ಭಾರತ ತಂಡದ ಕಮ್ಬ್ಯಾಕ್ಗೆ ಕಾಯುತ್ತಿರುವ ಕರುಣ್ ನಾಯರ್ ಫಿಟ್ನೆಸ್ ಸೀಕ್ರೆಟ್ ಏನು; ಕ್ರಿಕೆಟ್ ಜೊತೆ ಈ ಕ್ರೀಡೆ ಕನ್ನಡಿಗನಿಗೆ ಇಷ್ಟ
ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಅಬ್ಬರಿಸಿರುವ ಕನ್ನಡಿಗ ಕರುಣ್ ನಾಯರ್, ಇದೀಗ ಭಾರತ ಕ್ರಿಕೆಟ್ ತಂಡಕ್ಕೆ ಕಂಬ್ಯಾಕ್ ಮಾಡಲು ಕಾಯುತ್ತಿದ್ದಾರೆ. ಫಿಟ್ ಆಗಿರುವ ಕರುಣ್ ನಾಯರ್ ಅವರ ಫಿಟ್ನೆಸ್ ಸೀಕ್ರೆಟ್ ಏನು? ಆಹಾರ ಕ್ರಮ ಹಾಗೂ ವ್ಯಾಯಾಮಗಳ ವಿವರ ಇಲ್ಲಿದೆ.

ಹಲವು ದೇಶೀಯ ಟೂರ್ನಿಗಳಲ್ಲಿ ಅಮೋಘ ಪ್ರದರ್ಶನ ನೀಡಿದ ಕನ್ನಡಿಗ ಕರುಣ್ ನಾಯರ್, ಇನ್ನೂ ಟೀಮ್ ಇಂಡಿಯಾ ಪರ ಆಡಲು ಕಾಯುತ್ತಿದ್ದಾರೆ. ಐಪಿಎಲ್ನಲ್ಲಿ ಕೊನೆಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಆಡುವ ಅವಕಾಶ ಪಡೆದ ಆಟಗಾರ, ಡೆಲ್ಲಿ ತಂಡದ ಪರ ಆಡಿದ ಮೊದಲ ಪಂದ್ಯದಲ್ಲೇ ಅಮೋಘ ಅರ್ಧಶತಕ ಸಿಡಿಸಿದರು. ಆ ಮೂಲಕ ಯಾವ ಸ್ವರೂಪದ ಕ್ರಿಕೆಟ್ನಲ್ಲೂ ತಾನೊಬ್ಬ ಸಮರ್ಥ ಆಟಗಾರ ಎಂಬುದನ್ನು ಸಾಬೀತುಪಡಿಸಿದ್ದಾರೆ. ಇದೀಗ ಟೂರ್ನಿಯಲ್ಲಿ ಮತ್ತಷ್ಟು ಮಿಂಚುವ ನಿರೀಕ್ಷೆಯಲ್ಲಿದ್ದಾರೆ.
ಕರುಣ್ ನಾಯರ್ಗೆ ಈಗ 33 ವರ್ಷ ವಯಸ್ಸು. ಅವರಲ್ಲಿ ಇನ್ನೂ ಕ್ರಿಕೆಟ್ ಜೀವಂತವಾಗಿದೆ. ಭಾರತ ಕ್ರಿಕೆಟ್ ತಂಡದಲ್ಲಿ ಒಂದು ಅವಕಾಶಕ್ಕಾಗಿ ಅವರು ಹಲವು ವರ್ಷಗಳಿಂದ ಕಾಯುತ್ತಿದ್ದಾರೆ. ಟೀಮ್ ಇಂಡಿಯಾ ಪರ ತ್ರಿಶತಕ ಸಿಡಿಸಿದ ಕೇವಲ ಎರಡನೇ ಆಟಗಾರ ಎನಿಸಿಕೊಂಡಿರುವ ಕರುಣ್, ಈಗಲೂ ತಮ್ಮ ಫಿಟ್ನೆಸ್ ಬಗ್ಗೆ ಕಾಳಜಿ ವಹಿಸುತ್ತಾರೆ. ಅವರ ಫಿಟ್ನೆಸ್ ಸೀಕ್ರೆಟ್ಗಳು ಏನೇನು ಎಂಬುದನ್ನು ತಿಳಿಯೋಣ.
ನಾನು ಹೆಚ್ಚು ಸಮಯ ಮೈದಾನದಲ್ಲಿ ಇರುವುದರಿಂದ ನಾನು ಕಠಿಣ ಫಿಟ್ನೆಸ್ ನಿಯಮ ಅನುಸರಿಸುವುದಿಲ್ಲ. ಫಿಟ್ನೆಸ್ಗಾಗಿ ವ್ಯಾಯಾಮಗಳನ್ನು ವಿರಾಮದ ದಿನಗಳಲ್ಲಿ ಮಾತ್ರ ಅನುಸರಿಸುತ್ತೇನೆ. ಹೆಚ್ಚಿನ ಕೆಲಸಗಳನ್ನು ಬೆಳಿಗ್ಗೆ 6ರಿಂದ 7 ಗಂಟೆಗೆ ಮಾಡುತ್ತೇನೆ. ಒಂದೆರಡು ಗಂಟೆಗಳಲ್ಲಿ ವ್ಯಾಯಾಮ ಮುಗಿಸಿ ನಂತರ ಉಪಾಹಾರ ಸ್ವೀಕರಿಸುತ್ತೇನೆ. ದಿನದ ಮೊದಲಾರ್ಧದಲ್ಲಿ ಫಿಟ್ನೆಸ್ ದಿನಚರಿ ಮುಗಿಸಿ, ಉಳಿದ ದಿನ ವಿಶ್ರಾಂತಿ ಪಡೆಯುತ್ತೇನೆ ಎಂದು ಖುದ್ದು ಕರುಣ್ ಅವರೇ ಹಿಂದೊಮ್ಮೆ ತಮ್ಮ ಫಿಟ್ನೆಸ್ ಕುರಿತು ಹೇಳಿದ್ದರು.
