ಲಾಲಾರಸ ಇದ್ರೇನೆ ಚೆಂಡು ಹೊಳಪು ಮಾಡ್ಬೋದಾ, ಬೇರೆ ಆಗಲ್ವಾ; ಶಮಿ-ಸಿರಾಜ್ ನಿಲುವಿಗೆ ವಿರುದ್ಧ ನಿಂತ ಮಿಚೆಲ್ ಸ್ಟಾರ್ಕ್
ಕನ್ನಡ ಸುದ್ದಿ  /  ಕ್ರಿಕೆಟ್  /  ಲಾಲಾರಸ ಇದ್ರೇನೆ ಚೆಂಡು ಹೊಳಪು ಮಾಡ್ಬೋದಾ, ಬೇರೆ ಆಗಲ್ವಾ; ಶಮಿ-ಸಿರಾಜ್ ನಿಲುವಿಗೆ ವಿರುದ್ಧ ನಿಂತ ಮಿಚೆಲ್ ಸ್ಟಾರ್ಕ್

ಲಾಲಾರಸ ಇದ್ರೇನೆ ಚೆಂಡು ಹೊಳಪು ಮಾಡ್ಬೋದಾ, ಬೇರೆ ಆಗಲ್ವಾ; ಶಮಿ-ಸಿರಾಜ್ ನಿಲುವಿಗೆ ವಿರುದ್ಧ ನಿಂತ ಮಿಚೆಲ್ ಸ್ಟಾರ್ಕ್

ಆಧುನಿಕ ಕ್ರಿಕೆಟ್​ನ ಅತ್ಯುತ್ತಮ ವೇಗಿಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಮಿಚೆಲ್ ಸ್ಟಾರ್ಕ್ ಅವರು ಲಾಲಾರಸ ನಿಷೇಧ ತೆರವು ಕುರಿತು ಮಾತನಾಡಿದ್ದ ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಅವರ ನಿಲುವಿಗೆ ವಿರುದ್ಧವಾಗಿ ನಿಂತಿದ್ದಾರೆ.

Mitchell Starc had a bold take on the saliva ban reversal in IPL 2025, and silenced its supporters like Mohammed Shami and Mohammed Siraj.
Mitchell Starc had a bold take on the saliva ban reversal in IPL 2025, and silenced its supporters like Mohammed Shami and Mohammed Siraj. (Reuters/AP/AFP)

ಕೊರೊನಾ ಕಾರಣ ನಿಷೇಧಕ್ಕೆ ಒಳಗಾಗಿದ್ದ ಚೆಂಡಿಗೆ ಲಾಲಾರಸ ಬಳಕೆಗೆ ಬಿಸಿಸಿಐ ಅನುಮತಿ ನೀಡಿದೆ. ವೇಗಿ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಮತ್ತು ಹಾಲಿ-ಮಾಜಿ ಕ್ರಿಕೆಟಿಗರು ಚೆಂಡಿನ ಹೊಳಪು ಹೆಚ್ಚಿಸಲು ಎಂಜಲು ಬಳಕೆಗೆ ಅನುಮತಿ ನೀಡಬೇಕು ಎಂದು ಐಪಿಎಲ್​ಗೂ ಮುನ್ನ ಕೋರಿದ್ದರು. ಪರಿಣಾಮ ಟೂರ್ನಿಗೂ ಲಾಲಾರಸ ಬಳಕೆಗೆ ಬಿಸಿಸಿಐ ಅನುಮತಿ ನೀಡಿದೆ. ವರದಿಗಳ ಪ್ರಕಾರ, ಹೆಚ್ಚಿನ ಫ್ರಾಂಚೈಸಿ ನಾಯಕರಿಂದ ಬೆಂಬಲ ಪಡೆದ ನಂತರ ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ. ಇದೀಗ ಲಾಲಾರಸ ಉಪಯೋಗಿಸಲು ಅವಕಾಶ ಬೇಕು ಎಂದು ಕೇಳಿಕೊಂಡಿದ್ದವರಿಗೆ ಡೆಲ್ಲಿ ಕ್ಯಾಪಿಟಲ್ಸ್ ವೇಗಿ ಮಿಚೆಲ್ ಸ್ಟಾರ್ಕ್ ತಿರುಗೇಟು ನೀಡಿದ್ದಾರೆ. 

