ಹಿಂದಿ ನಮ್ಮ ರಾಷ್ಟ್ರೀಯ ಭಾಷೆ ಅಲ್ಲ, ಅದೊಂದು ಅಧಿಕೃತ ಭಾಷೆ ಅಷ್ಟೇ; ಚರ್ಚೆಗೆ ಗ್ರಾಸವಾದ ಆರ್ ಅಶ್ವಿನ್ ಹೇಳಿಕೆ -Video
ಹಿಂದಿ ಹೇರಿಕೆ ಕುರಿತ ಚರ್ಚೆ ನಡೆಯುತ್ತಿರುವ ಮಧ್ಯೆ, ಭಾರತ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ ಆರ್ ಅಶ್ವಿನ್ ನೀಡಿರುವ ಹೇಳಿಕೆ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. ಹಿಂದಿ ನಮ್ಮ ರಾಷ್ಟ್ರೀಯ ಭಾಷೆ ಅಲ್ಲ ಎಂದಿರುವ ತಮಿಳುನಾಡು ಕ್ರಿಕೆಟಿಗ, ಅದೊಂದು ಅಧಿಕೃತ ಭಾಷೆ ಅಷ್ಟೇ ಎಂದು ಹೇಳಿದ್ದಾರೆ.
'ಹಿಂದಿ ಹೇರಿಕೆ' ಎಂಬುದು ಕಳೆದ ಕೆಲವು ವರ್ಷಗಳಿಂದ ಹೆಚ್ಚು ಚರ್ಚೆಯಲ್ಲಿರುವ ವಿಷಯ. ಅದರಲ್ಲಿ ಕರ್ನಾಟಕ, ತಮಿಳುನಾಡು ಹಾಗೂ ಕೇರಳದಲ್ಲಿ ಇದು ತುಸು ಹೆಚ್ಚು. ಭಾಷೆ ವಿಷಯಕ್ಕೆ ಬಂದಾಗ ಸಾಕಷ್ಟು ಜನರು ಹಿಂದಿಯನ್ನು ಭಾರತದ ರಾಷ್ಟ್ರೀಯ ಭಾಷೆ ಎಂದೇ ಹೇಳುವುದಿದೆ. ಆದರೆ, ಹಿಂದಿ ನಮ್ಮ ರಾಷ್ಟ್ರೀಯ ಭಾಷೆ ಅಲ್ಲ ಎನ್ನುವುದು ಇನ್ನೂ ಒಂದಷ್ಟು ಜನರ ವಾದ. ಇದು ಸತ್ಯ ಕೂಡ. ಈ ಮಾತನ್ನು ಈಗ ಮಾಜಿ ಕ್ರಿಕೆಟಿಗ ಆರ್ ಅಶ್ವಿನ್ ಕೂಡಾ ಪುನರುಚ್ಛರಿಸಿದ್ದಾರೆ. ಭಾರತೀಯ ಕ್ರಿಕೆಟ್ಗೆ ಇತ್ತೀಚೆಗೆ ನಿವೃತ್ತಿ ಘೋಷಿಸಿದ ರವಿಚಂದ್ರನ್ ಅಶ್ವಿನ್, ಹಿಂದಿ "ನಮ್ಮ ರಾಷ್ಟ್ರೀಯ ಭಾಷೆಯಲ್ಲ. ಆದರೆ, ಅದು ಅಧಿಕೃತ ಭಾಷೆ" ಎಂದು ಹೇಳಿದ್ದಾರೆ. ಅಶ್ವಿನ್ ಹೇಳಿಕೆಯ ಈ ವಿಡಿಯೋ ವೈರಲ್ ಆಗಿದೆ. ಅಲ್ಲದೆ ವ್ಯಾಪಕವಾಗಿ ಚರ್ಚೆಗೆ ಗ್ರಾಸವಾಗಿದೆ.
