ಸ್ಮೃತಿ ಮಂಧಾನ ಅಬ್ಬರದಾಟ, ಬೌಲರ್​ಗಳು ಮೆರೆದಾಟ; ಡೆಲ್ಲಿ ಕ್ಯಾಪಿಟಲ್ಸ್ ಸೋಲಿಸಿ ಸತತ 2ನೇ ಗೆಲುವು ಸಾಧಿಸಿದ ಆರ್​ಸಿಬಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಸ್ಮೃತಿ ಮಂಧಾನ ಅಬ್ಬರದಾಟ, ಬೌಲರ್​ಗಳು ಮೆರೆದಾಟ; ಡೆಲ್ಲಿ ಕ್ಯಾಪಿಟಲ್ಸ್ ಸೋಲಿಸಿ ಸತತ 2ನೇ ಗೆಲುವು ಸಾಧಿಸಿದ ಆರ್​ಸಿಬಿ

ಸ್ಮೃತಿ ಮಂಧಾನ ಅಬ್ಬರದಾಟ, ಬೌಲರ್​ಗಳು ಮೆರೆದಾಟ; ಡೆಲ್ಲಿ ಕ್ಯಾಪಿಟಲ್ಸ್ ಸೋಲಿಸಿ ಸತತ 2ನೇ ಗೆಲುವು ಸಾಧಿಸಿದ ಆರ್​ಸಿಬಿ

Delhi Capitals vs Royal Challengers Bengaluru: ಮಹಿಳಾ ಪ್ರೀಮಿಯರ್ ಲೀಗ್​ನ ನಾಲ್ಕನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 8 ವಿಕೆಟ್​ಗಳಿಂದ ಗೆದ್ದು ಬೀಗಿದೆ.

ಸ್ಮೃತಿ ಮಂಧಾನ ಅಬ್ಬರದಾಟ, ಬೌಲರ್​ಗಳು ಮೆರೆದಾಟ; ಡೆಲ್ಲಿ ಕ್ಯಾಪಿಟಲ್ಸ್ ಸೋಲಿಸಿ ಸತತ 2ನೇ ಗೆಲುವು ಸಾಧಿಸಿದ ಆರ್​ಸಿಬಿ
ಸ್ಮೃತಿ ಮಂಧಾನ ಅಬ್ಬರದಾಟ, ಬೌಲರ್​ಗಳು ಮೆರೆದಾಟ; ಡೆಲ್ಲಿ ಕ್ಯಾಪಿಟಲ್ಸ್ ಸೋಲಿಸಿ ಸತತ 2ನೇ ಗೆಲುವು ಸಾಧಿಸಿದ ಆರ್​ಸಿಬಿ

ನಾಯಕಿ ಸ್ಮತಿ ಮಂಧಾನ ಅವರ ಸ್ಫೋಟಕ ಅರ್ಧಶತಕ (81) ಮತ್ತು ಬೌಲರ್​​ಗಳ ವಿಕೆಟ್ ಬೇಟೆಯ ಸಹಾಯದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ಪ್ರೀಮಿಯರ್ ಲೀಗ್​ನಲ್ಲಿ ಸತತ 2ನೇ ಜಯ ಕಂಡಿದೆ. ಗೆದ್ದವರ ಕಾದಾಟದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ 2ನೇ ಪಂದ್ಯದಲ್ಲಿ ಸೋಲಿಗೆ ಶರಣಾಯಿತು. ಕಳೆದ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ದಾಖಲೆಯ ಚೇಸ್ ಮಾಡಿದ್ದ ಆರ್​ಸಿಬಿ, ತನ್ನ ಎರಡನೇ ಪಂದ್ಯದಲ್ಲಿ ಮತ್ತೊಂದು ದಾಖಲೆಯ ಜೊತೆಗೆ ಸುಲಭವಾಗಿ ಗೆದ್ದು ಬೀಗಿದೆ. ಆದರೆ ಮುಂಬೈ ಇಂಡಿಯನ್ಸ್ ಎದುರು ಕೊನೆಯ ಎಸೆತದಲ್ಲಿ ಜಯಿಸಿದ್ದ ಡೆಲ್ಲಿ 8 ವಿಕೆಟ್​ಗಳಿಂದ ಸೋಲನುಭವಿಸಿತು.

