ಸೇಡು-ಗೀಡು ಮರೆತು ಪಂಜಾಬ್ ವಿರುದ್ಧ ಕೋಲ್ಕತ್ತಾಗಿರಲಿ ಗೆಲ್ಲುವ ಗುರಿ; ಮಹತ್ವದ ಪಂದ್ಯದ ಆಸಕ್ತಿದಾಯಕ ಅಂಶಗಳು
ಕನ್ನಡ ಸುದ್ದಿ  /  ಕ್ರಿಕೆಟ್  /  ಸೇಡು-ಗೀಡು ಮರೆತು ಪಂಜಾಬ್ ವಿರುದ್ಧ ಕೋಲ್ಕತ್ತಾಗಿರಲಿ ಗೆಲ್ಲುವ ಗುರಿ; ಮಹತ್ವದ ಪಂದ್ಯದ ಆಸಕ್ತಿದಾಯಕ ಅಂಶಗಳು

ಸೇಡು-ಗೀಡು ಮರೆತು ಪಂಜಾಬ್ ವಿರುದ್ಧ ಕೋಲ್ಕತ್ತಾಗಿರಲಿ ಗೆಲ್ಲುವ ಗುರಿ; ಮಹತ್ವದ ಪಂದ್ಯದ ಆಸಕ್ತಿದಾಯಕ ಅಂಶಗಳು

ಇಂಡಿಯನ್ ಪ್ರೀಮಿಯರ್ ಲೀಗ್​ 44ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್​ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದ ಕೋಲ್ಕತ್ತಾದ ಈಡನ್ ಗಾರ್ಡನ್ಸ್​​ನಲ್ಲಿ ನಡೆಯಲಿದೆ.

ಸೇಡು-ಗೀಡು ಮರೆತು ಪಂಜಾಬ್ ವಿರುದ್ಧ ಕೋಲ್ಕತ್ತಾಗೆ ಗೆಲ್ಲುವ ಗುರಿ ಒಂದಿರಲಿ; ಮಹತ್ವದ ಪಂದ್ಯದ ಆಸಕ್ತಿದಾಯಕ ಅಂಶಗಳು
ಸೇಡು-ಗೀಡು ಮರೆತು ಪಂಜಾಬ್ ವಿರುದ್ಧ ಕೋಲ್ಕತ್ತಾಗೆ ಗೆಲ್ಲುವ ಗುರಿ ಒಂದಿರಲಿ; ಮಹತ್ವದ ಪಂದ್ಯದ ಆಸಕ್ತಿದಾಯಕ ಅಂಶಗಳು

ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿರುವ ಪಂಜಾಬ್ ಕಿಂಗ್ಸ್​ ಮತ್ತು 7ನೇ ಸ್ಥಾನಿಯಾದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಏಪ್ರಿಲ್ 26ರಂದು ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ನಡೆಯುವ 44ನೇ ಪಂದ್ಯದಲ್ಲಿ​ ಮುಖಾಮುಖಿಯಾಗಲಿವೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರಿಕೆಟ್ ಮೈದಾನ ಆತಿಥ್ಯ ವಹಿಸಲಿದೆ. ಔಟ್ ಆಫ್ ಫಾರ್ಮ್​ ಕೆಕೆಆರ್​ ಸವಾಲು ಎದುರಿಸಲಿರುವ ಪಿಬಿಕೆಎಸ್​ ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಅಗ್ರ-4ರೊಳಗೆ ಪ್ರವೇಶಿಸಲು ಸಿದ್ಧತೆ ನಡೆಸಿದೆ. ತನ್ನ ಕಳೆದ ಪಂದ್ಯದಲ್ಲಿ ಆರ್​​ಸಿಬಿ ವಿರುದ್ಧ ಮುಗ್ಗರಿಸಿದ್ದ ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಗೆದ್ದು ಲಯಕ್ಕೆ ಮರಳಲು ಯೋಜನೆ ಹಾಕಿಕೊಂಡಿದೆ. ಹ್ಯಾಟ್ರಿಕ್ ಸೋಲು ತಪ್ಪಿಸಲು ಮತ್ತು ಪ್ಲೇಆಫ್​​ ಆಸೆ ಜೀವಂತವಾಗಿಟ್ಟುಕೊಳ್ಳಲು ಅಜಿಂಕ್ಯ ರಹಾನೆ ನಾಯಕತ್ವದ ಕೋಲ್ಕತ್ತಾ ಗೆಲ್ಲುವುದು ಅನಿವಾರ್ಯವಾಗಿದೆ.