ತಮಿಳುನಾಡಿನ ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ಪದವಿ ಪ್ರದಾನ ಸಮಾರಂಭದಲ್ಲಿ ಆರ್ ಅಶ್ವಿನ್ ಭಾಗಿಯಾಗಿದ್ದರು. ಈ ಸಮಯದಲ್ಲಿ ವೇದಿಕೆಯಲ್ಲಿ ಭಾಷಣ ಮಾಡುವಾಗ ಈ ಹೇಳಿಕೆ ನೀಡಿದ್ದಾರೆ. ಕರ್ನಾಟಕದಂತೆಯೇ ತಮಿಳುನಾಡಿನಲ್ಲಿಯೂ ಹಿಂದಿ ಭಾಷೆ ಬಳಕೆ ತುಂಬಾ ಸೂಕ್ಷ್ಮ ವಿಷಯವಾಗಿದೆ. ತಮಿಳು ಜನರಲ್ಲಿ ಬಹುತೇಕರು ಹಿಂದಿ ಭಾಷೆ ಬಳಸುವುದು ಕಡಿಮೆ. ಹೀಗಾಗಿ ಹಿಂದೆ ಹೇರಿಕೆ ವಿಷಯವಾಗಿ ಅಲ್ಲಿಯೂ ಚರ್ಚೆ, ವಿರೋಧಗಳಿವೆ. ಹೀಗಾಗಿ ಅಶ್ವಿನ್ ಹೇಳಿಕೆಯು ದೇಶಾದ್ಯಂತ ಚರ್ಚೆಯ ವಸ್ತುವಾಗಿದೆ. ಹೀಗಾಗಿ ಈ ಬಗ್ಗೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅಶ್ವಿನ್, ಸಭಾಂಗಣದಲ್ಲಿದ್ದ ವಿದ್ಯಾರ್ಥಿಗಳು ಯಾವ ಭಾಷೆಯಲ್ಲಿ ಮಾತು ಕೇಳಲು ಇಚ್ಛಿಸುತ್ತಿರುವುದಾಗಿ ಕೇಳುತ್ತಾರೆ. “ಸಭಾಂಗಣದಲ್ಲಿ ಇಂಗ್ಲಿಷ್ ವಿದ್ಯಾರ್ಥಿಗಳಿದ್ದರೆ ಜೋರಾಗಿ ಕೂಗಿ” ಎಂದು ಹೇಳುತ್ತಾರೆ. ಇದಕ್ಕೆ ಉತ್ತರವಾಗಿ ಹರ್ಷೋದ್ಘಾರಗಳು ಬರುತ್ತವೆ. ಆ ನಂತರ "ತಮಿಳು" ಎಂದಾಗ ಹೆಚ್ಚಿನ ವಿದ್ಯಾರ್ಥಿಗಳು ಜೋರಾಗಿ ಬೊಬ್ಬೆ ಹಾಕುತ್ತಾರೆ. ಅಂದರೆ ಸಂಭಾಂಗಣದಲ್ಲಿ ತಮಿಳು ವಿದ್ಯಾರ್ಥಿಗಳು ಹೆಚ್ಚಿದ್ದರು ಎಂಬುದು ಅರ್ಥವಾಗುತ್ತದೆ.
ತಮಿಳು ಎಂದಾಗ ಜೋರು ಧ್ವನಿ, ಹಿಂದಿ ಎಂದಾಗ ಮೌನ
ಕೊನೆಯಾದಾಗಿ "ಹಿಂದಿ?" ಎಂದು ಅಶ್ಚಿನ್ ಕೇಳುತ್ತಾರೆ. ಆಗ ಸಭಾಂಗಣದಲ್ಲಿ ಮೌನ ಆವರಿಸುತ್ತದೆ. ಈ ವೇಳೆ ಧ್ವನಿಯೇ ಬರಲಿಲ್ಲ ಎಂದ ಅಶ್ವಿನ್, “ನಾನು ಇದನ್ನು ಹೇಳಬೇಕೆಂದು ಭಾವಿಸಿದೆ. ಹಿಂದಿ ನಮ್ಮ ರಾಷ್ಟ್ರೀಯ ಭಾಷೆ ಅಲ್ಲ, ಅದೊಂದು ಅಧಿಕೃತ ಭಾಷೆ ಅಷ್ಟೇ” ಎಂದು ಹೇಳಿದ್ದಾರೆ. ಆಗಲೂ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಧ್ವನಿ ಕೇಳಿಸುತ್ತದೆ. ಈ ಎಲ್ಲಾ ಮಾತುಗಳು ಬಂದಿದ್ದು ತಮಿಳು ಭಾಷೆಯಲ್ಲಿ.
ಇಲ್ಲಿದೆ ವೈರಲ್ ವಿಡಿಯೋ
ಕರ್ನಾಟಕದಂತೆ ತಮಿಳುನಾಡಿನಲ್ಲಿಯೂ ಹಿಂದಿ ಹೇರಿಕೆ ಕುರಿತು ವಿರೋಧವಿದೆ. ಕೇಂದ್ರ ಸರ್ಕಾರವು ರಾಜ್ಯಗಳ ಮೇಲೆ ಹಿಂದಿ ಹೇರಿಕೆ ಮಾಡುತ್ತಿದೆ ಎಂದು ಆಡಳಿತಾರೂಢ ಡಿಎಂಕೆ ಸೇರಿದಂತೆ ಹಲವು ಪ್ರತಿಪಕ್ಷಗಳು ಆರೋಪಿಸುತ್ತಿವೆ. ವಿಶೇಷವಾಗಿ ದಕ್ಷಿಣ ಭಾರತದ ಮೇಲೆ ಹಿಂದಿ ಹೇರಲು ಪ್ರಯತ್ನಿಸುತ್ತಿದೆ ಎಂಬ ಆರೋಪ ಮುನ್ನೆಲೆಗೆ ಬಂದಿರುವ ಸಮಯದಲ್ಲಿ ಅಶ್ವಿನ್ ಹೇಳಿಕೆಯು ಹೊಸ ಚರ್ಚೆಗೆ ಕಾರಣವಾಗಿದೆ.
ಇತ್ತೀಚೆಗಷ್ಟೇ ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಮಧ್ಯದಲ್ಲೇ, ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ದಿಢೀರ್ ನಿವೃತ್ತಿ ಘೋಷಿಸಿದರು. ಟೆಸ್ಟ್ ಕ್ರಿಕೆಟ್ನ ಅತ್ಯುತ್ತಮ ಆಲ್ರೌಂಡರ್ ಎನಿಸಿಕೊಂಡಿರುವ ಅಶ್ವಿನ್, ಈ ಬಾರಿಯ ಐಪಿಎಲ್ನಲ್ಲಿ ಸಿಎಸ್ಕೆ ಪರ ಆಡಲಿದ್ದಾರೆ.
ವಿಭಾಗ