ವಡೋದರಾದ ಕೋಟಂಬಿ ಕ್ರಿಕೆಟ್ ಮೈದಾನದಲ್ಲಿ ನಡೆದ ಟೂರ್ನಿಯ ನಾಲ್ಕನೇ ಪಂದ್ಯದಲ್ಲಿ ಆರ್​ಸಿಬಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ತಂಡಕ್ಕೆ ಆರ್​ಸಿಬಿ ಬೌಲರ್​​ಗಳು ಆಘಾತ ನೀಡಿದರು. ಅಲ್ಪಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಜೆಮಿಮಾ ರೋಡ್ರಿಗಸ್​ ಅವರ 34 ರನ್​ಗಳ ಕಾಣಿಕೆಯ ಸಹಾಯದಿಂದ 19.3 ಓವರ್​ಗಳಲ್ಲಿ 141ಕ್ಕೆ ಆಲೌಟ್ ಆಯಿತು. ಈ ಸಾಧಾರಣ ಗುರಿ ಬೆನ್ನಟ್ಟಿದ ರೆಡ್​ ಆರ್ಮಿ 16.2 ಓವರ್​​ಗಳಲ್ಲಿ ಗೆಲುವಿನ ಗೆರೆ ದಾಟಿತು. ಸ್ಮೃತಿ ಮಂಧಾನ ಕಳೆದ ಪಂದ್ಯದಲ್ಲಿ ನಿರಾಸೆ ಮೂಡಿಸಿದ್ದ ಡೇನಿಯಲ್ ವ್ಯಾಟ್ (42) ಅಬ್ಬರಿಸಿ ಡೆಲ್ಲಿ ಬೌಲಿಂಗ್ ಕೋಟೆಯನ್ನು ಧ್ವಂಸಗೊಳಿಸಿದರು.

142 ರನ್ ಗುರಿ ಬೆನ್ನಟ್ಟಿದ ಆರ್​ಸಿಬಿ, ಡೆಲ್ಲಿ ಬೌಲರ್​ಗಳ ಸವಾರಿ ಮಾಡಿತು. ಸ್ಮೃತಿ ಮಂಧಾನ ಮತ್ತು ಡೇನಿಯಲ್ ವ್ಯಾಟ್ ಮೊದಲ ವಿಕೆಟ್​​ಗೆ 107 ರನ್​ಗಳ ಪಾಲುದಾರಿಕೆ ಒದಗಿಸಿದರು. ಇದು ಆರ್​ಸಿಬಿಯ ಎರಡನೇ ಅತಿ ದೊಡ್ಡ ಜೊತೆಯಾಟವಾಗಿದೆ.  ಉದ್ಘಾಟನಾ ಪಂದ್ಯದಲ್ಲಿ ನಿರಾಸೆ ಮೂಡಿಸಿದ್ದ ಈ ಇವರಿಬ್ಬರು, ಡೆಲ್ಲಿ ಬೌಲರ್​​ಗಳ ಬೆವರಳಿಸಿ ಸೋಲನ್ನು ಖಚಿತಪಡಿಸಿದರು. ಇನ್ನಿಂಗ್ಸ್​ ಆರಂಭಿಸಿದ ಮೊದಲ ಓವರ್​​ನಿಂದಲೇ ಅಷ್ಟ ದಿಕ್ಕಿಗೂ ಚೆಂಡಿನ ದರ್ಶನ ಮಾಡಿದ ಈ ಜೋಡಿ, ಬೌಲರ್​ಗಳನ್ನು ಸುಸ್ತುಗೊಳಿಸಿ ಡೆಲ್ಲಿ ಹೆಣೆದಿದ್ದ ಕಾರ್ಯತಂತ್ರಗಳನ್ನು ಹಾನಿ ಮಾಡಿದರು. ಇದೇ ವೇಳೆ ಸ್ಮೃತಿ ಅರ್ಧಶತಕ ಸಿಡಿಸಿ ಟೂರ್ನಿಯಲ್ಲಿ 500+ ರನ್​ಗಳ ಸಾಧನೆ ಮಾಡಿದರು. 

47 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸರ್ ಸಹಿತ 81 ರನ್ ಚಚ್ಚಿದರು. ಇದು ಆರ್​ಸಿಬಿ ಸಿಡಿಸಿದ ಎರಡನೇ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. ಆದರೆ ಗೆಲುವಿನ ಸನಿಹದಲ್ಲಿದ್ದ ವೇಳೆ ವ್ಯಾಟ್ ಮತ್ತು ಮಂಧಾನ ಔಟಾದರು. ಇಂಗ್ಲೆಂಡ್ ಆಟಗಾರ್ತಿ 33 ಎಸೆತಗಳಲ್ಲಿ 7 ಬೌಂಡರಿ ಸಹಿತ 43 ರನ್ ಸಿಡಿಸುವ ಮೂಲಕ ಮಿಂಚಿ ಅರುಂಧತಿ ರೆಡ್ಡಿ ಬೌಲಿಂಗ್​​ನಲ್ಲಿ ಔಟಾದರು. ಇನ್ನು ಗೆಲ್ಲಲು 9 ರನ್ ಬೇಕಿದ್ದಾಗ 47 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸರ್ ಸಹಿತ 81 ರನ್ ಸಿಡಿಸಿದ್ದ ಮಂಧಾನ ಅವರು ಶಿಖಾ ಪಾಂಡೆ ಬೌಲಿಂಗ್​ನಲ್ಲಿ ಔಟಾದರು. ಕೊನೆಯಲ್ಲಿ ಎಲಿಸ್ ಪೆರಿ ಮತ್ತು ರಿಚಾ ಘೋಷ್ ಅವರು ಕ್ರಮವಾಗಿ 7 ಮತ್ತು 11 ರನ್​ಗಳಿಸಿ ಇನ್ನೂ 22 ಎಸೆತಗಳನ್ನು ಬಾಕಿ ಉಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ರೇಣುಕಾ, ಜಾರ್ಜಿಯಾ ಅಬ್ಬರ, ಡೆಲ್ಲಿ ತತ್ತರ

