ಕೊಹ್ಲಿ-ಪಾಂಡ್ಯ ಪವರ್​, ಆರ್​​ಸಿಬಿ ಟೇಬಲ್ ಟಾಪರ್; ಡೆಲ್ಲಿ ವಿರುದ್ಧ ಬೆಂಗಳೂರಿಗೆ ಭರ್ಜರಿ ಗೆಲುವು, ಪರ್ಪಲ್-ಆರೆಂಜ್ ಕ್ಯಾಪ್ ಬೋನಸ್
ಕನ್ನಡ ಸುದ್ದಿ  /  ಕ್ರಿಕೆಟ್  /  ಕೊಹ್ಲಿ-ಪಾಂಡ್ಯ ಪವರ್​, ಆರ್​​ಸಿಬಿ ಟೇಬಲ್ ಟಾಪರ್; ಡೆಲ್ಲಿ ವಿರುದ್ಧ ಬೆಂಗಳೂರಿಗೆ ಭರ್ಜರಿ ಗೆಲುವು, ಪರ್ಪಲ್-ಆರೆಂಜ್ ಕ್ಯಾಪ್ ಬೋನಸ್

ಕೊಹ್ಲಿ-ಪಾಂಡ್ಯ ಪವರ್​, ಆರ್​​ಸಿಬಿ ಟೇಬಲ್ ಟಾಪರ್; ಡೆಲ್ಲಿ ವಿರುದ್ಧ ಬೆಂಗಳೂರಿಗೆ ಭರ್ಜರಿ ಗೆಲುವು, ಪರ್ಪಲ್-ಆರೆಂಜ್ ಕ್ಯಾಪ್ ಬೋನಸ್

ಇಂಡಿಯನ್ ಪ್ರೀಮಿಯರ್ ಲೀಗ್​​ನ 46ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 6 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದೆ.

ಕೊಹ್ಲಿ-ಪಾಂಡ್ಯ ಪವರ್​, ಆರ್​​ಸಿಬಿ ಟೇಬಲ್ ಟಾಪರ್; ಡೆಲ್ಲಿ ವಿರುದ್ಧ ಸೇಡಿನ ಪಂದ್ಯದಲ್ಲಿ ಭರ್ಜರಿ ಗೆಲುವು
ಕೊಹ್ಲಿ-ಪಾಂಡ್ಯ ಪವರ್​, ಆರ್​​ಸಿಬಿ ಟೇಬಲ್ ಟಾಪರ್; ಡೆಲ್ಲಿ ವಿರುದ್ಧ ಸೇಡಿನ ಪಂದ್ಯದಲ್ಲಿ ಭರ್ಜರಿ ಗೆಲುವು (AP)

26ಕ್ಕೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದರ ನಡುವೆಯೂ ಒತ್ತಡ ನಿಭಾಯಿಸಿ 119 ರನ್​ಗಳ ಜೊತೆಯಾಟವಾಡಿದ ವಿರಾಟ್ ಕೊಹ್ಲಿ (51) ಮತ್ತು ಕೃನಾಲ್ ಪಾಂಡ್ಯ (73 ಅಜೇಯ) ಅವರ ಅದ್ಭುತ ಆಟದ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 6 ವಿಕೆಟ್​​ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಜಯದೊಂದಿಗೆ ತವರಿನ ಸೋಲಿಗೆ ಅವರದ್ದೇ ತವರಿನಲ್ಲಿ ಸೇಡು ತೀರಿಸಿಕೊಂಡಿದೆ. ಇದೀಗ ತವರಿನಾಚೆ ಸತತ 6 ಪಂದ್ಯಗಳನ್ನು ಗೆದ್ದಿರುವ ಆರ್​ಸಿಬಿ ಇದೀಗ ಒಟ್ಟು 7 ಗೆಲುವಿನೊಂದಿಗೆ 14 ಅಂಕ ಪಡೆದು ಟೇಬಲ್ ಟಾಪರ್​ ಆಗಿದೆ. ಇಲ್ಲಿ ಮತ್ತೊಂದು ಬೋನಸ್ ಎಂದರೆ ಆರೆಂಜ್ (ವಿರಾಟ್-443) ಮತ್ತು ಪರ್ಪಲ್ ಕ್ಯಾಪ್ (ಜೋಶ್ ಹೇಜಲ್ ವುಡ್ - 18 ವಿಕೆಟ್) ಎರಡೂ ನಮ್ಮವೇ ಆಗಿವೆ.

ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನದಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ, ಆರ್​ಸಿಬಿ ಬೌಲರ್​ಗಳ ದಾಳಿಗೆ ತತ್ತರಿಸಿತು. ಇದರ ನಡುವೆಯೂ 20 ಓವರ್​​ ಪೂರ್ಣಗೊಳಿಸಿದ ಡಿಸಿ 8 ವಿಕೆಟ್ ನಷ್ಟಕ್ಕೆ 162 ರನ್ ಕಲೆ ಹಾಕಿತು. ಭುವನೇಶ್ವರ್​ ಕುಮಾರ್ 3 ವಿಕೆಟ್​, ಜೋಶ್ ಹೇಜಲ್​ವುಡ್ 2 ವಿಕೆಟ್ ಪಡೆದು ಅಕ್ಷರ್​ ಪಡೆಯನ್ನು ಕಟ್ಟಿ ಹಾಕಿದರು. ಈ ಸುಲಭ ಗುರಿ ಬೆನ್ನಟ್ಟಿದ ಆರ್​​ಸಿಬಿ ಪವರ್​ಪ್ಲೇನಲ್ಲೇ ಇಕ್ಕಟ್ಟಿಗೆ ಸಿಲುಕಿತು. ನೋಡ ನೋಡುತ್ತಿದ್ದಂತೆ 26 ರನ್​ಗೆ 3 ವಿಕೆಟ್ ಕಳೆದುಕೊಂಡಿತು. ಆದರೂ ಛಲ ಬಿಡದೆ ಹೋರಾಡಿ ಗೆದ್ದು ಬೀಗಿತು.

ಕೃನಾಲ್ ಪಾಂಡ್ಯ ಗೆಲುವಿನಾಟ

163 ರನ್ ಗುರಿ ಬೆನ್ನಟ್ಟಿದ ಆರ್​ಸಿಬಿ 4 ಓವರ್​ಗಳ ಅಂತ್ಯಕ್ಕೆ 26 ರನ್ ಗಳಿಸಿ ಮೂರು ವಿಕೆಟ್ ಕಳೆದುಕೊಂಡಿತು. ಪದಾರ್ಪಣೆ ಮಾಡಿದ ಜೇಕಬ್ ಬೆಥೆಲ್ (12), ಇನ್​ಫಾರ್ಮ್ ಬ್ಯಾಟರ್​ ದೇವದತ್ ಪಡಿಕ್ಕಲ್ (0), ನಾಯಕ ರಜತ್ ಪಾಟೀದಾರ್ (6) ಬೇಗನೇ ಔಟಾದರು. ಇದು ಆರ್​ಸಿಬಿ ತಂಡದ ಜೊತೆಗೆ ಅಭಿಮಾನಿಗಳಿಗೂ ಆತಂಕ ಹೆಚ್ಚಿಸಿತ್ತು. ಕೊಹ್ಲಿ ಇದ್ದರೂ ಎನ್ನುವ ಭರವಸೆಯ ಜೊತೆಗೆ ಸೋಲುವ ಆತಂಕವೂ ಉಳಿದಿತ್ತು. ಆದರೆ ಚಾಣಾಕ್ಷ ನಡೆ ಅನುಸರಿಸಿದ ಟೀಮ್ ಮ್ಯಾನೇಜ್​ಮೆಂಟ್ ಜಿತೇಶ್ ಶರ್ಮಾ ಬದಲಿಗೆ ಕೃನಾಲ್ ಪಾಂಡ್ಯರನ್ನು ಕಣಕ್ಕಿಳಿಸಿತು. ಮ್ಯಾನೇಜ್​ಮೆಂಟ್ ಇಟ್ಟ ನಂಬಿಕೆಗೂ ಕ್ರೀಸ್​​ನಲ್ಲಿ ಕೊಟ್ಟ ಅನುಭವದ ಸಲಹೆಗಳಿಗೆ ತಕ್ಕಂತೆ ಬ್ಯಾಟಿಂಗ್ ನಡೆಸಿದ ಕೃನಾಲ್, ಮ್ಯಾಚ್​ ವಿನ್ನಿಂಗ್ ಪ್ರದರ್ಶನ ಕೊಟ್ಟರು.

ಇದು ಕೃನಾಲ್ ಅವರ ವೃತ್ತಿಜೀವನದ ಶ್ರೇಷ್ಠ ಇನ್ನಿಂಗ್ಸ್​​ಗಳಲ್ಲಿ ಒಂದು ಎಂದರೂ ತಪ್ಪಾಗಲ್ಲ. ಒತ್ತಡ ನಿಭಾಯಿಸಿ ತಂಡವನ್ನು ಮುನ್ನಡೆಸಿಕೊಟ್ಟ ಕೃನಾಲ್ ಆಗಾಗ್ಗೆ ಚೆಂಡನ್ನು ಬೌಂಡರಿ ಗೆರೆ ದಾಟಿಸುವ ಮೂಲಕ ಒತ್ತಡವನ್ನು ನಿಯಂತ್ರಿಸುವ ಕೆಲಸ ಮಾಡಿದರು. ಅದಕ್ಕೆ ತಕ್ಕಂತೆ ತಕ್ಕನಾಗಿ ಕೊಹ್ಲಿ ಸಾಥ್ ಕೊಟ್ಟರು. ಸೊಗಸಾಗಿ ಸ್ಟ್ರೈಕ್​ ರೊಟೇಟ್ ಮಾಡಿದರು. ಬೌಲಿಂಗ್​ನಲ್ಲಿ 28ಕ್ಕೆ 1 ವಿಕೆಟ್ ಕಿತ್ತಿದ್ದ ಪಾಂಡ್ಯ, ಕೊಹ್ಲಿ ಜೊತೆಗೆ 119 ರನ್​ಗಳ ಅಮೋಘ ಪಾಲುದಾರಿಕೆ ಒದಗಿಸಿದರು. ಡೆಲ್ಲಿ ಬೌಲರ್​ಗಳು ವಿಕೆಟ್​​ಗಾಗಿ ತಂತ್ರಗಳನ್ನು ಪ್ರಯೋಗಿಸಿದರೂ ಪಾಂಡ್ಯ ಅದಕ್ಕೆ ಕ್ಯಾರೇ ಎನ್ನಲಿಲ್ಲ. 47 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್ ಸಹಿತ ಅಜೇಯ 73 ರನ್ ಸಿಡಿಸಿ ಡೆಲ್ಲಿಗೆ ಸೋಲಿನ ಡಿಚ್ಚಿ ಮಾಡಿದರು.

ಕೊಹ್ಲಿ ಆಟವನ್ನು ಮರೆಯುವಂತಿಲ್ಲ

ಕೃನಾಲ್ ಪಾಂಡ್ಯದ ಆಟಕ್ಕೆ ಎಷ್ಟು ತೋಕವಿತ್ತೋ ಅಷ್ಟೇ ಕೊಹ್ಲಿ ಅವರ 51 ರನ್​ಗಳ ಇನ್ನಿಂಗ್ಸ್​​ಗೂ ಇತ್ತು. ಒತ್ತಡವನ್ನು ನಿಯಂತ್ರಿಸುವ ಅನುಭವನ್ನು ಮತ್ತೆ ಪ್ರಯೋಗಿಸಿದ ಕೊಹ್ಲಿ ಎದುರಾಳಿಗಳ ತಂತ್ರಗಳನ್ನು ವಿಫಲಗೊಳಿಸುವಲ್ಲಿ ಯಶಸ್ವಿಯಾದರು. ತಾನು ಪ್ರತಿ ಓವರ್​​ನಲ್ಲೂ ಚೆಂಡನ್ನು ಗಾಳಿಯಲ್ಲಿ ತೇಲಿಸದೆ ಕೇವಲ ಕೆಳಗಡೆಯೇ ಆಡುವ ಮೂಲಕ ಡೆಲ್ಲಿ ಬೌಲರ್​​ಗಳ ಮೇಲೆ ಒತ್ತಡ ಹೇರಿದರು. ರಕ್ಷಣಾತ್ಮಕ ಆಟದೊಂದಿಗೆ ಡೆಲ್ಲಿ ತಂಡವನ್ನು ಸುಸ್ತುಗೊಳಿಸಿ ಭರವಸೆ ಕಸಿದರು. ಸ್ಟ್ರೈಕ್​​ನಲ್ಲಿದ್ದ ಕೃನಾಲ್ ಆಡಲು ಎಲ್ಲಾ ರೀತಿಯ ಸಹಕಾರ ಕೊಟ್ಟರು. ಪರಿಣಾಮ 47 4 ಬೌಂಡರಿ ಸಹಿತ 51 ರನ್ ಗಳಿಸಿ ಔಟಾದರು. ಆದಾಗಲೇ ಗೆಲುವು ಆರ್​ಸಿಬಿ ಕೈಯಲ್ಲಿತ್ತು. ಪ್ರಸಕ್ತ ಐಪಿಎಲ್​ನಲ್ಲಿ ಇದು ಅವರ 6ನೇ ಅರ್ಧಶತಕ. ಯುವ ಆಟಗಾರರಿಗೆ ಒತ್ತಡ ಹೇಗೆ ನಿಭಾಯಿಸಬೇಕು ಎನ್ನುವುದಕ್ಕೆ ಸಂಬಂಧಿಸಿ ಕೊಹ್ಲಿ ಅವರ ಆಟ ಒಂದು ಉತ್ತಮ ಉದಾಹರಣೆ. ಕೊನೆಯಲ್ಲಿ ಟಿಮ್ ಡೇವಿಡ್ ಅಜೇಯ 19 ರನ್ ಗಳಿಸಿ ಪಂದ್ಯವನ್ನು ಮುಗಿಸಿದರು.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.