ಕೊನೆಗೂ ಗುಜರಾತ್ ಟೈಟನ್ಸ್ ತಂಡಕ್ಕೆ ಮರಳಿದ ಕಗಿಸೊ ರಬಾಡ; 1 ತಿಂಗಳು ನಿಷೇಧ ಅನುಭವಿಸಿದ್ದು ಈ ಕಾರಣಕ್ಕೆ
ಮಾದಕ ದ್ರವ್ಯ ಸೇವನೆ ಆರೋಪದ ಮೇಲೆ ಅಮಾನತುಗೊಂಡಿದ್ದ ದಕ್ಷಿಣ ಆಫ್ರಿಕಾ ಮತ್ತು ಗುಜರಾತ್ ಟೈಟನ್ಸ್ ತಂಡದ ವೇಗದ ಬೌಲರ್ ಕಗಿಸೊ ರಬಾಡ, ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ಮೂಲಕ ಮತ್ತೆ ಐಪಿಎಲ್ಗೆ ಮರಳಲಿದ್ದಾರೆ.

ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್ ಪಂದ್ಯಕ್ಕೂ ಮುನ್ನ ಗುಜರಾತ ಟೈಟನ್ಸ್ ತಂಡಕ್ಕೆ ಆನೆಬಲ ಬಂದಿದೆ. ಮಾದಕ ದ್ರವ್ಯ ಸೇವನೆ ಆರೋಪದ ಮೇಲೆ ಒಂದು ತಿಂಗಳ ನಿಷೇಧಕ್ಕೆ ಒಳಗಾಗಿದ್ದ ಗುರಿಯಾಗಿದ್ದ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಕಗಿಸೊ ರಬಾಡ, ಮಂಗಳವಾರ (ಮೇ 6) ಮುಂಬೈನಲ್ಲಿ ನಡೆಯಲಿರುವ ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಜಿಟಿ ತಂಡಕ್ಕೆ ಮರಳಲಿದ್ದಾರೆ. ಮಾರ್ಚ್ 29ರಂದು ಕೊನೆಯ ಬಾರಿಗೆ ಐಪಿಎಲ್ ಪಂದ್ಯದಲ್ಲಿ ಆಡಿದ್ದ ಅವರು, ಆ ನಂತರ ತವರು ನೆಲಕ್ಕೆ ಮರಳಿದ್ದರು. ಮುಂಬೈ ಇಂಡಿಯನ್ಸ್ ವಿರುದ್ಧವೇ ಕೊನೆಯ ಬಾರಿಗೆ ಆಡಿದ್ದ ಅವರು, ನಿನ್ನೆಯಷ್ಟೇ (ಸೋಮವಾರ, ಮೇ 5) ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ತಂಡದ ಪೂರ್ವ ತರಬೇತಿ ಅವಧಿಯಲ್ಲಿ ಕಾಣಿಸಿಕೊಂಡಿದ್ದರು.
ಕೊನೆಯ ಬಾರಿಗೆ ರಬಾಡ ಗುಜರಾತ್ ತಂಡದಲ್ಲಿ ಆಡದಿದ್ದಾಗ, ವೈಯಕ್ತಿಕ ಕಾರಣಗಳಿಂದ ಅವರು ದಕ್ಷಿಣ ಆಪ್ರಿಕಾ ತೆರಳಿದ್ದಾರೆ ಎಂದು ಗುಜರಾತ್ ತಂಡ ಹೇಳಿತ್ತು. ಆದರೆ, ಡೋಪಿಂಗ್ ಟೆಸ್ಟ್ನಲ್ಲಿ ವಿಫಲರಾದ ಕಾರಣದಿಂದ ಅವರು ಐಪಿಎಲ್ನಲ್ಲಿ ಆಡಲು ಸಾಧ್ಯವಾಗಿರಲಿಲ್ಲ. ಸದ್ಯ ರಬಾಡ ತಂಡಕ್ಕೆ ಮರಳಿರುವ ಬಗ್ಗೆ ಮಾತನಾಡಿದ ಗುಜರಾತ್ ಟೈಟನ್ಸ್ ತಂಡದ ಕ್ರಿಕೆಟ್ ನಿರ್ದೇಶಕ ವಿಕ್ರಮ್ ಸೋಲಂಕಿ, "ಕಳೆದ ಒಂದು ತಿಂಗಳಿನಿಂದ ತೆಗೆದುಕೊಂಡ ನಿರ್ಧಾರಗಳು ಮತ್ತು ಏನಾಯಿತು ಎಂಬುದನ್ನು ಗಮನಿಸಿದರೆ, ಕಗಿಸೊ ಈಗ ಆಡಲು ಲಭ್ಯವಿದ್ದಾರೆ" ಎಂದು ಹೇಳಿದ್ದಾರೆ.
