ಮೈದಾನಕ್ಕೆ ನುಗ್ಗಿ ವಿರಾಟ್ ಕೊಹ್ಲಿ ಅಪ್ಪಿಕೊಂಡಿದ್ದ ಅಭಿಮಾನಿ ಜೈಲು ಪಾಲು; ಯಾವೆಲ್ಲಾ ಸೆಕ್ಷನ್ ಹಾಕಿದ್ದಾರೆ?
ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಐಪಿಎಲ್ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಅವಧಿಯಲ್ಲಿ ಮೈದಾನಕ್ಕೆ ನುಗ್ಗಿದ ಅಭಿಮಾನಿಯನ್ನು ಕೋಲ್ಕತ್ತಾದ ಪೊಲೀಸರು ಬಂಧಿಸಿದ್ದಾರೆ.

ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆದ ಕೋಲ್ಕತಾ ನೈಟ್ ರೈಡರ್ಸ್ (KKR) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವಿನ ಐಪಿಎಲ್ 2025ರ ಉದ್ಘಾಟನಾ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುವಾಗ ಪಿಚ್ ಅತಿಕ್ರಮ ಪ್ರವೇಶ ಮಾಡಿದ 18 ವರ್ಷದ ಅಭಿಮಾನಿಯನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ರಿತುಪರ್ಣೋ ಪಖಿರಾ ಎಂದು ಹೆಸರಿಸಲಾಗಿದ್ದು, ಆತನ ವಿರುದ್ಧ ದಾಖಲಾದ ಪ್ರಕರಣದಲ್ಲಿ ಮೂರು ಸೆಕ್ಷನ್ ಹಾಕಲಾಗಿದೆ.
ಕೆಕೆಆರ್ ನೀಡಿದ್ದ 175 ರನ್ಗಳ ಗುರಿ ಬೆನ್ನಟ್ಟುವಾಗ ರಕ್ಷಣಾ ಬೇಲಿ ಉಲ್ಲಂಘಿಸಿದ ಅಭಿಮಾನಿ ಮೈದಾನಕ್ಕೆ ನುಗ್ಗಿದ್ದ. ರಾತ್ರಿ 10.27ರ ಸುಮಾರಿಗೆ 13ನೇ ಓವರ್ನಲ್ಲಿ ಕೊಹ್ಲಿ ಅರ್ಧಶತಕ ಪೂರೈಸಿದಾಗ ಅರ್ಧಶತಕ ಸಿಡಿಸಿದ್ದ ಅವಧಿಯಲ್ಲಿ ಈ ಘಟನೆ ಸಂಭವಿಸಿತ್ತು. ಅರ್ಧಶತಕವನ್ನು ವಿರಾಟ್ ಸಂಭ್ರಮಿಸುತ್ತಿದ್ದರು. ಆಗ ಓಡೋಡಿ ಬಂದ ಅಭಿಮಾನಿ, ನೇರವಾಗಿ ಕಾಲಿಗೆ ಎರಗಿದನು. ಬಳಿಕ ತಮ್ಮ ನೆಚ್ಚಿನ ಆಟಗಾರನನ್ನು ತಬ್ಬಿಕೊಂಡ. ಇದರ ಬೆನ್ನಲ್ಲೇ ಭದ್ರತಾ ಸಿಬ್ಬಂದಿ ಆ ಅಭಿಮಾನಿಯನ್ನು ವಶಕ್ಕೆ ಪಡೆದರು.
