ಕೆಕೆಆರ್ vs ಆರ್ಸಿಬಿ ನಡುವಿನ ಐಪಿಎಲ್ ಉದ್ಘಾಟನಾ ಪಂದ್ಯ ರದ್ದಾಗುವ ಸಾಧ್ಯತೆ, ಕಾರಣ ಹೀಗಿದೆ!
ಕೆಕೆಆರ್ vs ಆರ್ಸಿಬಿ ನಡುವಿನ ಐಪಿಎಲ್ ಆರಂಭಿಕ ಪಂದ್ಯ ರದ್ದಾಗುವ ಸಾಧ್ಯತೆ ಇದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಮಾರ್ಚ್ 22ರವರೆಗೆ ಕೋಲ್ಕತ್ತಾದಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗಲಿದೆ ಎಂದು ವರದಿಯಾಗಿದೆ.

ಮಾರ್ಚ್ 22 ರಿಂದ ಐಪಿಎಲ್ 2025 ಪ್ರಾರಂಭವಾಗಲಿದ್ದು, ಕ್ರಿಕೆಟ್ ಅಭಿಮಾನಿಗಳ ಕಾಯುವಿಕೆ ಕೊನೆಗೊಳ್ಳಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಆದಾಗ್ಯೂ, ಮಳೆಯು ಅಭಿಮಾನಿಗಳ ಉತ್ಸಾಹವನ್ನು ಹಾಳು ಮಾಡಬಹುದು. ಕೋಲ್ಕತ್ತಾದಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಹೀಗಾಗಿ ಉದ್ಘಾಟನಾ ಪಂದ್ಯ ರದ್ದಾದರೂ ಅಚ್ಚರಿ ಇಲ್ಲ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಕಂಡಿದ್ದು, ಮಾರ್ಚ್ 22ರ ತನಕ ಕೋಲ್ಕತ್ತಾದಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗಲಿದೆ ಎಂದು ಭಾರತ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. 'ಬಂಗಾಳಕೊಲ್ಲಿಯಿಂದ ಕೆಳ ಉಷ್ಣವಲಯದ ಮಟ್ಟದಲ್ಲಿ ಚಂಡಮಾರುತ ಕಾಣಿಸಿಕೊಳ್ಳಲಿದ್ದು, ಮಾರ್ಚ್ 20 ಮತ್ತು 22 ರವರೆಗೆ ಪಶ್ಚಿಮ ಬಂಗಾಳದ ಕೆಲವು ಜಿಲ್ಲೆಗಳು ಮತ್ತು ಸಿಕ್ಕಿಂನಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ತಿಳಿಸಿದೆ.
ಪಂದ್ಯ ರದ್ದಾದರೆ, ಯಾರಿಗೆ ಎಷ್ಟು ಅಂಕ?
ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆಯುವ ಉದ್ಘಾಟನಾ ಪಂದ್ಯ ರದ್ದಾದರೆ ಕೆಕೆಆರ್ ಮತ್ತು ಆರ್ಸಿಬಿ ತಂಡಗಳಿಗೆ ತಲಾ 1 ಅಂಕ ಸಿಗುತ್ತದೆ. ನೂತನ ನಾಯಕರೊಂದಿಗೆ ಗೆಲುವಿನೊಂದಿಗೆ ಅಭಿಯಾನ ಆರಂಭಿಸಲು ಉತ್ಸಾಹ ತೋರುತ್ತಿರುವ ಉಭಯ ತಂಡಗಳು, ಇದೀಗ ನಿರಾಸೆ ಅನುಭವಿಸುವಂತಾಗಿದೆ. ಆರ್ಸಿಬಿಗೆ ರಜತ್ ಪಾಟಿದಾರ್ ನಾಯಕನಾಗಿದ್ದರೆ, ಕೆಕೆಆರ್ ತಂಡವನ್ನು ಅಜಿಂಕ್ಯಾ ರಹಾನೆ ಮುನ್ನಡೆಸುತ್ತಿದ್ದಾರೆ.
