ವಂದೇ ಭಾರತ್‌ ರೈಲಿನಲ್ಲಿ ಸುರಕ್ಷಿತವಾಗಿ ದೆಹಲಿ ತಲುಪಿದ ಪಂಜಾಬ್, ಡೆಲ್ಲಿ ಆಟಗಾರರು ಹಾಗೂ ಸಿಬ್ಬಂದಿ; ವಿವರ ನೀಡಿದ ಐಪಿಎಲ್‌ ಅಧ್ಯಕ್ಷ
ಕನ್ನಡ ಸುದ್ದಿ  /  ಕ್ರಿಕೆಟ್  /  ವಂದೇ ಭಾರತ್‌ ರೈಲಿನಲ್ಲಿ ಸುರಕ್ಷಿತವಾಗಿ ದೆಹಲಿ ತಲುಪಿದ ಪಂಜಾಬ್, ಡೆಲ್ಲಿ ಆಟಗಾರರು ಹಾಗೂ ಸಿಬ್ಬಂದಿ; ವಿವರ ನೀಡಿದ ಐಪಿಎಲ್‌ ಅಧ್ಯಕ್ಷ

ವಂದೇ ಭಾರತ್‌ ರೈಲಿನಲ್ಲಿ ಸುರಕ್ಷಿತವಾಗಿ ದೆಹಲಿ ತಲುಪಿದ ಪಂಜಾಬ್, ಡೆಲ್ಲಿ ಆಟಗಾರರು ಹಾಗೂ ಸಿಬ್ಬಂದಿ; ವಿವರ ನೀಡಿದ ಐಪಿಎಲ್‌ ಅಧ್ಯಕ್ಷ

ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಪಂಜಾಬ್‌ ಕಿಂಗ್ಸ್‌ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಿ, ಪ್ರೋಟೋಕಾಲ್ ಪ್ರಕಾರವಾಗಿ ಆಟಗಾರರನ್ನು ಸುರಕ್ಷಿತವಾಗಿ ದೆಹಲಿಗೆ ಸ್ಥಳಾಂತರಿಸಲಾಗಿದೆ. ಇದಕ್ಕಾಗಿ ಭದ್ರತಾ ಸಿಬ್ಬಂದಿ ಮತ್ತು ಅಭಿಮಾನಿಗಳಿಗೆ ಐಪಿಎಲ್‌ ಅಧ್ಯಕ್ಷ ಅರುಣ್ ಧುಮಾಲ್ ಧನ್ಯವಾದ ಅರ್ಪಿಸಿದ್ದಾರೆ.

ವಂದೇ ಭಾರತ್‌ ರೈಲಿನಲ್ಲಿ ಸುರಕ್ಷಿತವಾಗಿ ದೆಹಲಿ ತಲುಪಿದ ಪಂಜಾಬ್, ಡೆಲ್ಲಿ ಆಟಗಾರರು ಹಾಗೂ ಸಿಬ್ಬಂದಿ
ವಂದೇ ಭಾರತ್‌ ರೈಲಿನಲ್ಲಿ ಸುರಕ್ಷಿತವಾಗಿ ದೆಹಲಿ ತಲುಪಿದ ಪಂಜಾಬ್, ಡೆಲ್ಲಿ ಆಟಗಾರರು ಹಾಗೂ ಸಿಬ್ಬಂದಿ

ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಮಧ್ಯೆ, 18ನೇ ಆವೃತ್ತಿಯ ಐಪಿಎಲ್‌ ಪಂದ್ಯಾವಳಿಯ ಕೊನೆಯ ಹಂತದ ಪಂದ್ಯಗಳನ್ನು ಒಂದು ವಾರಗಳ ಕಾಲ ಮುಂದೂಡಲಾಗಿದೆ. ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳ ನಡುವಿನ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸುವ ಮೂಲಕ ಆಟಗಾರರನ್ನು ಧರ್ಮಶಾಲಾದ ಎಚ್‌ಪಿಸಿಎ ಕ್ರೀಡಾಂಗಣದಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಎರಡೂ ತಂಡಗಳ ಆಟಗಾರರು ಮಾತ್ರವಲ್ಲದೆ, ಸಿಬ್ಬಂದಿ, ಬಿಸಿಸಿಐ ಕಾರ್ಯಾಚರಣೆ ಸಿಬ್ಬಂದಿ ಮತ್ತು ಪ್ರಸಾರ ಮತ್ತು ನಿರ್ಮಾಣ ಸಿಬ್ಬಂದಿ ಹೀಗೆ ಎಲ್ಲರನ್ನೂ ವಂದೇ ಭಾರತ್ ವಿಶೇಷ ರೈಲಿನ ಮೂಲಕ ಬಿಸಿಸಿಐ ನವದೆಹಲಿಗೆ ಕರೆತಂದಿದೆ.

