111 ರನ್ ಗಳಿಸಿಯೂ ಕೆಕೆಆರ್ ವಿರುದ್ಧ 16 ರನ್ನಿಂದ ರೋಚಕ ಗೆಲುವು ಸಾಧಿಸಿದ ಪಂಜಾಬ್; ಚರಿತ್ರೆ ಸೃಷ್ಟಿಸಿದ ಅಯ್ಯರ್ ಪಡೆ
ಕನ್ನಡ ಸುದ್ದಿ  /  ಕ್ರಿಕೆಟ್  /  111 ರನ್ ಗಳಿಸಿಯೂ ಕೆಕೆಆರ್ ವಿರುದ್ಧ 16 ರನ್ನಿಂದ ರೋಚಕ ಗೆಲುವು ಸಾಧಿಸಿದ ಪಂಜಾಬ್; ಚರಿತ್ರೆ ಸೃಷ್ಟಿಸಿದ ಅಯ್ಯರ್ ಪಡೆ

111 ರನ್ ಗಳಿಸಿಯೂ ಕೆಕೆಆರ್ ವಿರುದ್ಧ 16 ರನ್ನಿಂದ ರೋಚಕ ಗೆಲುವು ಸಾಧಿಸಿದ ಪಂಜಾಬ್; ಚರಿತ್ರೆ ಸೃಷ್ಟಿಸಿದ ಅಯ್ಯರ್ ಪಡೆ

ಐಪಿಎಲ್​ನ 31ನೇ ಪಂದ್ಯದಲ್ಲಿ ಯುಜ್ವೇಂದ್ರ ಚಹಲ್ ಅವರ ಸ್ಪಿನ್ ದಾಳಿಗೆ ತತ್ತರಿಸಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಪಂಜಾಬ್ ಕಿಂಗ್ಸ್​​ ವಿರುದ್ಧ 12 ರನ್​ಗಳಿಂದ ರೋಚಕ ಗೆಲುವು ಸಾಧಿಸಿದೆ.

111 ರನ್ ಗಳಿಸಿಯೂ ಕೆಕೆಆರ್ ವಿರುದ್ಧ 16 ರನ್ನಿಂದ ರೋಚಕ ಗೆಲುವು ಸಾಧಿಸಿದ ಪಂಜಾಬ್; ಚರಿತ್ರೆ ಸೃಷ್ಟಿಸಿದ ಕಿಂಗ್ಸ್
111 ರನ್ ಗಳಿಸಿಯೂ ಕೆಕೆಆರ್ ವಿರುದ್ಧ 16 ರನ್ನಿಂದ ರೋಚಕ ಗೆಲುವು ಸಾಧಿಸಿದ ಪಂಜಾಬ್; ಚರಿತ್ರೆ ಸೃಷ್ಟಿಸಿದ ಕಿಂಗ್ಸ್

2025ರ ಇಂಡಿಯನ್ ಪ್ರೀಮಿಯರ್ ಲೀಗ್​​ 31ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್​ಗೆ ಪಂಜಾಬ್ ಕಿಂಗ್ಸ್​ ಏಟಿಗೆ ಎದಿರೇಟು ನೀಡಿದೆ. ಹರ್ಷಿತ್ ರಾಣಾ (25/3), ವರುಣ್ ಚಕ್ರವರ್ತಿ (21/2) ಮತ್ತು ಸುನಿಲ್ ನರೈನ್ (14/2) ಅವರ ಮಾರಕ ಬೌಲಿಂಗ್ ದಾಳಿಗೆ ಪ್ರತಿದಾಳಿ ನಡೆಸಿದ ಪಂಜಾಬ್, ಹಾಲಿ ಚಾಂಪಿಯನ್ ಕೋಲ್ಕತ್ತಾಗೆ ಠಕ್ಕರ್ ಕೊಟ್ಟಿದೆ. ಕೇವಲ 111 ರನ್​ ಗಳಿಸಿದ್ದರೂ ಡಿಫೆಂಡ್ ಮಾಡಿಕೊಂಡ ಶ್ರೇಯಸ್ ಅಯ್ಯರ್ ನೇತೃತ್ವದ ತಂಡ ನೈಟ್ ರೈಡರ್ಸ್ ತಂಡವನ್ನು 16 ರನ್​ಗಳಿಂದ ಮಣಿಸಿದೆ.

