ಸ್ಯಾಮ್ಸನ್​ ಈಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.

ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ರಾಯಲ್ಸ್​ನ​ ತವರು ಪಂದ್ಯಕ್ಕೆ ಹೊರಗುಳಿದಿದ್ದ ಸಂಜು, ಗುರುವಾರ ಆರ್​ಸಿಬಿ ಎದುರಿನ ಕದನಕ್ಕೂ ಹೊರಗುಳಿಯಲಿದ್ದಾರೆ. ಸ್ಯಾಮ್ಸನ್ ಮರಳುವ ದಿನಾಂಕವನ್ನು ರಾಯಲ್ಸ್ ವೈದ್ಯಕೀಯ ಸಿಬ್ಬಂದಿ ನಿಗದಿಪಡಿಸಿಲ್ಲ. ಅವರು ಚೇತರಿಕೆ ಕಾಣುತ್ತಿದ್ದು, ಆರ್​ಆರ್​ ವೈದ್ಯಕೀಯ ಸಿಬ್ಬಂದಿಯೊಂದಿಗೆ ತಂಡದ ತವರು ನೆಲೆಯಲ್ಲೇ ಉಳಿಯಲಿದ್ದಾರೆ ಎಂದು ರಾಯಲ್ಸ್ ಹೇಳಿಕೆಯಲ್ಲಿ ಉಲ್ಲೇಖಿಸಿದೆ. ಸ್ಯಾಮ್ಸನ್ ಪುನಶ್ಚೇತನ ಪ್ರಕ್ರಿಯೆ ಭಾಗವಾಗಿ ಮುಂಬರುವ ಪಂದ್ಯಕ್ಕೆ ಬೆಂಗಳೂರಿಗೆ ಪ್ರಯಾಣಿಸಲ್ಲ.

ತಂಡದ ಆಡಳಿತ ಮಂಡಳಿಯು ಸಂಜು ಅವರ ಪ್ರಗತಿಗೆ ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಅವರ ಮರಳುವಿಕೆಗಾಗಿ ಪಂದ್ಯದಿಂದ ಪಂದ್ಯಕ್ಕೆ ವಿಧಾನ ಅನುಸರಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಸ್ಯಾಮ್ಸನ್ ಅನುಪಸ್ಥಿತಿಯಲ್ಲಿ ರಿಯಾನ್ ಪರಾಗ್ ತಂಡವನ್ನು ಮುನ್ನಡೆಸಲಿದ್ದಾರೆ. ಸ್ಯಾಮ್ಸನ್ಸ್​ಗೆ ಬ್ಯಾಟಿಂಗ್ ಮಾಡಲು ಮಾತ್ರ ಅವಕಾಶ ನೀಡಿದ್ದರಿಂದ ಮತ್ತು ವಿಕೆಟ್ ಕೀಪಿಂಗ್ ಮಾಡಲು ಅವಕಾಶ ನೀಡದ ಕಾರಣ ರಿಯಾನ್ ಋತುವಿನ ಮೊದಲ ಮೂರು ಪಂದ್ಯಗಳಲ್ಲಿ ರಾಯಲ್ಸ್ ತಂಡವನ್ನು ಮುನ್ನಡೆಸಿದ್ದರು.

ಬಳಿಕ 4ನೇ ಪಂದ್ಯದಿಂದ ತಂಡವನ್ನು ಮುನ್ನಡೆಸುವ ಮೊದಲು ಸ್ಯಾಮ್ಸನ್ ಆ ಮೂರು ಪಂದ್ಯಗಳಲ್ಲಿ 'ಇಂಪ್ಯಾಕ್ಟ್ ಪ್ಲೇಯರ್​' ಆಗಿ ಕಣಕ್ಕಿಳಿದಿದ್ದರು. ಅವರ ನಾಯಕತ್ವದಲ್ಲೂ ರಾಜಸ್ಥಾನ್ ರಾಯಲ್ಸ್ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ರಿಯಾನ್ ನಾಯಕತ್ವದಲ್ಲಿ 4 ಪಂದ್ಯ ಆಡಿರುವ ಆರ್​ಆರ್​ 3 ಸೋಲು, 1 ಗೆಲುವು, ಸಂಜು ಕ್ಯಾಪ್ಟನ್ಸಿಯಲ್ಲಿ ಆರ್​​ಆರ್ 1 ಗೆಲುವು, 3 ಸೋಲು ಕಂಡಿದೆ. ಅದರಲ್ಲೂ ಕೊನೆಯ ಎರಡೂ ಪಂದ್ಯಗಳಲ್ಲಿ ಗೆಲ್ಲುವ ಪಂದ್ಯವಾಗಿದ್ದರೂ ರಾಜಸ್ಥಾನ್ ಕೈಚೆಲ್ಲಿತು.

ಸ್ಯಾಮ್ಸನ್ ಅನುಪಸ್ಥಿತಿಯಲ್ಲಿ ಧ್ರುವ್ ಜುರೆಲ್ ವಿಕೆಟ್ ಕೀಪಿಂಗ್ ಮಾಡಲಿದ್ದಾರೆ. ಆಡಿರುವ 7 ಪಂದ್ಯಗಳಲ್ಲಿ ಸ್ಯಾಮ್ಸನ್ ಅರ್ಧಶತಕದೊಂದಿಗೆ 224 ರನ್ ಗಳಿಸಿದ್ದಾರೆ. ಪರಾಗ್ ನಾಯಕತ್ವದಲ್ಲಿ ರಾಯಲ್ಸ್ ಆಡಿರುವ 4 ಪಂದ್ಯಗಳಲ್ಲಿ 3ರಲ್ಲಿ ಸೋತು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮಾತ್ರ ಜಯ ಸಾಧಿಸಿದೆ.ರಾಜಸ್ಥಾನ್ ರಾಯಲ್ಸ್ ಆಡಿರುವ 8 ಪಂದ್ಯಗಳಲ್ಲಿ 6 ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಇದೀಗ ಪ್ಲೇಆಫ್ ದೃಷ್ಟಿಯಿಂದ ಇರುವ ಆರು ಪಂದ್ಯಗಳನ್ನೂ ಗೆಲ್ಲಬೇಕಿದೆ.

ಸೂರ್ಯವಂಶಿ ಮತ್ತೆ ಕಣಕ್ಕೆ

ಐಪಿಎಲ್​ಗೆ ಪದಾರ್ಪಣೆ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದ ವೈಭವ್ ಸೂರ್ಯವಂಶಿ ಮತ್ತೊಮ್ಮೆ ಅವಕಾಶ ಪಡೆಯಲಿದ್ದಾರೆ. ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ 14 ವರ್ಷದ ಆಟಗಾರ ತಾನು ಎದುರಿಸಿದ ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸಿ ದಾಖಲೆ ನಿರ್ಮಿಸಿದ್ದರು. ತನ್ನ ಚೊಚ್ಚಲ ಪಂದ್ಯದಲ್ಲಿ 20 ಎಸೆತಗಳಲ್ಲಿ 3 ಸಿಕ್ಸರ್, 2 ಬೌಂಡರಿ ಸಹಿತ 34 ರನ್ ಗಳಿಸಿದರು. ಅವರ ಆಟಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಆರ್​​ಸಿಬಿ ವಿರುದ್ಧ ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಎನ್ನುವ ಕುತೂಹಲ ಹೆಚ್ಚಿಸಿದೆ.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.