ಜೋಶ್ ಹೇಜಲ್ವುಡ್ ಅಲ್ಲ, ನಿಜವಾದ ಮ್ಯಾಚ್ ವಿನ್ನರ್ ಈತ; ಆ ಒಂದು ನಿರ್ಧಾರವೇ ಆರ್ಸಿಬಿ ಗೆಲ್ಲಲು ಪ್ರಮುಖ ಕಾರಣ!
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ 4 ವಿಕೆಟ್ ಉರುಳಿಸಿದ ಜೋಶ್ ಹೇಜಲ್ವುಡ್ ಅಲ್ಲ, ನಿಜವಾದ ಮ್ಯಾಚ್ ವಿನ್ನರ್ ಜಿತೇಶ್ ಶರ್ಮಾ. ಈತನ ಆ ಒಂದು ನಿರ್ಧಾರವೇ ಆರ್ಸಿಬಿ ಗೆಲ್ಲಲು ಪ್ರಮುಖ ಕಾರಣವಾಯಿತು.

ಇಂಡಿಯನ್ ಪ್ರೀಮಿಯರ್ ಲೀಗ್ 42ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 11 ರನ್ಗಳ ಅಂತರದಿಂದ ಜಯಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ. ಆರ್ಸಿಬಿಗೆ ಎರಡು ಪಾಯಿಂಟ್ ಬರಲು ಟರ್ನಿಂಗ್ ಪಾಯಿಂಟ್ ಮಾಡಿದ್ದೇ ವಿಕೆಟ್ ಕೀಪರ್ ಜಿತೇಶ್ ಶರ್ಮಾ. 4 ವಿಕೆಟ್ ಉರುಳಿಸಿ ಪಂದ್ಯದ ಚಿತ್ರಣ ಬದಲಿಸಿ ಗೆಲುವು ತಂದುಕೊಟ್ಟ ಜೋಶ್ ಹೇಜಲ್ವುಡ್ ಪಂದ್ಯಶ್ರೇಷ್ಠ ಪಡೆದರಾದರೂ ನಿಜವಾದ ಗೆಲುವಿನ ರೂವಾರಿ ಜಿತೇಶ್ ಶರ್ಮಾ ಅಂದರೆ ತಪ್ಪಾಗಲ್ಲ!
ಪಂದ್ಯದಲ್ಲಿ ಆ ಒಂದು ನಿರ್ಧಾರದಿಂದ ಸೋಲು-ಗೆಲುವಿನ ಭವಿಷ್ಯವೇ ನಿರ್ಧಾರವಾಯಿತು. ರಾಜಸ್ಥಾನ್ ರಾಯಲ್ಸ್ ಗೆಲ್ಲಲು ಮೂರು ಓವರ್ಗಳಲ್ಲಿ 40 ರನ್ ಬೇಕಿತ್ತು. 18ನೇ ಓವರ್ನಲ್ಲಿ ಭುವನೇಶ್ವರ್ ಕುಮಾರ್ ಬೌಲಿಂಗ್ನಲ್ಲಿ ಬರೋಬ್ಬರಿ 22 ರನ್ ಗಳಿಸಿದ ಆರ್ಆರ್, ಕೊನೆಯ 2 ಓವರ್ಗಳಲ್ಲಿ ಕೇವಲ 18 ರನ್ ಬೇಕಿತ್ತು. ಅಬ್ಬರಿಸುತ್ತಿದ್ದ ಧ್ರುವ್ ಜುರೆಲ್ ಅಸಾಧಾರಣ ಆಟದ ಮೂಲಕ ಪಂದ್ಯವನ್ನು ಗೆಲ್ಲಿಸಲು ಯತ್ನಿಸುತ್ತಿದ್ದರು. ಆಗ 19ನೇ ಓವರ್ನಲ್ಲಿ ಬೌಲಿಂಗ್ ದಾಳಿಗಿಳಿದ ಜೋಶ್ ಹೇಜಲ್ವುಡ್ ಪಂದ್ಯದ ದಿಕ್ಕನೇ ಬದಲಿಸಿದರು. ಈ ಓವರ್ನಲ್ಲಿ ಪ್ರಮುಖ 2 ವಿಕೆಟ್ ಕಿತ್ತರು.