ಈ ಋತುವಿನ ಮೊದಲ ಪಂದ್ಯವು ಅದ್ಧೂರಿ ಉದ್ಘಾಟನಾ ಸಮಾರಂಭದೊಂದಿಗೆ ಆರಂಭವಾಗಲಿದ್ದು, ಜನಪ್ರಿಯ ಗಾಯಕಿಯರಾದ ಶ್ರೇಯಾ ಘೋಷಾಲ್ , ಕರಣ್ ಔಜ್ಲಾ ಮತ್ತು ನಟಿ ದಿಶಾ ಪಟಾನಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಆದರೆ, ಆರೆಂಜ್ ಅಲರ್ಟ್ ಅಭಿಮಾನಿಗಳಿಗೆ ಸ್ವಲ್ಪ ನಿರಾಶೆ ಮೂಡಿಸಿದೆ.
ಆರ್ಸಿಬಿ ಮತ್ತು ಕೆಕೆಆರ್ ಮುಖಾಮುಖಿ ದಾಖಲೆ
ಆರ್ಸಿಬಿ ವಿರುದ್ಧ ಕೆಕೆಆರ್ ಮೇಲುಗೈ ಸಾಧಿಸಿದೆ. ಉಭಯ ತಂಡಗಳ ಮಧ್ಯೆ 34 ಪಂದ್ಯಗಳು ಜರುಗಿದ್ದು, ನೈಟ್ ರೈಡರ್ಸ್ 20 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ರಾಯಲ್ ಚಾಲೆಂಜರ್ಸ್ 14ರಲ್ಲಿ ಜಯದ ರುಚಿ ನೋಡಿದೆ.
ಕೆಕೆಆರ್ ತಂಡ
ಅಜಿಂಕ್ಯ ರಹಾನೆ (ನಾಯಕ), ವೆಂಕಟೇಶ್ ಅಯ್ಯರ್ (ಉಪನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರೋವ್ಮನ್ ಪೊವೆಲ್ (ವಿಕೆಟ್ ಕೀಪರ್), ರಹಮಾನಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಲುವ್ನಿತ್ ಸಿಸೋಡಿಯಾ (ವಿಕೆಟ್ ಕೀಪರ್), ಮನೀಶ್ ಪಾಂಡೆ, ಅಂಗ್ಕ್ರಿಶ್ ರಘುವಂಶಿ, ರಮಣದೀಪ್ ಸಿಂಗ್, ರಿಂಕು ಸಿಂಗ್, ಮೊಯಿನ್ ಅಲಿ, ಸುನಿಲ್ ನರೈನ್, ಆಂಡ್ರೆ ರಸೆಲ್, ಅನುಕುಲ್ ರಾಯ್, ವೈಭವ್ ಅರೋರಾ, ಸ್ಪೆನ್ಸರ್ ಜಾನ್ಸನ್, ಮಯಾಂಕ್ ಮಾರ್ಕಂಡೆ, ಅನ್ರಿಚ್ ನಾರ್ಟ್ಜೆ, ಉಮ್ರಾನ್ ಮಲಿಕ್, ವರುಣ್ ಚಕ್ರವರ್ತಿ.
ಆರ್ಸಿಬಿ ತಂಡ
ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ಯಶ್ ದಯಾಳ್, ಜೋಶ್ ಹೇಜಲ್ವುಡ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಲಿಯಾಮ್ ಲಿವಿಂಗ್ಸ್ಟೋನ್, ರಸಿಕ್ ದಾರ್, ಸುಯಾಶ್ ಶರ್ಮಾ, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ನುವಾನ್ ತುಷಾರ, ಮನೋಜ್ ಭಂಡಗೆ, ಜಾಕೋಬ್ ಬೆಥೆಲ್, ದೇವದತ್ ಪಡಿಕ್ಕಲ್, ಸ್ವಸ್ತಿಕ್ ಛಿಕರಾ, ಲುಂಗಿ ಎನ್ಗಿಡಿ, ಅಭಿನಂದನ್ ಸಿಂಗ್, ಮೋಹಿತ್ ರಾಠಿ.
