7 ವರ್ಷಗಳ ಬಳಿಕ ರಣಜಿ ಆಡಲು ಮುಂದಾದ ರಿಷಭ್‌ ಪಂತ್;‌ ಗಿಲ್-ಜೈಸ್ವಾಲ್‌ ಕೂಡಾ ಲಭ್ಯ, ಕೊಹ್ಲಿ-ರೋಹಿತ್‌ ನಡೆ ಅಸ್ಪಷ್ಟ
ಕನ್ನಡ ಸುದ್ದಿ  /  ಕ್ರಿಕೆಟ್  /  7 ವರ್ಷಗಳ ಬಳಿಕ ರಣಜಿ ಆಡಲು ಮುಂದಾದ ರಿಷಭ್‌ ಪಂತ್;‌ ಗಿಲ್-ಜೈಸ್ವಾಲ್‌ ಕೂಡಾ ಲಭ್ಯ, ಕೊಹ್ಲಿ-ರೋಹಿತ್‌ ನಡೆ ಅಸ್ಪಷ್ಟ

7 ವರ್ಷಗಳ ಬಳಿಕ ರಣಜಿ ಆಡಲು ಮುಂದಾದ ರಿಷಭ್‌ ಪಂತ್;‌ ಗಿಲ್-ಜೈಸ್ವಾಲ್‌ ಕೂಡಾ ಲಭ್ಯ, ಕೊಹ್ಲಿ-ರೋಹಿತ್‌ ನಡೆ ಅಸ್ಪಷ್ಟ

ಸೌರಾಷ್ಟ್ರ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಡೆಲ್ಲಿ ತಂಡದ ಪರ ರಿಷಭ್ ಪಂತ್ ಆಡಲಿದ್ದಾರೆ. ಇದೇ ವೇಳೆ ಯಶಸ್ವಿ ಜೈಸ್ವಾಲ್‌ ಹಾಗೂ ಶುಭ್ಮನ್‌ ಗಿಲ್‌ ಕೂಡಾ ದೇಶೀಯ ಕ್ರಿಕೆಟ್‌ ಆಡುವುದು ಖಚಿತವಾಗಿದೆ. ಆದರೆ ವಿರಾಟ್ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ನಡೆ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ.

7 ವರ್ಷಗಳ ಬಳಿಕ ರಣಜಿ ಆಡಲು ಮುಂದಾದ ರಿಷಭ್‌ ಪಂತ್;‌ ಕೊಹ್ಲಿ-ರೋಹಿತ್‌ ನಡೆ ಅಸ್ಪಷ್ಟ
7 ವರ್ಷಗಳ ಬಳಿಕ ರಣಜಿ ಆಡಲು ಮುಂದಾದ ರಿಷಭ್‌ ಪಂತ್;‌ ಕೊಹ್ಲಿ-ರೋಹಿತ್‌ ನಡೆ ಅಸ್ಪಷ್ಟ (PTI)