ಉದ್ಘಾಟನಾ ಪಂದ್ಯದಲ್ಲಿ 201 ರನ್ ಚೇಸ್ ಮಾಡಿದ್ದ ಕಾರಣ ಡೆಲ್ಲಿ ಬೃಹತ್ ಮೊತ್ತ ಕಲೆ ಹಾಕುವ ಲೆಕ್ಕಾಚಾರದಲ್ಲಿತ್ತು. ಡೆಲ್ಲಿ ಗೇಮ್​ ಪ್ಲಾನ್​ಗೆ ಆರ್​ಸಿಬಿ ಬೌಲರ್ಸ್​ ಕಡಿವಾಣ ಹಾಕುವಲ್ಲಿ ಯಶಸ್ವಿಯಾದರು. ಡೇಂಜರಸ್ ಬ್ಯಾಟರ್ ಶಫಾಲಿ ವರ್ಮಾರನ್ನು ರೇಣುಕಾ ಸಿಂಗ್ ಮೊದಲ ಓವರ್​ನಲ್ಲೇ ಗೋಲ್ಡನ್​ ಡಕ್​ಗೆ ಹೊರದಬ್ಬಿದರು. ಆ ಬಳಿಕ ಮೆಗ್ ಲ್ಯಾನಿಂಗ್ ಮತ್ತು ಜೆಮಿಮಾ ರೋಡ್ರಿಗಸ್ ಅವರು ಆರಂಭಿಕ ಆಘಾತದಿಂದ ಚೇತರಿಕೆ ನೀಡುವ ಮೂಲಕ 2ನೇ ವಿಕೆಟ್​ಗೆ 59 ರನ್​ಗಳ ಜೊತೆಯಾಟ ಕೂಡ ಆಡಿದರು. 17 ರನ್ ಬಾರಿಸಿದ್ದ ಲ್ಯಾನಿಂಗ್​ಗೆ ಕಿಮ್​ ಗಾರ್ತ್​ ಗೇಟ್ ಪಾಸ್ ನೀಡಿದರೆ, 34 ರನ್ ಸಿಡಿಸಿ ಸೆಟಲ್ ಆಗಿದ್ದ ಜೆಮಿಮಾರನ್ನು ಜಾರ್ಜಿಯಾ ವೆರ್​ಹ್ಯಾಮ್ ಹೊರದಬ್ಬಿದರು.

ಆ ಬಳಿಕ ಡೆಲ್ಲಿ ಬ್ಯಾಟರ್ಸ್​ ಕ್ರೀಸ್​ ಕಚ್ಚಿ ನಿಲ್ಲುವ ಪ್ರಯತ್ನ ನಡೆಸಲಿಲ್ಲ. ಅದಕ್ಕೆ ಆರ್​ಸಿಬಿ ಬೌಲರ್​ಗಳು ಅವಕಾಶವೂ ನೀಡಲಿಲ್ಲ. ಅನ್ನಾಬೆಲ್ ಸದರ್ಲ್ಯಾಂಡ್ 19, ಮರಿಜಾನ್ನೆ ಕಪ್ 12, ಜೆಸ್ ಜೊನಾಸೆನ್ 1, ಸಾರಾ ಬ್ರೈಸ್ 23, ಶಿಖಾ ಪಾಂಡೆ 14 ರನ್​ಗಳ ಕಾಣಿಕೆ ನೀಡಿದರು. ಆದರೆ ರೇಣುಕಾ ಸಿಂಗ್ ಮತ್ತು ಜಾರ್ಜಿಯಾ ಮಿಂಚಿನ ದಾಳಿ ನಡೆಸಿ ಮಧ್ಯಮ ಕ್ರಮಾಂಕ ಕುಸಿತದ ಜೊತೆಗೆ ಅಲ್ಪಮೊತ್ತಕ್ಕೆ ತಂಡವನ್ನು ಆಲೌಟ್ ಮಾಡುವಲ್ಲಿ ಯಶಸ್ವಿಯಾದರು. ರೇಣುಕಾ, ಜಾರ್ಜಿಯಾ ತಲಾ 3 ವಿಕೆಟ್ ಪಡೆದರೆ, ಕಿಮ್​ ಗಾರ್ತ್​, ಏಕ್ತಾ ಬಿಶ್ತ್ ತಲಾ 2 ವಿಕೆಟ್ ಕಬಳಿಸಿ ಮಿಂಚಿದರು.

Prasanna Kumar P N

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner