ಮೊಳಕಾಲ್ಮೂರು: ಕೊಹ್ಲಿ ಕಟೌಟ್‌ ಮುಂದೆ ಮೇಕೆ ಬಲಿ ಕೊಟ್ಟು ವಿಕೃತಿ ಮೆರೆದ ಆರ್‌ಸಿಬಿ ಫ್ಯಾನ್ಸ್‌; ಕೇಸ್‌ ದಾಖಲು
ಕನ್ನಡ ಸುದ್ದಿ  /  ಕ್ರಿಕೆಟ್  /  ಮೊಳಕಾಲ್ಮೂರು: ಕೊಹ್ಲಿ ಕಟೌಟ್‌ ಮುಂದೆ ಮೇಕೆ ಬಲಿ ಕೊಟ್ಟು ವಿಕೃತಿ ಮೆರೆದ ಆರ್‌ಸಿಬಿ ಫ್ಯಾನ್ಸ್‌; ಕೇಸ್‌ ದಾಖಲು

ಮೊಳಕಾಲ್ಮೂರು: ಕೊಹ್ಲಿ ಕಟೌಟ್‌ ಮುಂದೆ ಮೇಕೆ ಬಲಿ ಕೊಟ್ಟು ವಿಕೃತಿ ಮೆರೆದ ಆರ್‌ಸಿಬಿ ಫ್ಯಾನ್ಸ್‌; ಕೇಸ್‌ ದಾಖಲು

ಸಿಎಸ್‌ಕೆ ವಿರುದ್ಧ ಆರ್‌ಸಿಬಿ ತಂಡ ಗೆದ್ದ ಬಳಿಕ, ಅಭಿಮಾನಿಗಳು ಗೆಲುವಿನ ಸಂಭ್ರಮದ ನಡುವೆ ಪ್ರಾಣಿಹಿಂಸೆ ಮಾಡಿ ವಿಕೃತಿ ಮೆರೆದಿದ್ದಾರೆ. ವಿರಾಟ್‌ ಕೊಹ್ಲಿ ಕಟೌಟ್‌ ಮುಂದೆ ಮೇಕೆಯ ತಲೆ ಕಡಿದು ಬಲಿಕೊಟ್ಟು ವಿಚಿತ್ರ ಸಂಭ್ರಮಾಚರಣೆ ನಡೆಸಿದ್ದಾರೆ. ಹೀಗಾಗಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.

ಕೊಹ್ಲಿ ಕಟೌಟ್‌ ಮುಂದೆ ಮೇಕೆ ಬಲಿ ಕೊಟ್ಟು ವಿಕೃತಿ ಮೆರೆದ ಆರ್‌ಸಿಬಿ ಫ್ಯಾನ್ಸ್‌; ಕೇಸ್‌ ದಾಖಲು (ಸಾಂದರ್ಭಿಕ ಚಿತ್ರ)
ಕೊಹ್ಲಿ ಕಟೌಟ್‌ ಮುಂದೆ ಮೇಕೆ ಬಲಿ ಕೊಟ್ಟು ವಿಕೃತಿ ಮೆರೆದ ಆರ್‌ಸಿಬಿ ಫ್ಯಾನ್ಸ್‌; ಕೇಸ್‌ ದಾಖಲು (ಸಾಂದರ್ಭಿಕ ಚಿತ್ರ) (AP)

ಬೆಂಗಳೂರು: ಭಾರತದಾದ್ಯಂತ ಐಪಿಎಲ್‌ ಕ್ರೇಜ್‌ ಜೋರಾಗಿದೆ. ಅದರಲ್ಲೂ ಕರ್ನಾಟಕದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಅಭಿಮಾನಿಗಳ ಸಂಖ್ಯೆ ದೊಡ್ಡದಿದ್ದು, ತಂಡದ ಗೆಲವನ್ನು ದೊಡ್ಡ ಮಟ್ಟದಲ್ಲಿ ಸಂಭ್ರಮಿಸುತ್ತಾರೆ. ಅಭಿಮಾನ ಒಳ್ಳೆಯದೇ, ಆದರೆ ಅತಿಯಾದರೆ ಅಮೃತವೂ ವಿಷ ಎಂಬುದು ಸತ್ಯ. ಇದಕ್ಕೆ ಈ ಘಟನೆಯೇ ಸಾಕ್ಷಿ. ಇತ್ತೀಚೆಗೆ (ಮೇ 3) ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಮತ್ತು ಸಿಎಸ್‌ಕೆ ತಂಡಗಳು ಮುಖಾಮುಖಿಯಾದವು. ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಆರ್‌ಸಿಬಿ ತಂಡವು 2 ರನ್‌ಗಳಿಂದ ರೋಚಕವಾಗಿ ಗೆದ್ದು ಬೀಗಿತು. ಇದು ಫ್ಯಾನ್ಸ್‌ ಉತ್ಸಾಹ ಮತ್ತು ಸಂಭ್ರಮವನ್ನು ದುಪ್ಪಟ್ಟಾಗಿಸಿದೆ.