ಭಾರತೀಯ ಕ್ರಿಕೆಟ್‌ ತಂಡದಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾಗುತ್ತಿರುವ ಟೀಮ್‌ ಇಂಡಿಯಾ ಕ್ರಿಕೆಟಿಗರಿಗೆ ಭಾರಿ ಟೀಕೆಗಳು ವ್ಯಕ್ತವಾಗಿವೆ. ದೇಶಿಯ ಕ್ರಿಕೆಟ್‌ನಲ್ಲಿ ಆಡಿ ಟೀಮ್‌ ಇಂಡಿಯಾ ಕಮ್‌ಬ್ಯಾಕ್‌ ಮಾಡುವಂತೆ ಮಾಜಿ ಕ್ರಿಕೆಟಿಗರು ಸಲಹೆ ನೀಡಿದ್ದರು. ಅದರಂತೆ ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಮುಂಬೈ ಕ್ರಿಕೆಟ್‌ ತಂಡದೊಂದಿಗೆ ಅಭ್ಯಾಸ ನಡೆಸುತ್ತಿದ್ದಾರೆ. ಆದರೆ, ರಣಜಿ ಪಂದ್ಯ ಆಡುವ ಕುರಿತು ಇನ್ನೂ ಅವರು ಸ್ಪಷ್ಟಪಡಿಸಿಲ್ಲ. ಈ ನಡುವೆ ಟೀಮ್‌ ಇಂಡಿಯಾ ವಿಕೆಟ್ ಕೀಪರ್ ಹಾಗೂ ಬ್ಯಾಟರ್‌ ರಿಷಭ್ ಪಂತ್ ರಣಜಿ ಟ್ರೋಫಿ ಪಂದ್ಯಕ್ಕೆ ಲಭ್ಯರಾಗಿದ್ದಾರೆ. ರಾಜ್‌ಕೋಟ್‌ಲ್ಲಿ ನಡೆಯಲಿರುವ ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ತಂಡದ ಪರ ಕಣಕ್ಕಿಳಿಯುವುದಾಗಿ ತಿಳಿಸಿದ್ದಾರೆ.

ಅತ್ತ ಬಲಗೈ ಬ್ಯಾಟರ್‌ ವಿರಾಟ್ ಕೊಹ್ಲಿ ಮುಂಬರುವ ಪಂದ್ಯದಲ್ಲಿ ಆಡುವ ಬಗ್ಗೆ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಗೆ (ಡಿಡಿಸಿಎ) ಏನನ್ನೂ ತಿಳಿಸಿಲ್ಲ. ಜನವರಿ 23ರಂದು ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಪರ ಆಡಲು ರಾಜ್‌ಕೋಟ್‌ಗೆ ಪಂತ್ ಪ್ರಯಾಣಿಸಲಿದ್ದಾರೆ ಎಂದು ಡಿಡಿಸಿಎ ಕಾರ್ಯದರ್ಶಿ ಅಶೋಕ್ ಶರ್ಮಾ ಹಿಂದೂಸ್ತಾನ್ ಟೈಮ್ಸ್‌ಗೆ ಖಚಿತಪಡಿಸಿದ್ದಾರೆ. “ಹೌದು, ರಿಷಭ್ ಪಂತ್ ಆಡಲು ಲಭ್ಯವಿದ್ದಾರೆ. ಅವರು ತಂಡದೊಂದಿಗೆ ರಾಜ್‌ಕೋಟ್‌ಗೆ ಪ್ರಯಾಣಿಸಲಿದ್ದಾರೆ” ಎಂದು ಅವರು ಹಿಂದೂಸ್ತಾನ್ ಟೈಮ್ಸ್‌ಗೆ ತಿಳಿಸಿದರು.

7 ವರ್ಷಗಳ ಬಳಿಕ ರಣಜಿ ಪಂದ್ಯ

2017-18ರ ಫೈನಲ್‌ನಲ್ಲಿ ವಿದರ್ಭ ವಿರುದ್ಧ ರಿಷಭ್ ಪಂತ್ ಕೊನೆಯ ಬಾರಿ ರಣಜಿ ಟ್ರೋಫಿ ಆಡಿದ್ದರು. ಇದೀಗ 7 ವರ್ಷಗಳ ಬಳಿಕ ಅವರು ಮತ್ತೆ ರಣಜಿ ಪಂದ್ಯ ಆಡುತ್ತಿದ್ದಾರೆ.

