ಸಿಎಸ್‌ಕೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಪಂದ್ಯದಲ್ಲಿ ಕೆಕೆಆರ್‌ ತಂಡಕ್ಕೆ ಮಾಡು ಇಲ್ಲವೆ ಮಡಿ ಹೋರಾಟ; ಐಪಿಎಲ್‌ ಪಂದ್ಯದ 10 ಅಂಶಗಳು
ಕನ್ನಡ ಸುದ್ದಿ  /  ಕ್ರಿಕೆಟ್  /  ಸಿಎಸ್‌ಕೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಪಂದ್ಯದಲ್ಲಿ ಕೆಕೆಆರ್‌ ತಂಡಕ್ಕೆ ಮಾಡು ಇಲ್ಲವೆ ಮಡಿ ಹೋರಾಟ; ಐಪಿಎಲ್‌ ಪಂದ್ಯದ 10 ಅಂಶಗಳು

ಸಿಎಸ್‌ಕೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಪಂದ್ಯದಲ್ಲಿ ಕೆಕೆಆರ್‌ ತಂಡಕ್ಕೆ ಮಾಡು ಇಲ್ಲವೆ ಮಡಿ ಹೋರಾಟ; ಐಪಿಎಲ್‌ ಪಂದ್ಯದ 10 ಅಂಶಗಳು

ಐಪಿಎಲ್‌ 18ನೇ ಆವೃತ್ತಿಯಲ್ಲೇ ಚೆನ್ನೈನ ಚೆಪಾಕ್‌ ಮೈದಾನದಲ್ಲಿ ನಡೆದ ಉಭಯ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಕೆಕೆಆರ್ ತಂಡ ಭರ್ಜರಿ ಜಯಗಳಿಸಿತ್ತು. ಇದೀಗ ಅದಕ್ಕೆ ಸೇಡು ತೀರಿಸಲು ಚೆನ್ನೈ ಸೂಪರ್‌ ಕಿಂಗ್ಸ್‌ ಎದುರು ನೋಡುತ್ತಿದೆ.

ಸಿಎಸ್‌ಕೆ ವಿರುದ್ಧ ಕೆಕೆಆರ್‌ ತಂಡಕ್ಕೆ ಮಾಡು ಇಲ್ಲವೆ ಮಡಿ ಹೋರಾಟ; ಪಂದ್ಯದ 10 ಅಂಶಗಳು
ಸಿಎಸ್‌ಕೆ ವಿರುದ್ಧ ಕೆಕೆಆರ್‌ ತಂಡಕ್ಕೆ ಮಾಡು ಇಲ್ಲವೆ ಮಡಿ ಹೋರಾಟ; ಪಂದ್ಯದ 10 ಅಂಶಗಳು (PTI)

ಐಪಿಎಲ್ 2025ರ 57ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಟೂರ್ನಿಯಲ್ಲಿ ಎರಡನೇ ಬಾರಿ ಮುಖಾಮುಖಿಯಾಗಲಿವೆ. ಸಿಎಸ್‌ಕೆ ತಂಡಕ್ಕೆ ಈ ಪಂದ್ಯವು ಆಟಕ್ಕುಂಟು ಲೆಕ್ಕವಿಲ್ಲ. ಏಕೆಂದರೆ ಈಗಾಗಲೇ ತಂಡ ಪ್ಲೇಆಫ್‌ ರೇಸ್‌ನಿಂದ ಹೊರಬಿದ್ದಿದೆ. ಆದರೆ, ಕೆಕೆಆರ್ ತಂಡಕ್ಕೆ ಗೆಲುವು ಅನಿವಾರ್ಯ. ಗೆದ್ದರಷ್ಟೇ ಟೂರ್ನಿಯಲ್ಲಿ ಉಳಿಗಾಲ. ತಂಡವು ಪ್ರಸ್ತುತ 11 ಪಂದ್ಯಗಳಲ್ಲಿ ಐದು ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿ, 11 ಅಂಕಗಳನ್ನು ಹೊಂದಿದೆ. ಈಗ ಉಳಿದ ಮೂರು ಪಂದ್ಯಗಳನ್ನು ಗೆದ್ದರೂ ಇತರ ತಂಡಗಳ ಫಲಿತಾಂಶಗಳ ಆಧಾರದ ಮೇಲೆ ಪ್ಲೇಆಫ್‌ ಹಂತಕ್ಕೇರುವ ಅವಕಾಶಗಳಿವೆ. ಅತ್ತ ಈವರೆಗೆ ಆಡಿದ 11 ಪಂದ್ಯಗಳಲ್ಲಿ ಕೇವಲ ಎರಡು ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಸಿಎಸ್‌ಕೆ, ತನ್ನ ಗೌರವ ಉಳಿಸಿಕೊಳ್ಳಲು ಹೋರಾಡಬೇಕಿದೆ.

