ತಮಾಷೆಯಲ್ಲ, ಸಂಜನಾ; ತಾನು ಎದುರಿಸಿದ ಕಷ್ಟವನ್ನು ಜಸ್ಪ್ರೀತ್ ಬುಮ್ರಾ ಪತ್ನಿಗೆ ವಿವರಿಸಿದ ಕೆಎಲ್ ರಾಹುಲ್
ಚಾಂಪಿಯನ್ಸ್ ಟ್ರೋಫಿಯಲ್ಲಿ ನಾಲ್ವರು ಸ್ಪಿನ್ನರ್ಗಳ ವಿರುದ್ಧ ಕೀಪಿಂಗ್ ನಿಭಾಯಿಸಿದನ್ನು ತಮಾಷೆಯಾಗಿ ಕೇಳಿದ ಸಂಜನಾ ಗಣೇಶನ್ಗೆ ತಮಾಷೆಯಲ್ಲ, ಸಂಜನಾ ಎಂದು ರಾಹುಲ್ ಉತ್ತರಿಸಿದ್ದಾರೆ.

2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಅಪ್ರತಿಮ ಹೀರೋ ಆಗಿದ್ದಾರೆ ಕೆಎಲ್ ರಾಹುಲ್. ಅತ್ತ ಬ್ಯಾಟಿಂಗ್ ಜವಾಬ್ದಾರಿ, ಇತ್ತ ವಿಕೆಟ್ ಕೀಪರ್ ಆಗಿಯೂ ಗೆಲುವಿನಲ್ಲಿ ಅವರ ಪಾತ್ರ ಅದ್ಭುತವಾಗಿತ್ತು. ರಿಷಭ್ ಪಂತ್ಗೂ ಮುನ್ನ ತಂಡದಲ್ಲಿ ತಮ್ಮ ಸ್ಥಾನ ಉಳಿಸಿಕೊಳ್ಳುವ ಒತ್ತಡದ್ದಲ್ಲಿದ್ದ ರಾಹುಲ್, ಸ್ಟಂಪ್ಗಳ ಹಿಂದೆ ನಿಂತು ನೀಡಿದ ಸ್ಥಿರ ಪ್ರದರ್ಶನ ಗಮನಾರ್ಹವಾಗಿತ್ತು. ಒತ್ತಡದಲ್ಲಿ ಬ್ಯಾಟ್ನೊಂದಿಗೆ ಅಮೂಲ್ಯ ಕೊಡುಗೆ ನೀಡಿದ ಕನ್ನಡಿಗ, ಟ್ರೋಫಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ ಸ್ಪಿನ್ನರ್ಗಳು ಬೌಲಿಂಗ್ ಮಾಡುವಾಗ ತಾನೆದುರಿಸಿದ ಕಷ್ಟವನ್ನು ವಿವರಿಸಿದ್ದಾರೆ.
ವಿಕೆಟ್ ಕೀಪರ್ ಆಗಿ ಚೆಂಡನ್ನು ಚುರುಕಾಗಿ ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಡಿಆರ್ಎಸ್ ನಿರ್ಧಾರಗಳಲ್ಲೂ ಅವರ ಪಾತ್ರ ದೊಡ್ಡದಿತ್ತು. ಭಾರತದ ನಾಲ್ವರು ಸ್ಪಿನ್ನರ್ಗಳಿಗೆ ವಿಕೆಟ್ ಕೀಪಿಂಗ್ ಮಾಡುವುದು ಅತ್ಯಂತ ಕಷ್ಟಕರವಾಗಿತ್ತು ಎಂದು ಪರಿಗಣಿಸಿದ್ದಾರೆ. ಭಾಗವಹಿಸಿದ ಎಲ್ಲಾ 8 ತಂಡಗಳಲ್ಲಿ ಭಾರತ ಮಾತ್ರ 5 ಸ್ಪಿನ್ನರ್ಸ್ ಆಯ್ಕೆ ಮಾಡಿತ್ತು. ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ಆಲ್ರೌಂಡರ್ಗಳಾಗಿದ್ದರು. ವರುಣ್ ಚಕ್ರವರ್ತಿ ಮತ್ತು ಕುಲ್ದೀಪ್ ಯಾದವ್ ಇಬ್ಬರು ಸ್ಪೆಷಲಿಸ್ಟ್ ಸ್ಪಿನ್ನರ್ಗಳಾಗಿದ್ದರು. ಆದರೆ ಸುಂದರ್ ಹೊರತುಪಡಿಸಿ ನಾಲ್ವರು ಕೂಡ ತಂಡದ ಭಾಗವಾಗಿದ್ದರು. ಅವರೇ ಮ್ಯಾಚ್ವಿನ್ನರ್ಗಳಾಗಿದ್ದರು.