ಹ್ಯಾಟ್ರಿಕ್ ಸೋಲು, ಪ್ಲೇಆಫ್ ಜೊತೆಗೆ ಪಂಜಾಬ್ ವಿರುದ್ಧ ಸೇಡು ತೀರಿಸಿಕೊಳ್ಳುವುದೂ ಕೆಕೆಆರ್ ಮುಂದಿರುವ ಪ್ರಮುಖ ಗುರಿಯಾಗಿದೆ. ಹತ್ತು ದಿನಗಳ ಹಿಂದೆ ನೈಟ್ ರೈಡರ್ಸ್ ಐಪಿಎಲ್ ಅಭಿಯಾನವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಲು ಒಂದು ಸುವರ್ಣಾವಕಾಶ ಪಡೆದುಕೊಂಡಿತ್ತು. ಕಿಂಗ್ಸ್ ವಿರುದ್ಧ ಸಾಧಾರಣ 112 ರನ್‌ಗಳ ಗುರಿ ಬೆನ್ನಟ್ಟಲು ಪರದಾಡಿದ ರೈಡರ್ಸ್​, ಸುಲಭ ಗೆಲುವನ್ನು ಕೈಚೆಲ್ಲಿತ್ತು. ಅಂದು ರಹಾನೆ ಪಡೆ ಕೇವಲ 95 ರನ್​ಗೆ ಆಲೌಟ್​ ಆಗಿತ್ತು. ಬಳಿಕ ಗುಜರಾತ್ ಟೈಟಾನ್ಸ್ ವಿರುದ್ಧ ಮತ್ತೊಂದು ಸೋಲು ಎದುರಿಸಿತು. ಆ ಹೊಡೆತವು ಇನ್ನಷ್ಟು ಜಟಿಲವಾಯಿತು. ಹೀಗಾಗಿ, ಅವರ ಹಾಲಿ ಚಾಂಪಿಯನ್ ಪಟ್ಟ ಉಳಿಸಿಕೊಳ್ಳಲು ಪರದಾಡುವಂತಾಗಿದೆ. ಪ್ಲೇಆಫ್ ಸ್ಪರ್ಧಿಗಳು ಉಳಿದ 6 ಪಂದ್ಯಗಳಲ್ಲಿ 5 ಗೆಲುವುಗಳು ಅಗತ್ಯವಾಗಿದೆ.

ಅಯ್ಯರ್​ ಲಯಕ್ಕೆ ಮರಳುವುದು ಮುಖ್ಯ

ಪಿಬಿಕೆಎಸ್‌ಗೆ ಕೆಕೆಆರ್ ವಿರುದ್ಧದ ಆ ನಾಟಕೀಯ ಗೆಲುವು ತಂಡಕ್ಕೆ ಮಹತ್ವದ ತಿರುವು ಎನ್ನಬಹುದು. ಪಿಬಿಕೆಎಸ್ ಈಗ ಪ್ಲೇಆಫ್‌ಗಳ ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ತಂಡಗಳಲ್ಲಿ ಒಂದಾಗಿದೆ. ಅಯ್ಯರ್ ಪಡೆ ನಿರಾಳವಾಗಿದ್ದು, ಉಳಿದ 6 ಪಂದ್ಯಗಳಲ್ಲಿ ಕನಿಷ್ಠ 3 ಗೆಲುವು ಬೇಕಾಗುತ್ತವೆ. 2014ರಿಂದ ಪ್ಲೇಆಫ್‌ಗಳು ಟಿಕೆಟ್ ಪಡೆಯದ ಪಂಜಾಬ್, ಈ ಸಲ ನಾಲ್ಕರಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದೆ. ಅವರ ಆಟದಲ್ಲಿ ಕೊರತೆ ಅನುಭವಿಸುತ್ತಿರುವ ಏಕೈಕ ವಿಷಯ ಏನೆಂದರೆ ಮಧ್ಯಮ ಕ್ರಮಾಂಕದ ಸ್ಥಿರತೆ. ಆರಂಭದಲ್ಲಿ ಮಿಂಚಿದ ಆಟಗಾರರು ಹಂತ ಹಂತವಾಗಿ ವೈಫಲ್ಯ ಅನುಭವಿಸುತ್ತಿದ್ದಾರೆ. ಅಯ್ಯರ್​ ಲಯಕ್ಕೆ ಮರಳುವುದು ಅನಿವಾರ್ಯ.