ವಿರಾಟ್ ಕೊಹ್ಲಿ ರಣಜಿ ಪಂದ್ಯದಲ್ಲಿ ಆಡುವ ಬಗ್ಗೆ ಇನ್ನೂ ಸ್ಪಷ್ಟನೆ ಇಲ್ಲ. ಕೊಹ್ಲಿ ಕೊನೆಯ ಬಾರಿಗೆ ರಣಜಿ ಟ್ರೋಫಿ ಆಡಿದ್ದು 2012ರಲ್ಲಿ. ವಿರಾಟ್ ಆಸ್ಟ್ರೇಲಿಯಾ ಪ್ರವಾಸದಲ್ಲಿ ಆಡಿದ 9 ಇನ್ನಿಂಗ್ಸ್‌ಗಳಲ್ಲಿ ಕೇವಲ 190 ರನ್ ಗಳಿಸಿದ್ದರು. ಪರ್ತ್‌ನಲ್ಲಿ ನಡೆದ ಸರಣಿಯ ಆರಂಭಿಕ ಪಂದ್ಯದಲ್ಲಿ ಶತಕ ಬಾರಿಸಿದ್ದ ಕೊಹ್ಲಿ, ಆಫ್-ಸ್ಟಂಪ್ ಹೊರಗಿನ ಎಸೆತಗಳನ್ನು ಎದುರಿಸುವ ಸಂದರ್ಭದಲ್ಲಿ ಔಟಾಗುತ್ತಿದ್ದಾರೆ.

ಗಿಲ್ ಮತ್ತು ಜೈಸ್ವಾಲ್ ಲಭ್ಯ

ಇದೇ ವೇಳೆ ಶುಭ್ಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಕ್ರಮವಾಗಿ ಪಂಜಾಬ್ ಮತ್ತು ಮುಂಬೈ ತಂಡದ ಪರ ರಣಜಿ ಪಂದ್ಯ ಆಡಲು ಲಭ್ಯವಿದ್ದಾರೆ. ಮುಂಬೈ ತಂಡ ಜಮ್ಮು ಮತ್ತು ಕಾಶ್ಮೀರ ವಿರುದ್ಧ ಸೆಣಸಲಿದ್ದು, ಪಂಜಾಬ್ ತಂಡ ಕರ್ನಾಟಕ ವಿರುದ್ಧ ಸೆಣಸಲಿದೆ.

ಟೀಮ್‌ ಇಂಡಿಯಾ ನಾಯಕನ ನಡೆ ಬಗ್ಗೆ ಸಿಗದ ಸ್ಪಷ್ಟನೆ

ಜಮ್ಮು ಮತ್ತು ಕಾಶ್ಮೀರ ವಿರುದ್ಧದ ಮುಂಬರುವ ಪಂದ್ಯಕ್ಕಾಗಿ ಮುಂಬೈ ತಂಡ ಸಜ್ಜಾಗುತ್ತಿದೆ. ಮುಂಬೈ ಟೀಮ್‌ ಸದಸ್ಯರೊಂದಿಗೆ ರೋಹಿತ್ ಶರ್ಮಾ ತರಬೇತಿ ಪಡೆಯುತ್ತಿರುವುದು ಕಂಡುಬಂದಿದೆ. ಆದರೆ, ಅವರು ಮುಂಬೈನಲ್ಲಿ ಆಡುವ ಕುರಿತು ತಿಳಿದು ಬಂದಿಲ್ಲ. ಈ ಹಿಂದೆ, ಪ್ರತಿಯೊಬ್ಬ ಆಟಗಾರ ಕೂಡಾ ದೇಶೀಯ ಕ್ರಿಕೆಟ್‌ನಲ್ಲಿ ತಮ್ಮ ರಾಜ್ಯ ತಂಡಗಳನ್ನು ಪ್ರತಿನಿಧಿಸುವಂತೆ ಬಿಸಿಸಿಐ ಕೇಳಿಕೊಂಡಿತ್ತು. ಒಂದು ವೇಳೆ ಹಾಜರಾಗಲು ಸಾಧ್ಯವಾಗದಿದ್ದರೆ ಫಿಸಿಯೋದಿಂದ ವರದಿ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಅವರಿಂದ ಅನುಮತಿ ಪಡೆಯುವಂತೆ ಮಂಡಳಿ ಹೇಳಿದೆ.

Whats_app_banner