ಸೋಲುವ ಪಂದ್ಯ ಗೆದ್ದಿದ್ದೇ ಆ ಒಂದು ಕ್ಯಾಚ್, ಆ 5 ಓವರ್ಗಳಿಂದ; ಕೊನೆಯಲ್ಲಿ ನಡೆದಿದ್ದೆಲ್ಲಾ ಪವಾಡ!
India Win T20 World Cup: ಟಿ20 ವಿಶ್ವಕಪ್ 2024 ಫೈನಲ್ನಲ್ಲಿ ಸೋಲುವ ಪಂದ್ಯವನ್ನು ಭಾರತ ಗೆದ್ದುಕೊಂಡಿದ್ದು ಕೊನೆಯ 5 ಓವರ್ಗಳು ಮತ್ತು ಸೂರ್ಯಕುಮಾರ್ ಹಿಡಿದ ಅದ್ಭುತ ಕ್ಯಾಚ್ನಿಂದ.

ಟೀಮ್ ಇಂಡಿಯಾ ಕೊನೆಗೂ ಟ್ರೋಫಿ ಗೆದ್ದುಕೊಂಡಿತು. 11 ವರ್ಷಗಳ ನಂತರ ಐಸಿಸಿ ಟ್ರೋಫಿ ಬರ ನೀಗಿಸಿತು. 2013ರಲ್ಲಿ ಭಾರತ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದೇ ಕೊನೆಯ ಐಸಿಸಿ ಪ್ರಶಸ್ತಿಯಾಗಿತ್ತು. ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ 2024ರ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಚೊಚ್ಚಲ ಟಿ20 ವಿಶ್ವಕಪ್ ಗೆಲುವಿನ ಕನಸಿನಲ್ಲಿದ್ದ ಸೌತ್ ಆಫ್ರಿಕಾ ತಂಡವನ್ನು 7 ರನ್ಗಳಿಂದ ಮಣಿಸಿದ ಭಾರತ ಎರಡನೇ ಚುಟುಕು ಟ್ರೋಫಿಯನ್ನು ಗೆದ್ದಿತು.
2023ರಲ್ಲಿ ಎರಡು ಐಸಿಸಿ ಟ್ರೋಫಿಯನ್ನು ಕಳೆದುಕೊಂಡಿದ್ದ ಟೀಮ್ ಇಂಡಿಯಾ, ಹ್ಯಾಟ್ರಿಕ್ ಫೈನಲ್ ಸೋಲಿನ ಸುಳಿಗೆ ಸಿಲುಕಿತ್ತು. ಸೌತ್ ಆಫ್ರಿಕಾ ಗೆಲ್ಲಲು ಕೊನೆಯ 30 ಎಸೆತಗಳಲ್ಲಿ 30 ರನ್ ಮಾತ್ರ ಬೇಕಿತ್ತು. ಆಗ ಕ್ರೀಸ್ನಲ್ಲಿ ಹೆನ್ರಿಚ್ ಕ್ಲಾಸೆನ್ ಮತ್ತು ಡೇವಿಡ್ ಮಿಲ್ಲರ್ ಇದ್ದರು. ಅದಾಗಲೇ ಕ್ಲಾಸೆನ್ ಸ್ಫೋಟಕ ಅರ್ಧಶತಕ ಸಿಡಿಸಿ ಕ್ರೀಸ್ನಲ್ಲಿ ಸೆಟ್ಲ್ ಆಗಿದ್ದರು. ಮತ್ತೊಂದೆಡೆ ಮಿಲ್ಲರ್ ಭರ್ಜರಿ ಫಾರ್ಮ್ನಲ್ಲಿದ್ದರು. ಭಾರತ ತಂಡಕ್ಕೆ ಸೋಲು ಖಚಿತ ಎಂದು ಬಹುತೇಕರು ನಿರ್ಧರಿಸಿದ್ದರು. ಆದರೆ ಅಲ್ಲಿಂದಲೇ ಪವಾಡ ನಡೆಯಿತು.
ಬುಮ್ರಾ, ಹಾರ್ದಿಕ್, ಅರ್ಷದೀಪ್ ಮ್ಯಾಜಿಕ್
ಕೊನೆಯ 5 ಓವರ್ಗಳಲ್ಲಿ ಹಾರ್ದಿಕ್ ಪಾಂಡ್ಯ, ಹಾರ್ದಿಕ್ ಪಾಂಡ್ಯ, ಅರ್ಷದೀಪ್ ಸಿಂಗ್ ಬೆಂಕಿ ಬೌಲಿಂಗ್ ಮತ್ತು ಸೂರ್ಯಕುಮಾರ್ ಹಿಡಿದ ಆ ಒಂದು ಕ್ಯಾಚ್ ಪಂದ್ಯದ ಚಿತ್ರಣವನ್ನೇ ಬದಲಿಸಿತು. ಏಕೆಂದರೆ, 15ನೇ ಓವರ್ ಬೌಲಿಂಗ್ ಮಾಡಿದ ಅಕ್ಷರ್ ಪಟೇಲ್ ಬರೋಬ್ಬರಿ 24 ರನ್ ಬಿಟ್ಟುಕೊಟ್ಟು ತಂಡವನ್ನು ಸೋಲಿನ ಸುಳಿಗೆ ಸಿಲುಕಿತ್ತು. ಬಹುತೇಕರು ಹೇಳಿದ್ದು ಒಂದೇ ಮಾತು, ಕಷ್ಟ ಎಂದು. ಆದರೆ ಯಾವುದೂ ಅಸಾಧ್ಯವಲ್ಲ ಎಂಬುದಕ್ಕೆ ಈ ಪಂದ್ಯವೇ ಉತ್ತಮ ಉದಾಹರಣೆಯಾಗಿ ನಿಂತಿದೆ. ಅದರ ಚಿತ್ರಣ ಇಲ್ಲಿದೆ ನೋಡಿ.
