Explainer: ಡಿಆರ್ಎಸ್ ತೆಗೆದುಕೊಳ್ಳಲು ಡೆವಾಲ್ಡ್ ಬ್ರೆವಿಸ್ಗೆ ಅವಕಾಶ ನೀಡದ್ದು ಏಕೆ, ನಿಯಮ ಹೇಳುವುದೇನು?
ಐಪಿಎಲ್ 2025ರಲ್ಲಿ ಆರ್ಸಿಬಿ ಮತ್ತು ಸಿಎಸ್ಕೆ ನಡುವಿನ ಪಂದ್ಯದ ವೇಳೆ ವಿವಾದ ಭುಗಿಲೆದ್ದಿದೆ. ಸಿಎಸ್ಕೆ ಬ್ಯಾಟರ್ ಡೆವಾಲ್ಡ್ ಬ್ರೆವಿಸ್ ಔಟಾದಾಗ ಡಿಆರ್ಎಸ್ (ರಿವ್ಯೂ) ಕೇಳಲು ಅವಕಾಶ ನಿರಾಕರಿಸಲಾಯಿತು. ಈ ಬಗ್ಗೆ ಚರ್ಚೆ ನಡೆಯುತ್ತಿದ್ದು, ಈ ಕುರಿತ ನಿಯಮಗಳನ್ನು ನೋಡೋಣ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇತ್ತೀಚೆಗೆ (ಮೇ 3ರ ಶನಿವಾರ) ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB vs CSK) ತಂಡವು 2 ರನ್ಗಳಿಂದ ರೋಚಕ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಮತ್ತೊಂದು ವಿವಾದ ಎದ್ದಿತು. ಚೇಸಿಂಗ್ ವೇಳೆ ಸಿಎಸ್ಕೆ ತಂಡದ ಬ್ಯಾಟರ್ ಡೆವಾಲ್ಡ್ ಬ್ರೆವಿಸ್ ಅವರನ್ನು ವಿವಾದಾತ್ಮಕ ರೀತಿಯಲ್ಲಿ ಔಟ್ ಮಾಡಲಾಗಿದೆ ಎಂಬ ಚರ್ಚೆ ಸಾಮಾಜಿಕ ಮಾಧ್ಯಮಗಳಲ್ಲಿ ಕೇಳಿಬರುತ್ತಿದೆ. ಔಟ್ ಅಲ್ಲದಿದ್ದರೂ ಔಟ್ ನೀಡಲಾಗಿದೆ ಎಂಬ ವಾದ ಒಂದೆಡೆಯಾದರೆ, ಡಿಆರ್ಎಸ್ಗೆ ಅವಕಾಶ ನೀಡಿಲ್ಲ ಎಂಬುದು ಮತ್ತೊಂದು ಚರ್ಚೆ.
ಪಂದ್ಯದ 17ನೇ ಓವರ್ ಅನ್ನು ವೇಗಿ ಲುಂಗಿ ಎನ್ಗಿಡಿ ಎಸೆಯಲು ಬಂದರು. ಓವರ್ನ ಮೂರನೇ ಎಸೆತದಲ್ಲಿ ಡೆವಾಲ್ಡ್ ಬ್ರೆವಿಸ್ ಲೆಗ್ ಬಿಫೋರ್ ವಿಕೆಟ್ (ಎಲ್ಬಿಡಬ್ಲ್ಯು) ಆದರು. ಅಂಪೈರ್ ಬೆರಳು ಎತ್ತಿ ಔಟ್ ಎಂದು ಸಿಗ್ನಲ್ ಕೊಟ್ಟರು. ಎದುರಿಸಿದ ಮೊದಲನೇ ಎಸೆತದಲ್ಲೇ ಬ್ರೆವಿಸ್ ಔಟಾದರು. ಈ ವೇಳೆ ನಾಟಕೀಯ ಬೆಳವಣಿಗೆ ನಡೆಯಿತು.
ಸಾಮಾನ್ಯವಾಗಿ ಎಲ್ಬಿಡಬ್ಲ್ಯು ಆದಾಗ ಬ್ಯಾಟರ್ಗಳು ಅನುಮಾನವಿದ್ದರೆ ರಿವ್ಯೂ ಕೇಳುತ್ತಾರೆ. ಆ ಸಮಯದಲ್ಲಿ ಡಿಆರ್ಎಸ್ ಕೇಳಲು 15 ಸೆಕೆಂಡ್ ಸಮಯ ಕೊಡಲಾಗುತ್ತದೆ. ಆದರೆ, ಈ ವೇಳೆ ಮೈದಾನದಲ್ಲಿರುವ ದೊಡ್ಡ ಪರದೆಯಲ್ಲಿ ಗಡಿಯಾರ ಚಾಲನೆಯಲ್ಲಿರುವುದನ್ನು ತೋರಿಸಲಿಲ್ಲ. ಆಗಿದ್ದಾಗಲಿ ಎಂದು ಬ್ರೆವಿಸ್ ತಮ್ಮ ನಾನ್ ಸ್ಟ್ರೈಕರ್ ಜೊತೆಗೂಡಿ ಎರಡು ರನ್ ಓಡಲು ಪ್ರಯತ್ನಿಸಿದರು. ಎರಡು ರನ್ ಓಡಿದ ನಂತರ ಅಂಪೈರ್ ಕಡೆಗೆ ನೋಡುತ್ತಾ ಔಟ್ ನಿರ್ಧಾರವನ್ನು ಪರಿಶೀಲಿಸಲು ಮೇಲ್ಮನವಿಗೆ ಪ್ರಯತ್ನಿಸಿದರು. ಆದರೆ, ಅದಾಗಲೇ ಕಾಲ ಮಿಂಚಿ ಹೋಗಿತ್ತು. ಔಟ್ ಘೋಷಿಸಿದ ನಂತರ ಡಿಆರ್ಎಸ್ ಕರೆಗೆ ಇರುವ 15 ಸೆಕೆಂಡುಗಳ ಅವಧಿ ಅದಾಗಲೇ ಮುಗಿದಿತ್ತು. ಹೀಗಾಗಿ ಬ್ರೆವಿಸ್ ಔಟ್ ಆಗಿ ಡಗೌಟ್ ಕಡೆ ಮರಳಬೇಕಾಯ್ತು.
