ಗುಜರಾತ್​ಗೆ ಗುನ್ನಾ ಇಟ್ಟ ವೈಭವ್ ಬ್ಯಾಟಿಂಗ್​ ‘ವೈಭವ’; ಮಾಡು ಇಲ್ಲವೇ ಮಡಿ ಕದನದಲ್ಲಿ ಜಿಟಿ ವಿರುದ್ಧ ಗೆದ್ದ ರಾಜಸ್ಥಾನ್
ಕನ್ನಡ ಸುದ್ದಿ  /  ಕ್ರಿಕೆಟ್  /  ಗುಜರಾತ್​ಗೆ ಗುನ್ನಾ ಇಟ್ಟ ವೈಭವ್ ಬ್ಯಾಟಿಂಗ್​ ‘ವೈಭವ’; ಮಾಡು ಇಲ್ಲವೇ ಮಡಿ ಕದನದಲ್ಲಿ ಜಿಟಿ ವಿರುದ್ಧ ಗೆದ್ದ ರಾಜಸ್ಥಾನ್

ಗುಜರಾತ್​ಗೆ ಗುನ್ನಾ ಇಟ್ಟ ವೈಭವ್ ಬ್ಯಾಟಿಂಗ್​ ‘ವೈಭವ’; ಮಾಡು ಇಲ್ಲವೇ ಮಡಿ ಕದನದಲ್ಲಿ ಜಿಟಿ ವಿರುದ್ಧ ಗೆದ್ದ ರಾಜಸ್ಥಾನ್

ಇಂಡಿಯನ್ ಪ್ರೀಮಿಯರ್ ಲೀಗ್​ 47ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ 8 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದೆ. ಇದು ಆರ್​​ಆರ್​​ಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.

ಗುಜರಾತ್​ಗೆ ಗುನ್ನಾ ಇಟ್ಟ ವೈಭವ್ ಬ್ಯಾಟಿಂಗ್​ ‘ವೈಭವ’; ಮಾಡು ಇಲ್ಲವೇ ಮಡಿ ಕದನದಲ್ಲಿ ಜಿಟಿ ವಿರುದ್ಧ ಗೆದ್ದ ರಾಜಸ್ಥಾನ್
ಗುಜರಾತ್​ಗೆ ಗುನ್ನಾ ಇಟ್ಟ ವೈಭವ್ ಬ್ಯಾಟಿಂಗ್​ ‘ವೈಭವ’; ಮಾಡು ಇಲ್ಲವೇ ಮಡಿ ಕದನದಲ್ಲಿ ಜಿಟಿ ವಿರುದ್ಧ ಗೆದ್ದ ರಾಜಸ್ಥಾನ್ (AFP)

14 ವರ್ಷದ ವೈಭವ್ ಸೂರ್ಯವಂಶಿ ದಾಖಲೆಯ ಶತಕದ ನೆರವಿನಿಂದ ಗುಜರಾತ್ ಟೈಟಾನ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ 8 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿದೆ. ಸತತ ಮೂರು ಪಂದ್ಯಗಳಲ್ಲಿ ಗೆಲ್ಲುವ ಅವಕಾಶ ಇದ್ದರೂ ಕೈಚೆಲ್ಲಿದ ರಾಜಸ್ಥಾನ್ ಕೊನೆಗೂ ಗೆಲುವಿನ ದಡ ಸೇರಿದೆ. ಪ್ರಸ್ತುತ 10 ಮ್ಯಾಚ್​ಗಳಲ್ಲಿ 3 ಗೆಲುವು 6 ಅಂಕ ಪಡೆದು 8ನೇ ಸ್ಥಾನ ಪಡೆದಿದೆ. ಆದರೆ ಉಳಿದ ನಾಲ್ಕರಲ್ಲಿ ಒಂದು ಸೋತರೂ ಪ್ಲೇಆಫ್ ಕನಸು ಭಗ್ನಗೊಳ್ಳಲಿದೆ. ಮತ್ತೊಂದೆಡೆ ಸತತ ಗೆಲುವುಗಳಿಂದ ಬೀಗುತ್ತಿದ್ದ ಗುಜರಾತ್​ಗೆ ಈಗ ಸಣ್ಣ ಸೋಲಿನ ಬ್ರೇಕ್ ಸಿಕ್ಕಿದೆ. ಇದು ಶುಭ್ಮನ್ ಪಡೆಯ 3ನೇ ಸೋಲು. ಅಂಕಪಟ್ಟಿಯಲ್ಲಿ 12 ಅಂಕ ಪಡೆದು 3ನೇ ಸ್ಥಾನದಲ್ಲಿದೆ.

ಜೈಪುರದ ಸವಾಯ್ ಮಾನ್​ಸಿಂಗ್​ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಜಿಟಿ ತಂಡ 210 ರನ್ ಗಳ ಗುರಿ ನೀಡಿತು. ಶುಭ್ಮನ್ ಗಿಲ್ (84) ಮತ್ತು ಜೋಸ್ ಬಟ್ಲರ್​ (50) ಭರ್ಜರಿ ಅರ್ಧಶತಕ ಬಾರಿಸಿದರು. ರಾಜಸ್ಥಾನ ತಂಡವು 15.5 ಓವರ್​​ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಸುಲಭವಾಗಿ ಗುರಿ ಮುಟ್ಟಿತು. 14 ವರ್ಷದ ವೈಭವ್ ಸೂರ್ಯವಂಶಿಯ ಬಿರುಗಾಳಿಗೆ ಜಿಟಿ ಹಾರಿಹೋಯಿತು. ಸೂರ್ಯವಂಶಿ 38 ಎಸೆತಗಳಲ್ಲಿ 101 ರನ್ ಗಳಿಸಿ ಐತಿಹಾಸಿಕ ಇನ್ನಿಂಗ್ಸ್ ಆಡಿದರು. ಆತನ ಇನ್ನಿಂಗ್ಸ್​​ನಲ್ಲಿ ಏಳು ಬೌಂಡರಿ ಮತ್ತು 11 ಸಿಕ್ಸರ್‌ಗಳೂ ಸೇರಿವೆ. 35 ಎಸೆತಗಳಲ್ಲಿ ಶತಕ ಪೂರೈಸಿದ ವೈಭವ್, ಐಪಿಎಲ್‌ನಲ್ಲಿ ಅತಿ ವೇಗದ ಶತಕ ಬಾರಿಸಿದ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ವೈಭವ್ ಸೂರ್ಯವಂಶಿ ದಾಖಲೆಯ ಶತಕ

ಗುರಿಯನ್ನು ಬೆನ್ನಟ್ಟಿದ ಆರ್‌ಆರ್ ದಾಖಲೆಯ ಆರಂಭ ಪಡೆಯಿತು. ಸೂರ್ಯವಂಶಿ ಮತ್ತು ಯಶಸ್ವಿ ಜೈಸ್ವಾಲ್ ಮೊದಲ ವಿಕೆಟ್‌ಗೆ 166 ರನ್‌ಗಳ ಜೊತೆಯಾಟ ನೀಡಿದರು. ಇದು ರಾಜಸ್ಥಾನ್ ಪರ ಅತಿ ಹೆಚ್ಚು ರನ್​ಗಳ ಆರಂಭಿಕ ಜೊತೆಯಾಟ. ಪವರ್​ಪ್ಲೇನಲ್ಲೇ 87 ರನ್ ಕಲೆ ಹಾಕಿದ ಈ ಜೋಡಿ, ಜಿಟಿ ಬೌಲರ್​​ಗಳ ಸುಸ್ತುಗೊಳಿಸಿದರು. 10ನೇ ಓವರ್​​ನಲ್ಲಿ ಕರಿಮ್ ಜನ್ನತ್ ಬೌಲಿಂಗ್​ನಲ್ಲಿ 3 ಬೌಂಡರಿ, 3 ಸಿಕ್ಸರ್ ಸಹಿತ 30 ರನ್ ಚಚ್ಚಿದ ವೈಭವ್, ನೈಂಟೀಸ್​ಗೆ ಎಂಟ್ರಿಕೊಟ್ಟರು. ಬಳಿಕ 11ನೇ ಓವರ್​ನ 2ನೇ ಎಸೆತದಲ್ಲಿ ರಶೀದ್ ಖಾನ್​ಗೆ ಸಿಕ್ಸರ್​ಗಟ್ಟಿದ ಸೂರ್ಯ ತನ್ನ ಚೊಚ್ಚಲ ಐಪಿಎಲ್​ ಶತಕ ಪೂರ್ಣಗೊಳಿಸಿದರು. ಇದು ಕ್ರಿಸ್​ಗೇಲ್ ನಂತರ ಬಂದ ವೇಗದ ದಾಖಲೆಯ ಶತಕ. ಬಳಿಕ 12ನೇ ಓವರ್‌ನಲ್ಲಿ ಸೂರ್ಯವಂಶಿ ಪ್ರಸಿದ್ಧ್ ಕೃಷ್ಣಗೆ ಬೌಲ್ಡ್ ಆದರು.

ವೈಭವ್ ಬಳಿಕ ಕ್ರೀಸ್​ಗೆ ಬಂದ ನಿತೀಶ್ ರಾಣಾ ಕೂಡ ಬೇಗನೇ ಔಟಾದರು. ಮತ್ತೊಂದೆಡೆ ವೈಭವ್​​ಗೆ ಸ್ಟ್ರೈಕ್​​ರೊಟೇಟ್ ಮಾಡುತ್ತಾ ಮಿಂಚುತ್ತಿದ್ದ ಯಶಸ್ವಿ ಜೈಸ್ವಾಲ್ ಆಕರ್ಷಕ ಅರ್ಧಶತಕವನ್ನೂ ಸಿಡಿಸಿದರು. ಕೊನೆಯ ತನಕ ಕ್ರೀಸ್​​ನಲ್ಲೇ ಉಳಿದರು. ಹಂಗಾಮಿ ನಾಯಕ ರಿಯಾನ್ ಪರಾಗ್ ಅವರೊಂದಿಗೆ ರಾಜಸ್ಥಾನವನ್ನು ಗೆಲುವಿನತ್ತ ಕೊಂಡೊಯ್ದರು. ಇಬ್ಬರೂ ಮೂರನೇ ವಿಕೆಟ್‌ಗೆ ಮುರಿಯದ 41 ರನ್‌ಗಳ ಪಾಲುದಾರಿಕೆ ಗಳಿಸಿದರು. ಯಶಸ್ವಿ 40 ಎಸೆತಗಳಲ್ಲಿ ಅಜೇಯ 70 ರನ್ ಗಳಿಸಿದರು. ಅವರು 9 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಬಾರಿಸಿದರು. 15 ಎಸೆತಗಳಲ್ಲಿ 32 ರನ್ ಗಳಿಸಿದ ಪರಾಗ್ ಅಜೇಯರಾಗಿ ಉಳಿದರು. ಅವರು ಎರಡು ಬೌಂಡರಿ ಮತ್ತು ಅಷ್ಟೇ ಸಿಕ್ಸರ್‌ ಬಾರಿಸಿದರು.

ಗಿಲ್, ಜೋಸ್ ಉತ್ತಮ ಆಟ

ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡ ನಿಗದಿತ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿತು. ಜಿಟಿ ಪರ ನಾಯಕ ಶುಭ್ಮನ್ ಗಿಲ್ ಅತಿ ಹೆಚ್ಚು ರನ್ ಗಳಿಸಿದರು. 50 ಎಸೆತಗಳಲ್ಲಿ ಐದು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳ ಸಹಾಯದಿಂದ 84 ರನ್ ಗಳಿಸಿದರು. ಟಾಸ್ ಸೋತು ಬ್ಯಾಟಿಂಗ್ ಗೆ ಬಂದ ಜಿಟಿಗೆ ಗಿಲ್ ಉತ್ತಮ ಆರಂಭ ನೀಡಿದರು. ಅವರು ಸಾಯಿ ಸುದರ್ಶನ್ (39) ಅವರೊಂದಿಗೆ ಮೊದಲ ವಿಕೆಟ್‌ಗೆ 93 ರನ್‌ಗಳ ಜೊತೆಯಾಟವಾಡಿದರು. 11ನೇ ಓವರ್‌ನಲ್ಲಿ ಸುದರ್ಶನ್ ಔಟಾಗುವ ಮೂಲಕ ಅರ್ಧಶತಕ ಕಳೆದುಕೊಂಡರೂ ಆರೆಂಜ್ ಕ್ಯಾಪ್ ಅನ್ನು ಮರಳಿ ಪಡೆದರು.

ಇದಾದ ನಂತರ, ಜೋಸ್ ಬಟ್ಲರ್ ಜೊತೆಗೆ ಗಿಲ್ ಜವಾಬ್ದಾರಿ ವಹಿಸಿಕೊಂಡರು. ಇಬ್ಬರೂ ಎರಡನೇ ವಿಕೆಟ್‌ಗೆ 74 ರನ್‌ಗಳ ಜೊತೆಯಾಟ ನೀಡಿದರು. ಗಿಲ್ ಅವರ ಇನ್ನಿಂಗ್ಸ್ 17ನೇ ಓವರ್‌ನಲ್ಲಿ ಕೊನೆಗೊಂಡಿತು. ವಾಷಿಂಗ್ಟನ್ ಸುಂದರ್ (13) ಮತ್ತು ರಾಹುಲ್ ತೆವಾಟಿಯಾ (9) ಹೆಚ್ಚಿನ ಪರಿಣಾಮ ಬೀರುವಲ್ಲಿ ವಿಫಲರಾದರು. ಬಟ್ಲರ್ 20ನೇ ಓವರ್‌ನಲ್ಲಿ ಅರ್ಧಶತಕ ಪೂರೈಸಿದರು. ಅವರು 26 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳಿಂದ 50 ರನ್ ಗಳಿಸಿ ಅಜೇಯರಾಗುಳಿದರು. ಶಾರುಖ್ ಖಾನ್ 5 ರನ್ ಗಳಿಸಿ ಅಜೇಯರಾಗುಳಿದರು.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.