ಅಂತಾರಾಷ್ಟ್ರೀಯ ಕ್ರಿಕೆಟ್​​ನ ಪ್ರಮುಖ ವೇಗಿಗಳು ಲಾಲಾರಸ ನಿಷೇಧದ ಬಗ್ಗೆ ದೂರು ನೀಡಿದ ನಂತರ ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ. ನಿಷೇಧ ಹಿಂತೆಗೆದುಕೊಳ್ಳಬೇಕು ಎಂದು ದೊಡ್ಡ ಕರೆ ನೀಡಿದ್ದು ಬೇರೆ ಯಾರೋ ಅಲ್ಲ, ಮೊಹಮ್ಮದ್ ಶಮಿ. ಈ ವರ್ಷ ಆಸ್ಟ್ರೇಲಿಯಾ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ಸ್​ನಲ್ಲಿ ಭಾರತದ ಗೆಲುವಿನ ನಂತರ, ಲಾಲಾರಸ ನಿಷೇಧವು ರಿವರ್ಸ್ ಸ್ವಿಂಗ್ ಎಸೆತಗಳನ್ನು ಎಸೆಯಲು ಕಷ್ಟವಾಗುತ್ತಿದೆ ಎಂದು ಶಮಿ ಹೇಳಿದ್ದರು. ಲಾಲಾರಸ ಬಳಕೆಗೆ ಅವಕಾಶ ಕೊಟ್ಟರೆ ಹೆಚ್ಚು ಆಸಕ್ತಿದಾಯಕವಾಗಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು. ಇತ್ತೀಚೆಗೆ ಲಾಲಾರಸ ನಿಷೇಧದ ನಂತರ ಆಟದಲ್ಲಿ, ವಿಶೇಷವಾಗಿ ಸೀಮಿತ ಸ್ವರೂಪಗಳಲ್ಲಿ, ಬ್ಯಾಟ್ಸ್​​ಮನ್​ಗಳು ಮೇಲುಗೈ ಸಾಧಿಸುತ್ತಿದ್ದಾರೆ ಎಂಬುದು ಅವರ ಉದ್ದೇಶವಾಗಿತ್ತು.

ಆದರೆ ಐಪಿಎಲ್​ಗೂ ಮುನ್ನ ನಿಷೇಧವನ್ನು ಹಿಂತೆಗೆದುಕೊಳ್ಳಬೇಕು ಎಂದು ಶಮಿಗೆ ಭಾರತದ ಸಹ ಆಟಗಾರ ಮೊಹಮ್ಮದ್ ಸಿರಾಜ್ ಕೂಡ ಬೆಂಬಲ ನೀಡಿದ್ದರು. ಆದರೆ ಆಧುನಿಕ ಕ್ರಿಕೆಟ್​ನ ಅತ್ಯುತ್ತಮ ವೇಗಿಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಮಿಚೆಲ್ ಸ್ಟಾರ್ಕ್ ಶಮಿ ಮತ್ತು ಸಿರಾಜ್ ಅವರ ಮಾತನ್ನು ಪರೋಕ್ಷವಾಗಿ ನಿರಾಕರಿಸಿದ್ದಾರೆ. ಆಸೀಸ್ ವೇಗಿ ಬುಧವಾರ (ಏಪ್ರಿಲ್ 16) ನಡೆದ ಸೂಪರ್ ಓವರ್ ಪಂದ್ಯದಲ್ಲಿ ಆರ್​​ಆರ್​ ಅನ್ನು ಸೋಲಿಸಿದ ಕಾರಣ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು. 20ನೇ ಓವರ್​​ನಲ್ಲಿ 8 ರನ್ ನೀಡಿ ಸೂಪರ್ ಓವರ್ ಮಾಡಿದ ಮತ್ತು ಸೂಪರ್​ ಓವರ್​ನಲ್ಲಿ 11 ರನ್ ನೀಡಿ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