ಪಂಜಾಬ್ ತಂಡವು ಐಪಿಎಲ್‌ನಲ್ಲಿ ಅತಿ ಹೆಚ್ಚು ಯಶಸ್ವಿ ಚೇಸಿಂಗ್ ಮತ್ತು ಕಡಿಮೆ ಮೊತ್ತವನ್ನು ಡಿಫೆಂಡ್ ಮಾಡಿಕೊಂಡ ತಂಡ ಹೆಗ್ಗಳಿಕೆಗೆ ಪಾತ್ರವಾಗಿದೆ. ಚಾಂಪಿಯನ್‌ಶಿಪ್ ವಿಜೇತ ತಂಡದ 8 ಆಟಗಾರರು ಇನ್ನೂ ತಂಡದ ಮೂಲವಾಗಿದ್ದಾರೆ. ಆದರೆ ಒಬ್ಬರೂ ಅಂದುಕೊಂಡ ಪ್ರದರ್ಶನ ನೀಡಿಲ್ಲ. ಕಳೆದ ಐಪಿಎಲ್​ನಲ್ಲಿ ತವರಿನಲ್ಲಿ ಶೇ 71ರಷ್ಟು ಯಶಸ್ಸು ಹೊಂದಿದ್ದ ಕೆಕೆಆರ್​ ಈ ಸಲ ಕೇವಲ ಶೇ 25ರಷ್ಟು ಮಾತ್ರ ಹೊಂದಿದೆ. ಮುಂದಿನ ಪಂದ್ಯಗಳಲ್ಲಾದರೂ ತವರಿನಲ್ಲಿ ಮಿಂಚಿನ ಪ್ರದರ್ಶನ ನೀಡುತ್ತಾ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.

ಆಟ ಮರೆತ ವೆಂಕಟೇಶ್

ಕೆಕೆಆರ್​​ಗೆ ದುಬಾರಿ ಆಟಗಾರ ವೆಂಕಟೇಶ್ ಅಯ್ಯರ್​​ ಕಳಪೆ ಪ್ರದರ್ಶನ ತಲೆನೋವಿಗೆ ಕಾರಣವಾಗಿದೆ. ಈ ಋತುವಿನಲ್ಲಿ ಈವರೆಗೆ ವೆಂಕಟೇಶ್ 6 ಇನ್ನಿಂಗ್ಸ್‌ಗಳಲ್ಲಿ ಮೂರರಲ್ಲಿ ಒಂದಂಕಿಗೆ ಔಟಾಗಿದ್ದಾರೆ. ಮಾರ್ಕೋ ಜಾನ್ಸನ್​ ಬೌಲಿಂಗ್​ನಲ್ಲಿ ವೆಂಕಟೇಶ್, 4 ಇನ್ನಿಂಗ್ಸ್​​ಗಳಲ್ಲಿ 3 ಬಾರಿ ಔಟ್​ ಆಗಿದ್ದಾರೆ. ಉಭಯ ತಂಡಗಳ ನಡುವಿನ ಕಳೆದ ಮುಖಾಮುಖಿಯಲ್ಲಿ ಯುಜ್ವೇಂದ್ರ ಚಹಲ್ ಅತ್ಯುತ್ತಮ ಪ್ರದರ್ಶನ ನೀಡಿದ್ದರು. 4 ವಿಕೆಟ್ ಉರುಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದಿದ್ದರು. 2025ರ ಐಪಿಎಲ್‌ನಲ್ಲಿ ಆರಂಭದಲ್ಲಿ ವಿಕೆಟ್​ ಬೇಟೆಯಾಡದಿದ್ದರೂ ಯುಜ್ವೇಂದ್ರ ಚಹಲ್ ತಮ್ಮ ಲಯವನ್ನು ಮತ್ತೆ ಕಂಡುಕೊಂಡಿದ್ದಾರೆ. ಕಳೆದ 3 ಪಂದ್ಯಗಳಲ್ಲಿ 7 ವಿಕೆಟ್‌ ಕಬಳಿಸಿದ್ದಾರೆ. ಇದೀಗ ಮತ್ತೆ ಕೆಕೆಆರ್​ ಮಧ್ಯಮ ಕ್ರಮಾಂಕದ ಬ್ಯಾಟರ್ಸ್​​ಗೆ ಹೊಡೆತ ನೀಡಲು ಭರ್ಜರಿ ತಯಾರಿ ನಡೆಸಿದ್ದಾರೆ.

ಉಭಯ ತಂಡಗಳ ಪ್ಲೇಯಿಂಗ್ 11

ಕೆಕೆಆರ್ ತಂಡದ ಬೆಂಚ್ ಬಲ ಬಲಿಷ್ಠವಾಗಿಲ್ಲ. ಆದ್ದರಿಂದ ಸತತ ಎರಡು ಸೋಲುಗಳ ಹೊರತಾಗಿಯೂ ಸ್ಪಷ್ಟ ಬದಲಿ ಆಟಗಾರರ ನಿರೀಕ್ಷೆಯಿಲ್ಲ. ರಹಮಾನುಲ್ಲಾ ಗುರ್ಬಾಜ್ ಆರಂಭಿಕ ಆಟಗಾರನಾಗಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದ್ದು, ನಾಲ್ಕನೇ ವಿದೇಶಿ ಸ್ಥಾನಕ್ಕೆ ಮೊಯಿನ್ ಅಲಿ ಕಣಕ್ಕಿಳಿಯಬಹುದು. ಪಿಬಿಕೆಎಸ್ ಪರ ಮಾರ್ಕಸ್ ಸ್ಟೊಯ್ನಿಸ್, ಗ್ಲೆನ್ ಮ್ಯಾಕ್ಸ್‌ವೆಲ್ ಅಥವಾ ಜೋಶ್ ಇಂಗ್ಲಿಸ್ ಯಾರೂ ರನ್ ಗಳಿಸಿಲ್ಲ. ಮೂವರೂ ಅವಕಾಶ ಪಡೆದಿದ್ದರೂ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಆದರೆ, ಜೋಸ್ ಸ್ಥಾನ ಖಚಿತವಾದರೂ ಮ್ಯಾಕ್ಸಿ ಮತ್ತು ಸ್ಟೋಯ್ನಿಸ್ ನಡುವೆ ಆಯ್ಕೆ ಗೊಂದಲ ಏರ್ಪಟ್ಟಿದೆ. ಯಾರಿಗೆ ಅವಕಾಶ ಸಿಗುತ್ತದೋ ಕಾದುನೋಡಬೇಕು.

ಕೋಲ್ಕತ್ತಾ ನೈಟ್ ರೈಡರ್ಸ್ ಸಂಭಾವ್ಯ ತಂಡ: ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಸುನಿಲ್ ನರೈನ್, ಅಜಿಂಕ್ಯ ರಹಾನೆ (ನಾಯಕ), ವೆಂಕಟೇಶ್ ಅಯ್ಯರ್, ಆಂಗ್‌ಕ್ರಿಶ್ ರಘುವಂಶಿ, ರಿಂಕು ಸಿಂಗ್, ಆಂಡ್ರೆ ರಸೆಲ್, ಮೊಯಿನ್ ಅಲಿ, ರಮಣದೀಪ್ ಸಿಂಗ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ವೈಭವ್ ಅರೋರಾ.

