ಚಂಢೀಗಡದಲ್ಲಿ ಮೊಳಗಿದ ಸೈರನ್, ಸ್ಟೇಡಿಯಂ ಬ್ಲಾಕ್ ಔಟ್; ಪಂಜಾಬ್-ಡೆಲ್ಲಿ ಪಂದ್ಯ ರದ್ದು
ಇಂಡಿಯನ್ ಪ್ರೀಮಿಯರ್ ಲೀಗ್ 2025ರ 58ನೇ ಪಂದ್ಯವನ್ನು ಅರ್ಧಕ್ಕೆ ರದ್ದುಗೊಳಿಸಲಾಗಿದೆ. ಭಾರತೀಯ ಸೇನೆ ನೀಡಿರುವ ಆದೇಶದ ಮೇರೆಗೆ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ.

ಪಹಲ್ಗಾಮ್ನಲ್ಲಿ ಭಾರತದ 26 ಅಮಾಯಕರನ್ನು ಕೊಂದಿದ್ದ ಕಾರಣ ಆಪರೇಷನ್ ಸಿಂದೂರಿ ಮೂಲಕ ಪಾಕಿಸ್ತಾನದ ಉಗ್ರ ನೆಲೆಗಳನ್ನು ಧ್ವಂಸಗೊಳಿಸಿದ ನಂತರ ಇಂಡೋ-ಪಾಕ್ ನಡುವೆ ಉದ್ವಿಗ್ನತೆ ಹೆಚ್ಚಾದ ಹಿನ್ನೆಲೆ ಚಂಢೀಗಡದಲ್ಲಿ ಭಾರತೀಯ ಸೇನೆ ಸೈರನ್ ಮೊಳಗಿಸಿದ್ದು, ಸಂಪೂರ್ಣ ವಿದ್ಯುತ್ ಕಡಿತಗೊಳಿಸಿ ಬ್ಲ್ಯಾಕ್ಔಟ್ ಮಾಡಲಾಗಿದೆ. ಪರಿಣಾಮ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿದ್ದ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಮಹತ್ವದ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಇದಕ್ಕೆ ಭಾರತೀಯ ಸೇನೆ ಆದೇಶ ನೀಡಿದ ಹಿನ್ನೆಲೆ ಪಂದ್ಯವನ್ನು ನಿಲ್ಲಿಸಲಾಗಿದೆ. ಅಲ್ಲದೆ, ಸ್ಟೇಡಿಯಂನಲ್ಲಿ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರನ್ನು ಸ್ಥಳಾಂತರ ಮಾಡಲಾಗುತ್ತಿದೆ.
ಮಳೆಯ ಕಾರಣ ಪಂದ್ಯವು ರಾತ್ರಿ 8.30ಕ್ಕೆ ಆರಂಭಗೊಂಡಿತು. ಟಾಸ್ ನಡೆದ ಸಮಯ 8.15ಕ್ಕೆ. ಪಂದ್ಯ ಸುಗಮವಾಗಿ ಸಾಗುತ್ತಿತ್ತು. ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್, 10 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 122 ರನ್ ಗಳಿಸಿತ್ತು. ಆದರೆ 11ನೇ ಓವರ್ನ ಮೊದಲ ಎಸೆತದಲ್ಲಿ ಪ್ರಿಯಾಂಶ್ ಆರ್ಯ ಔಟಾದರು. ಆದರೆ ಮರು ಎಸೆತಕ್ಕೂ ಮುನ್ನ ಫ್ಲಡ್ಲೈಟ್ಗಳನ್ನು ಆಫ್ ಮಾಡಲಾಯಿತು. ಜಮ್ಮು-ಕಾಶ್ಮೀರದಲ್ಲಿ ಭಾರತ ಮತ್ತು ಪಾಕಿಸ್ತಾನ ದಾಳಿ-ಪ್ರತಿ ದಾಳಿ ಹೆಚ್ಚಾದ ಹಿನ್ನೆಲೆಯಲ್ಲಿ ಗಡಿ ಭಾಗದ ರಾಜ್ಯಗಳಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಯಿತು. ಹಾಗಾಗಿ ಜನಸಂದಣಿ ಹೆಚ್ಚಿದ್ದ ಸ್ಥಳಗಳು, ಪ್ರಮುಖ ನಗರಗಳು, ಜಲಾಶಯಗಳು ಸೇರಿದಂತೆ ಹಲವೆಡೆ ಬ್ಲ್ಯಾಕ್ಔಟ್ ಘೋಷಣೆ ಮಾಡಲಾಯಿತು.
ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ ಪ್ರಿಯಾಂಶ್ ಆರ್ಯ ಈ ಪಂದ್ಯದಲ್ಲೂ ಮತ್ತೊಂದು ಅಮೋಘ ಇನ್ನಿಂಗ್ಸ್ ಆಡಿದರು. ಅವರು 34 ಎಸೆತಗಳಲ್ಲಿ 5 ಬೌಂಡರಿ, 6 ಸಿಕ್ಸರ್ಗಳ ಸಹಾಯದಿಂದ 70 ರನ್ ಗಳಿಸಿದರು. ಪ್ರಸಕ್ತ ಐಪಿಎಲ್ನಲ್ಲಿ ಮೊದಲ ಪಂದ್ಯವನ್ನಾಡಿದ 10.75 ಕೋಟಿ ಒಡೆಯ ಟಿ ನಟರಾಜನ್ ಅವರು ಆರಂಭಿಕ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು. ಮತ್ತೊಂದೆಡೆ ಪ್ರಭುಸಿಮ್ರಾನ್ ಕೂಡ ಅರ್ಧಶತಕ ಸಿಡಿಸಿ ಅಜೇಯರಾಗಿ ಕ್ರೀಸ್ನಲ್ಲಿದ್ದರು. ಅವರು 28 ಎಸೆತಗಳಲ್ಲಿ 7 ಬೌಂಡರಿ ಸಹಿತ 50 ರನ್ ಸಿಡಿಸಿದ್ದರು. ಪ್ರಿಯಾಂಶ್ ಔಟಾಗುತ್ತಿದ್ದಂತೆ ಶ್ರೇಯಸ್ ಅಯ್ಯರ್ ಮೈದಾನಕ್ಕೆ ಇಳಿಯುತ್ತಿದ್ದಂತೆ ಭಾರತೀಯ ಸೇನೆ ಕಳುಹಿಸಿದ ಆದೇಶದ ಮೇರೆಗೆ ಪಂದ್ಯವನ್ನು ರದ್ದುಗೊಳಿಸಲಾಯಿತು.
ಜಮ್ಮು-ಕಾಶ್ಮೀರದಲ್ಲಿ ಯುದ್ಧದ ವಾತಾವರಣ
ಭಾರತದ ಮೇಲೆ ಪ್ರತೀಕಾರ ತೀರಿಸಿಕೊಳ್ಳುವ ಲೆಕ್ಕಾಚಾರದಲ್ಲಿ ಕ್ಷಿಪಣಿ ದಾಳಿ ನಡೆಸಿದೆ. ಆದರೆ ಇದೆಲ್ಲವನ್ನೂ ಭಾರತೀಯ ಸೇನೆ ಹೊಡೆದುರುಳಿಸಿದೆ. ಭಾರತೀಯ ಸೇನೆ ಇಂದು ಪಾಕಿಸ್ತಾನದ ಹಲವು ಕಡೆ ಡ್ರೋನ್ ದಾಳಿ ನಡೆಸಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಪಾಕಿಸ್ತಾನ ಸಹ ಭಾರತದ ಹಲವು ನಗರಗಳ ಮೇಲೆ ಡ್ರೋನ್ ದಾಳಿ ಮಾಡಿದೆ. ಉಧಂಪುರ, ಜಮ್ಮು, ಪಠಾಣ್ಕೋಟ್, ಅಖ್ನೂರ್ ಮತ್ತು ಕಥುವಾಗಳಲ್ಲಿ ಪಾಕಿಸ್ತಾನ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸಿತ್ತಾದರೂ ಭಾರತ ಅವುಗಳನ್ನು ಹೊಡೆದು ಉರುಳಿಸುವಲ್ಲಿ ಯಶಸ್ವಿಯಾಗಿದೆ. ಹಾಗೆಯೇ ಗಡಿ ಭಾಗದ ರಾಜ್ಯಗಳಾದ ರಾಜಸ್ಥಾನ-ಪಂಜಾಬ್ನ ಪ್ರಮುಖ ನಗರಗಳ ಮೇಲೆಯೂ ಕ್ಷಿಪಣಿ ಮತ್ತು ಡ್ರೋನ್ಗಳನ್ನು ಪಾಕಿಸ್ತಾನ ಹಾರಿಸಿದೆ ಎಂದು ವರದಿಯಾಗಿದೆ.
ಪಂಜಾಬ್-ಡೆಲ್ಲಿಗೆ ತಲಾ ಒಂದೊಂದು ಅಂಕ
ಪಂದ್ಯವನ್ನು 9.29ರ ಸುಮಾರಿಗೆ ರದ್ದುಪಡಿಸಲಾಯಿತು. ಇದೀಗ ರದ್ದಾದ ಕಾರಣ ಪಂಜಾಬ್ ಮತ್ತು ಡೆಲ್ಲಿ ತಂಡಗಳಿಗೆ ತಲಾ ಒಂದೊಂದು ಅಂಕವನ್ನು ನೀಡಲಾಗಿದೆ. ಯುದ್ಧೋನ್ಮಾದ ಹೆಚ್ಚಾದ ಕಾರಣ ಉತ್ತರ ಭಾರತದಲ್ಲಿ ನಡೆಯಲಿರುವ ಪಂದ್ಯಗಳನ್ನು ದಕ್ಷಿಣ ಭಾರತಕ್ಕೆ ಸ್ಥಳಾಂತರಿಸುವ ಸಾಧ್ಯತೆ ಇದೆ. ಇದಕ್ಕೆ ಸಂಬಂಧಿಸಿ ಐಪಿಎಲ್ ಆಡಳಿತ ಮಂಡಳಿ ತುರ್ತು ಸಭೆ ಕರೆದಿದ್ದು, ಈ ಸೀಸನ್ನ ಮುಂಬರುವ ಪಂದ್ಯಗಳ ಕುರಿತು ನಿರ್ಧಾರ ತೆಗೆದುಕೊಳ್ಳಲಿದೆ ಎಂದು ವರದಿಯಾಗಿದೆ.