ತಮಾಷೆಯಲ್ಲ, ಸಂಜನಾ ಎಂದ ರಾಹುಲ್
ಸ್ಪಿನ್ನರ್ಗಳು ಬೌಲಿಂಗ್ ಮಾಡುವಾಗ ಎದ್ದು ಕೂರುತ್ತಾ ವಿಕೆಟ್ ಕೀಪಿಂಗ್ ಮಾಡಬೇಕು. ಅದೇ ವೇಗಿಗಳಾದರೆ ದೂರ ನಿಂತು ಕೀಪಿಂಗ್ ಮಾಡಬಹುದು. ಆದರೆ ನಾಲ್ವರು ಸ್ಪಿನ್ನರ್ಗಳು ಬೌಲಿಂಗ್ ಮಾಡಿದಾಗಲೆಲ್ಲಾ ರಾಹುಲ್ ಕೂತೇ ಕೀಪಿಂಗ್ ಮಾಡುವಂತಾಯಿತು. ನಾಲ್ವರು ಸ್ಪಿನ್ನರ್ಗಳನ್ನು ಎದುರಿಸುವ ವೇಳೆ ವಿಕೆಟ್ ಕೀಪಿಂಗ್ ಮಾಡುವಾಗ ಫನ್ ಹೇಗಿತ್ತು ಎಂದು ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಅವರ ಪತ್ನಿಯೂ ಆಗಿರುವ ಟಿವಿ ನಿರೂಪಕಿ ಸಂಜನಾ ಗಣೇಶನ್ ತಮಾಷೆಯಾಗಿ ಕೇಳಿದ್ದಾರೆ. ಆದರೆ, ಇದಕ್ಕೆ ಉತ್ತರಿಸಿದ ಕೆಎಲ್ ರಾಹುಲ್, ‘ಇದು ತಮಾಷೆಯಲ್ಲ ಸಂಜನಾ! ನಾಲ್ವರು ಸ್ಪಿನ್ನರ್ಗಳ ಬೌಲಿಂಗ್ ಮಾಡುವಾಗ ನಾನು 200-250 ಬಾರಿ ಕುಳಿತುಕೊಳ್ಳಬೇಕಾಯಿತು’ ಎಂದು ಹೇಳಿದ್ದಾರೆ.
ಪಿಚ್ಗಳು ಗುಣಮಟ್ಟದಿಂದ ಕೂಡಿದ್ದವು. ಗುಣಮಟ್ಟದ ಸ್ಪಿನ್ನರ್ಗಳಿದ್ದರು. ಹಾಗಾಗಿ ಪಿಚ್ಗಳು ನಿಸ್ಸಂಶಯವಾಗಿ ಅವರಿಗೆ ಸಹಾಯ ಮಾಡಿದವು. ಇದು ಅವರನ್ನು ಇನ್ನಷ್ಟು ಅಪಾಯಕಾರಿಯನ್ನಾಗಿ ಮಾಡಿತು. ಇದು ಸ್ಟಂಪ್ಗಳ ಹಿಂದೆ ನನಗೆ ಇನ್ನಷ್ಟು ಸವಾಲು ಆಯಿತು. ಬೌಲಿಂಗ್ ಮಾಡಿದ ರೀತಿ ಮತ್ತು ಆ ಪರಿಸ್ಥಿತಿಗಳನ್ನು ಅವರು ಬಳಸಿಕೊಂಡ ರೀತಿ ಅದ್ಭುತವಾಗಿತ್ತು ಎಂದು ರಾಹುಲ್ ಹೇಳಿದ್ದಾರೆ. ಐಸಿಸಿ ಟ್ರೋಫಿ ಗೆಲ್ಲುವುದು ಅಷ್ಟು ಸುಲಭವಲ್ಲ. ಮತ್ತು ಇದು ನನ್ನ ಮೊದಲನೇಯ ಐಸಿಸಿ ಟ್ರೋಫಿ. ಆದ್ದರಿಂದ ನಾನು ಚಂದ್ರನ ಮೇಲೆ ಇದ್ದೇನೆ. ಇದು ಸಂಪೂರ್ಣ ತಂಡದ ಪ್ರಯತ್ನವಾಗಿದೆ. ಎಲ್ಲಾ 11-12 ಆಟಗಾರರ ಪ್ರಯತ್ನ ಎಂದು ರಾಹುಲ್ ಹೇಳಿದ್ದಾರೆ.
ನಾನು ಅವರಿಂದ ಸಾಕಷ್ಟು ಕಲಿಯುತ್ತೇನೆ ಎಂದ ರಾಹುಲ್
ಚಿಕ್ಕ ವಯಸ್ಸಿನಿಂದಲೂ ನನ್ನ ತರಬೇತುದಾರರು ನನಗೆ ಕಲಿಸಿದ್ದು ಕ್ರಿಕೆಟ್ ಒಂದು ತಂಡದ ಆಟ ಮತ್ತು ತಂಡವು ನಿಮ್ಮಿಂದ ಏನನ್ನು ಬಯಸುತ್ತದೆಯೋ, ಅದನ್ನು ಮಾಡಲು ನೀವು ಸಮರ್ಥರಾಗಿರಬೇಕು ಅಂತ. ಇದಕ್ಕೆ ಸಾಕಷ್ಟು ಸಿದ್ಧತೆ, ಮೈದಾನದ ಹೊರಗೆ ಸಾಕಷ್ಟು ಕೆಲಸದ ಅಗತ್ಯವಿದೆ. ನಾನು ನಾಲ್ಕು, ಐದು, ಆರು ರನ್ ಗಳಿಸುವ ಬ್ಯಾಟರ್ಗಳನ್ನು ನೋಡುತ್ತೇನೆ ಮತ್ತು ಅವರಿಂದ ಕಲಿಯುತ್ತೇನೆ ಎಂದು ಹೇಳಿದ್ದಾರೆ. ವಿಕೆಟ್ ಕೀಪರ್ ಆಗಿ ತಮ್ಮ ಕ್ರಿಕೆಟ್ ಪ್ರಯಾಣ ಮುಂದುವರೆಸಿದ ಕೆಎಲ್ ರಾಹುಲ್, 5ನೇ ಕ್ರಮಾಂಕದಲ್ಲಿ ಆಡಿದ್ದೇನೆ, ಉತ್ತಮ ಪ್ರದರ್ಶನ ನೀಡಿದ್ದೇನೆ ಎಂದು ಹೇಳಿದ್ದಾರೆ.