16ನೇ ಓವರ್ ಬೌಲಿಂಗ್ ಮಾಡಲು ಬಂದ ಜಸ್ಪ್ರೀತ್ ಬುಮ್ರಾ, ಪಂದ್ಯದ ಚಿತ್ರಣವನ್ನೇ ಬದಲಿಸಿದರು. ಕೇವಲ 4 ರನ್ ಮಾತ್ರ ಬಿಟ್ಟುಕೊಟ್ಟರು. ತದನಂತರ ಬೌಲಿಂಗ್ಗೆ ಬಂದ ಹಾರ್ದಿಕ್ ಪಾಂಡ್ಯ ಮೊದಲ ಎಸೆತದಲ್ಲೇ ಅರ್ಧಶತಕ ಸಿಡಿಸಿ ಸೆಟಲ್ ಆಗಿದ್ದ ಕ್ಲಾಸೆನ್ ಅವರನ್ನು ಔಟ್ ಮಾಡಿದರು. ವಿಕೆಟ್ ಸಹಿತ ಕೇವಲ 4 ರನ್ ಕೊಟ್ಟರು. ಮತ್ತೆ ದಾಳಿಗಿಳಿದ ಬುಮ್ರಾ 18ನೇ ಓವರ್ನಲ್ಲಿ ಕೊಟ್ಟಿದ್ದು 2 ರನ್ ಮಾತ್ರ. ಒಂದು ವಿಕೆಟ್ ಕೂಡ ಪಡೆಯುವಲ್ಲಿ ಯಶಸ್ವಿಯಾದರು. ಬಳಿಕ 19ನೇ ಓವರ್ನಲ್ಲಿ ಅರ್ಷದೀಪ್ 4 ರನ್ ನೀಡಿದರು.
ಹೀಗಾಗಿ ಕೊನೆಯ ಓವರ್ನಲ್ಲಿ ಸೌತ್ ಆಫ್ರಿಕಾ ಗೆಲುವಿಗೆ 16 ರನ್ ಬೇಕಿತ್ತು. ಪವರ್ಫುಲ್ ಹಿಟ್ಟರ್ ಡೇವಿಡ್ ಮಿಲ್ಲರ್ ಕ್ರೀಸ್ನಲ್ಲಿದ್ದರು. ಒತ್ತಡದೊಂದಿಗೆ ಕೊನೆಯ ಓವರ್ ಎಸೆದ ಹಾರ್ದಿಕ್ ಪಾಂಡ್ಯ ಎರಡು ವಿಕೆಟ್ ಕಿತ್ತಿದ್ದಲ್ಲದೆ, 8 ರನ್ ಮಾತ್ರ ಕೊಟ್ಟರು. ಆ ಮೂಲಕ ಹಾರ್ದಿಕ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಕೊನೆಯ ಐದು ಓವರ್ಗಳಲ್ಲಿ ಅಸಾಧ್ಯವನ್ನೂ ಸಾಧಿಸಿ ತೋರಿದರು ಭಾರತೀಯ ಬೌಲರ್ಗಳು. ಈ ಐದು ಓವರ್ಗಳು ಎಷ್ಟು ಮುಖ್ಯವೋ ಸೂರ್ಯಕುಮಾರ್ ಹಿಡಿದ ಕ್ಯಾಚ್ ಕೂಡ ಅಷ್ಟೇ ಮುಖ್ಯ ಪಾತ್ರವಹಿಸಿತು.
ಸೂರ್ಯಕುಮಾರ್ ಸಖತ್ ಕ್ಯಾಚ್
ಹಾರ್ದಿಕ್ ಎಸೆದ 20ನೇ ಓವರ್ನ ಮೊದಲ ಎಸೆತದಲ್ಲಿ ಕಡಿಮೆ ವೈಡ್ ಫುಲ್ ಟಾಸ್ ಅನ್ನು ಡೇವಿಡ್ ಮಿಲ್ಲರ್ ಸಿಕ್ಸರ್ ಬಾರಿಸಲು ಯತ್ನಿಸಿದರು. ಆದರೆ, ಲಾಂಗ್ ಆನ್ನಲ್ಲಿದ್ದ ಸೂರ್ಯಕುಮಾರ್ ಸಖತ್ ಕ್ಯಾಚ್ ಹಿಡಿದರು. ಕ್ಯಾಚ್ ಹಿಡಿದು ಇನ್ನೇನು ಬೌಂಡರಿ ಗೆರೆ ತುಳಿಯುತ್ತಾರೆ ಎಂದೇ ಭಾವಿಸಲಾಗಿತ್ತು. ಆದರೆ, ಇನ್ನೇನು ಬೌಂಡರಿ ಗೆರೆ ಟಚ್ ಆಗುತ್ತೆ ಎನ್ನುವಷ್ಟರಲ್ಲಿ ಚೆಂಡನ್ನು ಮೇಲಕ್ಕೆ ಎಸೆದರು. ಈ ಹಂತದಲ್ಲಿ ಬುದ್ದಿವಂತಿಕೆಯನ್ನು ತೋರುವ ಕ್ಯಾಚ್ ಅನ್ನು ಪಡೆದರು. ಆ ಮೂಲಕ ಪಂದ್ಯದ ಚಿತ್ರಣ ಬದಲಿಸಿದರು. ಒಂದು ವೇಳೆ ಮಿಲ್ಲರ್ ಕ್ರೀಸ್ನಲ್ಲಿ ಇದ್ದಿದ್ದರೆ ಅದರ ಕಥೆಯೇ ಬೇರೆಯಾಗುತ್ತಿತ್ತು.