19ನೇ ಓವರ್ನಲ್ಲಿ 2 ವಿಕೆಟ್ ಸಹಿತ ಕೇವಲ 1 ರನ್ ಬಿಟ್ಟುಕೊಟ್ಟ ಜೋಶ್, ಆರ್ಆರ್ ಕನಸನ್ನು ಭಗ್ನಗೊಳಿಸಿದರು. ಆದರೆ ಪಂದ್ಯದ ಚಿತ್ರಣ ಬದಲಾಗಿದ್ದು ಜಿತೇಶ್ ಶರ್ಮಾ ಅವರ ಚಾಣಾಕ್ಷ ವಿಕೆಟ್ ಕೀಪರ್ನಿಂದ! 19ನೇ ಓವರ್ನ 3ನೇ ಎಸೆತದಲ್ಲಿ ಹೇಜಲ್ವುಡ್ ಔಟ್ಸೈಡ್ ಆಫ್ಸ್ಟಂಪ್ನಲ್ಲಿ ಯಾರ್ಕರ್ ಹಾಕಿದರು. ಆ ಚೆಂಡನ್ನು ಧ್ರುವ್ ಜುರೆಲ್ ಥರ್ಡ್ಮ್ಯಾನ್ ಕಡೆಗೆ ಬಾರಿಸಲು ಯತ್ನಿಸಿದರು. ಆದರೆ ಆ ಚೆಂಡು ಬ್ಯಾಟ್ಗೆ ತಪ್ಪಿಸಿ ನೇರವಾಗಿ ವಿಕೆಟ್ ಕೀಪರ್ ಕೈ ಸೇರಿತ್ತು. ಅದು ಔಟೆಂದ್ ಯಾರೂ ನಿರೀಕ್ಷಿಸಿರಲಿಲ್ಲ. ಸ್ವತಃ ಬೌಲರ್ ಜೋಶ್ ಕೂಡ ನಂಬಿರಲಿಲ್ಲ. ಆದರೆ ಇದನ್ನು ಗ್ರಹಿಸಿದ್ದು ಜಿತೇಶ್ ಮಾತ್ರ!
ಔಟ್ ಅನ್ನು ಅಪೀಲು ಸಹ ಮಾಡದೆ ಹೋಗುತ್ತಿದ್ದ ಜೋಶ್ ಮತ್ತು ಅಲ್ಲಿದ್ದ ನಾಯಕ ರಜತ್ ಪಾಟೀದಾರ್ ಅವರಿಗೆ ಜಿತೇಶ್ ಶರ್ಮಾ ಅವರು ಮನವರಿಕೆ ಮಾಡುವಲ್ಲಿ ಯಶಸ್ವಿಯಾದರು. ಅದು ಔಟ್ ಎಂದು ನೂರಕ್ಕೆ ನೂರು ಪ್ರತಿಶತಃ ನಂಬಿದ್ದ ಜಿತೇಶ್, ಡಿಆರ್ಎಸ್ ತೆಗೆದುಕೊಳ್ಳಲು ನಾಯಕನನ್ನು ಒಪ್ಪಿಸಿದರು. ಅದರಂತೆ, ರಜತ್ ಪಾಟೀದಾರ್ ರಿವ್ಯೂ ತೆಗೆದುಕೊಂಡರು. ಮೂರನೇ ಅಂಪೈರ್ ಪರಿಶೀಲನೆಯಲ್ಲಿ ಅಲ್ಟ್ರಾಎಡ್ಜ್ನಲ್ಲಿ ಬಾಟಮ್-ಎಡ್ಜ್ ಆಗಿತ್ತು. ಆಗ ಬ್ಯಾಟ್ ಗಾಳಿಯಲ್ಲಿತ್ತು. ಇದು ಔಟೆಂಟ್ ತೀರ್ಮಾನವಾಗುತ್ತಿದ್ದಂತೆ ಆರ್ಸಿಬಿ ಆಟಗಾರರ ಸಂಭ್ರಮಕ್ಕೆ ಪಾರವೇ ಇರಲಿಲ್ಲ.
ಧ್ರುವ್ ಜುರೆಲ್ ಉತ್ತಮ ಪ್ರದರ್ಶನ
ಸಂಕಷ್ಟದಲ್ಲಿದ್ದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ನೆರವಾಗಿದ್ದೇ ಧ್ರುವ್ ಜುರೆಲ್. ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಜುರೆಲ್, ಆರಂಭದಲ್ಲಿ ನಿಧಾನವಾಗಿ ಬ್ಯಾಟ್ ಬೀಸಿದರು. ನಂತರ ಬ್ಯಾಟಿಂಗ್ ಗೇರ್ ಚೇಂಜ್ ಮಾಡಿದರು. ಆರ್ಸಿಬಿ ಬೌಲರ್ಗಳ ಮೇಲೆ ಸವಾರಿ ಮಾಡಿದರು. ಸಿಕ್ಸರ್, ಬೌಂಡರಿಗಳ ಸುರಿಮಳೆಗೈದರು. ಅವರು 34 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್ ಸಹಿತ 47 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಈತನ ಬಳಿಕ ಯಾರೂ ಗೆಲ್ಲಿಸುವ ಯತ್ನಕ್ಕೆ ಕೈ ಹಾಕಿಲ್ಲ.
ಆರ್ಸಿಬಿಗೆ ತವರಿನಲ್ಲಿ ಮೊದಲ ಗೆಲುವು
ರಾಯಲ್ ಚಾಲೆಂಜರ್ಸ್ ಬೆಂಗಳೂರು ತವರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ಪ್ರಸಕ್ತ ಐಪಿಎಲ್ನಲ್ಲಿ ಮೊದಲ ಗೆಲುವು ಸಾಧಿಸಿತು. ಇದಕ್ಕೂ ಮುನ್ನ ಆಡಿದ ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿದ್ದ ಆರ್ಸಿಬಿ, ತವರಿನ ಅಭಿಮಾನಿಗಳ ಎದುರು ಗೆಲುವಿನ ಖಾತೆ ತೆರೆಯಿತು. ಮೊದಲು ಬ್ಯಾಟಿಂಗ್ ಆರಂಭಿಸಿದ ಬೆಂಗಳೂರು, 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 194 ರನ್ ಗಳಿಸಿತು.