ಪೊಲೀಸ್ ವರದಿಯ ಪ್ರಕಾರ, ಪುರ್ಬಾ ಬರ್ಧಮಾನ್ ಜಿಲ್ಲೆಯಲ್ಲಿರುವ ಮೈದಾನದ 'ಜಿ' ಬ್ಲಾಕ್ ಬಳಿ ಬೇಲಿ ಹತ್ತಿದ ಮೈದಾನಕ್ಕೆ ಓಡಿದ ಪಖಿರಾ, ಅವರನ್ನು ಬಂಧಿಸಲಾಗಿದೆ. ಅತಿಕ್ರಮವಾಗಿ ಪ್ರವೇಶಿಸಿ ಪಂದ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ಆರ್ಸಿಬಿ ಆಟಗಾರರಿಗೆ ಭೀತಿ ಸೃಷ್ಟಿಸುವುದರ ಜೊತೆಗೆ ಪೊಲೀಸರ ಸುರಕ್ಷತೆಗೂ ಬೆದರಿಕೆ ಉಂಟು ಮಾಡಿತು. ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಂಧನದ ಬಳಿಕ ಕೊಹ್ಲಿ ಅವರಿಗಾಗಿ ಏನು ಬೇಕಾದರೂ ಮಾಡಲು ಸಿದ್ಧ ಎಂದು ಹೇಳಿದ್ದಾರೆ.
ಬಂಧನದ ಬಳಿಕ ಅಭಿಮಾನಿ ಹೇಳಿರುವುದೇನು?
ಬಂಧನದ ನಂತರ, ಪಖಿರಾ ವಿರಾಟ್ ಕೊಹ್ಲಿ ಕುರಿತು ಮಾತನಾಡಿದ್ದಾರೆ. ವಿರಾಟ್ ನನ್ನ ದೇವರು. ನಾನು ಅವರಿಗಾಗಿ ಏನು ಬೇಕಾದರೂ ಎದುರಿಸಲು ಸಿದ್ಧನಿದ್ದೇನೆ ಎಂದಿದ್ದಾನೆ.
ಯಾವೆಲ್ಲಾ ಸೆಕ್ಷನ್ ದಾಖಲು?
ಪೊಲೀಸರು ಪಖಿರಾ ಅವರನ್ನು ಮೈದಾನದಿಂದ ಪೊಲೀಸ್ ಠಾಣೆಗೆ ಕರೆದೊಯ್ದರು. ಸಬ್ ಇನ್ಸ್ಪೆಕ್ಟರ್ ಸಲ್ಲಿಸಿದ ದೂರಿನ ನಂತರ ಔಪಚಾರಿಕ ಪ್ರಕರಣ ದಾಖಲಿಸಲಾಗಿದೆ. ಭಾರತೀಯ ದಂಡ ಸಂಹಿತೆಯ (BNS) ಸೆಕ್ಷನ್ 132 (ಸಾರ್ವಜನಿಕ ಸೇವಕರನ್ನು ತಡೆಯಲು ಹಲ್ಲೆ ಅಥವಾ ಕ್ರಿಮಿನಲ್ ಬಲ ಬಳಸುವುದು), 329 (3) (ಕ್ರಿಮಿನಲ್ ಅತಿಕ್ರಮಣ) ಮತ್ತು 125 (ಮಾನವ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುವ ನಿರ್ಲಕ್ಷ್ಯ ಅಥವಾ ನಿರ್ಲಕ್ಷ್ಯದ ಕೃತ್ಯ) ಅಡಿಯಲ್ಲಿ ಪಖಿರಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಕೆಕೆಆರ್ ವಿರುದ್ಧ ಆರ್ಸಿಬಿಗೆ ಗೆಲುವು
ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್, ಅಜಿಂಕ್ಯ ರಹಾನೆ ಅವರ ಸ್ಫೋಟಕ ಅರ್ಧಶತಕದ ಸಹಾಯದಿಂದ 8 ವಿಕೆಟ್ ನಷ್ಟಕ್ಕೆ 174 ರನ್ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಕೃನಾಲ್ ಪಾಂಡ್ಯ 3, ಜೋಶ್ ಹೇಜಲ್ವುಡ್ 2 ವಿಕೆಟ್ ಕಿತ್ತರು. 175 ರನ್ಗಳ ಗುರಿ ಬೆನ್ನಟ್ಟಿದ ಆರ್ಸಿಬಿ, 3 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿ ಇನ್ನೂ 22 ಎಸೆತಗಳನ್ನು ಬಾಕಿ ಉಳಿಸಿ ಗೆಲುವಿನ ದಡ ಸೇರಿತು.
