ಆಪರೇಷನ್ ಸಿಂದೂರ ಮಧ್ಯೆ ಮುಂಬೈ ಇಂಡಿಯನ್ಸ್​ಗೆ ‘ಧರ್ಮ’ ಸಂಕಟ; ಬಿಸಿಸಿಐ ಆದೇಶಕ್ಕೆ ಕಾಯ್ತಿದೆ ಎಂಐ!
ಕನ್ನಡ ಸುದ್ದಿ  /  ಕ್ರಿಕೆಟ್  /  ಆಪರೇಷನ್ ಸಿಂದೂರ ಮಧ್ಯೆ ಮುಂಬೈ ಇಂಡಿಯನ್ಸ್​ಗೆ ‘ಧರ್ಮ’ ಸಂಕಟ; ಬಿಸಿಸಿಐ ಆದೇಶಕ್ಕೆ ಕಾಯ್ತಿದೆ ಎಂಐ!

ಆಪರೇಷನ್ ಸಿಂದೂರ ಮಧ್ಯೆ ಮುಂಬೈ ಇಂಡಿಯನ್ಸ್​ಗೆ ‘ಧರ್ಮ’ ಸಂಕಟ; ಬಿಸಿಸಿಐ ಆದೇಶಕ್ಕೆ ಕಾಯ್ತಿದೆ ಎಂಐ!

ಪಿಟಿಐ ವರದಿಯ ಪ್ರಕಾರ, ಮೇ 11ರಂದು ನಡೆಯುವ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ಪಂದ್ಯವನ್ನು ಮುಂಬೈಗೆ ಸ್ಥಳಾಂತರಿಸುವ ಆಯ್ಕೆಯನ್ನು ಬಿಸಿಸಿಐ ಪರಿಶೀಲಿಸುತ್ತಿದೆ.

Mumbai Indians are scheduled to face Punjab Kings in Dharamsala on May 11
Mumbai Indians are scheduled to face Punjab Kings in Dharamsala on May 11 (PTI)

'ಆಪರೇಷನ್ ಸಿಂದೂರ' ಭಾಗವಾಗಿ ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತದ ಕ್ಷಿಪಣಿ ದಾಳಿಯ ನಂತರ ದೇಶದ ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿನ 18 ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಧರ್ಮಶಾಲಾ ವಿಮಾನ ನಿಲ್ದಾಣವು ಅವುಗಳಲ್ಲಿ ಒಂದಾಗಿರುವುದರಿಂದ, ಇದು ಐಪಿಎಲ್ ತಂಡಗಳಾದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್​ ಪ್ರಯಾಣದ ಯೋಜನೆಗಳ ಮೇಲೆ ಪರಿಣಾಮ ಬೀರಿದೆ. ಮೇ 11ರಂದು ಇದೇ ಪಟ್ಟಣದಲ್ಲಿ ಮುಂಬೈ ಮತ್ತು ಪಂಜಾಬ್ ಸೆಣಸಾಟ ನಡೆಸಲಿವೆ. ಕ್ರಿಕ್​ಬಜ್​ ವರದಿ ಪ್ರಕಾರ, ಬುಧವಾರ (ಮೇ 7) ಧರ್ಮಶಾಲಾಗೆ ವಿಮಾನ ರದ್ದುಗೊಳಿಸಿದ ಹಿನ್ನೆಲೆ ಎಂಐ ತಂಡವು ಚಿಂತೆಗೊಳಗಾಗಿದೆ.