ಪ್ರಮುಖ ಪಂದ್ಯಕ್ಕೆ ಸಂಬಂಧಿಸಿದಂತೆ 10 ಪ್ರಮುಖ ಅಂಶಗಳನ್ನು ನೋಡೋಣ.

  1. ಕೊನೆಯ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧದ ಸೋಲು ಸಿಎಸ್‌ಕೆ ತಂಡದ ಸತತ ನಾಲ್ಕನೇ ಸೋಲಾಗಿದೆ. ಒಂದು ವೇಳೆ ಕೆಕೆಆರ್‌ ವಿರುದ್ಧ ಸೋತರೆ ಈ ಬಾರಿ ಸತತ ಎರಡು ಬಾರಿ ಸತತ 5 ಪಂದ್ಯಗಳಲ್ಲಿ ಸೋತ ಕಳಪೆ ದಾಖಲೆ ನಿರ್ಮಿಸಲಿದೆ.
  2. ಐಪಿಎಲ್‌ನಲ್ಲಿ ಈ ಎರಡೂ ತಂಡಗಳ ನಡುವೆ ಈವರೆಗೆ ನಡೆದ 30 ಪಂದ್ಯಗಳಲ್ಲಿ, ಸಿಎಸ್‌ಕೆ ತಂಡ 19 ರಲ್ಲಿ ಗೆದ್ದಿದೆ. ಅತ್ತ ಕೆಕೆಆರ್‌ ತಂಡ 11 ಪಂದ್ಯಗಳಲ್ಲಿ ಮಾತ್ರ ಗೆದ್ದಿದೆ. ಕೋಲ್ಕತ್ತಾದಲ್ಲಿ ಆಡಿದ 10 ಪಂದ್ಯಗಳಲ್ಲಿ ಆರರಲ್ಲಿ ಗೆದ್ದು ಸಿಎಸ್‌ಕೆ ಮತ್ತೊಮ್ಮೆ ಮೇಲುಗೈ ಸಾಧಿಸಿದೆ.
  3. ಈ ವರ್ಷ ಚೆನ್ನೈನ ಚೆಪಾಕ್‌ ಮೈದಾನದಲ್ಲಿ ನಡೆದ ಉಭಯ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ಕೆಕೆಆರ್ ಭರ್ಜರಿ ಜಯಗಳಿಸಿತ್ತು. ಸಿಎಸ್‌ಕೆ ತಂಡ ಕಳಪೆ ಬ್ಯಾಟಿಂಗ್‌ ಪ್ರದರ್ಶನ ನೀಡಿ ಮುಗ್ಗರಿಸಿತ್ತು.
  4. ಎರಡೂ ತಂಡಗಳು ಉತ್ತಮ ಸ್ಪಿನ್ನರ್‌ಗಳನ್ನು ಹೊಂದಿವೆ. ಪ್ರಸಕ್ತ ಋತುವಿನಲ್ಲಿ ಕೆಕೆಆರ್‌ ತಂಡದ ಸ್ಪಿನ್ನರ್‌ಗಳು 31 ವಿಕೆಟ್‌ ಕಬಳಿಸಿದ್ದರೆ, ಸಿಎಸ್‌ಕೆಯ ಸ್ಪಿನ್ನರ್‌ಗಳು ಕೂಡಾ 28 ವಿಕೆಟ್‌ ಪಡೆದಿದ್ದಾರೆ.
  5. ಕೆಕೆಆರ್ ತಂಡದಲ್ಲಿ ವರುಣ್ ಚಕ್ರವರ್ತಿ, ಸುನಿಲ್ ನರೈನ್ ಮತ್ತು ಮೊಯಿನ್ ಅಲಿಯಂತಹ ವಿಶ್ವ ದರ್ಜೆಯ ಸ್ಪಿನ್ನರ್‌ಗಳಿದ್ದಾರೆ. ಮೊದಲ ಪಂದ್ಯದಲ್ಲಿ ಯೆಲ್ಲೋ ಆರ್ಮಿಯನ್ನು ಅತ್ಯಂತ ಕಡಿಮೆ ಮೊತ್ತಕ್ಕೆ ಕಟ್ಟಿಹಾಕಿದ್ದರು. ಇದೇ ವೇಳೆ ಸಿಎಸ್‌ಕೆ ತಂಡದಲ್ಲಿ ನೂರ್ ಅಹ್ಮದ್, ರವೀಂದ್ರ ಜಡೇಜಾ ಮತ್ತು ಆರ್ ಅಶ್ವಿನ್ ಅವರಂತಹ ಅನುಭವಿ ಸ್ಪಿನ್ನರ್‌ಗಳಿದ್ದಾರೆ.