ಐಪಿಎಲ್ ಹಂಚಿಕೊಂಡ ವಿಡಿಯೋದಲ್ಲಿ ಈ ಎಲ್ಲಾ ದೃಶ್ಯಗಳನ್ನು ತೋರಿಸಲಾಗಿದೆ. ವಿಡಿಯೋದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಸ್ಪಿನ್ನರ್ ಕುಲ್ದೀಪ್ ಯಾದವ್‌ ಮಾತನಾಡಿದ್ದು, ಪಂದ್ಯವನ್ನು ಕೈಬಿಟ್ಟ ನಂತರ ಸುರಕ್ಷಿತವಾಗಿ ದೆಹಲಿ ತಲುಪುವುದನ್ನು ಖಚಿತಪಡಿಸಿದ್ದಕ್ಕಾಗಿ ಬಿಸಿಸಿಐ ಮತ್ತು ಭಾರತೀಯ ರೈಲ್ವೆಗೆ ಅವರು ಧನ್ಯವಾದ ಅರ್ಪಿಸಿದ್ದಾರೆ. ಇದೇ ವೇಳೆ ಬಿಸಿಸಿಐ ಕೂಡಾ ರೈಲ್ವೆ ಇಲಾಖೆ, ಕೇಂದ್ರ ಸರ್ಕಾರ ಹಾಗೂ ಇತರ ಪ್ರಮುಖರಿಗೆ ಧನ್ಯವಾದ ಅರ್ಪಿಸಿದೆ. ಅಲ್ಪಕಾಲಾವಧಿಯಲ್ಲಿ ವಂದೇ ಭಾರತ ರೈಲಿನ ವ್ಯವಸ್ಥೆ ಮಾಡಿ ಸುರಕ್ಷಿತ ಪ್ರಯಾಣಕ್ಕೆ ನೆರವಾಗಿದ್ದಕ್ಕೆ ಧನ್ಯವಾದ ಅರ್ಪಿಸಿದೆ.

ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಅವರು, ಎಚ್‌ಪಿಸಿಎ ಕ್ರೀಡಾಂಗಣವನ್ನು ಖಾಲಿ ಮಾಡುವ ಹಿಂದಿನ ಎಲ್ಲಾ ಸವಾಲನ್ನು ಬಹಿರಂಗಪಡಿಸಿದರು. ವಿಭಿನ್ನ ಪರಿಸ್ಥಿತಿಯಲ್ಲಿ ಸುರಕ್ಷತಾ ಮಾನದಂಡಗಳನ್ನು ಸುಗಮವಾಗಿ ಅನುಸರಿಸಿದ್ದಕ್ಕಾಗಿ ಭದ್ರತಾ ಸಿಬ್ಬಂದಿ ಮತ್ತು ಹಾಜರಿದ್ದ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.

ರೈಲ್ವೆ ಸಚಿವಾಲಯಕ್ಕೆ ಬಿಸಿಸಿಐ ಧನ್ಯವಾದ

ಸುರಕ್ಷಿತವಾಗಿ ಸ್ಥಳಾಂತರಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಮೊದಲು, ಸ್ಥಳದಿಂದ 100 ಕಿ.ಮೀ.ಗಿಂತ ಕಡಿಮೆ ದೂರದಲ್ಲಿರುವ ಪಠಾಣ್ಕೋಟ್‌ನಲ್ಲಿ ಡ್ರೋನ್ ದಾಳಿ ನಡೆದು, ಧರ್ಮಶಾಲಾದಲ್ಲಿ ಬ್ಲ್ಯಾಕೌಟ್‌ ಮಾಡುವ ಅಗತ್ಯತೆಯ ಬಗ್ಗೆ ತಮಗೆ ತಿಳಿಸಲಾಯಿತು ಎಂದು ಧುಮಾಲ್ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