‘ನಾನು ಎಂಜಲು ಬಳಸುವುದಿಲ್ಲ’: ಮಿಚೆಲ್ ಸ್ಟಾರ್ಕ್

ಪಂದ್ಯದ ನಂತರ ಮಾತನಾಡಿದ ಅವರು, 'ನಾನು ಲಾಲಾರಸ ಬಳಸುವುದಿಲ್ಲ. ಲಾಲಾರಸ ಮಾಡಿದರೆ ಚೆಂಡು ಹೊಳಪು ಪಡೆಯುತ್ತದೆ ಎನ್ನುವುದು ತಪ್ಪು ಕಲ್ಪನೆ. ಇದು ಮಿಥ್ಯೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಲಾಲಾರಸ ಇಲ್ಲದಿದ್ದರೂ ಬೆವರು ಬಳಸನ್ನು ಬಳಸಬಹುದು. ಬೆವರು ಮತ್ತು ಲಾಲಾರಸ ನಡುವೆ ವ್ಯತ್ಯಾಸ ಏನು ಎಂದು ನನಗೆ ತಿಳಿದಿಲ್ಲ. ಬಿಳಿ ಚೆಂಡಿನಲ್ಲಿ ಇದು ವ್ಯತ್ಯಾಸವನ್ನುಂಟು ಮಾಡುತ್ತದೆ ಎಂದು ಭಾವಿಸುವುದಿಲ್ಲ. ಆದರಿದು ಕೆಂಪು ಚೆಂಡಿನ ಮೇಲೆ ವ್ಯತ್ಯಾಸವನ್ನುಂಟು ಮಾಡುತ್ತದೆ ಎಂದು ಮಿಚೆಲ್ ಸ್ಟಾರ್ಕ್​ ಅಭಿಪ್ರಾಯಪಟ್ಟಿದ್ದಾರೆ. ಆ ಮೂಲಕ ಶಮಿ ಮತ್ತು ಸಿರಾಜ್ ಅವರ ನಿಲುವಿಗೆ ವಿರುದ್ಧವಾಗಿ ಹೇಳಿಕೆ ನೀಡಿದ್ದಾರೆ.

ಈ ಹಿಂದೆ ಲಾಲಾರಸ ನಿಷೇಧದ ಬಗ್ಗೆ ಶಮಿ ಅವರ ಮಾತುಗಳನ್ನು ಮಾಜಿ ಅಂತಾರಾಷ್ಟ್ರೀಯ ಬೌಲರ್​ಗಳಾದ ವೆರ್ನಾನ್ ಫಿಲಾಂಡರ್ ಮತ್ತು ಟಿಮ್ ಸೌಥಿ ಕೂಡ ಬೆಂಬಲಿಸಿದ್ದರು. ಬ್ಯಾಟ್ಸ್​ಮನ್ ಸ್ನೇಹಿ ಪಿಚ್​ಗಳಲ್ಲಿ ರಿವರ್ಸ್ ಸ್ವಿಂಗ್ ಕಾಣೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದರು. ಚೆಂಡಿನ ಒಂದು ಬದಿಯನ್ನು ಹೊಳಪುಗೊಳಿಸಲು ಲಾಲಾರಸವನ್ನು ಬಳಸುವುದು ಮತ್ತು ರಿವರ್ಸ್ ಸ್ವಿಂಗ್ ವೈಟ್-ಬಾಲ್ ಕ್ರಿಕೆಟ್​ಗಿಂತ ಕೆಂಪು-ಚೆಂಡಿನಲ್ಲಿ ದೊಡ್ಡ ವ್ಯತ್ಯಾಸವನ್ನು ಉಂಟುಮಾಡುತ್ತದೆ ಎಂದು ಸೌಥಿ ಅಭಿಪ್ರಾಯಪಟ್ಟಿದ್ದರು.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.