ಐಪಿಎಲ್​​ನಲ್ಲಿ ಪಂಜಾಬ್ ತನ್ನ 2ನೇ ತವರು ಮೈದಾನವಾಗಿ ಅಳವಡಿಸಿಕೊಂಡಿರುವ ಧರ್ಮಶಾಲಾದಲ್ಲಿ ಈ ಋತುವಿನಲ್ಲಿ ಇನ್ನೂ 2 ಪಂದ್ಯಗಳು ನಡೆಯಲಿವೆ. ಗುರುವಾರ (ಮೇ 8) ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮತ್ತು ಮೇ 11 ರಂದು ಮುಂಬೈ ವಿರುದ್ಧ. ಹಿಮಾಚಲ ಪ್ರದೇಶದ ಗಿರಿಧಾಮಕ್ಕೆ ಪ್ರಯಾಣಿಸಲು ಪಂಜಾಬ್ ಯಾವುದೇ ತಕ್ಷಣದ ತೊಂದರೆ ಎದುರಿಸುವುದಿಲ್ಲ, ಏಕೆಂದರೆ ಪಿಬಿಕೆಎಸ್​ ಮೇ 4ರಂದು ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಿದ ನಂತರ ಅದೇ ಪಟ್ಟಣದಲ್ಲಿ ಉಳಿದುಕೊಂಡಿದೆ. ಇನ್ನೂ ಒಂದು ವಾರ ಧರ್ಮಶಾಲಾದಲ್ಲಿ ಉಳಿಯುವ ಸಾಧ್ಯತೆಯಿದೆ. ಅಲ್ಲದೆ, ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೂ ಯಾವುದೇ ಸಮಸ್ಯೆ ಇಲ್ಲ.

ಏಕೆಂದರೆ ಡೆಲ್ಲಿ ತಂಡವು ಪಂಜಾಬ್​ಗೆ ಪ್ರಯಾಣಿಸಿದೆ. ಆದರೆ ಪಂದ್ಯ ಮುಗಿದ ನಂತರ ಅಲ್ಲಿಂದ ಮರಳಲು ಪರ್ಯಾಯ ಮಾರ್ಗಗಳನ್ನು ಬಿಸಿಸಿಐ ಹುಡುಕುತ್ತಿದೆ. ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡವು ಬುಧವಾರ (ಮೇ 7) ಚಂಡೀಗಢ ಮೂಲಕ ಧರ್ಮಶಾಲಾಕ್ಕೆ ಪ್ರಯಾಣಿಸಬೇಕಿತ್ತು. ಆದಾಗ್ಯೂ, ಕ್ರಿಕ್​ಬಜ್​​ ವರದಿಯ ಆಧಾರದ ಮೇಲೆ, ಫ್ರಾಂಚೈಸಿ ಈಗ ಬಿಸಿಸಿಐನಿಂದ ಹೆಚ್ಚಿನ ಆದೇಶಗಳಿಗಾಗಿ ಕಾಯುತ್ತಿದೆ. ಧರ್ಮಶಾಲಾದ ಜೊತೆಗೆ ಚಂಡೀಗಢದ ವಿಮಾನ ನಿಲ್ದಾಣವನ್ನೂ ಮುಚ್ಚಲಾಗಿರುವ ಕಾರಣ ಎಂಐ ತಂಡಕ್ಕೆ ಏಕೈಕ ಪರ್ಯಾಯ ಎಂದರೆ ದೆಹಲಿಯಿಂದ ರಸ್ತೆಯ ಮೂಲಕ ಪ್ರಯಾಣಿಸುವುದು.

ಪಂದ್ಯದ ಸ್ಥಳಾಂತರಕ್ಕೆ ಚಿಂತನೆ

ಬಿಸಿಸಿಐ ಉನ್ನತ ಅಧಿಕಾರಿಗಳು ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಲು ಹೆಚ್ಚಿನ ಸಭೆಗಳನ್ನು ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಮಾಹಿತಿ ನೀಡಲಿದ್ದಾರೆ. ಮೇ 7ರಂದು ಕೋಲ್ಕತ್ತಾದಲ್ಲಿ ನಡೆಯಲಿರುವ ಕೋಲ್ಕತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಯಾವುದೇ ಬದಲಾವಣೆಗಳಿಲ್ಲ. ವಿಮಾನ ನಿಲ್ದಾಣದ ಅನಿರ್ದಿಷ್ಟ ಮುಚ್ಚುವಿಕೆಯ ಮಧ್ಯೆ, ಮೇ 11ರ ಎಂಐ vs ಪಿಬಿಕೆಎಸ್ ಪಂದ್ಯವನ್ನು ಮುಂಬೈಗೆ ಸ್ಥಳಾಂತರಿಸುವ ಆಯ್ಕೆಯನ್ನು ಬಿಸಿಸಿಐ ಪರಿಶೀಲಿಸುತ್ತಿದೆ ಎಂದು ಪಿಟಿಐ ವರದಿ ತಿಳಿಸಿದೆ. ಆದರೆ ಮೇ 8ರ ಗುರುವಾರ ನಡೆಯಲಿರುವ ಡೆಲ್ಲಿ ಮತ್ತು ಪಂಜಾಬ್ ನಡುವಿನ ನಿಗದಿತ ಪಂದ್ಯದಲ್ಲಿ ಯಾವುದೇ ಬದಲಾವಣೆಗಳಿಲ್ಲ.