ಅಭ್ಯಾಸ ಹಾಗೂ ಪಂದ್ಯಗಳ ಸಮಯದಲ್ಲಿ ಸಹಜವಾಗಿ ಕರುಣ್ ಮೈದಾನದಲ್ಲಿರುತ್ತಾರೆ. ಅದರ ಹೊರತಾಗಿ, ಕರುಣ್ ಫುಟ್ಬಾಲ್ ಮತ್ತು ಟೇಬಲ್ ಟೆನ್ನಿಸ್ ಆಡುತ್ತಾರಂತೆ. ಇದು ತ್ರಾಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಪ್ರತಿಯೊಬ್ಬರೂ ತಮ್ಮ ಫಿಟ್ನೆಸ್ ಹೆಚ್ಚಿಸಲು ಈ ಆಟಗಳನ್ನು ಹೆಚ್ಚಾಗಿ ಆಡಬೇಕೆಂದು ಕನ್ನಡಿಗ ಸಲಹೆ ನೀಡಿದ್ದಾರೆ.
ಗಾಲ್ಫ್, ಜಿಮ್, ಸರಿಯಾದ ಆಹಾರಕ್ರಮ
ಗಾಲ್ಫ್ ಮತ್ತೊಂದು ಉತ್ತಮ ಕ್ರೀಡೆಯಾಗಿದ್ದು, ದೇಹಕ್ಕಿಂತ ಹೆಚ್ಚಾಗಿ ಮಾನಸಿಕ ಆರೋಗ್ಯ ವೃದ್ಧಿಗೆ ಹೆಚ್ಚು ನೆರವಾಗುತ್ತದೆ. ಈ ಕ್ರೀಡೆಯು ಏಕಾಗ್ರತೆಗೆ ವೃದ್ಧಿಸಲು ಸಹಾಯ ಮಾಡುತ್ತದೆ ಎಂದು ಡಿಸಿ ಆಟಗಾರ ತಿಳಿಸಿದ್ದಾರೆ.
ಜಿಮ್ ವರ್ಕೌಟ್ ಅಥವಾ ವ್ಯಾಯಾಮಗಳು ಕೂಡಾ ಒಳ್ಳೆಯದು ಎಂದು ಕರುಣ್ ಹೇಳುತ್ತಾರೆ. ಹಾಗಂತಾ ಒಂದೇ ರೀತಿಯ ವ್ಯಾಯಾಮವಲ್ಲ. ಮಿಶ್ರಿತ ತರಬೇತಿ ಅಗತ್ಯ. ಇದರ ಜೊತೆಗೆ ವಿಶ್ರಾಂತಿಗಾಗಿ ಸಮಯ ನಿಗದಿಪಡಿಸುವುದು ತುಂಬಾ ಮುಖ್ಯ ಎಂದು ಕರುಣ್ ಹೇಳುತ್ತಾರೆ.
ಸರಿಯಾಗಿ ತಿನ್ನುವುದು ಅತ್ಯಗತ್ಯ. ಊಟವನ್ನು ಎಂದಿಗೂ ಬಿಟ್ಟುಬಿಡಬೇಡಿ ಎಂದು ಕರುಣ್ ಸಲಹೆ ನೀಡುತ್ತಾರೆ. ಅದರಲ್ಲೂ ಬೆಳಗ್ಗಿನ ಉಪಾಹಾರ ತುಂಬಾ ಮುಖ್ಯ ಎಂದು ಕನ್ನಡಿಗ ಹೇಳುತ್ತಾರೆ.
ಫಿಟ್ನೆಸ್ ಟ್ರೈನರ್ ಹೇಳಿದ್ದು ಅನುಸರಿಸುತ್ತೇನೆ
“ನನ್ನ ಫಿಟ್ನೆಸ್ ವ್ಯಾಯಾಮಗಳು ತರಬೇತುದಾರ ನನಗೆ ಏನು ಮಾಡಬೇಕೆಂದು ಹೇಳುತ್ತಾರೋ ಅದರ ಮೇಲೆ ಅವಲಂಬಿತವಾಗಿದೆ. ಜಿಮ್ನಲ್ಲಿ ಓಟ, ಶಕ್ತಿ ತರಬೇತಿ ಸಾಮಾನ್ಯವಾಗಿ ಇರುತ್ತವೆ,” ಎಂದು ಕರುಣ್ ಹೇಳುತ್ತಾರೆ.
ಕ್ರಿಕೆಟ್ ಆಟ ಕರುಣ್ ವೃತ್ತಿಪರ ಕ್ರೀಡೆಯಾದರೂ, ಬಿಡುವಿನ ವೇಳೆಯಲ್ಲಿ ಕರ್ನಾಟಕ ರಣಜಿ ತಂಡದ ಸಹ ಆಟಗಾರರೊಂದಿಗೆ ಫುಟ್ಬಾಲ್ ಆಡಲು ಇಷ್ಟಪಡುತ್ತಾರಂತೆ. ಇದೇ ವೇಳೆ ಟೇಬಲ್ ಲಭ್ಯವಿದ್ದರೆ ಟೇಬಲ್ ಟೆನಿಸ್ ಆಡುವುದು ಫಿಟ್ನೆಸ್ಗೆ ಸಹಾಯವಾಗುತ್ತದೆ ಎಂದು ಅವರು ಹೇಳುತ್ತಾರೆ.