ಆರ್‌ಸಿಬಿ ಪಂದ್ಯ ಗೆದ್ದಿದ್ದಕ್ಕೆ ವಿಚಿತ್ರ ಸಂಭ್ರಮಾಚರಣೆ ಮಾಡಿದ ಯುವಕರ ಗುಂಪು ಈಗ ಸಂಕಷ್ಟದಲ್ಲಿದೆ. ಸಿಎಸ್‌ಕೆ ವಿರುದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆದ್ದಿದ್ದಕ್ಕೆ, ವಿರಾಟ್‌ ಕೊಹ್ಲಿ ಕಟೌಟ್‌ ಮುಂದೆ ಅಭಿಮಾನಿಗಳು ಮೇಕೆಯನ್ನು ಬಲಿಕೊಟ್ಟು ವಿಕೃತಿ ಮೆರೆದಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಮಾರಮ್ಮನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಇದೀಗ ವಿಚಿತ್ರ ಸಂಭ್ರಮಾಚರಣೆ ನಡೆಸಿದವರ ವಿರುದ್ಧ ಪ್ರಕರಣ ದಾಖಲಾಗಿದೆ.

ಮಚ್ಚಿನಿಂದ ಮೇಕೆಯನ್ನು ಕಡಿದು ಕೊಹ್ಲಿ ಕಟೌಟ್‌ಗೆ ಅಭಿಮಾನಿಗಳು ರಕ್ತಾಭಿಷೇಕ ಮಾಡಿದ್ದರು. ಅಲ್ಲದೆ ಈ ವಿಡಿಯೋವನ್ನು call-me-143-kalki ಹೆಸರಿನ ಇನ್‌ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ ಅಪ್ಲೋಡ್‌ ಮಾಡಿದ್ದರು. ಅದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಭಾರಿ ವೈರಲ್ ಆಗಿತ್ತು. ಅದರ ಬೆನ್ನಲ್ಲೇ ಆರೋಪಿಗಳಿಗೆ ಅಪಾಯ ಎದುರಾಗಿದೆ.

ಕೇಸ್‌ ದಾಖಲು

ಮೇಕೆ ತಲೆ ಕಡಿದು ವಿಡಿಯೋ ಹರಿಬಿಟ್ಟವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ವಿಡಿಯೋದಲ್ಲಿ ಕಾಣಿಸಿಕೊಂಡ ಮೂವರು ಯುವಕರ ವಿರುದ್ದ ಮೊಳಕಾಲ್ಮೂರು ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಸಣ್ಣ ಪಾಲಯ್ಯ, ಜಯಣ್ಣ, ತಿಪ್ಪೇಸ್ವಾಮಿ ಮೂರು ಮಂದಿ ವಿರುದ್ದ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ 1960ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರತಿ ಬಾರಿಯೂ ಆರ್‌ಸಿಬಿ ಹಾಗೂ ಸಿಎಸ್‌ಕೆ ತಂಡಗಳ ನಡುವಿನ ಪಂದ್ಯ ವೀಕ್ಷಿಸಲು ಅಭಿಮಾನಿಗಳ ಜೋಶ್‌ ಹೆಚ್ಚಿರುತ್ತದೆ. 5 ಬಾರಿ ಚಾಂಪಿಯನ್‌ ಆಗಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಬಲಿಷ್ಠ ತಂಡ ಎಂದು ಪರಿಗಣಿಸಲಾಗಿದೆ. ಈ ಬಾರಿ ಉಭಯ ತಂಡಗಳು ಮುಖಾಮುಖಿಯಾದ ಎರಡೂ ಪಂದ್ಯಗಳಲ್ಲಿ ಆರ್‌ಸಿಬಿ ತಂಡವೇ ಗೆದ್ದು ಬೀಗಿದೆ.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.