ಡಿಆರ್ಎಸ್ ನಿಯಮ ಏನು ಹೇಳುತ್ತದೆ?
ನಿಯಮದ ಪ್ರಕಾರ, ಅಂಪೈರ್ ನಿರ್ಧಾರವನ್ನು ಪ್ರಶ್ನಿಸಲು ಬಯಸುವ ಯಾವುದೇ ತಂಡವು ಅಂಪೈರ್ ಅಧಿಕೃತವಾಗಿ ಔಟ್ ಎಂದು ಸಿಗ್ನಲ್ ನೀಡಿದ 15 ಸೆಕೆಂಡುಗಳ ಒಳಗೆ ರಿವ್ಯೂಗೆ ಮೇಲ್ಮನವಿಗೆ ಸಲ್ಲಿಸಬೇಕು. ಒಂದು ವೇಳೆ ಆಟಗಾರರು ಸಮಯದೊಳಗೆ ಮನವಿಗೆ ವಿಫಲವಾದರೆ, ಅವರ ಬಳಿ ರಿವ್ಯೂ ಇದ್ದರೂ ಪರಿಶೀಲನೆಗೆ ಅರ್ಹರಾಗಿರುವುದಿಲ್ಲ. ಬ್ರೆವಿಸ್ ಔಟ್ ಅಲ್ಲದೆ ಇರಬಹುದು. ಆದರೆ ರಿವ್ಯೂಗೆ ಅವಕಾಶ ಇದ್ದೂ ಸೂಕ್ತ ಸಮಯದಲ್ಲಿ ಅದನ್ನು ತೆಗೆದುಕೊಳ್ಳದಿರುವ ಕಾರಣದಿಂದದಾಗಿ, ಕ್ರಿಕೆಟ್ ನಿಯಮಗಳ ಅಡಿಯಲ್ಲಿ ಅವರನ್ನು ಔಟ್ ಎಂದು ಘೋಷಿಸಿದ್ದು ಮಾನ್ಯವಾಗಿದೆ.
ತಾಂತ್ರಿಕ ದೋಷ
ಇಲ್ಲಿ ಗೊಂದಲವಾಗಲು ಕೆಲವು ಕಾರಣಗಳಿವೆ. ತಾಂತ್ರಿಕ ದೋಷದಿಂದ ಮೈದಾನದ ದೊಡ್ಡ ಪರದೆಯಲ್ಲಿ ಸಮಯವನ್ನು ಹಾಕಿರಲಿಲ್ಲ. ಇದು ಆಟಗಾರರಿಗೆ ಗೊಂದಲವಾಗಲು ಕಾರಣವಾಯ್ತು. ಅಂಪೈರ್ ಔಟ್ ಎಂದು ನಿರ್ಧಾರ ಪ್ರಕಟಿಸಿದ್ದು ರಿವ್ಯೂನಲ್ಲಿ ತಪ್ಪು ಎಂಬುದು ಸಾಬೀತಾಯ್ತು. ಆದರೆ, ರಿವ್ಯೂ ತೆಗೆದುಕೊಳ್ಳುವ ಅವಕಾಶವನ್ನು ಬಳಸಲು ತಡಮಾಡಿದ್ದು ಸಿಎಸ್ಕೆ ಬ್ಯಾಟರ್ಗಳ ತಪ್ಪು. ಅಂಪೈರ್ ಔಟ್ ಎಂದು ಘೋಷಿಸಿದ ನಂತರ ರನ್ ಓಡಿದರೂ ಆ ರನ್ ಮಾನ್ಯವಾಗುವುದಿಲ್ಲ. ಹೀಗಿದ್ದೂ ಬ್ರೆವಿಸ್ ರನ್ ಓಡುವ ನಿರ್ಧಾರ ಮಾಡಿದ್ದು ಕೂಡಾ ಚರ್ಚೆಗೆ ಕಾರಣವಾಗಿದೆ. ಈ ವಿಕೆಟ್ ಪತನವಾಗಿದ್ದು, ಚೆನ್ನೈ ತಂಡಕ್ಕೆ ದೊಡ್ಡ ನಷ್ಟವಾಯ್ತು. ಪಂದ್ಯದಲ್ಲೇ ಸೋಲಬೇಕಾದ ಸನ್ನಿವೇಶ ಎದುರಾಯ್ತು.