ವಿಮಾನ ನಿಲ್ದಾಣ ಮುಚ್ಚಿರುವ ಕಾರಣ ಡೆಲ್ಲಿ ತಂಡವು ಧರ್ಮಶಾಲಾದಿಂದ ದೆಹಲಿಗೆ ಪ್ರಯಾಣಿಸುವ ಆಯ್ಕೆಗಳ ಬಗ್ಗೆ ಬಿಸಿಸಿಐ, ಫ್ರಾಂಚೈಸಿಗಳೊಂದಿಗೆ ಆಂತರಿಕ ಚರ್ಚೆ ನಡೆಸುತ್ತಿದೆ ಎಂದು ಬಿಸಿಸಿಐ ಮೂಲಗಳು ಪಿಟಿಐಗೆ ತಿಳಿಸಿವೆ. ಮುಂದಿರುವ ಒಂದೇ ಒಂದು ಮಾರ್ಗ ಏನೆಂದರೆ ಡೆಲ್ಲಿ​​ಗೆ ಬಸ್ ಪ್ರಯಾಣ ಮಾತ್ರ. ಉದ್ವಿಗ್ನ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಗುರುವಾರದ ಪಂದ್ಯದಲ್ಲಿ ಫ್ಲಡ್​​ಲೈಟ್​​ಗಳ ಬಳಕೆಯೂ ಭದ್ರತಾ ವಿಷಯವಾಗಿದೆ. ಹೆಚ್ಚು ಜನ ಸೇರುವ ಸ್ಥಳವೂ ಆಗಿರುವ ಕಾರಣ ಪಂದ್ಯವು ನಿಗದಿಯಂತೆ ಮುಂದುವರಿಯುತ್ತದೆಯೇ ಎಂಬುದರ ಮೇಲೆ ಪರಿಣಾಮ ಬೀರಬಹುದು ಎಂದು ಪಿಟಿಐ ವರದಿ ತಿಳಿಸಿದೆ.

ಲಿಖಿತ ಮಾಹಿತಿ ಬಂದಿಲ್ಲ ಎಂದ ಹೆಚ್​ಪಿಸಿಎ

ನಾಳೆಯ (ಮೇ 8) ಪಂದ್ಯವನ್ನು ರದ್ದುಗೊಳಿಸುವ ಬಗ್ಗೆ ಬಿಸಿಸಿಐ ಅಥವಾ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ನಮಗೆ ಯಾವುದೇ ಲಿಖಿತ ಮಾಹಿತಿ ಬಂದಿಲ್ಲ. ಯಾವುದೇ ಅಧಿಕೃತ ಸೂಚನೆ ಇಲ್ಲದಿದ್ದರೆ, ನಾವು ವೇಳಾಪಟ್ಟಿಯೊಂದಿಗೆ ಮುಂದುವರಿಯುತ್ತೇವೆ" ಎಂದು ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಮೂಲಗಳು ಪಿಟಿಐಗೆ ತಿಳಿಸಿವೆ. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತವು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದ ಒಂಬತ್ತು ಸ್ಥಳಗಳಲ್ಲಿ ನಿಖರ ದಾಳಿ ನಡೆಸಿತು.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.