  6. ಪ್ರಸಕ್ತ ಆವೃತ್ತಿಯಲ್ಲಿ ಕೆಕೆಆರ್ ತಂಡದ ನಾಯಕ ಅಜಿಂಕ್ಯ ರಹಾನೆ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಮೂರು ಅರ್ಧಶತಕ ಸಿಡಿಸಿದ್ದರೂ, ಸ್ಪಿನ್ನರ್‌ಗಳ ವಿರುದ್ಧ ಅವರು ಬ್ಯಾಟ್‌ ಬೀಸಲು ಪರದಾಡುತ್ತಿದ್ದಾರೆ. ವೇಗದ ಬೌಲರ್‌ಗಳ ವಿರುದ್ಧ ಅವರ ಸರಾಸರಿ 104.5 ಇದ್ದರೆ, ಸ್ಪಿನ್ನರ್‌ಗಳ ವಿರುದ್ಧ ಸರಾಸರಿ ಕೇವಲ 16.9 ಇದೆ. ಕಳೆದ ಆವೃತ್ತಿಯಲ್ಲಿ ಸಿಎಸ್‌ಕೆ ಪರ ಆಡಿದ್ದ ರಹಾನೆಗೆ ಈ ಬಾರಿ ಜಡೇಜಾರಂಥ ಬೌಲರ್‌ಗಳು ಕಂಟಕರಾಗಬಹುದು.
  7. ಐಪಿಎಲ್‌ನಲ್ಲಿ ನರೈನ್ ಮತ್ತು‌ ಧೋನಿ ಮುಖಾಮುಖಿಯಾದ 16 ಇನ್ನಿಂಗ್ಸ್‌ಗಳಲ್ಲಿ ಕೇವಲ ಎರಡು ಬಾರಿ ಮಾತ್ರ ಧೋನಿ ಔಟ್ ಆಗಿದ್ದಾರೆ. ಹಾಗಂತ ನರೈನ್‌ ಸ್ಪಿನ್‌ ಎಸೆತವನ್ನು ಮಾಹಿ ಸಮರ್ಥವಾಗಿ ಎದುರಿಸಿದ್ದಾರೆ ಎಂದಲ್ಲ. ನರೈನ್ ಎಸೆತಗಳಲ್ಲಿ ಧೋನಿ ಸ್ಟ್ರೈಕ್ ರೇಟ್‌ ಕೇವಲ 52.
  8. ಮಾಹಿ ವಿರುದ್ಧ ವರುಣ್‌ ಚಕ್ರವರ್ತಿ ಪ್ರಾಬಲ್ಯ ಸಾಧಿಸಿದ್ದಾರೆ. ಆಡಿದ ಐದು ಇನ್ನಿಂಗ್ಸ್‌ಗಳಲ್ಲಿ ಮೂರು ಬಾರಿ ಧೋನಿಯನ್ನು ಔಟ್ ಮಾಡಿದ್ದಾರೆ. ಇಲ್ಲಿ ಧೋನಿಯ ಸ್ಟ್ರೈಕ್ ರೇಟ್ ಕೂಡಾ 63 ಮಾತ್ರ. ಕೇವಲ ನಾಲ್ಕರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ.
  9. ಕೋಲ್ಕತ್ತಾದ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ಪಂದ್ಯ ನಡೆಯಲಿದ್ದು, ಈ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದೆ. ಇಲ್ಲಿ ಈವರೆಗೆ ನಡೆದ 99 ಐಪಿಎಲ್‌ ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ತಂಡ 42ರಲ್ಲಿ ಗೆದ್ದರೆ, ಚೇಸಿಂಗ್‌ ಮಾಡಿದ ತಂಡಗಳು 56 ಪಂದ್ಯಗಳಲ್ಲಿ ಗೆದ್ದಿದೆ.
  10. ಒಂದು ವೇಳೆ ಸಿಎಸ್‌ಕೆ ವಿರುದ್ಧ ಸೋತರೆ, ಕೆಕೆಆರ್‌ ತಂಡ ಟೂರ್ನಿಯಿಂದ ಬಹುತೇಕ ಹೊರಬೀಳಲಿದೆ.

ಇದನ್ನೂ ಓದಿ | Explainer:‌ ಡಿಆರ್‌ಎಸ್ ತೆಗೆದುಕೊಳ್ಳಲು ಡೆವಾಲ್ಡ್ ಬ್ರೆವಿಸ್‌ಗೆ ಅವಕಾಶ ನೀಡದ್ದು ಏಕೆ, ನಿಯಮ ಹೇಳುವುದೇನು?

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.