ಪಂಜಾಬ್ ಕಿಂಗ್ಸ್ ಸಂಭಾವ್ಯ ತಂಡ: ಪ್ರಿಯಾಂಶ್ ಆರ್ಯ, ಪ್ರಭುಸಿಮ್ರಾನ್ ಸಿಂಗ್, ಶ್ರೇಯಸ್ ಅಯ್ಯರ್, ಜೋಶ್ ಇಂಗ್ಲಿಸ್, ನೆಹಾಲ್ ವಧೇರಾ, ಮಾರ್ಕಸ್ ಸ್ಟೊಯ್ನಿಸ್/ಗ್ಲೆನ್ ಮ್ಯಾಕ್ಸ್‌ವೆಲ್, ಶಶಾಂಕ್ ಸಿಂಗ್, ಹರ್‌ಪ್ರೀತ್ ಬ್ರಾರ್, ಮಾರ್ಕೊ ಜಾನ್ಸೆನ್, ಕ್ಸೇವಿಯರ್​ ಬಾರ್ಟ್​ಲೆಟ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಹಲ್.

ಅಂಕಿ-ಅಂಶಗಳು

ಎರಡೂ ತಂಡಗಳು ಮಧ್ಯಮ ಕ್ರಮಾಂಕದಲ್ಲಿ (ಸಂಖ್ಯೆ 4 ರಿಂದ 7) ಸಮಸ್ಯೆ ಎದುರಿಸುತ್ತಿವೆ. ಆ ಸ್ಥಾನಗಳಿಗೆ ಕೆಕೆಆರ್‌ನ ಸರಾಸರಿ ಅತ್ಯಂತ ಕೆಟ್ಟದಾಗಿದೆ (20.47), ಪಿಬಿಕೆಎಸ್ 23.90 ರೊಂದಿಗೆ ಹೆಚ್ಚು ದೂರವಿಲ್ಲ.

ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಇದುವರೆಗೆ ಒಟ್ಟು 96 ಐಪಿಎಲ್ ಪಂದ್ಯಗಳು ನಡೆದಿವೆ. ಇದರಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ 40 ಪಂದ್ಯಗಳನ್ನು ಗೆದ್ದಿದ್ದರೆ, ರನ್ ಬೆನ್ನಟ್ಟಿದ ತಂಡ 56 ಪಂದ್ಯಗಳನ್ನು ಗೆದ್ದಿದೆ.

ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ 36 ಪಂದ್ಯಗಳು ನಡೆದಿವೆ. ಇದರಲ್ಲಿ ಕೆಕೆಆರ್ ಮೇಲುಗೈ ಸಾಧಿಸಿದ್ದು, 21 ಪಂದ್ಯಗಳಲ್ಲಿ ಗೆದ್ದಿದ್ದಾರೆ. ಆದರೆ ಪಿಬಿಕೆಎಸ್ ಕೇವಲ 13 ಪಂದ್ಯಗಳನ್ನು ಗೆದ್ದಿದೆ.

ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ಸಹಾಯಕವಾಗಿದೆ ಎಂದು ಪರಿಗಣಿಸಲಾಗಿದೆ. ಆದರೆ, ಆರಂಭಿಕ ಓವರ್‌ಗಳಲ್ಲಿ ಬೌಲರ್‌ಗಳಿಗೆ ಸ್ವಲ್ಪ ಅನುಕೂಲವಾಗುತ್ತದೆ. ಆದರೆ ಈ ಪಿಚ್‌ನಲ್ಲಿ ಹೆಚ್ಚಿನ ತಂಡಗಳು ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸುತ್ತವೆ. ಏಕೆಂದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಸುಲಭವಾಗುತ್ತದೆ. ಮಳೆಯ ಸಾಧ್ಯತೆ ಇಲ್ಲ.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.