“ಮೊದಲ ಕಾರ್ಯತಂತ್ರದ ಭಾಗವಾಗಿ ಮೈದಾನದಲ್ಲಿ ಬ್ಲ್ಯಾಕೌಟ್ ಮಾಡುವ ಬಗ್ಗೆ ತಿಳಿಸಲಾಯಿತು. ಸ್ವಲ್ಪ ಸಮಯದ ನಂತರ ದೀಪಗಳು ಆಫ್ ಆಗುತ್ತವೆ ಎಂದು ನಾನು ಡಿಸಿ ಮತ್ತು ಪಂಜಾಬ್ ಮ್ಯಾನೇಜ್ಮೆಂಟ್‌ನ ಉನ್ನತ ಅಧಿಕಾರಿಗಳಿಗೆ ತ್ವರಿತವಾಗಿ ತಿಳಿಸಿದೆ. ಆಟಗಾರರು ಭಯಭೀತರಾಗುವುದಿಲ್ಲ ಎಂಬುವುದನ್ನು ಖಚಿತಪಡಿಸಿಕೊಳ್ಳುವಂತೆ ಅವರಿಗೆ ಹೇಳಿದೆ. ಸಿಬ್ಬಂದಿ ಮತ್ತು ಮೈದಾನದಲ್ಲಿ ಕೆಲಸ ಮಾಡುವ ಇತರರು ಸಹ ಸುರಕ್ಷಿತವಾಗಿ ಕ್ರೀಡಾಂಗಣವನ್ನು ತೊರೆಯುತ್ತಾರೆ ಎಂಬುದನ್ನು ನಾನು ಖಚಿತಪಡಿಸಿಕೊಳ್ಳಬೇಕಾಗಿತ್ತು. ಅದು ನನ್ನ ಕರ್ತವ್ಯವಾಗಿತ್ತು,” ಎಂದು ಅವರು ಹೇಳಿದರು.

ಪರಿಸ್ಥಿತಿಯನ್ನು ಅರ್ಥಮಾಡಿಕೊಂಡಿದ್ದಕ್ಕಾಗಿ ಪ್ರೇಕ್ಷಕರಿಗೆ ಮತ್ತು ಪ್ರಕ್ರಿಯೆಗೆ ಸಹಾಯ ಮಾಡಿದ ಕ್ರೀಡಾಂಗಣದ ಆಡಳಿತ ಮತ್ತು ಪೊಲೀಸರಿಗೆ ಧುಮಾಲ್ ಧನ್ಯವಾದ ಅರ್ಪಿಸಿದ್ದಾರೆ.

“ಸ್ಥಳೀಯ ಪೊಲೀಸರು ಮತ್ತು ಜಿಲ್ಲಾಡಳಿತದ ಸಹಾಯವಿಲ್ಲದೆ ಇಡೀ ಕಾರ್ಯಾಚರಣೆ ಸಾಧ್ಯವಾಗುತ್ತಿರಲಿಲ್ಲ. ಅವರು ಅದ್ಭುತ ಕೆಲಸ ಮಾಡಿದ್ದಾರೆ,” ಎಂದು ಐಪಿಎಲ್ ಅಧ್ಯಕ್ಷರು ಹೇಳಿದ್ದಾರೆ. ಅಭಿಮಾನಿಗಳು ಸುಗಮವಾಗಿ ಮೈದಾನದಿಂದ ತೆರಳುವುದನ್ನು ಖಚಿತಪಡಿಸಿಕೊಳ್ಳಲು ಕ್ರೀಡಾಂಗಣದ ಭದ್ರತಾ ಸಿಬ್ಬಂದಿ ವ್ಯವಸ್ಥೆ ಮಾಡಿದ್ದಾರೆ.

ಕೋವಿಡ್‌ಗಿಂತ ಭಿನ್ನ

"ಕೋವಿಡ್ -19 ಸಮಯದಲ್ಲಿ ಪಂದ್ಯಾವಳಿಯನ್ನು ಮಧ್ಯದಲ್ಲಿ ನಿಲ್ಲಿಸಿದಾಗ ನಮಗೆ ದೊಡ್ಡ ಸವಾಲು ಇತ್ತು. ಆದರೆ ಭದ್ರತಾ ಪ್ರೋಟೋಕಾಲ್ ಕಾರಣದಿಂದಾಗಿ ನಾವು ಲೈವ್ ಪಂದ್ಯವನ್ನು ಅರ್ಧದಲ್ಲೇ ನಿಲ್ಲಿಸಬೇಕಾಗಿದ್ದರಿಂದ ನಿನ್ನೆಯ ಸವಾಲು ವಿಭಿನ್ನವಾಗಿತ್ತು," ಎಂದು ಅವರು ಹೇಳಿದ್ದಾರೆ.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.