ದಕ್ಷಿಣ ಆಫ್ರಿಕಾದ ಇನ್ಸ್ಟಿಟ್ಯೂಟ್ ಫಾರ್ ಡ್ರಗ್-ಫ್ರೀ ಸ್ಪೋರ್ಟ್ (SAIDS) ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದೆ. ಜನವರಿ 21ರಂದು ಎಂಐ ಕೇಪ್ ಟೌನ್ ಮತ್ತು ಡರ್ಬನ್ ಸೂಪರ್ ಜೈಂಟ್ಸ್ ನಡುವಿನ ಪಂದ್ಯದ ನಂತರ, ರಬಾಡ ಡೋಪಿಂಗ್ ಪರೀಕ್ಷೆಯಲ್ಲಿ ವಿಫಲರಾಗಿದ್ದಾರೆ ಎಂದು ದೃಢಪಡಿಸಲಾಗಿದೆ. ಹೀಗಾಗಿ ಏಪ್ರಿಲ್ 1ರಂದು ಅವರು ಐಪಿಎಲ್ ಆಡುತ್ತಿದ್ದಾಗ ಡೋಪಿಂಗ್ ಟೆಸ್ಟ್ ಫಲಿತಾಂಶದ ಬಗ್ಗೆ ಅವರಿಗೆ ತಿಳಿಸಲಾಗಿದೆ. ಏಪ್ರಿಲ್ 3ರಂದು ಗುಜರಾತ್ ಟೈಟಾನ್ಸ್ ತಂಡದ ಪರ ರಬಾಡ ಎರಡು ಪಂದ್ಯಗಳನ್ನು ಆಡಿದ ನಂತರ, ವೈಯಕ್ತಿಕ ಕಾರಣಗಳಿಗಾಗಿ ದಕ್ಷಿಣ ಆಫ್ರಿಕಾಕ್ಕೆ ಮರಳಿದ್ದಾರೆ ಎಂದು ಹೇಳಿದೆ.
ಭಾರತದಲ್ಲಿ ಮಾದಕ ದ್ರವ್ಯ ಸೇವನೆ ಆಗಿಲ್ಲ
ಮಾದಕ ದ್ರವ್ಯ ಸೇವನೆ ಅಥವಾ ಬಳಕೆಯು ಐಪಿಎಲ್ ಟೂರ್ನಿಯ ಹೊರಗೆ ಸಂಭವಿಸಿದೆ. ಇದು ಭಾರತದ ಅಥವಾ ಐಪಿಎಲ್ ಕ್ರೀಡಾ ಕಾರ್ಯಕ್ಷಮತೆಗೆ ಸಂಬಂಧಿಸಿಲ್ಲ. ಸಾಮಾನ್ಯವಾಗಿ ಡೋಪಿಂಗ್ ಟೆಸ್ಟ್ ಫೇಲ್ ಆದರೆ ಅನರ್ಹತೆಯ ಅವಧಿ ಮೂರು ತಿಂಗಳು ಆಗಿರುತ್ತದೆ. ಆದರೆ, ಎಐಡಿಎಸ್ ಅನುಮೋದಿಸಿದ ಮಾದಕ ದ್ರವ್ಯ ಸೇವನೆ ಚಿಕಿತ್ಸೆ ಕಾರ್ಯಕ್ರಮವನ್ನು ಕ್ರೀಡಾಪಟು ತೃಪ್ತಿಕರವಾಗಿ ಪೂರ್ಣಗೊಳಿಸಿದರೆ ಇದನ್ನು ಒಂದು ತಿಂಗಳಿಗೆ ಇಳಿಸಬಹುದು. ಅದರಂತೆ ರಬಾಡ ಮತ್ತೆ ಐಪಿಎಲ್ಗೆ ಮರಳಿದ್ದಾರೆ.
ಸದ್ಯ ರಬಾಡ ಗುಜರಾತ್ ಟೈಟನ್ಸ್ ತಂಡದೊಂದಿಗೆ ತರಬೇತಿ ಪಡೆಯಲು ಎಲ್ಲಾ ರೀತಿಯ ಮಾನದಂಡ ಹಾಗೂ ಕಾರ್ಯವಿಧಾನಗಳನ್ನು ಅನುಸರಿಸಲಾಗಿದೆ ಎಂದು ಕ್ರಿಕೆಟ್ ನಿರ್ದೇಶಕರು ಭರವಸೆ ನೀಡಿದ್ದಾರೆ.
ಜಿಟಿ ತಂಡದಲ್ಲಿ ರಬಾಡ ಅನುಪಸ್ಥಿತಿಯಲ್ಲಿ, ಪ್ರಸಿದ್ಧ್ ಕೃಷ್ಣ ಮತ್ತು ಮೊಹಮ್ಮದ್ ಸಿರಾಜ್ ತಂಡದ ವೇಗದ ಬಳಗವನ್ನು ಮುನ್ನಡೆಸಿದ್ದರು. ಪರಿಣಾಮಕಾರಿ ಬೌಲಿಂಗ್ನೊಂದಿಗೆ ತಂಡವು ಎದುರಾಳಿಗಳ ವಿರುದ್ಧ ಮೇಲುಗೈ ಸಾಧಿಸಿದೆ.
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕೆ ಜಿಟಿ ಸಂಭಾವ್ಯ ತಂಡ
ಸಾಯಿ ಸುದರ್ಶನ್, ಶುಭ್ಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ರಾಹುಲ್ ತೆವಾಟಿಯಾ, ಶಾರುಖ್ ಖಾನ್, ರಶೀದ್ ಖಾನ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಜೆರಾಲ್ಡ್ ಕೋಟ್ಜಿ/ ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಶರ್ಮಾ ಕೃಷ್ಣ ಮತ್ತು ಇಶಾಂತ್ ಶರ್ಮಾ.