ಕಡಿಮೆ ಮೊತ್ತವನ್ನು ಡಿಫೆಂಡ್ ಮಾಡಿಕೊಂಡು ಗೆದ್ದ ಕಿಂಗ್ಸ್, ಐಪಿಎಲ್​ನಲ್ಲಿ ಚರಿತ್ರೆ ಸೃಷ್ಟಿಸಿದೆ. ಈ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ 116 ರನ್​ ಡಿಫೆಂಡ್ ಮಾಡಿಕೊಂಡಿದ್ದ ದಾಖಲೆಯನ್ನು ಮುರಿದಿದೆ. ಈ ಸಾಧಾರಣ ಗುರಿ ಬೆನ್ನಟ್ಟಿದ ಕೆಕೆಆರ್​ 95 ರನ್​ಗೆ ಆಲೌಟ್ ಆಯಿತು. ಯುಜ್ವೇಂದ್ರ ಚಹಲ್ ಅದ್ಭುತ ಪ್ರದರ್ಶನ ನೀಡುವುದರೊಂದಿಗೆ ಎದುರಾಳಿ ತಂಡದ ಗೆಲುವನ್ನು ಕಸಿದುಕೊಂಡರು. ಇದೀಗ ಟೂರ್ನಿಯಲ್ಲಿ 4ನೇ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಕೆಕೆಆರ್​ ಸುಲಭ ಗೆಲುವು ಕೈ ಚೆಲ್ಲಿತು.

ಚಂಢೀಗಡದ ಮುಲ್ಲನ್​ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಬೌಲರ್​ಗಳ ಮೇಲಾಟದಲ್ಲಿ ಪಂಜಾಬ್ ಕಿಂಗ್ಸ್ ಮೇಲುಗೈ ಸಾಧಿಸಿತು. ಮೊದಲು ಬ್ಯಾಟಿಂಗ್‌ ಮಾಡಿ ಪಂಜಾಬ್‌ ಕಿಂಗ್ಸ್‌ 15.3 ಓವರ್​​ಗೆ 111 ರನ್​​ಗೆ ಆಲೌಟಾದರೆ, ಕೋಲ್ಕತ್ತಾ ತಂಡವು 15.1 ಓವರ್​​ಗಳಲ್ಲಿ 95 ರನ್​ಗೆ ಸರ್ವಪತನ ಕಂಡಿತು. ಒಂದು ಹಂತದಲ್ಲಿ ಮೂರು ವಿಕೆಟ್​ಗೆ 72 ರನ್‌ ಗಳಿಸಿದ್ದ ಕೆಕೆಆರ್‌ ಬಳಿಕ ಸತತ ವಿಕೆಟ್‌ ಕಳೆದುಕೊಂಡು ಸೋಲಿನ ಕಹಿ ಅನುಭವಿಸಿತು.

ಯುಜ್ವೇಂದ್ರ ಚಹಲ್ ಅಬ್ಬರ, ಕೆಕೆಆರ್ ತತ್ತರ

112 ರನ್ ಗುರಿ ಬೆನ್ನಟ್ಟಿದ ಕೆಕೆಆರ್​ ಸುಲಭ ಗುರಿ ಬೆನ್ನಟ್ಟುವ ಲೆಕ್ಕಾಚಾರದಲ್ಲಿತ್ತು. ಆದರೆ ಮೊದಲ ಓವರ್​​ನಲ್ಲೇ ಸುನಿಲ್ ನರೈನ್ (5) ಮತ್ತು ಮರು ಓವರ್​ನಲ್ಲಿ ಕ್ವಿಂಟನ್ ಡಿ ಕಾಕ್ (2) ಔಟಾದರು. ಈ ಇಬ್ಬರಿಗೂ ಗೇಟ್ ಪಾಸ್ ಕೊಟ್ಟಿದ್ದು, ಕ್ಸೇವಿಯರ್ ಬಾರ್ಟ್​ಲೆಟ್ ಮತ್ತು ಮಾರ್ಕೋ ಜಾನ್ಸನ್. ಬಳಿಕ 3ನೇ ವಿಕೆಟ್​ಗೆ 55 ರನ್​ಗಳ ಜೊತೆಯಾಟ ಬಂತು. ಆಂಗ್​ಕ್ರಿಶ್ ರಘುವಂಶಿ ಮತ್ತು ಅಜಿಂಕ್ಯ ರಹಾನೆ ಜೋಡಿ ಸುಲಭ ಗೆಲುವಿನ ಸನಿಹಕ್ಕೆ ತಂದಿಟ್ಟಿದ್ದರು. ಆದರೆ ಈ ಹಂತದಲ್ಲಿ ಅಟ್ಯಾಕ್ ಮಾಡಿದ ಯುಜ್ವೇಂದ್ರ ಚಹಲ್, ಸತತ ವಿಕೆಟ್ ಪಡೆದು ಕೆಕೆಆರ್ ಕನಸು ಭಗ್ನಗೊಳಿಸಿದರು.

