ಒಂದೇ ಓವರ್ನಲ್ಲಿ ರೋಹಿತ್ ಶರ್ಮಾ-ರಿಷಭ್ ಪಂತ್ ವಿಕೆಟ್ ಕಬಳಿಸಿ ಶ್ರೀರಾಮನಿಗೆ ನಮಿಸಿದ ಕೇಶವ್ ಮಹಾರಾಜ್
ಭಾರತ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಸ್ಪಿನ್ನರ್ ಕೇಶವ್ ಮಹಾರಾಜ್ ಆರಂಭದಲ್ಲೇ ಎರಡು ವಿಕೆಟ್ ಕಬಳಿಸಿದರು. ನಿರ್ಣಾಯಕ ಫೈನಲ್ ಪಂದ್ಯದಲ್ಲಿ ಭಾರತದ ಅಬ್ಬರಕ್ಕೆ ತಡೆಯೊಡ್ಡಿದ ಬೌಲರ್ ದೇವರಿಗೆ ಕೈಮುಗಿದು ನಮಿಸಿದರು.

ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟಾಸ್ ಗೆದ್ದ ಭಾರತ ತಂಡ (South Africa vs India) ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ಬೃಹತ್ ಮೊತ್ತ ಕಲೆಹಾಕುವ ಉದ್ದೇಶದೊಂದಿಗೆ ಕಣಕ್ಕಿಳಿದ ರೋಹಿತ್ ಶರ್ಮಾ ಪಡೆಗೆ, ಕೇಶವ್ ಮಹಾರಾಜ್ ಆರಂಭದಲ್ಲೇ ಕಂಟಕರಾದರು. ಒಂದೇ ಓವರ್ನಲ್ಲಿ ಎರಡು ಪ್ರಮುಖ ವಿಕೆಟ್ ಕಬಳಿಸಿ ಹರಿಣಗಳ ಬಳಗಕ್ಕೆ ಮುನ್ನಡೆ ತಂದುಕೊಟ್ಟರು. ನಿರ್ಣಾಯಕ ಎರಡು ವಿಕೆಟ್ ಕಬಳಿಸಿದ ಬಳಿಕ, ಸ್ಪಿನ್ನರ್ ದೇವರಿಗೆ ನಮಿಸಿದರು. ಈ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಕೇಶವ್ ಮಹಾರಾಜ್ ಶ್ರೀರಾಮನ ಭಕ್ತ ಎಂಬುದು ಈಗಾಗಲೇ ಅಭಿಮಾನಿಗಳಿಗೆ ತಿಳಿದಿದೆ. ಪ್ರತಿಬಾರಿ ಮೈದಾನಕ್ಕೆ ಎಂಟ್ರಿ ಕೊಡುವಾಗ ಮೈದಾನದಲ್ಲಿ ಅವರಿಗಾಗಿ ‘ರಾಮ್ ಸಿಯಾ ರಾಮ್’ ಹಾಡು ಮೊಳಗುತ್ತದೆ. ದೇವರ ಮೇಲೆ ಅಪಾರ ನಂಬಿಕೆ ಇರುವ ಭಾರತ ಮೂಲದ ಆಫ್ರಿಕಾ ಕ್ರಿಕೆಟಿಗ ಫೈನಲ್ ಪಂದ್ಯದಲ್ಲೂ ದಕ್ಷಿಣ ಆಫ್ರಿಕಾ ತಂಡದ ಪರ ನಿರ್ಣಾಯಕ ಪಾತ್ರ ವಹಿಸಿದ್ದಾರೆ.
ಬ್ಯಾಟಿಂಗ್ ಆರಂಭಿಸಿದ ಭಾರತ ತಂಡವು ಪಂದ್ಯದ ಮೊದಲ 9 ಎಸೆತಗಳಲ್ಲಿ 23 ರನ್ ಗಳಿಸಿತು. ಆರಂಭಿಕರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಸತತ ಬೌಂಡರಿಗಳೊಂದಿಗೆ ಅಬ್ಬರಿಸುವ ಸೂಚನೆ ನೀಡಿದರು. ಇನ್ನಿಂಗ್ಸ್ನ ಎರಡನೇ ಓವರ್ ಎಸೆಯಲು ಬಂದ ಕೇಶವ್ ಮಹಾರಾಜ್ ಓವರ್ನ ನಾಲ್ಕನೇ ಎಸೆತದಲ್ಲಿ ರೋಹಿತ್ ಶರ್ಮಾ ವಿಕೆಟ್ ಕಬಳಿಸಿದರು. ಇದರೊಂದಿಗೆ ಟೀಮ್ ಇಂಡಿಯಾ ಅಬ್ಬರಕ್ಕೆ ಬ್ರೇಕ್ ಹಾಕಿದರು. ಮೊದಲ ವಿಕೆಟ್ ಪತನದೊಂದಿಗೆ ಭಾರತಕ್ಕೆ ದೊಡ್ಡ ಆಘಾತ ಎದುರಾಯ್ತು. ಅದರ ಬೆನ್ನಲ್ಲೇ ಓವರ್ನ ಕೊನೆಯ ಎಸೆತದಲ್ಲಿ ಅವರು ಮತ್ತೊಂದು ವಿಕೆಟ್ ಕಬಳಿಸಿದರು. ಮೂರನೇ ಕ್ರಮಾಂಕದಲ್ಲಿ ಬಂದ ರಿಷಭ್ ಪಂತ್, ಎದುರಿಸಿದ ಎರಡನೇ ಎಸೆತದಲ್ಲಿಯೇ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ಗೆ ಕ್ಯಾಚ್ ಕೊಟ್ಟು ವಿಕೆಟ್ ಒಪ್ಪಿಸಿದರು.
ಒಂದು ಹಂತದಲ್ಲಿ 23 ರನ್ಗೆ ಅಜೇಯವಾಗಿದ್ದ ಭಾರತ, ಮರುಕ್ಷಣವೇ ಅಷ್ಟೇ ರನ್ಗಳಿಗೆ ಆರಂಭಿಕ ಎರಡು ವಿಕೆಟ್ ಕಳೆದುಕೊಂಡಿತು. ಎಸೆದ ಮೊದಲ ಓವರ್ನಲ್ಲೇ ಎರಡು ವಿಕೆಟ್ ಕಬಳಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟ ಮಹಾರಾಜ್, ದೇವರಿಗೆ ನಮಿಸಿದರು.
ಭಾರತ ಮತ್ತು ದಕ್ಷಿಣ ಆಫ್ರಿಕಾ ಪಂದ್ಯದ ಲೈವ್ ಅಪ್ಡೇಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