ರಘುವಂಶಿ 37 ರನ್ ಗಳಿಸಿದರೆ, ರಹಾನೆ 17 ರನ್ ಕಲೆ ಹಾಕಿದರು. ಆದರೆ ಇಬ್ಬರನ್ನೂ ಔಟ್ ಮಾಡಿದ್ದು ಚಹಲ್. ಬಳಿಕ ರಿಂಕು ಸಿಂಗ್ (2) ಮತ್ತು ರಮಣ್ ದೀಪ್ ಸಿಂಗ್​ಗೂ (0) ಗೇಟ್​ಪಾಸ್ ಕೊಟ್ಟರು. ಚಹಲ್​ಗೆ ಸಾಥ್ ಕೊಟ್ಟ ಜಾನ್ಸನ್ ಅವರು ಹರ್ಷಿತ್ ರಾಣಾ (3) ಮತ್ತು ಆಂಡ್ರೆ ರಸೆಲ್​ರನ್ನು (17) ಔಟ್ ಮಾಡಿದರು. ವೆಂಕಟೇಶ್ ಅಯ್ಯರ್​ರನ್ನು ಗ್ಲೆನ್ ಮ್ಯಾಕ್ಸ್​ವೆಲ್ ಹೊರ ದಬ್ಬಿದರು.

ಕಡಿಮೆ ಮೊತ್ತ ರಕ್ಷಿಸಿಕೊಂಡ ತಂಡಗಳು (ಐಪಿಎಲ್)

111/10 - ಪಂಜಾಬ್ vs ಕೆಕೆಆರ್, ಮುಲ್ಲನ್​ಪುರ, 2025

116/9 - ಸಿಎಸ್​ಕೆ vs ಪಂಜಾಬ್, ಡರ್ಬನ್, 2009

118/10 - ಎಸ್​ಆರ್​ಹೆಚ್ vs ಮುಂಬೈ, ಮುಂಬೈ, 2018

119/8 - ಪಂಜಾಬ್ vs ಮುಂಬೈ, ಡರ್ಬನ್, 2009

119/8 - ಎಸ್​ಆರ್​ಹೆಚ್ vs ಪುಣೆ, ಪುಣೆ, 2013

ಅಯ್ಯರ್​ ಪಡೆ 111ಕ್ಕೆ ಕುಸಿತ

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ಪಂಜಾಬ್​​ಗೆ ಪ್ರಭುಸಿಮ್ರಾನ್ ಸಿಂಗ್‌ (30) ಮತ್ತು ಪ್ರಿಯಾಂಶ್‌ ಆರ್ಯ (22) ಉತ್ತಮ ಅರಂಭ ನೀಡಿದರು. ನಾಯಕ ಶ್ರೇಯಸ್‌ ಶೂನ್ಯ ಸುತ್ತಿದರೆ, ಮೊದಲ ಬಾರಿ ಅವಕಾಶ ಪಡೆದ ಜೋಸ್ ಇಂಗ್ಲೀಸ್‌ 2 ರನ್​ಗೆ ಔಟಾದರು. ನೆಹಾಲ್‌ ವಧೇರಾ 10, ಮ್ಯಾಕ್ಸವೆಲ್‌ 7, ಸೂರ್ಯಾಂಶ್‌ ಶೆಡ್ಗೆ 4 ರನ್‌, ಶಶಾಂಕ್‌ 18 ರನ್‌ ಗಳಿಸಿದರು. ಕೊನೆಯಲ್ಲಿ ಕ್ಸೇವಿಯರ್ ಬಾರ್ಟ್​ಲೆಟ್ 11 ರನ್​ಗಳ ಕಾಣಿಕೆ ನೀಡಿದರು. ಕೆಕೆಆರ್‌ ಪರ ಹರ್ಷಿತ್‌ ರಾಣಾ ಮೂರು ವಿಕೆಟ್‌, ವರುಣ್‌, ನರೈನ್ ತಲಾ ಎರಡು, ವೈಭವ್‌ ಮತ್ತು ಆ್ಯನ್ರಿಚ್ ನೋಕಿಯಾ ತಲಾ ಒಂದು ವಿಕೆಟ್‌ ಪಡೆದರು.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner